ದೇಶದಲ್ಲಿ ನಿರುದ್ಯೋಗ ಹೀಗಿದೆ: ಸರ್ಕಾರದ 15 ಉದ್ಯೋಗಕ್ಕಾಗಿ 11,000 ಅರ್ಜಿದಾರರ ಸಾಲು!
ಭೋಪಾಲ್, ಡಿಸೆಂಬರ್ 29: ಭಾರತದಲ್ಲಿ ನಿರುದ್ಯೋಗ ಸಮಸ್ಯೆ ಎಷ್ಟರ ಮಟ್ಟಿಗೆ ಯುವ ಸಮುದಾಯವನ್ನು ಬಾಧಿಸುತ್ತಿದೆ ಎಂಬುದಕ್ಕೆ ಮಧ್ಯಪ್ರದೇಶದಲ್ಲಿ ನಡೆದಿರುವ ಒಂದೇ ಒಂದು ಘಟನೆ ಉತ್ತಮ ನಿದರ್ಶನವಾಗಿದೆ.
ಮಧ್ಯಪ್ರದೇಶದಲ್ಲಿ ಜವಾನ, ಚಾಲಕ ಮತ್ತು ವಾಚ್ ಮ್ಯಾನ್ ಸೇರಿದಂತೆ ಕರೆದ 15 ಹುದ್ದೆಗಳಿಗೆ ಬರೋಬ್ಬರಿ 11,000 ಉದ್ಯೋಗಾಕಾಂಕ್ಷಿಗಳು ಅರ್ಜಿ ಸಲ್ಲಿಸಿದ್ದಾರೆ. ಮಧ್ಯಪ್ರದೇಶವಷ್ಟೇ ಅಲ್ಲದೇ ನೆರೆಯ ಉತ್ತರ ಪ್ರದೇಶದಿಂದಲೂ ಯುವಕರು ಉದ್ಯೋಗಕ್ಕಾಗಿ ಅರ್ಜಿ ಸಲ್ಲಿಸಲು ಶನಿವಾರ ಮತ್ತು ಭಾನುವಾರ ಗ್ವಾಲಿಯಾರ್ ನಲ್ಲಿ ನೆರೆದಿರುವುದು ವಾಸ್ತವ ಸ್ಥಿತಿಗೆ ಕೈಗನ್ನಡಿಯಾಗಿತ್ತು.
ಉದ್ಯೋಗಗಳಿಗೆ 10ನೇ ತರಗತಿ ಪರೀಕ್ಷೆಗಳಲ್ಲಿ ಉತ್ತೀರ್ಣರಾದ ಅಭ್ಯರ್ಥಿಗಳ ಅಗತ್ಯವಿದ್ದರೂ, ಪದವೀಧರರು, ಸ್ನಾತಕೋತ್ತರ ಪದವೀಧರರು, ಎಂಜಿನಿಯರ್ಗಳು, ಎಂಬಿಎ ಮತ್ತು ಸಿವಿಲ್ ವ್ಯಾಸಂಗ ಮಾಡಿದ ಅಭ್ಯರ್ಥಿಗಳೂ ಸಹ ಉದ್ಯೋಗಕ್ಕಾಗಿ ಅರ್ಜಿ ಸಲ್ಲಿಸಿದ್ದರು.

ಪಿಎಚ್ಡಿ ಮಾಡಿದವರು ಪ್ಯೂನ್ ಹುದ್ದೆಗಾಗಿ ಅರ್ಜಿ
"ನಾನು ವಿಜ್ಞಾನ ಪದವೀಧರ, ನಾನು ಪ್ಯೂನ್ ಹುದ್ದೆಗಾಗಿ ಅರ್ಜಿ ಸಲ್ಲಿಸಿದ್ದೇನೆ, ಪಿಎಚ್ಡಿ ಮಾಡಿದವರೂ ಸಹ ಅರ್ಜಿದಾರರ ಸಾಲಿನಲ್ಲಿ ನಿಂತಿದ್ದಾರೆ," ಎಂದು ಅಭ್ಯರ್ಥಿಗಳಲ್ಲಿ ಒಬ್ಬರಾದ ಅಜಯ್ ಬಾಘೇಲ್ ಹೇಳಿದ್ದಾರೆ.
ಕಾನೂನು ಪದವೀಧರ ಆಗಿರುವ ಜಿತೇಂದ್ರ ಮೌರ್ಯ ಎಂಬ ಅಭ್ಯರ್ಥಿ ಮಾತನಾಡಿದ್ದು, ‘ಚಾಲಕ ಹುದ್ದೆಗಾಗಿ ಅರ್ಜಿ ಸಲ್ಲಿಸಿದ್ದೇನೆ, ನ್ಯಾಯಾಧೀಶರ ಪರೀಕ್ಷೆಗೂ ತಯಾರಿ ನಡೆಸುತ್ತಿದ್ದೇನೆ, ಮಾಧವ ಕಾಲೇಜಿನ ವಿದ್ಯಾರ್ಥಿಯಾಗಿದ್ದು, ಕೆಲವೊಮ್ಮೆ ಪುಸ್ತಕ ಖರೀದಿಸಲು ಹಣವಿಲ್ಲದ ಪರಿಸ್ಥಿತಿ ನಿರ್ಮಾಣವಾಗಿದೆ. ಏನಾದರೂ ಕೆಲಸ ಸಿಗುತ್ತದೆ ಎಂದುಕೊಂಡಿದ್ದೇನೆ," ಎಂದರು.

ಹೊರ ರಾಜ್ಯದ ಅಭ್ಯರ್ಥಿಗಳಿಂದ ಉದ್ಯೋಗಕ್ಕಾಗಿ ಅರ್ಜಿ
ಮಧ್ಯಪ್ರದೇಶದಲ್ಲಿ ಆಹ್ವಾನಿಸಿರುವ 15 ಉದ್ಯೋಗಗಳಿಗೆ ರಾಜ್ಯದಲ್ಲಿ ಸಾವಿರಾರು ಅಭ್ಯರ್ಥಿಗಳು ಅರ್ಜಿ ಸಲ್ಲಿಸಿದವರ ಸಾಲಿನಲ್ಲಿ ಹೊರ ರಾಜ್ಯದ ಅಭ್ಯರ್ಥಿಗಳೂ ಸಹ ಸೇರಿದ್ದಾರೆ. ಈ ಪೈಕಿ ಅಲ್ತಾಫ್ ಎಂಬ ಉದ್ಯೋಗಾಕಾಂಕ್ಷಿ ಮಾತನಾಡಿದ್ದು, "ನಾನು ಪದವೀಧರನಾಗಿದ್ದು, ಉತ್ತರ ಪ್ರದೇಶದಿಂದ ಪ್ಯೂನ್ ಕೆಲಸಕ್ಕಾಗಿ ಬಂದಿದ್ದೇನೆ," ಎಂದು ತಿಳಿಸಿದ್ದಾರೆ.

ಸರ್ಕಾರಿ ಉದ್ಯೋಗದ ಬಗ್ಗೆ ಸಿಎಂ ಹೇಳಿಕೆ
"ಮುಂದಿನ ಒಂದು ವರ್ಷದಲ್ಲಿ ಒಂದು ಲಕ್ಷ ಸರ್ಕಾರಿ ಉದ್ಯೋಗಿಗಳನ್ನು ನೇಮಕ ಮಾಡಿಕೊಳ್ಳುತ್ತೇವೆ. ಯಾವುದೇ ಕಾರಣಕ್ಕೂ ಬ್ಯಾಕ್ಲಾಗ್ ಹುದ್ದೆಗಳನ್ನು ಭರ್ತಿ ಮಾಡಲು ಬಿಡುವುದಿಲ್ಲ. ಪ್ರತಿಯೊಬ್ಬರೂ ಸರ್ಕಾರಿ ಸೇವೆಗಳಲ್ಲಿ ಉದ್ಯೋಗವನ್ನು ಬಯಸುತ್ತಾರೆ, ಆದರೆ ಪ್ರತಿಯೊಬ್ಬ ವಿದ್ಯಾರ್ಥಿಯು ಸರ್ಕಾರಿ ಉದ್ಯೋಗವನ್ನು ಪಡೆಯಲು ಸಾಧ್ಯವಿಲ್ಲ ಎಂಬ ಸತ್ಯವನ್ನು ನಾನು ನಿಮಗೆ ಹೇಳಲು ಬಯಸುತ್ತೇನೆ," ಎಂದು ಶಿವರಾಜ್ ಸಿಂಗ್ ಚೌಹಾಣ್ ತಿಳಿಸಿದ್ದರು.

ನಿರುದ್ಯೋಗದ ಕಥೆ ಹೇಳುವ ಅಂಕಿ-ಅಂಶಗಳು
ಮಧ್ಯಪ್ರದೇಶದಲ್ಲಿ 1 ಲಕ್ಷ ನೇಮಕಾತಿಗಳನ್ನು ಮಾಡಿಕೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಚೌಹಾಣ್ ಹೇಳುತ್ತಾರೆ. ಆದರೆ, ರಾಜ್ಯದಲ್ಲಿ ನಿರುದ್ಯೋಗಿಗಳ ಅಂಕಿ-ಸಂಖ್ಯೆಗಳು ಬೇರೆಯದ್ದೇ ಕಥೆಯನ್ನು ಹೇಳುತ್ತವೆ. ಮಧ್ಯಪ್ರದೇಶದ ಉದ್ಯೋಗ ನೋಂದಣಿ ಕಚೇರಿಗಳಲ್ಲಿ ಒಟ್ಟು 32,57,136 ನಿರುದ್ಯೋಗಿಗಳು ತಮ್ಮ ಹೆಸರು ನೋಂದಾಣಿಸಿದ್ದಾರೆ. ಶಾಲಾ ಶಿಕ್ಷಣ ಇಲಾಖೆಯಲ್ಲಿ 30,600, ಗೃಹ ಇಲಾಖೆಯಲ್ಲಿ 9,388, ಆರೋಗ್ಯ ಇಲಾಖೆಯಲ್ಲಿ 8,592 ಮತ್ತು ಕಂದಾಯ ಇಲಾಖೆಯಲ್ಲಿ 9,530 ಹುದ್ದೆಗಳು ಖಾಲಿ ಇವೆ. ಒಟ್ಟಾರೆ ರಾಜ್ಯ ಸರ್ಕಾರದ ವಿವಿಧ ಇಲಾಖೆಗಳಲ್ಲಿ ಸುಮಾರು ಒಂದು ಲಕ್ಷಕ್ಕೂ ಹೆಚ್ಚು ಹುದ್ದೆಗಳು ಖಾಲಿ ಖಾಲಿಯಾಗಿವೆ.

ಬೀದಿ ವ್ಯಾಪಾರಿ ಯೋಜನೆಗೆ ಪದವೀಧರರಿಂದ ಅರ್ಜಿ
ಮಧ್ಯಪ್ರದೇಶದಲ್ಲಿ ಯುವ ಸಮುದಾಯವನ್ನು ನಿರುದ್ಯೋಗ ಸಮಸ್ಯೆ ಎಡೆಬಿಡದೇ ಕಾಡುತ್ತಿದೆ. ಗ್ವಾಲಿಯರ್ನಲ್ಲಿರುವ ಕಡಿಮೆ ಸಂಬಳದ ಸರ್ಕಾರಿ ಉದ್ಯೋಗಗಳಿಗೂ ಸಾವಿರಾರು ಮಂದಿ ಬರಲು ಇದೇ ಕಾರಣ ಎಂದು ಉದ್ಯೋಗಾಕಾಂಕ್ಷಿಗಳು ಹೇಳುತ್ತಿದ್ದಾರೆ. ಅಲ್ಲದೇ ಇತ್ತೀಚಿಗೆ ಸರ್ಕಾರದ ಬೀದಿ ವ್ಯಾಪಾರಿ ಯೋಜನೆಗೆ 15 ಲಕ್ಷ ಅರ್ಜಿಗಳು ಬಂದಿದ್ದು, ಆಯ್ಕೆಯಾದ 99,000ರಲ್ಲಿ ಸುಮಾರು ಶೇ.90ರಷ್ಟು ಮಂದಿ ಪದವೀಧರರೇ ಆಗಿದ್ದಾರೆ.
ರಾಜ್ಯದ "ಶಿವರಾಜ್ ಸಿಂಗ್ ಚೌಹಾಣ್ ಸರ್ಕಾರದ 17 ವರ್ಷಗಳ ಅಭಿವೃದ್ಧಿ ನಿಜವಾಗಿ ಹೇಗಿದೆ ಎಂಬುದನ್ನು ಇದು ತೋರಿಸುತ್ತದೆ. ತಿಂಗಳಲ್ಲಿ 1 ಲಕ್ಷ ಹುದ್ದೆಗಳನ್ನು ಭರ್ತಿ ಮಾಡುವ ಬಗ್ಗೆ ಯಾರು ಮಾತನಾಡಿದ್ದಾರೆ? ಆ ನಾಯಕರು ಎಲ್ಲಿದ್ದಾರೆ? ಅವರು ಯಾವಾಗ ಮುಂದೆ ಬರುತ್ತಾರೆ?," ಎಂದು ಕಾಂಗ್ರೆಸ್ ಪಕ್ಷದ ವಕ್ತಾರ ನರೇಂದ್ರ ಸಲೂಜಾ ಪ್ರಶ್ನೆ ಮಾಡಿದ್ದಾರೆ.
ಥಿಂಕ್ ಟ್ಯಾಂಕ್ ಸೆಂಟರ್ ಫಾರ್ ಮಾನಿಟರಿಂಗ್ ಇಂಡಿಯನ್ ಎಕಾನಮಿ (CMIE) ಪ್ರಕಾರ, ನವೆಂಬರ್ನಲ್ಲಿ ಮಧ್ಯಪ್ರದೇಶದಲ್ಲಿ ನಿರುದ್ಯೋಗ ದರವು ಕೇವಲ 1.7 ಪ್ರತಿಶತದಷ್ಟಿದೆ. ಇದು ಇತರೆ ರಾಜ್ಯಗಳಿಗಿಂತ ತುಂಬಾ ಕಡಿಮೆಯಾಗಿದೆ.












Click it and Unblock the Notifications