ನಾಥೂರಾಮ್ ಗೋಡ್ಸೆ ಗ್ರಂಥಾಲಯ ತೆರೆದ ಹಿಂದೂ ಮಹಾಸಭಾ
ಭೋಪಾಲ್, ಜನವರಿ 11: ವಿಶ್ವ ಹಿಂದೂ ದಿವಸ ಸಂದರ್ಭದಲ್ಲಿ ಮಧ್ಯಪ್ರದೇಶದ ಗ್ವಾಲಿಯರ್ನಲ್ಲಿ ಅಖಿಲ ಭಾರತೀಯ ಹಿಂದೂ ಮಹಾಸಭಾ ಭಾನುವಾರ ಗ್ರಂಥಾಲಯವೊಂದನ್ನು ಆರಂಭಿಸಿದೆ. ಈ ಗ್ರಂಥಾಲಯವು ಮಹಾತ್ಮ ಗಾಂಧಿ ಅವರ ಹತ್ಯೆ ಮಾಡಿದ ನಾಥೂರಾಮ್ ಗೋಡ್ಸೆಯ ಜೀವನ ಮತ್ತು ಸಿದ್ಧಾಂತಗಳ ಕುರಿತಾದ ಪುಸ್ತಕಗಳಿಗೆ ಮೀಸಲಾಗಿರಲಿದೆ.
ದೌಲತ್ ಗಂಜ್ನ ಮಹಾಸಭಾದ ಕಚೇರಿಯಲ್ಲಿ 'ಗೋಡ್ಸೆ ಜ್ಞಾನ ಶಾಲಾ' ಉದ್ಘಾಟನೆಯಾಗಿದೆ. ಮಹಾತ್ಮ ಗಾಂಧಿ ಹತ್ಯೆಗೆ ಹೇಗೆ ಸಂಚು ರೂಪಿಸಿದ್ದರು, ಗೋಡ್ಸೆಯ ಲೇಖನಗಳು ಮತ್ತು ಭಾಷಣಗಳನ್ನು ಒಳಗೊಂಡ ಸಾಹಿತ್ಯ ಕೃತಿಗಳು ಇಲ್ಲಿವೆ.
'ಗೋಡ್ಸೆ ಎಂತಹ ನೈಜ ರಾಷ್ಟ್ರೀಯವಾದಿ ಎಂಬುದನ್ನು ಜಗತ್ತಿನ ಮುಂದೆ ಇರಿಸಲು ಗ್ರಂಥಾಲಯವನ್ನು ತೆರೆಯಲಾಗಿದೆ. ಅವರು ಅವಿಭಜಿತ ಭಾರತಕ್ಕಾಗಿ ಹೋರಾಡಿದರು ಮತ್ತು ಬಲಿಯಾದರು. ಇಂದಿನ ನಿರ್ಲಕ್ಷಿತ ಯುವಜನರಲ್ಲಿ ಗೋಡ್ಸೆ ತಾಳಿದ್ದ ನೈಜ ರಾಷ್ಟ್ರೀಯವಾದವನ್ನು ಅಳವಡಿಸುವಂತೆ ಮಾಡುವುದು ಈ ಗ್ರಂಥಾಲಯದ ಉದ್ದೇಶ' ಎಂದು ಮಹಾಸಭಾದ ಉಪಾಧ್ಯಕ್ಷ ಜೈವೀರ್ ಭಾರದ್ವಾಜ್ ಹೇಳಿದ್ದಾರೆ.

ದೇಶವನ್ನ ಆಳಬೇಕು ಎಂಬ ಬಯಕೆ ಹೊಂದಿದ್ದ ಜವಾಹರಲಾಲ್ ನೆಹರೂ ಮತ್ತು ಮಹಮ್ಮದ್ ಅಲಿ ಜಿನ್ನಾರ ಬಯಕೆಗಳಿಗೆ ಅನುಗುಣವಾಗಿ ದೇಶವನ್ನು ವಿಭಜಿಸಲಾಯಿತು. ಇದಕ್ಕೆ ಗೋಡ್ಸೆ ವಿರೋಧಿಸಿದ್ದರು ಎಂದು ಅವರು ತಿಳಿಸಿದ್ದಾರೆ.
ಮಹಾತ್ಮ ಗಾಂಧಿಯ ಹತ್ಯೆಗೆ ಗೋಡ್ಸೆ ಸಂಚು ರೂಪಿಸಿದ್ದು ಗ್ವಾಲಿಯರ್ ನಗರದಲ್ಲಿ. ಇಲ್ಲಿಯೇ ಅವರು ಪಿಸ್ತೂಲು ಖರೀದಿಸಿದ್ದರು. ಹೀಗಾಗಿ ಗ್ರಂಥಾಲಯ ನಿರ್ಮಾಣಕ್ಕಾಗಿ ಗ್ವಾಲಿಯನ್ ಅನ್ನು ಆಯ್ದುಕೊಳ್ಳಲಾಗಿದೆ. ಮಹಾಸಭಾವು ತನ್ನ ಗ್ವಾಲಿಯರ್ ಕಚೇರಿಯಲ್ಲಿ ಈ ಹಿಂದೆ ಗೋಡ್ಸೆ ದೇವಾಲಯವೊಂದನ್ನು ಅರ್ಪಿಸಿತ್ತು. ಕಾಂಗ್ರೆಸ್ನ ತೀವ್ರ ವಿರೋಧದ ಬಳಿಕ ಅದನ್ನು ತೆರವುಗೊಳಿಸಲಾಗಿತ್ತು.












Click it and Unblock the Notifications