820 ಕಿ. ಮೀ. ದೂರದಿಂದ ಬಂದವರು ಊರಿನ ಮುಂದೆ ಪ್ರಾಣಬಿಟ್ಟರು!
ಭೋಪಾಲ್, ಏಪ್ರಿಲ್ 30 : ಅವರೆಲ್ಲಾ ವಲಸೆ ಕಾರ್ಮಿಕರು, ದೂರದ ಊರುಗಳಲ್ಲಿ ಸಿಲುಕಿದ್ದ ಅವರು ಲಾಕ್ ಡೌನ್ ಜಾರಿಗೊಂಡ ಮೇಲೆ ಕಷ್ಟಪಟ್ಟು ತವರು ಗ್ರಾಮಕ್ಕೆ ವಾಪಸ್ ಬಂದಿದ್ದರು. ಆದರೆ, ಮನೆ ಸೇರುವ ಮುನ್ನವೇ ಸಾವನ್ನಪ್ಪಿದ್ದಾರೆ.
Recommended Video
ಮಧ್ಯಪ್ರದೇಶದ ಉಜ್ಜೈನಿಯ ಬೇಹರಾಪುರ್ ಗ್ರಾಮದ ಬಳಿ ಬುಧವಾರ ಮುಂಜಾನೆ ನಡೆದ ರಸ್ತೆ ಅಪಘಾತದಲ್ಲಿ ಮೂವರು ಸಾವನ್ನಪ್ಪಿದ್ದಾರೆ. ರಾಜಸ್ಥಾನದ ಜೈಸ್ಲಮರ್ನಿಂದ ತಮ್ಮ ಗ್ರಾಮಕ್ಕೆ ಬಂದಿದ್ದ ವಲಸೆ ಕಾರ್ಮಿಕರು ಬೆಳಗಾದ ಮೇಲೆ ಗ್ರಾಮಕ್ಕೆ ಹೋಗುವ ಆಲೋಚನೆಯಲ್ಲಿ ರಸ್ತೆ ಪಕ್ಕ ಮಲಗಿದ್ದರು.
ವೇಗವಾಗಿ ಬಂದ ಲಾರಿ ನಿಯಂತ್ರಣ ಕಳೆದುಕೊಂಡು ರಸ್ತೆ ಪಕ್ಕದಲ್ಲಿ ಮಲಗಿದ್ದವರ ಮೇಲೆ ಹರಿದಿದೆ. ಮೂವರು ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ. ಲಾರಿ ಚಾಲಕ ಪರಾರಿಯಾಗಿದ್ದು, ಹುಡುಕಾಟ ನಡೆಸಲಾಗುತ್ತಿದೆ.

ಘಟನೆ ವಿವರ : ಜೈಸ್ಲಮರ್ನಲ್ಲಿ ಕೂಲಿ ಕೆಲಸ ಮಾಡಿಕೊಂಡಿದ್ದ ಮೂವರು ಲಾಕ್ ಡೌನ್ ಪರಿಣಾಮ ಅಲ್ಲಿಂದ ವಾಪಸ್ ಆಗಿದ್ದರು. 820 ಕಿ. ಮೀ. ಸಂಚಾರ ನಡೆಸಿ ಸೋಮವಾರ ಸಂಜೆ ವೇಳೆಗೆ ಅವರು ಬೇಹರಾಪುರ್ ಗ್ರಾಮ ತಲುಪಿದ್ದರು. ಆದರೆ, ಗ್ರಾಮಸ್ಥರು ಗ್ರಾಮಕ್ಕೆ ಪ್ರವೇಶ ನೀಡಲಿಲ್ಲ.
ಉಜ್ಜೈನಿಯಲ್ಲಿ ಕೋವಿಡ್ - 19 ಪರೀಕ್ಷೆ ಮಾಡಿಸಿಕೊಂಡು ಬಳಿಕ ಗ್ರಾಮಕ್ಕೆ ಬರುವಂತೆ ಸೂಚಿಸಿದರು. ಮಂಗಳವಾರ ಬೆಳಗ್ಗೆ ಉಜ್ಜೈನಿ ಸರ್ಕಾರಿ ಆಸ್ಪತ್ರೆಗೆ ಹೋಗಿ ಪರೀಕ್ಷೆ ಮಾಡಿಸಿಕೊಂಡು ಎಲ್ಲರೂ ಗ್ರಾಮಕ್ಕ ವಾಪಸ್ ಆಗುತ್ತಿದ್ದರು. ಆಗ ರಾತ್ರಿ ಆಗಿತ್ತು.
ಬುಧವಾರ ಬೆಳಗ್ಗೆ ಗ್ರಾಮಕ್ಕೆ ಹೋಗೋಣ ಎಂದು ಗ್ರಾಮದ ಸಮೀಪದ ದೇವಸ್ಥಾನದ ಬಳಿಯ ರಸ್ತೆಯಲ್ಲಿ ಮಲಗಿದ್ದರು. ಆದರೆ, ವಿಧಿಯ ಆಟವೇ ಬೇರೆಯಾಗಿತ್ತು. ವೇಗವಾಗಿ ಬಂದ ಲಾರಿ ಮೂವರ ಮೇಲೆ ಹರಿದಿದ್ದು, ಮನೆ ಸೇರುವ ಮೊದಲೇ ಎಲ್ಲರೂ ಮೃತಪಟ್ಟಿದ್ದಾರೆ.
ಉಜ್ಜೈನಿಯಲ್ಲಿ ವಲಸೆ ಕಾರ್ಮಿಕರು ವಾಪಸ್ ಬಂದರೆ ಯಾರನ್ನೂ ಗ್ರಾಮಕ್ಕೆ ಸೇರಿಸುತ್ತಿಲ್ಲ. ಎಲ್ಲರೂ ಕೋವಿಡ್ - 19 ಪರೀಕ್ಷೆ ಮಾಡಿಸಿಕೊಂಡ ಬಳಿಕವೇ ಗ್ರಾಮಕ್ಕೆ ಬರಬೇಕಿದೆ.












Click it and Unblock the Notifications