ಒಡೆದ ಹುಳಿಮಾವು ಕೆರೆ ದಂಡೆ; ಯಡಿಯೂರಪ್ಪ ಭೇಟಿ
ಬೆಂಗಳೂರು, ನವೆಂಬರ್ 26 : ಬೆಂಗಳೂರಿನ ಹುಳಿಮಾವು ಕೆರೆ ಒಡೆದು ನೂರಾರು ಕುಟುಂಬಗಳು ಸಂಕಷ್ಟಕ್ಕೆ ಸಿಲುಕಿವೆ. ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಇಂದು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಬೆಂಗಳೂರು ನಗರಾಭಿವೃದ್ಧಿ ಸಚಿವರೂ ಆಗಿರುವ ಯಡಿಯೂರಪ್ಪ ಮಂಗಳವಾರ ಹುಳಿಮಾವು ಪ್ರದೇಶಕ್ಕೆ ಭೇಟಿ ನೀಡಿದರು. ಬಿಬಿಎಂಪಿ ಮೇಯರ್ ಗೌತಮ್ ಕುಮಾರ್, ಉಪಮೇಯರ್ ಮೋಹನ್ ರಾಜು, ಅರೆಕೆರೆ ವಾರ್ಡ್ ಕಾರ್ಪೊರೇಟರ್ ಭಾಗ್ಯಲಕ್ಷ್ಮಿ ಮುರಳಿ ಮುಂತಾದವರು ಜೊತೆಗಿದ್ದರು.
ಕಟ್ಟೆ ಒಡೆದು ಹೋಗಿದ್ದ ಹುಳಿಮಾವು ಕೆರೆಗೆ ತಾತ್ಕಾಲಿಕ ಬಂಡ್ಗಳನ್ನು ಸೋಮವಾರ ರಾತ್ರಿ ಹಾಕಲಾಗಿದೆ. ಮರಳಿನ ಚೀಲಗಳನ್ನು ಹಾಕಿ ನೀರು ಹರಿಯುವುದನ್ನು ತಡೆಯಲಾಗಿದೆ. ಭಾನುವಾರ ಸಂಜೆ ಕೆರೆ ಒಡೆದಿದ್ದರಿಂದ ಸಂತ್ರಸ್ತರಾದವರು ತಾತ್ಕಾಲಿಕ ಶೆಡ್ಗಳಲ್ಲಿ ವಾಸ್ತವ್ಯ ಹೂಡಿದ್ದಾರೆ. ಅವರಿಗೆ ಆಹಾರ, ಹೊದಿಕೆಗಳನ್ನು ನೀಡಲಾಗಿದೆ.
ಕಂದಾಯ ಇಲಾಖೆಯ ತಂಡ ಹಾನಿಗೀಡಾದ ಮನೆಗಳ ನಷ್ಟವನ್ನು ಅಂದಾಜಿಸುತ್ತಿದೆ. ಸಂತ್ರಸ್ತರ ಪರಿಹಾರ ಅಂದಾಜು ವರದಿ ತಯಾರಿಸುತ್ತಿದ್ದಾರೆ. ಪರಿಸ್ಥಿತಿ ಸುಧಾರಿಸುವವರೆಗೆ ಸಂತ್ರಸ್ತ ಕುಟುಂಬಗಳಿಗೆ ಬಟ್ಟೆ ಹಾಗೂ ಆಹಾರ ಪದಾರ್ಥಗಳನ್ನು ಬಿಬಿಎಂಪಿ ವತಿಯಿಂದ ಒದಗಿಸಲಾಗುತ್ತದೆ.

10 ಸಾವಿರ ರೂ. ಪರಿಹಾರ
ಬಿಬಿಎಂಪಿ ಆಹಾರ ಮತ್ತು ಕಂದಾಯ ಇಲಾಖೆಯ ಸಹಯೋಗದೊಂದಿಗೆ ಹುಳಿಮಾವು ಘಟನೆಯಿಂದ ಹಾನಿಗೀಡಾದ ಮನೆಗಳಲ್ಲಿ, ಸಂತ್ರಸ್ತರು ಕಳೆದುಕೊಂಡ ದಾಖಲೆಗಳ ನಕಲನ್ನು ಒದಗಿಸಲು ಪ್ರಯತ್ನಿಸುತ್ತಿದೆ.ತಕ್ಷಣದ ಪರಿಹಾರವಾಗಿ 10 ಸಾವಿರ ರೂ.ಗಳನ್ನು ಸಂತ್ರಸ್ತ ಕುಟುಂಬಗಳಿಗೆ ನೀಡಲಾಗಿದೆ.

ಲೋಕಾಯುಕ್ತದಿಂದ ನೋಟಿಸ್
ಹುಳಿಮಾವು ಕೆರೆ ಒಡೆದ ಪ್ರಕರಣದ ಕುರಿತು ವರದಿ ನೀಡುವಂತೆ ಲೋಕಾಯುಕ್ತ ನ್ಯಾಯಮೂರ್ತಿ ವಿಶ್ವನಾಥ್ ಶೆಟ್ಟಿ ಬಿಬಿಎಂಪಿಗೆ ನೋಟಿಸ್ ನೀಡಿದ್ದಾರೆ. ಈ ಅವಘಡಕ್ಕೆ ಕಾರಣರಾದವರ ವಿರುದ್ಧ ಸೂಕ್ತ ಕ್ರಮಕ್ಕೆ ಶಿಫಾರಸು ಮಾಡಲಾಗುತ್ತದೆ ಎಂದು ಲೋಕಾಯುಕ್ತರು ಭರವಸೆ ನೀಡಿದ್ದಾರೆ.

ಸ್ವಚ್ಚತೆಯ ಕಾರ್ಯ
ಬಿಬಿಎಂಪಿಯ ಸಿಬ್ಬಂದಿ ಹುಳಿಮಾವು ಕೆರೆ ಒಡೆದಿದ್ದರಿಂದ ನೀರು, ಕಸ ಆವರಿಸಿದ ಜನ ವಸತಿ ಸ್ಥಳದಲ್ಲಿ ಸ್ವಚ್ಚತೆಯ ಕಾರ್ಯವನ್ನು ಕೈಗೊಂಡಿದ್ದಾರೆ. ಸಾಂಕ್ರಾಮಿಕ ರೋಗ ಹರಡದಂತೆ ಮುನ್ನೆಚ್ಚರಿಕೆಯಾಗಿ ಫಾಗಿಂಗ್ ಮಾಡುತ್ತಿದ್ದಾರೆ.

1000ಕ್ಕೂ ಅಧಿಕ ಮನೆ ಜಲಾವೃತ
ಭಾನುವಾರ ಹುಳಿಮಾವು ಕೆರೆ ಒಡೆದ ಪರಿಣಾಮ 1 ಸಾವಿರಕ್ಕೂ ಅಧಿಕ ಮನೆಗಳಿಗೆ ನೀರು ನುಗ್ಗಿತ್ತು. ನೂರಾರು ಕುಟುಂಬಗಳು ಸಂಕಷ್ಟಕ್ಕೆ ಸಿಲುಕಿದ್ದವು. ಕೆರೆ ದಂಡೆ ಒಡೆಯಲು ಕಾರಣ ಯಾರು? ಎಂಬುದು ಇನ್ನೂ ಪತ್ತೆಯಾಗಿಲ್ಲ.












Click it and Unblock the Notifications