ಸಿಎಂ ಯಡಿಯೂರಪ್ಪ ಭೇಟಿ ಬಳಿಕ ಎಂಟಿಬಿ ನಾಗರಾಜ್ ಹೇಳಿದ್ದೇನು?
ಬೆಂಗಳೂರು, ಡಿಸೆಂಬರ್ 10: ಸಿಎಂ ಯಡಿಯೂರಪ್ಪ ಅವರು ಇಂದು ಎಂಟಿಬಿ ನಾಗರಾಜ್ ಮನೆಗೆ ಭೇಟಿ ನೀಡಿದ್ದಾರೆ. ಉಪಚುನಾವಣೆಯಲ್ಲಿ ಸೋತು ನಿರಾಸೆಯಲ್ಲಿರುವ ಎಂಟಿಬಿ ನಾಗರಾಜ್ ಗೆ ಧೈರ್ಯ ತುಂಬುವ ಕಾರ್ಯವನ್ನು ಸಿಎಂ ಮಾಡಿದ್ದಾರೆ.
ಗರುಡಾಚಾರ್ ಪಾಳ್ಯದಲ್ಲಿರುವ ಎಂಟಿಬಿ ನಾಗರಾಜ್ ಅವರ ಭವ್ಯ ಮನೆಗೆ ಭೇಟಿ ನೀಡಿದ ಸಿಎಂ ಅವರನ್ನು ಬೇಸರದ ಮುಖಹೊತ್ತೇ ಎಂಟಿಬಿ ಅವರು ಹೂಗುಚ್ಛ ನೀಡಿ ಸ್ವಾಗತಿಸಿದರು. ಈ ಸಮಯದಲ್ಲಿ ಎಂಟಿಬಿ ಪುತ್ರ ಸಹ ಜೊತೆಗಿದ್ದರು.
ಯಡಿಯೂರಪ್ಪ ಪರ ಘೋಷಣೆ ಕೂಗಿದ ಎಂಟಿಬಿ ಬೆಂಬಲಿಗರನ್ನು ತಡೆದ ಯಡಿಯೂರಪ್ಪ, ಸೋತು ದುಖಃದಲ್ಲಿರುವ ಎಂಟಿಬಿ ನಾಗರಾಜ್ ಎದುರು ಜಯಘೋಷಗಳು ಬೇಡವೆಂಬ ಸೂಕ್ಷ್ಮತೆಯನ್ನು ಮೆರೆದರು.
ಸಿಎಂ ಭೇಟಿ ಬಳಿಕ ಸುದ್ದಿಗಾರರೊಂದಿಗೆ ವಿವರಗಳನ್ನು ಹಂಚಿಕೊಂಡ ಎಂಟಿಬಿ ನಾಗರಾಜ್, 'ನನಗೆ, ನಮ್ಮ ಕುಟುಂಬದ ಸದಸ್ಯರಿಗೆ ಸಾಂತ್ವನವನ್ನು ಯಡಿಯೂರಪ್ಪ ಹೇಳಿದ್ದಾರೆ' ಎಂದರು.

ಗೌರವದಿಂದ ನಡೆಸಿಕೊಳ್ಳುವುದಾಗಿ ಹೇಳಿದ್ದಾರೆ: ಎಂಟಿಬಿ
'ಪಕ್ಷದಲ್ಲಿ ನನ್ನನ್ನು ಗೌರವಯುತವಾಗಿ ನಡೆಸಿಕೊಳ್ಳುವುದಾಗಿ ಭರವಸೆಯನ್ನು ಯಡಿಯೂರಪ್ಪ ನೀಡಿದ್ದಾರೆ' ಎಂದು ಹೇಳಿದ ಎಂಟಿಬಿ, ತಮಗೆ ಪಕ್ಷದ ಸಂಘಟನೆಯ ಹುದ್ದೆ ನೀಡುವ ಸಾಧ್ಯತೆಯ ಸುಳಿವನ್ನು ಸುದ್ದಿಗಾರರಿಗೆ ದಾಟಿಸಿದರು.

ಸೋಲಲು ಬಚ್ಚೇಗೌಡ ಮತ್ತು ಅವರ ಮಗ ಕಾರಣ: ಎಂಟಿಬಿ
'ನಾನು ಸೋಲಲು ಬಿಜೆಪಿ ಸಂಸದ ಬಿ.ಎನ್.ಬಚ್ಚೇಗೌಡ ಮತ್ತು ಶರತ್ ಬಚ್ಚೇಗೌಡ ಕಾರಣ ಎಂಬುದನ್ನು ಸಿಎಂ ಅವರಿಗೆ ತಿಳಿಸಿದ್ದೇನೆ, ಬಚ್ಚೇಗೌಡ ವಿಚಾರವಾಗಿ ಹೆಚ್ಚಿನ ಚರ್ಚೆ ಮಾಡಿಲ್ಲ' ಎಂದು ಹೇಳಿದರು.

ಪಕ್ಷದಲ್ಲಿದ್ದೂ ಪ್ರಚಾರಕ್ಕೆ ಬಾರದ ಬಚ್ಚೇಗೌಡ: ಎಂಟಿಬಿ
'ಪಕ್ಷದಲ್ಲಿ ಗೆದ್ದು ಪಕ್ಷದ ಪರ ಬಚ್ಚೇಗೌಡ ಪ್ರಚಾರ ಮಾಡಿಲ್ಲ , ಕ್ಷೇತ್ರಕ್ಕೆ ಸಿಎಂ ಬಂದಿದ್ದರೂ ಸಹ ಬಚ್ಚೇಗೌಡ ಪ್ರಚಾರಕ್ಕೆ ಬಂದಿಲ್ಲ, ರಾಜ್ಯದ ಹಿರಿಯ ನಾಯಕರು ಸೂಚನೆ ನೀಡಿದ್ದರೂ ಸಹ ಶರತ್ ಬಚ್ಚೇಗೌಡರು ರೆಬೆಲ್ ಆಗಿ ಚುನಾವಣೆಯಲ್ಲಿ ಸ್ಪರ್ಧೆ ನಡೆಸಿದರು, ಶರತ್ ಬಚ್ಚೇಗೌಡ ಅವರ ಜೊತೆ ಕೆಲ ಬಿಜೆಪಿ ಸೇರಿದ್ದಾರೆ' ಎಂದು ಎಂಟಿಬಿ ನಾಗರಾಜ್ ಆರೋಪ ಮಾಡಿದರು.

'ಒಂದು ಕಣ್ಣು ತಿವಿದ ಸಿದ್ದರಾಮಯ್ಯ ಎರಡು ಕಣ್ಣು ಕಳೆದುಕೊಂಡರು'
ಸಿದ್ದರಾಮಯ್ಯ ವಿಷಯವಾಗಿ ಮಾತನಾಡಿದ ಎಂಟಿಬಿ ನಾಗರಾಜು, 'ಸಿದ್ದರಾಮಯ್ಯ ಅವರು ನನ್ನ ಒಂದು ಕಣ್ಣು ತಿವಿದು ಹೋದರು, ಆದರೆ ಅವರು ಎರಡೂ ಕಣ್ಣು ಕಳೆದುಕೊಂಡರು' ಎಂದು ಮಾರ್ಮಿಕವಾಗಿ ನುಡಿದರು.












Click it and Unblock the Notifications