ನಾನು ಸಿಎಂ ಆದ್ರೆ ನಿಮಗೆ ಜೈಲು ಗ್ಯಾರಂಟಿ : ಸಿದ್ದುಗೆ ಬಿಎಸ್ವೈ ಧಮ್ಕಿ!
ನಾನು ಅಧಿಕಾರಕ್ಕೆ ಬಂದರೆ 24 ಗಂಟೆಗಳೊಳಗೆ ಮುಖ್ಯಮಂತ್ರಿ ಸಿದ್ದರಾಮಯ್ಯರನ್ನು ಜೈಲಿಗಟ್ಟುವುದಾಗಿ ಕರ್ನಾಟಕ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್ ಯಡಿಯೂರಪ್ಪ ಗುಡುಗಿದ್ದಾರೆ.
ಬೆಂಗಳೂರು, ಫೆಬ್ರವರಿ 20: ಕಿಕ್ ಬ್ಯಾಕ್ ಆರೋಪ ಪ್ರತ್ಯಾರೋಪಗಳಲ್ಲಿ ಮುಳುಗಿದ್ದ ಬಿಎಸ್ ಯಡಿಯೂರಪ್ಪ ಮತ್ತು ಸಿದ್ದರಾಮಯ್ಯ ನಡುವಿನ ಕಲಹ ಹೊಸ ತಿರುವು ತೆಗೆದುಕೊಂಡಿದೆ.
ನಾನು ಅಧಿಕಾರಕ್ಕೆ ಬಂದರೆ 24 ಗಂಟೆಗಳೊಳಗೆ ಮುಖ್ಯಮಂತ್ರಿ ಸಿದ್ದರಾಮಯ್ಯರನ್ನು ಜೈಲಿಗಟ್ಟುವುದಾಗಿ ಕರ್ನಾಟಕ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್ ಯಡಿಯೂರಪ್ಪ ಗುಡುಗಿದ್ದಾರೆ. [ಯಡಿಯೂರಪ್ಪ- ಅನಂತ್ ಮಾತನಾಡಿಕೊಂಡಿದ್ದು ಯಾರ ಬಗ್ಗೆ?]
ಮಂಗಳವಾರ ಟೌನ್ ಹಾಲ್ ಮುಂದೆ ಬಿಜೆಪಿ ಆಯೋಜಿಸಿದ್ದ ಪ್ರತಿಭಟನೆಯಲ್ಲಿ ಮಾತನಾಡಿದ ಯಡಿಯೂರಪ್ಪ, " ಸಿದ್ಧರಾಮಯ್ಯ ಮತ್ತವರ ಗುಂಪು ಬಿಬಿಎಂಪಿಯ 3,500 ಕೋಟಿ ರೂಪಾಯಿ ಹಗರಣದಲ್ಲಿ ಭಾಗಿಯಾಗಿದೆ. ಈ ಬಗ್ಗೆ ಬಿಬಿಎಂಪಿ ಆಯುಕ್ತರಿಗೆ ಪತ್ರ ಬರೆಯುತ್ತೇನೆ. ನಾನು ಅಧಿಕಾರಕ್ಕೆ ಬಂದರೆ ಈ ಬಗ್ಗೆ ಸೂಕ್ತ ತನಿಖೆ ನಡೆಸುತ್ತೇನೆ," ಎಂದು ಸಿದ್ಧರಾಮಯ್ಯರಿಗೆ ನೇರ ಸವಾಲೆಸೆದಿದ್ದಾರೆ. [ಸ್ಟೀಲ್ ಫ್ಲೈ ಓವರ್ ಕಿಕ್ ಬ್ಯಾಕ್; ಲೋಕಾಯುಕ್ತಕ್ಕೆ ದೂರು]
ಚರ್ಚೆಗೆ ಸಿದ್ಧವಿದ್ದೀರಾ?
"ಸಿದ್ದರಾಮಯ್ಯ ಭ್ರಷ್ಟಾಚಾರಗಳನ್ನು ಬಯಲಿಗೆಳೆಯಲು ನಾನು ಸಿದ್ದವಾಗಿದ್ದೇನೆ. ನನ್ನ ಮೇಲೆ ಸಿದ್ಧರಾಮಯ್ಯ ಮಾಡಿರುವ ಆರೋಪಗಳ ಬಗ್ಗೆ ನಾನು ಸಾರ್ವಜನಿಕ ಚರ್ಚೆಗೆ ತಯಾರಿದ್ದೇನೆ. ನಾನು ಮಾಡಿರುವ ಆರೋಪಗಳ ಚರ್ಚೆಗೆ ಸಿದ್ದರಾಮಯ್ಯ ಸಿದ್ದರಿದ್ದಾರಾ?" ಎಂದು ಯಡಿಯೂರಪ್ಪ ಮುಖ್ಯಮಂತ್ರಿಯನ್ನು ಪ್ರಶ್ನಿಸಿದ್ದಾರೆ.
24 ಗಂಟೆಯೊಳಗೆ ಕಂಬಿ ಹಿಂದೆ
ನಾನು ಅಧಿಕಾರಕ್ಕೆ ಬಂದಿದ್ದೇ ಆದಲ್ಲಿ ಕೇವಲ 24 ಗಂಟೆಗಳೊಳಗೆ ಸಿದ್ಧರಾಮಯ್ಯರನ್ನು ಕಂಬಿ ಹಿಂದೆ ಕಳುಹಿಸುವುದಾಗಿ ಧಮಕಿ ಹಾಕಿದ ಯಡಿಯೂರಪ್ಪ, ಸಿದ್ಧರಾಮಯ್ಯ ಮತ್ತು ಅವರ ಕುಟುಂಬದ ವಿರುದ್ಧ ತನಿಖೆ ನಡೆಸುವುದಾಗಿಯೂ ಇದೇ ಸಂದರ್ಭದಲ್ಲಿ ಹೇಳಿದ್ದಾರೆ. "ಜಾಸ್ತಿ ದಿನ ಬೇಕಿಲ್ಲ ಸಿದ್ಧರಾಮಯ್ಯನವೇ ಇದೇ ವಿಧಾನಸೌಧದಲ್ಲಿ ಕುಳಿತುಕೊಂಡು ನಿಮ್ಮ ಎಲ್ಲಾ ಹಗರಣಗಳನ್ನೂ ತನಿಖೆ ಮಾಡಿ ಜೈಲಿಗಟ್ಟಲು ನಾವು ಸಿದ್ಧರಿದ್ದೇವೆ," ಎಂದಿದ್ದಾರೆ.
ಡೈರಿ ಬಿಡಲ್ಲ
ಇಷ್ಟೆಲ್ಲ ಮಾತನಾಡಿದ ಯಡಿಯೂರಪ್ಪ, ಸ್ಟೀಲ್ ಫ್ಲೈ ಓವರ್ ಅನುಮೋದನೆಗೆ 150 ಕೋಟಿ ಕಿಕ್ ಬ್ಯಾಕ್ ಪಡೆದಿದ್ದಾರೆ ಎಂಬ ಆರೋಪಕ್ಕೆ ಸಂಬಂಧಿಸಿದ ಡೈರಿ ಬಿಡುಗಡೆಗೆ ನಿರಾಕರಿಸಿದ್ದಾರೆ. ಬದಲಿಗೆ 'ಸಿದ್ದರಾಮಯ್ಯ ಭ್ರಷ್ಟಾಚಾರದಲ್ಲಿ ಪಾಲ್ಗೊಂಡಿರುವ ಡೈರಿಯನ್ನು ನಾನ್ಯಾಕೆ ಬಹಿರಂಗಪಡಿಸಲಿ?' ಅಂತ ಅವರು ಮರು ಪ್ರಶ್ನೆ ಹಾಕಿದ್ದಾರೆ.
ಹಿನ್ನಲೆ
ಫೆಬ್ರವರಿ 13ರಂದು ಮಾತನಾಡಿದ್ದ ಯಡಿಯೂರಪ್ಪ ಸ್ಟೀಲ್ ಫ್ಲೈ ಓವರಿನಲ್ಲಿ 150 ಕೋಟಿ ಕಿಕ್ ಪಡೆಯಲಾಗಿದೆ. ಇದರಲ್ಲಿ 65 ಕೋಟಿ ಸಿಎಂ ಕೈ ತಲುಪಿದೆ. ಇದಕ್ಕೆ ಸಿದ್ದರಾಮಯ್ಯ ಆಪ್ತ ಹಾಗೂ ವಿಧಾನಪರಿಷತ್ ಸದಸ್ಯ ಗೋವಿಂದರಾಜು ಮನೆಯಲ್ಲಿ ಆದಾಯ ತೆರಿಗೆ ಇಲಾಖೆ ದಾಳಿ ವೇಳೆ ಸಿಕ್ಕಿರುವ ಡೈರಿಯೇ ಸಾಕ್ಷಿ ಎಂದು ಹೇಳಿದ್ದರು. ಇದಾದ ಮರುದಿನ ಬೆಂಗಳೂರಿನ ವಿಧಾನಸೌಧದಲ್ಲಿ ಪತ್ರಿಕಾಗೋಷ್ಠಿ ಮಾಡಿದ್ದ ಕಾಂಗ್ರೆಸ್ ನಾಯಕರು ಯಡಿಯೂರಪ್ಪ ಮತ್ತು ಅನಂತ್ ಕುಮಾರ್ ನಡುವಿನ ಸಂಭಾಷಣೆಯ ಸಿಡಿ ಬಿಡುಗಡೆ ಮಾಡಿ ತಿರುಗೇಟು ನೀಡಿದ್ದರು. ಇದರಲ್ಲಿ ಉಭಯ ನಾಯಕರೂ ತಾವೂ ಹೈಕಮಾಂಡಿಗೆ ಕಪ್ಪ ನೀಡಿದ್ದರ ಬಗ್ಗೆ ಮಾತನಾಡಿದ್ದರು ಎನ್ನಲಾಗಿದೆ.
ಕೇಸು ಪ್ರತಿ ಕೇಸು
ಸಿಡಿಯಲ್ಲಿ ಯಡಿಯೂರಪ್ಪ ಮತ್ತು ಅನಂತ್ ಕುಮಾರ್ ಮಾತನಾಡಿರುವ ವಿಷಯಕ್ಕೆ ಸಂಬಂಧಿಸಿದಂತೆ ವಿರುದ್ದ ಕಾಂಗ್ರೆಸ್ ಸಚೇತಕ ಐವನ್ ಡಿ ಸೋಜ ಮಲ್ಲೇಶ್ವರಂ ಠಾಣೆಗೆ ದೂರು ನೀಡಿದ್ದರು. ಅಲ್ಲದೆ ಕೆ.ಪಿ.ಸಿ.ಸಿ ಕಾನೂನು ವಿಭಾಗ ಯಡಿಯೂರಪ್ಪ ವಿರುದ್ಧ ಫೆಬ್ರವರಿ 16ರಂದು ಲೋಕಾಯುಕ್ತದಲ್ಲಿ ಪ್ರಕರಣ ದಾಖಲಿಸಿತ್ತು.
ಇದಕ್ಕೆ ಪ್ರತ್ಯುತ್ತರ ನೀಡಿದ್ದ ಬಿಜೆಪಿ ಉಭಯ ನಾಯಕರ ಸಂಭಾಷಣೆಯನ್ನು ತಿರುಚಲಾಗಿದೆ ಎಂದು ಹೇಳಿ ನಾಲ್ವರು ಕಾಂಗ್ರೆಸ್ ನಾಯಕರಾದ ರಮೇಶ್ ಕುಮಾರ್, ಎಂಬಿ ಪಾಟೀಲ್, ಬಸವರಾಜ ರಾಯರೆಡ್ಡಿ ಹಾಗೂ ಉಗ್ರಪ್ಪ ವಿರುದ್ಧ ಬೆಂಗಳೂರು ಪೊಲೀಸ್ ಆಯುಕ್ತ ಪ್ರವೀಣ್ ಸೂದ್ ಅವರಿಗೆ ಫೆಬ್ರವರಿ 18ರಂದು ಲಿಖಿತ ದೂರು ನೀಡಿತ್ತು.
ಡೈರಿ ಬಿಡುಗಡೆ ಮಾಡಿ
ಶನಿವಾರ ಮಾತನಾಡಿದ್ದ ಮುಖ್ಯಮಂತ್ರಿ ಸಿದ್ಧರಾಮಯ್ಯ ಒಂದೊಮ್ಮೆ ನಿಜವಾಗಿಯೂ ಡೈರಿ ಮತ್ತು ದಾಖಲೆಗಳು ಇದ್ದಲ್ಲಿ ರಾಜ್ಯ ಆದಾಯ ತೆರಿಗೆ ಇಲಾಖೆ ಅವುಗಳನ್ನು ಬಿಡುಗಡೆ ಮಾಡಬೇಕು. ಮಾತ್ರವಲ್ಲ ಹೆಚ್ಚಿನ ತನಿಖೆಗೆ ಲೋಕಾಯುಕ್ತಕ್ಕೆ ಒಪ್ಪಿಸಬೇಕು ಎಂದು ಹೇಳಿದ್ದರು.