ಕಮಲ್ ನಾಥ್ ಪ್ರಮಾಣವಚನ: ವ್ಯಾಪಕ ಪ್ರಶಂಸೆಗೊಳಗಾದ ಶಿವರಾಜ್ ಸಿಂಗ್ ನಡೆ
Recommended Video

ಭೋಪಾಲ್, ಡಿ 17: ದೇಶದ ಪ್ರಮುಖ ಹಿಂದಿ ಬೆಲ್ಟ್ ರಾಜ್ಯಗಳಲ್ಲೊಂದಾದ ಮಧ್ಯಪ್ರದೇಶದಲ್ಲಿ ಹದಿನೈದು ವರ್ಷಗಳ ನಂತರ ಕಾಂಗ್ರೆಸ್ ಗದ್ದುಗೆಗೇರಿದೆ. ರಾಜ್ಯದ ಹದಿನೆಂಟನೇ ಮುಖ್ಯಮಂತ್ರಿಯಾಗಿ ಹಿರಿಯ ಕಾಂಗ್ರೆಸ್ ಮುಖಂಡ ಕಮಲ್ ನಾಥ್ ಸೋಮವಾರ ಪ್ರಮಾಣವಚನ ಸ್ವೀಕರಿಸಿದ್ದಾರೆ.
ಪ್ರಮಾಣವಚನ ಸಮಾರಂಭದಲ್ಲಿ ಕಾಂಗ್ರೆಸ್ಸಿನ ಹಿರಿಯ ಮುಖಂಡರು, ಮಿತ್ರ ಪಕ್ಷಗಳ ಸದಸ್ಯರು ಭಾಗವಹಿಸಿದ್ದರು. ಆದರೆ, ಇವೆಲ್ಲಕ್ಕಿಂತಲೂ ಗಮನ ಸೆಳೆದದ್ದು ಬಿಜೆಪಿಯ ನಿರ್ಗಮಿತ ಜನಪ್ರಿಯ ಮುಖ್ಯಮಂತ್ರಿ, 'ಮಾಮಾಜೀ' ಎಂದೇ ಕರೆಯಲ್ಪಡುವ ಶಿವರಾಜ್ ಸಿಂಗ್ ಚೌಹಾಣ್ ಕಾರ್ಯಕ್ರಮದಲ್ಲಿ ಹಾಜರಿದ್ದದ್ದು.
ಕಾಂಗ್ರೆಸ್ ಪಕ್ಷದ ಕಾರ್ಯಕ್ರಮ ಎನ್ನುವುದಕ್ಕಿಂತ, ಮಧ್ಯಪ್ರದೇಶ ಸರಕಾರೀ ಪ್ರಾಯೋಜಿತ ಕಾರ್ಯಕ್ರಮ ಇದೆಂದು, ಪ್ರಮಾಣವಚನ ಸಮಾರಂಭದಲ್ಲಿ ಶಿವರಾಜ್ ಸಿಂಗ್ ಭಾಗವಹಿಸಿ ರಾಜಕೀಯ ಮುತ್ಸದ್ದಿತನ ಮೆರೆದಿದ್ದಾರೆ.
ತಮ್ಮ ಅಧಿಕಾರದ ಅವಧಿಯಲ್ಲಿ ಪಕ್ಷಾತೀತ ನಡೆಗೆ ಹೆಸರುವಾಸಿಯಾಗಿದ್ದ ಶಿವರಾಜ್ ಸಿಂಗ್, ರಾಜಕೀಯದಲ್ಲಿ ಸೋಲು, ಗೆಲುವು ಸಾಮಾನ್ಯ ಎಂದು ಪ್ರಮಾಣವಚನ ಸಮಾರಂಭದ ವೇದಿಕೆಯಲ್ಲಿ ಭಾಗವಹಿಸಿ, ಎಲ್ಲರ ಪ್ರಶಂಸೆಗೆ ಪಾತ್ರರಾಗಿದ್ದಾರೆ.
ವೇದಿಕೆಯ ಒಂದು ಪಕ್ಕದಲ್ಲಿ ಶಿವರಾಜ್ ಸಿಂಗ್ ಮತ್ತು ಜ್ಯೋತಿರಾದಿತ್ಯ ಸಿಂದಿಯಾ ಕೂತಿದ್ದರು, ಇನ್ನೊಂದು ಪಕ್ಕದಲ್ಲಿ ರಾಹುಲ್ ಗಾಂಧಿ, ಕಮಲ್ ನಾಥ್ ಕೂತಿದ್ದರು. ಶಿವರಾಜ್ ಕೂತಿದ್ದ ಸೀಟಿನತ್ತ ಆಗಮಿಸಿ, ಕಮಲ್ ನಾಥ್ ಅವರನ್ನು ಕೈಮುಗಿದು ಸ್ವಾಗತಿಸಿದರು.

ಶಿವರಾಜ್ ಸಿಂಗ್ ಚೌಹಾಣ್
ಮಧ್ಯಪ್ರದೇಶ ಅಸೆಂಬ್ಲಿ ಚುನಾವಣೆಯಲ್ಲಿ ಬಿಜೆಪಿ ತೀವ್ರ ಪೈಪೋಟಿ ನೀಡಿ ಸೋತ ವಿಷಾದದ ಛಾಯೆ ಶಿವರಾಜ್ ಸಿಂಗ್ ಚೌಹಾಣ್ ಮುಖದಲ್ಲಿ ಕಾಣಿಸುತ್ತಿದ್ದರೂ, ವೇದಿಕೆಯಲ್ಲಿದ್ದ ಯುಪಿಎ ಮೈತ್ರಿಕೂಟದ ಎಲ್ಲಾ ಮುಖಂಡರಲ್ಲಿ ಶಿವರಾಜ್ ಕುಶಲೋಪರಿ ವಿಚಾರಿಸುತ್ತಿದ್ದರು. ದೇವೇಗೌಡ, ಫಾರೂಕ್ ಅಬ್ದುಲ್ಲಾ, ಕುಮಾರಸ್ವಾಮಿ, ಚಂದ್ರಬಾಬು ನಾಯ್ಡು ಸೇರಿದಂತೆ, ಕಾಂಗ್ರೆಸ್ಸಿನ ಮುಖಂಡರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
| Array |
ಶಿವರಾಜ್, ಕಮಲ್ ನಾಥ್ ಮತ್ತು ಜ್ಯೋತಿರಾದಿತ್ಯ ಸಿಂದಿಯಾ
ಶಿವರಾಜ್ ಸಿಂಗ್ ಬಳಿ ಬಂದ ಕಮಲ್ ನಾಥ್, ಅವರ ಕೈಕುಲುಕಿ ಮಾತುಕತೆ ನಡೆಸಿದರು, ಇದಾದ ನಂತರ ಶಿವರಾಜ್, ಕಮಲ್ ನಾಥ್ ಮತ್ತು ಜ್ಯೋತಿರಾದಿತ್ಯ ಸಿಂದಿಯಾ ಮೂವರು ಒಟ್ಟಾಗಿ ಸಾರ್ವಜನಿಕರತ್ತ ಕೈಬೀಸಿದರು. ವೇದಿಕೆಯಲ್ಲಿದ್ದ ಎಲ್ಲಾ ಮುಖಂಡರು, ತಾವೂ ಚಪ್ಪಾಳೆ ಹೊಡೆದು ಈ ಅಪರೂಪದ ರಾಜಕೀಯ ಘಟನೆಗೆ ಮೆಚ್ಚುಗೆ ಸೂಚಿಸಿದರು.

ಜಮ್ಮು ಕಾಶ್ಮೀರದ ಮಾಜಿ ಸಿಎಂ ಓಮರ್ ಅಬ್ದುಲ್ಲಾ ಮೆಚ್ಚುಗೆ
ಕಮಲ್ ನಾಥ್ ಪ್ರಮಾಣವಚನ ಕಾರ್ಯಕ್ರಮದಲ್ಲಿ ಶಿವರಾಜ್ ಸಿಂಗ್ ಭಾಗವಹಿಸಿದ್ದು, ಕೆಲವು ಬಿಜೆಪಿ ನಾಯಕರ ಅಸಮಾಧಾನಕ್ಕೂ ಕಾರಣವಾಗಿದೆ. ಆದರೆ, ತಮ್ಮ ಪಕ್ಷ ಸೋತಿದ್ದರೂ, ಮಾಜಿ ಸಿಎಂ ಆಗಿ ಶಿವರಾಜ್ ಭಾಗವಹಿಸಿದ್ದದ್ದು ವ್ಯಾಪಕ ಪ್ರಶಂಸೆಗೊಳಗಾಗಿದೆ. ಶಿವರಾಜ್ ಪ್ರಮಾಣವಚನ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಕ್ಕೆ ನನ್ನ ಗೌರವವಿದೆ. ಇಷ್ಟು ಸಣ್ಣ ಅಂತರದಿಂದ ಸೋತು, ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು ಸುಲಭದ ಮಾತಲ್ಲ ಎಂದು ಜಮ್ಮು ಕಾಶ್ಮೀರದ ಮಾಜಿ ಸಿಎಂ ಓಮರ್ ಅಬ್ದುಲ್ಲಾ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಪತ್ರಕರ್ತೆ ಬರ್ಖಾ ದತ್ ಶ್ಲಾಘನೆ
ಬಿಜೆಪಿಯನ್ನು ಟೀಕಿಸುವುದರಲ್ಲಿ ಮಂಚೂಣಿಯಲ್ಲಿರುವ ಪತ್ರಕರ್ತೆ ಬರ್ಖಾ ದತ್ ಕೂಡಾ, ಶಿವರಾಜ್ ನಡೆಯನ್ನು ಶ್ಲಾಘಿಸಿದ್ದಾರೆ. ಭಾರತದ ರಾಜಕೀಯದಲ್ಲಿ ಇದೊಂದು ವಿನಯಶೀಲ ನಡೆ ಎಂದಿದ್ದಾರೆ. ಟ್ವಿಟ್ಟಿಗರೂ, ಶಿವರಾಜ್ ಸಿಂಗ್ ನಡೆಯನ್ನು ಸ್ವಾಗತಿಸಿದ್ದಾರೆ.

ಮಾಮಾಜೀ ಶಿವರಾಜ್ ಚೌಹಾಣ್
ಕಮಲ್ ನಾಥ್ ಅವರ ಪ್ರಮಾಣವಚನ ಸಮಾರಂಭದಲ್ಲಿ ತುಂಬಾ ಜನ ಮಾತನಾಡಿಕೊಳ್ಳುತ್ತಿದ್ದದ್ದು ಮಾಮಾಜೀ (ಶಿವರಾಜ್ ಚೌಹಾಣ್) ಬಗ್ಗೆ,.ಅತ್ಯಂತ ಗೌರವಪೂರ್ಣ ನಡೆ.. ಅವರ ಈ ಒಳ್ಳೆಯ ಗುಣಕ್ಕಾಗಿಯೇ ಅವರನ್ನು ಎಲ್ಲರೂ ಮಾಮಾಜೀ ಎಂದು ಕರೆಯುವುದು.. ಅತ್ಯುತ್ತಮ ಮುಖಂಡ.. ಹೀಗೆ ಶಿವರಾಜ್ ಅವರನ್ನು ಹೊಗಳುವ ಟ್ವೀಟ್.












Click it and Unblock the Notifications