ಬೆಂಗಳೂರು-ಶಿವಮೊಗ್ಗ ನಡುವೆ ಮತ್ತೊಂದು ರೈಲು; ವೇಳಾಪಟ್ಟಿ
ಬೆಂಗಳೂರು, ಆಗಸ್ಟ್ 03; ನೈಋತ್ಯ ರೈಲ್ವೆಯ ಬೆಂಗಳೂರು ವಿಭಾಗ ಯಶವಂತಪುರ-ಶಿವಮೊಗ್ಗ ನಡುವೆ ಮತ್ತೊಂದು ರೈಲು ಓಡಿಸುತ್ತಿದೆ. ಆಗಸ್ಟ್ 10ರಿಂದ ಪ್ರತಿದಿನ ಈ ಎಕ್ಸ್ಪ್ರೆಸ್ ರೈಲು ಸಂಚಾರ ನಡೆಸಲಿದೆ ಎಂದು ಟ್ವೀಟ್ ಮೂಲಕ ಮಾಹಿತಿ ನೀಡಲಾಗಿದೆ.
ರೈಲು ನಂಬರ್ 07357/07358 ಯಶವಂತಪುರ-ಶಿವಮೊಗ್ಗ ಟೌನ್-ಯಶವಂತಪುರ ನಡುವೆ ಸಂಚಾರ ನಡೆಸಲಿವೆ. ಆಗಸ್ಟ್ 10ರಿಂದ ಮುಂದಿನ ಆದೇಶದ ತನಕ ಈ ರೈಲು ಪ್ರತಿದಿನ ಸಂಚಾರ ನಡೆಸಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಬೆಂಗಳೂರಿನ ಯಶವಂತಪುರದಿಂದ ಹೊರಡುವ ರೈಲು ತುಮಕೂರು, ತಿಪಟೂರು, ಅರಸೀಕೆರೆ, ಕಡೂರು, ಬೀರೂರು, ತರೀಕೆರೆ, ಭದ್ರಾವತಿ ನಿಲ್ದಾಣದಲ್ಲಿ ನಿಲುಗಡೆಗೊಂಡು ಶಿವಮೊಗ್ಗವನ್ನು ತಲುಪಲಿದೆ. ಶಿವಮೊಗ್ಗದಿಂದ ವಾಪಸ್ ಬರುವಾಗ ಸಹ ಇದೇ ನಿಲ್ದಾಣಗಳಲ್ಲಿ ರೈಲು ನಿಲುಗಡೆಗೊಳ್ಳಲಿದೆ.
KINDLY NOTE;-
— DRM Bengaluru (@drmsbc) August 3, 2021
Running of Special Train No. 07357/07358 (YPR-SMET-YPR) Daily Express W.E.F 10.08.2021 until further advice. The details of stoppages/Timings are as under @srdcmsbc @srdomsbc @SWRRLY #Trainupdates pic.twitter.com/h3lzEen1RM

ಕೋವಿಡ್ ಅನ್ಲಾಕ್ ಘೋಷಣೆ ಬಳಿಕ ಜನರ ಸಂಚಾರ ಹೆಚ್ಚಾಗಿದೆ. ಶಿವಮೊಗ್ಗ-ಬೆಂಗಳೂರು ಮಾರ್ಗದಲ್ಲಿ ಸಂಚಾರ ನಡೆಸುವ ಪ್ರಯಾಣಿಕರ ಸಂಖ್ಯೆಯೂ ಅಧಿಕವಾಗಿದೆ. ಆದ್ದರಿದ ನೈಋತ್ಯ ರೈಲ್ವೆ ವಿಶೇಷ ರೈಲನ್ನು ಉಭಯ ನಗರಗಳ ನಡುವೆ ಓಡಿಸುತ್ತಿದೆ.
ಪ್ರಯಾಣಿಕರಿಗೆ ಸಿಹಿಸುದ್ದಿ; ನೈಋತ್ಯ ರೈಲ್ವೆಯು ಪ್ರಯಾಣಿಕರಿಗೆ ಸಿಹಿಸುದ್ದಿಯನ್ನು ನೀಡಿದೆ. ಪ್ರಯಾಣಿಕರ ಅನುಕೂಲಕ್ಕಾಗಿ ರೈಲ್ವೆಯು ಮಾಸಿಕ ನಿಯತಕಾಲಿಕ ಟಿಕೆಟ್ ಸೇವೆಯನ್ನು ಪುನರಾರಂಭಿಸಲು ಹಾಗೂ ಲಾಕ್ಡೌನ್ಗೆ ಮುನ್ನ ನೀಡಲಾಗಿದ್ದು ಅಸ್ತಿತ್ವದಲ್ಲಿರುವ ನಿಯತಕಾಲಿಕ ಟಿಕೆಟ್ಗಳನ್ನು ಮರು ಊರ್ಜಿತಗೊಳಿಸಲು ನಿರ್ಧರಿಸಿದೆ. ಈ ಕುರಿತು ಅಗತ್ಯ ಸೂಚನೆಗಳನ್ನು ಶೀಘ್ರದಲ್ಲೇ ಹೊರಡಿಸಲಾಗುತ್ತದೆ.
ಹುಬ್ಬಳ್ಳಿ ರೈಲಿಗೆ ಹೆಚ್ಚುವರಿ ಬೋಗಿ; ನೈಋತ್ಯ ರೈಲ್ವೆಯು ಹುಬ್ಬಳ್ಳಿ-ಬಳ್ಳಾರಿ-ಹುಬ್ಬಳ್ಳಿ ರೈಲು ಸಂಖ್ಯೆ 07337/ 07338 ರೈಲಿಗೆ ಆಗಸ್ಟ್ 4ರಿಂದ ಜಾರಿಗೆ ಬರುವಂತೆ 5 ಹೆಚ್ಚುವರಿ ಬೋಗಿಗಳನ್ನು ಜೋಡಿಸಲಿದೆ. 5 ಹೆಚ್ಚುವರಿ ದ್ವಿತೀಯ ದರ್ಜೆಯ ಬೋಗಿಗಳನ್ನು ಶಾಶ್ವತವಾಗಿ ಅಳವಡಿಸಲಾಗುವುದು. ಇದರಿಂದಾಗಿ ರೈಲಿನಲ್ಲಿ 11 ದ್ವಿತೀಯ ದರ್ಜೆ ಮತ್ತು 2 ಲಗೇಜ್-ಬ್ರೇಕ್ ವ್ಯಾನ್/ ದಿವ್ಯಾಂಗ ಸ್ನೇಹಿ ಕಂಪಾರ್ಟ್ಮೆಂಟ್ ಬೋಗಿಗಳು ಇರಲಿವೆ.
ಪ್ರಸ್ತುತ ಸಂಚಾರ ನಡೆಸುತ್ತಿರುವ ರೈಲು 8 ಬೋಗಿಗಳನ್ನು ಹೊಂದಿದೆ. 5 ಹೆಚ್ಚುವರಿ ಬೋಗಿಗಳನ್ನು ಅಳವಡಿಕೆ ಮಾಡಿದ ಬಳಿಕ ಅವುಗಳ ಸಂಖ್ಯೆ 13 ಆಗಲಿದ್ದು, ಆಗಸ್ಟ್ 4ರ ಬುಧವಾರದಿಂದ ಹೆಚ್ಚಿನ ಬೋಗಿ ಅಳವಡಿಕೆ ಮಾಡಲಾಗುತ್ತದೆ.
ಮತ್ತೆ ರೈಲು ಸಂಚಾರ ಆರಂಭ; ನೈಋತ್ಯ ರೈಲ್ವೆ ಪ್ರಯಾಣಿಕರ ಅನುಕೂಲಕ್ಕಾಗಿ ಅರಸೀಕೆರೆ-ಹುಬ್ಬಳ್ಳಿ-ಅರಸೀಕೆರೆ ದೈನಿಕ ಪ್ಯಾಸೆಂಜರ್ ರೈಲನ್ನು ಮತ್ತೆ ಆರಂಭಿಸಲಿದೆ. ರೈಲು ಸಂಖ್ಯೆ 07367/ 07368 ಅರಸೀಕೆರೆ-ಎಸ್ಎಸ್ಎಸ್ ಹುಬ್ಬಳ್ಳಿ-ಅರಸೀಕೆರೆ ನಡುವೆ ಆಗಸ್ಟ್ 12ರಿಂದ ಸಂಚಾರ ನಡೆಸಲಿದೆ.
ರೈಲು ಪ್ರಯಾಣಿಕರ ಗಮನಕ್ಕೆ; ಅಕ್ಕಪಕ್ಕದ ರಾಜ್ಯಗಳಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದೆ. ಈ ಹಿನ್ನಲೆಯಲ್ಲಿ ಕರ್ನಾಟಕ ಸರ್ಕಾರ ಅಂತರರಾಜ್ಯ ಪ್ರಯಾಣಕ್ಕೆ ಹೊಸ ಮಾರ್ಗಸೂಚಿಯನ್ನು ಪ್ರಕಟಿಸಿದೆ.
ಸರ್ಕಾರದ ಆದೇಶದಂತೆ ಕೇರಳ ಮತ್ತು ಮಹಾರಾಷ್ಟ್ರದಿಂದ ಕರ್ನಾಟಕಕ್ಕೆ ಆಗಮಿಸುವ ರೈಲು ಪ್ರಯಾಣಿಕರು ಕೋವಿಡ್ 19 ಲಸಿಕೆಯ ಎರಡು ಡೋಸ್ಗಳನ್ನು ಪಡೆದಿದ್ದರೂ/ ಪಡೆಯದಿದ್ದರೂ ಸಹ 72 ಗಂಟೆಗಳ ಒಳಗೆ ಮಾಡಿಸಿರುವ RTPCR ನೆಗೆಟಿವ್ ಪರೀಕ್ಷಾ ವರದಿಯನ್ನು ಹೊಂದಿರುವುದು ಕಡ್ಡಾಯವಾಗಿರುತ್ತದೆ.
ನೂತನ ಪ್ರಧಾನ ವ್ಯವಸ್ಥಾಪಕರ ನೇಮಕ; ನೈಋತ್ಯ ರೈಲ್ವೆಯ ಪ್ರಧಾನ ವ್ಯವಸ್ಥಾಪಕರಾಗಿ ಸಂಜೀವ್ ಕಿಶೋರ್ ಶುಕ್ರವಾರ ಅಧಿಕಾರ ಸ್ವೀಕಾರ ಮಾಡಿದರು. ರೈಲ್ವೆಯ ಪ್ರಧಾನ ವ್ಯವಸ್ಥಾಪಕರಾಗಿದ್ದ ಅಜಯ್ ಕುಮಾರ್ ಸಿಂಗ್ ಈ ವರ್ಷದ ಮಾರ್ಚ್ನಲ್ಲಿ ನಿವೃತ್ತರಾಗಿದ್ದರು. ಬಳಿಕ ಗಜಾನನ ಮಲ್ಯ ಹೆಚ್ಚುವರಿಯಾಗಿ ಜವಾಬ್ದಾರಿ ವಹಿಸಿಕೊಂಡಿದ್ದರು.
ಸಂಜೀವ್ ಕಿಶೋರ್ ಭಾರತೀಯ ರೈಲ್ವೆ ಸರ್ವೀಸ್ ಆಫ್ ಮೆಕ್ಯಾನಿಕಲ್ ಎಂಜಿನಿಯರ್ಸ್ ವಿಭಾಗದಲ್ಲಿ ಉತ್ಪಾದನಾ ಘಟಕದ ಹೆಚ್ಚುವರಿ ಸದಸ್ಯರಾಗಿ ಕಾರ್ಯ ನಿರ್ವಹಣೆ ಮಾಡುತ್ತಿದ್ದರು. ಈಶಾನ್ಯ ರೈಲ್ವೆ, ರೈಲ್ ಕೋಚ್ ಫ್ಯಾಕ್ಟರಿ, ಸೆಂಟ್ರಲ್ ರೈಲ್ವೆ, ರೈಲ್ವೆ ಮಾಹಿತಿ ವ್ಯವಸ್ಥೆ ಸೇರಿದಂತೆ ಹಲವಾರು ವಿಭಾಗದಲ್ಲಿ ಸಂಜೀವ್ ಕಿಶೋರ್ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ.












Click it and Unblock the Notifications