ಸಿಎಂಗೆ ಬಿರಿಯಾನಿ ತಂದ ಆಟೋ ಒಳಗೆ ಬಿಡದ ಪೊಲೀಸರು: ಜಮೀರ್ ಅಹಮದ್ ಮಾಡಿದ್ದೇನು?
ಬೆಂಗಳೂರು, ಜೂನ್ 29: ಬಕ್ರೀದ್ ಹಬ್ಬದ ಹಿನ್ನಲೆಯಲ್ಲಿ ಜಮೀರ್ ಅಹಮದ್ ಖಾನ್ ಸಿಎಂ ಸಿದ್ದರಾಮಯ್ಯ ಅವರಿಗೆ ಆಟೋದಲ್ಲಿ ಬಿರಿಯಾನಿ ಕಳುಹಿಸಿದ್ದರು. ಆದರೆ, ಭದ್ರತಾ ಸಿಬ್ಬಂದಿ ಆಟೋವನ್ನು ಒಳಗೆ ಕಾರಣ, ಬೆಂಜ್ ಕಾರಿನಲ್ಲಿ ಸಿಎಂ ಮನೆಗೆ ಬಿರಿಯಾನಿ ಕಳುಹಿಸಲಾಗಿದೆ.
ಇಂದು ಬಕ್ರೀದ್ ಹಬ್ಬ ಆಚರಣೆ ಹಿನ್ನಲೆಯಲ್ಲಿ ಜಮೀರ್ ಅಹಮದ್ ಖಾನ್ ಅವರು ವಿವಿಧ ರೀತಿ ಬಾಡೂಟವನ್ನು ಸಿಎಂ ನಿವಾಸಕ್ಕೆ ಆಟೋದಲ್ಲಿ ಕಳುಹಿಸಿಕೊಟ್ಟಿದ್ದರು. ಆದರೆ, ಪೊಲೀಸರು ಆಟೋವನ್ನು ಗೇಟ್ನಲ್ಲೇ ತಡೆದಿದ್ದು, ಒಳಗೆ ಬಿಡುವುದಿಲ್ಲ ಎಂದು ಹೇಳಿದ್ದಾರೆ.

ಸಿಎಂ ಸರ್ಕಾರಿ ನಿವಾಸಕ್ಕೆ ಆಟೋವನ್ನು ಒಳ ಬಿಡಲು ಸಾಧ್ಯವಿಲ್ಲ ಎಂದು ಹೇಳಿದ ಬಳಿಕ ಊಟವನ್ನು ಸಿಎಂ ನಿವಾಸಕ್ಕೆ ಸಾಗಿಸಲೇಬೇಕೆಂದು ನಿರ್ಧರಿಸಿದ ಜಮೀರ್ ಅಹಮದ್ ಬೆಂಬಲಿಗರು ನಂತರ ಊಟದ ಬಾಕ್ಸ್ಗಳನ್ನು ಬೆಂಜ್ ಕಾರಿಗೆ ಶಿಫ್ಟ್ ಮಾಡಿ ಕಳುಹಿಸಿಕೊಟ್ಟಿದ್ದಾರೆ.
ಬೆಂಜ್ ಕಾರನ್ನು ಪೊಲೀಸರು ಸಿಎಂ ಸರ್ಕಾರಿ ನಿವಾಸಕ್ಕೆ ತೆರಳಲು ಅನುಮತಿ ಕೊಟ್ಟಿದ್ದು, ಕೊನೆಗೂ ಜಮೀರ್ ಅಹಮದ್ ಕಳುಹಿಸಿದ ಊಟವನ್ನು ಸಿದ್ದರಾಮಯ್ಯ ಅವರ ನಿವಾಸಕ್ಕೆ ತಲುಪಿಸುವಲ್ಲಿ ಜಮೀರ್ ಅಹಮದ್ ಬೆಂಬಲಿಗರು ಯಶಸ್ವಿಯಾಗಿದ್ದಾರೆ.
ಬಕ್ರೀದ್ ಆಚರಣೆಯಲ್ಲಿ ಭಾಗವಹಿಸಿದ್ದ ಸಿದ್ದರಾಮಯ್ಯ
ಇನ್ನು ನಗರದ ಚಾಮರಾಜಪೇಟೆಯಲ್ಲಿರುವ ಈದ್ಗಾ ಮೈದಾನದಲ್ಲಿ ನಡೆದ ಬಕ್ರೀದ್ ಆಚರಣೆಯಲ್ಲಿ ಸಿಎಂ ಸಿದ್ದರಾಮಯ್ಯ ಪಾಲ್ಗೊಂಡಿದ್ದರು. ಮುಸ್ಲಿಂ ಸಮುದಾಯದವರು ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದ ಸಂದರ್ಭದಲ್ಲಿ ಸಿಎಂ ಕೂಡ ಭಾಗಿಯಾಗಿದ್ದರು.
ಮುಸ್ಲಿಂ ಧರ್ಮಗುರುಗಳು ಸಿಎಂ ಸಿದ್ದರಾಮಯ್ಯ ಅವರನ್ನು ಸಂಪ್ರದಾಯದಂತೆ ಟೋಪಿ ಹಾಕುವ ಮೂಲಕ ಬರಮಾಡಿಕೊಂಡರು. ಸಚಿವ ಜಮೀರ್ ಅಹಮದ್ ಖಾನ್ ಸಿದ್ದರಾಮಯ್ಯ ಅವರಿಗೆ ಪುಸ್ತಕ ನೀಡಿದರು. ಸಾವಿರಾರು ಮುಸ್ಲಿಮರು ಭಾಗವಹಿಸಿ, ಪ್ರಾರ್ಥನೆ ಸಲ್ಲಿಸಿದರು.
ಪ್ರಾರ್ಥನೆಯ ನಂತರ ಸಿದ್ದರಾಮಯ್ಯ ನೆರೆದಿದ್ದ ಎಲ್ಲರಿಗೂ ಬಕ್ರೀದ್ ಹಬ್ಬದ ಶುಭಾಶಯ ಕೋರಿದರು. ಪ್ರಾರ್ಥನೆ ಮೂಲಕ ಇಡೀ ಮನುಕುಲಕ್ಕೆ ಒಳ್ಳೆಯದಾಗಲಿ ಎಂದು ಪ್ರಾರ್ಥನೆ ಮಾಡಿದ್ದೀರಾ, ನಿಮ್ಮ ಜೊತೆ ಭಾಗಿಯಾಗಿರುವುದಕ್ಕೆ ನನಗೂ ಖುಷಿಯಾಗಿದೆ ಎಂದು ಹೇಳಿದರು.
ನಾವೆಲ್ಲರೂ ಒಗ್ಗಟ್ಟಿನಿಂದ, ಒಂದಾಗಿ ಇರಬೇಕು, ನಮ್ಮನ್ನು ಬೇರ್ಪಡಿಸಲು, ಸಾಮರಸ್ಯ ಹಾಳು ಮಾಡಲು ನಮ್ಮಲ್ಲೇ ಕೆಲವು ಶಕ್ತಿಗಳು ಪ್ರಯತ್ನಿಸುತ್ತವೆ ಅದಕ್ಕೆಲ್ಲಾ ನಾವು ಬೆಲೆ ಕೊಡಬಾರದು. ಎಲ್ಲರೂ ಒಗ್ಗಟ್ಟಿನಿಂದ ಇದ್ದಾಗ ರಾಜ್ಯದ ಅಭಿವೃದ್ಧಿಯಾಗುತ್ತದೆ ಎಂದು ಹೇಳಿದರು.












Click it and Unblock the Notifications