Bengaluru Rains : ಬೆಂಗಳೂರಿಗೆ ಮತ್ತೆ ಭಾರಿ ಮಳೆಯ ಆತಂಕ: ಸೆ.30ಕ್ಕೆ 'ಯೆಲ್ಲೋ ಅಲರ್ಟ್' ಎಚ್ಚರಿಕೆ
ಬೆಂಗಳೂರು, ಸೆಪ್ಟಂಬರ್ 29: ಪ್ರವಾಹ ಪರಿಸ್ಥಿತಿಯಿಂದ ಇತ್ತೀಚೆಗಷ್ಟೇ ಸಹಜ ಸ್ಥಿತಿಗೆ ಬಂದ ರಾಜ್ಯ ರಾಜಧಾನಿ ಬೆಂಗಳೂರಿಗೆ ಮತ್ತೆ ಮಳೆ ಆತಂಕ ಎದುರಾಗಿದೆ. ಶುಕ್ರವಾರ ಬೆಂಗಳೂರು ನಗರ 'ಯೆಲ್ಲೋ ಅಲರ್ಟ್' ಪಡೆದಿರುವುದೇ ಈ ಆತಂಕಕ್ಕೆ ಕಾರಣ ಎನ್ನಲಾಗಿದೆ.
ಬೆಂಗಳೂರು ನಗರವು ಸೆಪ್ಟಂಬರ್ ಮೊದಲ ವಾರದ ಸೃಷ್ಟಿಯಾಗಿದ್ದ ಅತೀವ ಮಳೆ, ಪ್ರವಾಹ ಪರಿಸ್ಥಿತಿಯಿಂದ ಕಂಗೆಟ್ಟಿತ್ತು. ಕಳೆದ ಎರಡು ವಾರದಿಂದ ಮಳೆ ಅಬ್ಬರ ತಗ್ಗಿದ್ದರಿಂದ ಎಲ್ಲವೂ ಸಹಜ ಸ್ಥಿತಿಗೆ ಮರಳಿತ್ತು. ಈಗ ಮತ್ತೆ ಮುಂಗಾರು ನಗರದಲ್ಲಿ ಜೋರಾಗಿ ಸುರಿಯುವ ಲಕ್ಷಣಗಳು ಕಂಡು ಬಂದಿವೆ ಎಂದು ಭಾರತೀಯ ಹವಾಮಾನ ಇಲಾಖೆ ಬೆಂಗಳೂರು ಕೇಂದ್ರ ಮುನ್ಸೂಚನೆ ನೀಡಿದೆ.
ಬೆಂಗಳೂರು ನಗರ ಜಿಲ್ಲೆಗೆ ಶುಕ್ರವಾರ ಒಂದು ದಿನ ಸಾಧಾರಣದಿಂದ ಭಾರಿ ಮಳೆ ಸುರಿಯುವ ಹಿನ್ನೆಲೆಯಲ್ಲಿ ಅಂದು 'ಯೆಲ್ಲೋ ಅಲರ್ಟ್' ಎಚ್ಚರಿಕೆ ನೀಡಲಾಗಿದೆ. ನಂತರ ಮಳೆ ತುಸು ಕಡಿಮೆ ಆಗಲಿದ್ದು, ಕೆಲವು ಪ್ರದೇಶಗಳಲ್ಲಿ ಮಾತ್ರ ಸಾಧಾರಣವಾಗಿ ಬೀಳಲಿದೆ ಎಂದು ಹವಾಮಾನ ತಜ್ಞರು ತಿಳಿಸಿದ್ದಾರೆ.

ಮಹದೇವಪುರದಲ್ಲಿ ಅಧಿಕ ಮಳೆ ದಾಖಲು
ಅರಬ್ಬಿ ಸಮುದ್ರ ಹಾಗೂ ಬಂಗಾಳಕೊಲ್ಲಿ ಸಮುದ್ರದಲ್ಲಿ ಆಗಾಗ ಉಂಟಾಗುವ ಮೇಲ್ಮ್ಲೈ ಸುಳಿಗಾಳಿ ತೀವ್ರತೆಯಿಂದಾಗಿ ಈ ರೀತಿಯ ಮಳೆ ವಾತಾವರಣ ಕಂಡು ಬರುತ್ತಿದೆ. ಬುಧವಾರ ಬೆಂಗಳೂರಿನ ಮಹದೇವಪುರ ವಲಯ ವ್ಯಾಪ್ತಿಯಲ್ಲಿ ಅಧಿಕ ಮಳೆ ದಾಖಲಾಗಿದೆ. ಎಂದು ಸಂಜೆ ನಂತರ ಮಾರತ್ತಹಳ್ಳಿಯಲ್ಲಿ 29.5ಮಿಲಿ ಮೀಟರ್ ಮಳೆ ಆಗಿದೆ. ಉಳಿದಂತೆ ಎಚ್ಎಎಲ್ ವಿಮಾನ ನಿಲ್ದಾಣದಲ್ಲಿ 14ಮಿ.ಮೀ, ಕೋನೆನ ಅಗ್ರಹಾರದಲ್ಲಿ 13.5ಮಿ.ಮೀ., ವರ್ತೂರು ಹಾಗೂ ಹಗದೂರಿನಲ್ಲಿ ತಲಾ 10ಮಿ.ಮೀ ಮಳೆ ಆಗಿದೆ. ಉಳಿದ ಕೆಲವು ಬಡಾವಣೆಗಳಲ್ಲಿ ಹಗುರ ಮಳೆ ಆಗಿದೆ ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ (ಕೆಎಸ್ಎನ್ಡಿಎಂಸಿ) ವರದಿ ತಿಳಿಸಿದೆ.

ಇದೇ ರೀತಿ ಮುಂದಿನ ಎರಡು ಮೂರು ದಿನ ಜೋರು ಮಳೆ ಆಗಲಿದೆ. ನಂತರ ಅಕ್ಟೋಬರ್ 4ರವರೆಗೆ ತುಂತುರು ರೂಪದಲ್ಲಿ ಮಳೆ ಬೀಳಲಿದ್ದು, ಇಡಿ ದಿನ ಮಬ್ಬು ವಾತಾವರಣ ಇರಲಿದೆ. ಗರಿಷ್ಠ 27ಡಿಗ್ರಿ ಸೆಲ್ಸಿಯಸ್ ಹಾಗೂ ಕನಿಷ್ಠ 20ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ಕಂಡು ಬರುವ ನಿರೀಕ್ಷೆ ಇದೆ ಎಂದು ಅಂದಾಜಿಸಲಾಗಿದೆ.












Click it and Unblock the Notifications