ನಾನು ಬೆಂಗಳೂರು ಬಿಟ್ಟು ಎಲ್ಲೂ ಹೋಗಿಲ್ಲ; ಮತ್ತೆ ಕಾಣಿಸಿಕೊಂಡ ಹಿತೇಶಾ ಚಂದ್ರಾನಿ
ಬೆಂಗಳೂರು, ಮಾರ್ಚ್ 19: ಜೊಮ್ಯಾಟೊ ಡೆಲಿವರಿ ಬಾಯ್ ಕಾಮರಾಜ್ ಮೇಲೆ ಹಲ್ಲೆ ಆರೋಪ ಮಾಡಿದ್ದ ಮಹಿಳೆ ಹಿತೇಶಾ ಚಂದ್ರಾನಿ ಸಾಮಾಜಿಕ ಜಾಲತಾಣದಲ್ಲಿ ಮತ್ತೆ ಕಾಣಿಸಿಕೊಂಡಿದ್ದಾರೆ.
ಮಾರ್ಚ್ 16ರಂದು ಡೆಲಿವರಿ ಬಾಯ್ ಕಾಮರಾಜ್ ಎಲೆಕ್ಟ್ರಾನಿಕ್ ಸಿಟಿ ಪೊಲೀಸ್ ಠಾಣೆಯಲ್ಲಿ ಹಿತೇಶಾ ಮೇಲೆ ದೂರು ನೀಡಿದ್ದ ಬೆನ್ನಲ್ಲೇ ಹಿತೇಶಾ ಬೆಂಗಳೂರು ತೊರೆದಿದ್ದರು ಎಂಬ ಮಾತು ಕೇಳಿಬಂದಿತ್ತು. ಆದರೆ ತಾನು ಬೆಂಗಳೂರು ಬಿಟ್ಟು ಎಲ್ಲೂ ಹೋಗಿಲ್ಲ ಎಂದಿರುವ ಅವರು, ನನಗೆ ಸಾಮಾಜಿಕ ಜಾಲತಾಣಗಳ ಮೂಲಕ ಬೆದರಿಕೆಗಳು ಬರುತ್ತಿವೆ. ಸೆಲೆಬ್ರಿಟಿಗಳು ಕೂಡ ಈ ಘಟನೆಗೆ ನನ್ನನ್ನೇ ಹೊಣೆ ಮಾಡಿರುವುದು ನೋವು ತಂದಿದೆ ಎಂದು ಇನ್ಸ್ಟಾಗ್ರಾಂ ಪುಟದಲ್ಲಿ ಬರೆದುಕೊಂಡಿದ್ದಾರೆ. ನನ್ನ ಸುರಕ್ಷತೆ ಬಗ್ಗೆ ನನಗೆ ಚಿಂತೆಯಾಗುತ್ತಿದೆ ಎಂದು ಹೇಳಿಕೊಂಡಿದ್ದಾರೆ. ಮುಂದೆ ಓದಿ...
ಜೊಮ್ಯಾಟೊ ಪ್ರಕರಣ; ಸಾಕ್ಷ್ಯ ಸಿಕ್ಕಿದ ನಂತರ ಹಿತೇಶಾಗೆ ನೋಟಿಸ್
"ನನ್ನ ಮೇಲೆ ದೌರ್ಜನ್ಯ ಎಸಗುತ್ತಿದ್ದಾರೆ"
ಈ ಘಟನೆ ನಡೆದಾಗಿನಿಂದಲೂ ನನ್ನ ಮೇಲೆ ದೌರ್ಜನ್ಯ ಎಸಗಲಾಗುತ್ತಿದೆ. ನಾನು ಏನು ಮಾತನಾಡಿದರೂ ಅದನ್ನು ತಿರುಚಲಾಗುತ್ತಿದೆ ಎಂಬ ಕಾರಣಕ್ಕೆ ಮೌನವಾಗಿದ್ದೆ. ಸದ್ಯಕ್ಕೆ ಮೂಗಿಗೆ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದೇನೆ. ನನಗೆ ಫೋನ್ ಮಾಡಿ ಕೆಲವರು ಕೆಟ್ಟದಾಗಿ ಮಾತನಾಡುತ್ತಿದ್ದಾರೆ. ನನಗೆ ಬೆದರಿಕೆ ಇದೆ. ಇಮೇಲ್, ವಾಟ್ಸ್ಆಪ್, ಯೂ ಟ್ಯೂಬ್, ಇನ್ಸ್ಟಾಗ್ರಾಮ್, ಕಾಲ್ಗಳು, ಮೆಸೇಜ್ಗಳು ಎಲ್ಲ ಸಾಮಾಜಿಕ ಜಾಲತಾಣಗಳ ಮೂಲಕ ನನ್ನ ಮೇಲೆ ದೌರ್ಜನ್ಯ ಎಸಗಲಾಗುತ್ತಿದೆ ಎಂದು ದೂರಿದ್ದಾರೆ.
"ನಾನು ಬೆಂಗಳೂರಿನಲ್ಲಿಯೇ ಇದ್ದೇನೆ"
ದೂರು ಹಾಕುತ್ತಿದ್ದಂತೆ ನಾನು ಬೆಂಗಳೂರು ತೊರೆದಿದ್ದೇನೆ ಎಂದು ಹಲವು ವರದಿಗಳನ್ನು ನೋಡಿದೆ. ಆದರೆ ನಾನು ಬೆಂಗಳೂರಿನಲ್ಲಿಯೇ ಇದ್ದೇನೆ. ಬೆಂಗಳೂರು ನನಗೆ ಮನೆಯಂತೆ. ನಡೆದ ಘಟನೆಯನ್ನಷ್ಟೇ ನಾನು ವಿವರಿಸಿದ್ದೆ. ಆದರೆ ಆ ಹೇಳಿಕೆಗಳನ್ನು ತಿರುಚಲಾಗಿದೆ. ಈ ಘಟನೆ ನಡೆದಾಗಿನಿಂದ ನನಗೆ ತುಂಬಾ ಕಷ್ಟವಾಗುತ್ತಿದೆ. ನನ್ನ ಸುರಕ್ಷತೆ ಬಗ್ಗೆ ನನಗೆ ಚಿಂತೆ ಶುರುವಾಗಿದೆ. ಆದರೆ ಈ ಘಟನೆಗೆ ನಾನೇ ಕಾರಣ ಎಂದು ಆರೋಪಿಸಿ ಕೆಲವು ಸೆಲೆಬ್ರಿಟಿಗಳು ಮಾಡಿದ ಪೋಸ್ಟ್ಗಳು ನನ್ನನ್ನು ಬಹಳ ನೋಯಿಸಿವೆ ಎಂದು ಹೇಳಿಕೊಂಡಿದ್ದಾರೆ. ಕೆಲವು ಸೆಲೆಬ್ರಿಟಿಗಳ ಟ್ವೀಟ್ ಹಾಗೂ ಪೋಸ್ಟ್ ಗಳ ಮೂಲಕ ಸಾಮಾಜಿಕ ಜಾಲತಾಣದಲ್ಲಿ ನನ್ನನ್ನು ದೂಷಿಸಲಾಗಿದೆ. ಹಾಗಾಗಿ ಈ ಹೇಳಿಕೆ ಬಿಡುಗಡೆ ಮಾಡಲು ನಿರ್ಧರಿಸಿದೆ ಎಂದಿದ್ದಾರೆ.
ಹಿತೇಶಾ ಬೆಂಗಳೂರಿಂದ ಪರಾರಿ: ಮಾಜಿ ರೂಮ್ಮೇಟ್ ಹೇಳಿದ ಸ್ಫೋಟಕ ಸಂಗತಿ
"ತಡವಾಗಿ ಡೆಲಿವರಿ ಮಾಡಿದ ಕಾರಣ ಹಣ ತೆಗೆದುಕೊಂಡಿಲ್ಲ"
ಕೆಲವರು ನಾನು ಉಚಿತವಾಗಿ ಆಹಾರ ತೆಗೆದುಕೊಳ್ಳುತ್ತಿದ್ದೆ ಎಂದಿದ್ದಾರೆ. ಆದರೆ ತಡವಾಗಿ ಆಹಾರ ಡೆಲಿವರಿ ಮಾಡಿದ ಕಾರಣ ಹಣ ತೆಗೆದುಕೊಳ್ಳುವುದಿಲ್ಲ ಎಂದು ಜೊಮ್ಯಾಟೊ ಕಂಪನಿ ಹೇಳಿತ್ತು. ಆದರೆ ಈ ಘಟನೆಗೆ ಸಂಬಂಧಿಸದವರು ಏನೂ ತಿಳಿದುಕೊಳ್ಳದೇ ಮಾತನಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ದೂರು ಹಿಂತೆಗೆದುಕೊಳ್ಳುವಂತೆ ನನ್ನ ಮೇಲೆ ಸಾಮಾಜಿಕ ಜಾಲತಾಣಗಳ ಮೂಲಕ ಒತ್ತಡ, ಬೆದರಿಕೆಗಳು ಬಂದಿವೆ. ನಾನು ಕಾನೂನು ಪರಿಪಾಲನೆ ಮಾಡುವವಳು. ನನಗೆ ನ್ಯಾಯದಲ್ಲಿ ನಂಬಿಕೆಯಿದೆ. ನಾನು ಬೆಂಗಳೂರು ಬಿಟ್ಟಿಲ್ಲ. ಪೊಲೀಸರಿಗೂ ಸಹಕಾರ ನೀಡುತ್ತೇನೆ ಎಂದು ಹೇಳಿಕೊಂಡಿದ್ದಾರೆ.
"ಸುಮ್ಮನೆ ಅಭಿಪ್ರಾಯ ವ್ಯಕ್ತಪಡಿಸಬೇಡಿ"
ಸೂಕ್ತ ಕಾನೂನು ತನಿಖೆಯಾಗಿ ವಿಚಾರಣೆ ಪೂರ್ಣಗೊಳ್ಳುವವರೆಗೆ ಯಾರೂ ಯಾವುದೇ ಅಭಿಪ್ರಾಯ ವ್ಯಕ್ತಪಡಿಸಬಾರದು ಎಂದು ಕೋರಿಕೊಂಡಿರುವ ಅವರು, ತನಿಖಾ ಸಂಸ್ಥೆಗಳ ತನಿಖೆ ಸತ್ಯವನ್ನು ಹೊರತರುವ ವಿಶ್ವಾಸವಿದೆ. ನಾನು ಕೂಡ ನ್ಯಾಯವನ್ನು ಎದುರು ನೋಡುತ್ತಿದ್ದೇನೆ ಎಂದಿದ್ದಾರೆ.
Recommended Video
ಏನಿದು ಜೊಮ್ಯಾಟೊ ಪ್ರಕರಣ?
ಮಾರ್ಚ್ 9ರಂದು ಹಿತೇಶಾ ಚಂದ್ರಾನಿ ಎಂಬ ಮಹಿಳೆ, ಜೊಮ್ಯಾಟೊ ಡೆಲಿವರಿ ಬಾಯ್ ತಮ್ಮ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದರು. ಅಂದು ಆಹಾರ ಆರ್ಡರ್ ಮಾಡಿ ತುಂಬಾ ಸಮಯವಾದರೂ ಡೆಲಿವರಿ ಆಗಿರಲಿಲ್ಲ. ಆರ್ಡರ್ ಕ್ಯಾನ್ಸಲ್ ಮಾಡುವುದಕ್ಕಾಗಿ ಗ್ರಾಹಕ ಸೇವಾ ಕೇಂದ್ರಕ್ಕೆ ಫೋನ್ ಮಾಡುವ ವೇಳೆ ಡೆಲಿವರಿ ಬಾಯ್ ಕಾಮರಾಜ್ ಮನೆಗೆ ಬಂದಿದ್ದ. ತಡವಾಗಿದ್ದರಿಂದ ಕೋಪಗೊಂಡಿದ್ದ ನಾನು ಜೊಮ್ಯಾಟೊದಿಂದ ಕರೆ ಬರುವವರೆಗೂ ಇಲ್ಲಿಯೇ ಇರಿ ಎಂದಿದ್ದಕ್ಕೆ ಆತ ಕೋಪದಿಂದ ಹಲ್ಲೆ ನಡೆಸಿದ್ದ ಎಂದು ಹಿತೇಶಾ ಚಂದ್ರಾನಿ ಎಂಬ ಯುವತಿ ಆರೋಪಿಸಿದ್ದರು. ಆನಂತರ ಪ್ರಕರಣ ಬೇರೆಯದ್ದೇ ಆಯಾಮ ಪಡೆದುಕೊಂಡಿತ್ತು. ಯುವತಿಯೇ ಕಾಮರಾಜ್ ಮೇಲೆ ಚಪ್ಪಲಿ ಎಸೆದು ಹಲ್ಲೆ ನಡೆಸಿದ್ದಳು ಎಂಬ ಆರೋಪ ಕೇಳಿಬಂದಿತ್ತು. ಇದೇ ಮಾರ್ಚ್ 16ರಂದು ಡೆಲಿವರಿ ಬಾಯ್ ಕಾಮರಾಜ್ ಎಲೆಕ್ಟ್ರಾನಿಕ್ ಸಿಟಿ ಪೊಲೀಸರ ಠಾಣೆಯಲ್ಲಿ ದೂರು ದಾಖಲಿಸಿದ್ದರು.