PM Modi: ಪಿಎಂ ಮೋದಿ ಮೆಚ್ಚಿಸಲು ಹಿಂದಿಯಲ್ಲೇ ಯತ್ನಾಳ್ ಭಾಷಣ?
ವಿಜಯಪುರ: ಮತದಾನದ ದಿನ ಹತ್ತಿರವಾಗುತ್ತಿದ್ದಂತೆ ಪ್ರಧಾನಿ ಮೋದಿ ಕರ್ನಾಟಕದಲ್ಲಿ ಪ್ರಚಾರಕ್ಕೆ ಭರ್ಜರಿ ಚಾಲನೆ ನೀಡಿದ್ದಾರೆ. ವಿಜಯಪುರದ ಸೈನಿಕ ಶಾಲೆ ಆವರಣದಲ್ಲಿ ಬೃಹತ್ ಸಮಾವೇಶ ನಡೆಸಿ ಮತಬೇಟೆ ಆರಂಭಿಸಿದ್ದಾರೆ. ಇನ್ನು ಇದೇ ಕಾರ್ಯಕ್ರಮದಲ್ಲಿ ಬಸನಗೌಡ ಪಾಟೀಲ್ ಯತ್ನಾಳ್ (Yatnal) ಹಿಂದಿಯಲ್ಲಿ ಭಾಷಣ ಮಾಡಿದ ವಿಚಾರ ಚರ್ಚೆಗೆ ಗ್ರಾಸವಾಗಿದೆ.
ಹೌದು, ಪ್ರಧಾನಿ ಮೋದಿ ಸಾರಥ್ಯದಲ್ಲಿ ಕರ್ನಾಟಕದಲ್ಲಿ ಕಮಾಲ್ ಮಾಡಲು ಕಮಲ ಪಾಳಯ ಸಜ್ಜಾಗಿದೆ. ರಾಜ್ಯದ ವಿವಿಧೆಡೆ ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಭರ್ಜರಿ ರ್ಯಾಲಿಗಳು ಹಾಗೂ ರೋಡ್ ಶೋ ಆಯೋಜನೆ ಮಾಡಲಾಗಿದೆ. ಗಂಡು ಮೆಟ್ಟಿದ ನಾಡು ಉತ್ತರ ಕರ್ನಾಟಕದಿಂದ ಶುರುವಾದ ಪ್ರಧಾನಿ ಪ್ರಚಾರ ಕಾರ್ಯದಲ್ಲಿ 'ಸಬ್ ಕಾ ಸಾತ್ ಸಬ್ ಕಾ ವಿಕಾಸ್' ಘೋಷಣೆ ಮೂಲಕ ರಣಕಹಳೆ ಮೊಳಗಿದೆ. ಇದೇ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಪ್ರಧಾನಿ ಮೋದಿ ಎದುರು ಹಿಂದಿಯಲ್ಲಿ ಭರ್ಜರಿ ಭಾಷಣ ಮಾಡಿದ್ದಾರೆ.

ಪಿಎಂ ಮೋದಿ ಬಗ್ಗೆ ಮಾತನಾಡಿದರೆ ಸುಮ್ಮನಿರಲ್ಲ
ಹಿಂದಿಯಲ್ಲಿ ಪ್ರಧಾನಿ ಮೋದಿಯವರಿಗೆ ಅರ್ಥವಾಗವಂತೆ ಭಾಷಣ ಮಾಡಿದ ಬಿಜೆಪಿ ಅಭ್ಯರ್ಥಿ ಬಸನಗೌಡ ಪಾಟೀಲ್ ಯತ್ನಾಳ್, ಪ್ರಧಾನಿ ಮೋದಿ ಅವರ ಬಗ್ಗೆ ಮಾತನಾಡುವ ವಿಪಕ್ಷಗಳ ನಾಯಕರ ವಿರುದ್ಧ ನಾವು ಮಾತನಾಡುತ್ತೇವೆ. ಪ್ರಧಾನಿ ಮೋದಿ ಬಗ್ಗೆ ಮಾತನಾಡಿದರೆ ನಾವು ಸುಮ್ಮನಿರಲ್ಲ, ಆ ವಿಚಾರದಲ್ಲಿ ನಾವು ಪ್ರಾಣ ಬೇಕಾದ್ರೂ ನೀಡುತ್ತೇವೆ. ಭಾರತ ಮಾತೆಗೆ ಅಪಮಾನವಾಗಲು ನಾವು ಬಿಡುವುದಿಲ್ಲ ಎಂದರು. ಈ ಮೂಲಕ ವಿಪಕ್ಷಗಳ ವಿರುದ್ಧವೂ ಯತ್ನಾಳ್ ಎಚ್ಚರಿಕೆ ನೀಡಿದ್ದಾರೆ.
ಪ್ರಧಾನಿ ಮೋದಿ ಗಮನ ಸೆಳೆದ ಯತ್ನಾಳ್!
ಬಸನಗೌಡ ಪಾಟೀಲ್ ಯತ್ನಾಳ್ ಭಾಷಣವನ್ನು ಪ್ರಧಾನಿ ಮೋದಿ ಅವರು ಕೂಡ ಕೇಳಿಸಿಕೊಂಡರು. ಇದೇ ಹೊತ್ತಲ್ಲಿ ಹಿಂದಿಯಲ್ಲೇ ವಿಪಕ್ಷಗಳ ವಿರುದ್ಧ ಯತ್ನಾಳ್ ವಾಗ್ದಾಳಿ ನಡೆಸಿದರು. ಮತ್ತೊಂದು ಕಡೆ ಪ್ರಧಾನಿ ಮೋದಿ ಅವರನ್ನು ಹಾಡಿ ಹೊಗಳಿದ ಬಸನಗೌಡ ಪಾಟೀಲ್ ಯತ್ನಾಳ್, ಶ್ರೀ ನರೇಂದ್ರ ಮೋದಿಯವರು ಅಂದರೆ ಸಾಹಿತ್ಯ, ಶ್ರೀ ನರೇಂದ್ರ ಮೋದಿಯವರು ಅಂದರೆ ಸಂಸ್ಕೃತಿ, ಶ್ರೀ ನರೇಂದ್ರ ಮೋದಿಯವರು ಅಂದರೆ ದೂರದೃಷ್ಟಿ, ಶ್ರೀ ನರೇಂದ್ರ ಮೋದಿಯವರು ಅಂದರೆ ವಿಶ್ವನಾಯಕ ಎಂದು ಹಾಡಿ ಹೊಗಳಿದರು.
ಭಾರತದ ಎಲ್ಲಾ ನದಿಗಳ ಜೋಡಣೆ
ಇನ್ನು ಬಸನಗೌಡ ಪಾಟೀಲ್ ಯತ್ನಾಳ್ ತಮ್ಮ ಭಾಷಣದಲ್ಲಿ ಭಾರತದ ಎಲ್ಲಾ ನದಿಗಳ ಜೋಡಣೆ ವಿಚಾರವನ್ನೂ ಪ್ರಸ್ತಾಪಿಸಿದರು. ಮುಂಬರುವ ದಿನಗಳಲ್ಲಿ ಭಾರತದ ಎಲ್ಲಾ ನದಿಗಳು ಜೋಡಣೆಯಾಗಲಿವೆ. ಭಾರತ ಜಗತ್ತಿಗೇ ಮಾದರಿಯಾಗಲಿದೆ ಎಂದರು. ಹೀಗೆ ವಿರೋಧ ಪಕ್ಷಗಳ ವಿರುದ್ಧ ವಾಗ್ದಾಳಿ ನಡೆಸಿ, ಪಿಎಂ ನರೇಂದ್ರ ಮೋದಿಯವರನ್ನ ಯತ್ನಾಳ್ ತಮ್ಮ ಭಾಷಣದಲ್ಲಿ ಹಾಡಿಹೊಗಳಿದರು. ಅದರಲ್ಲೂ ಹಿಂದಿಯಲ್ಲೇ ಭಾಷಣ ಆರಂಭಿಸಿ ಗಮನ ಸೆಳೆದರು.
ಕಾಂಗ್ರೆಸ್ ವಿರುದ್ಧ ಯತ್ನಾಳ್ ವಾಗ್ದಾಳಿ
ಪ್ರಧಾನಿ ಮೋದಿಯವರು ಭಾಗವಹಿಸಿದ್ದ ಕಾರ್ಯಕ್ರಮದಲ್ಲಿ ತಮ್ಮ ಭಾಷಣದಲ್ಲಿ ಯತ್ನಾಳ್ ಕಾಂಗ್ರೆಸ್ ನಾಯಕರ ಬಗ್ಗೆ ತೀವ್ರ ವಾಗ್ದಾಳಿ ನಡೆಸಿದರು. ಅಲ್ಲದೆ ಕಾಂಗ್ರೆಸ್ ಘೋಷಣೆ ಮಾಡಿರುವ ಉಚಿತ ಯೋಜನೆಗಳ ಬಗ್ಗೆ ಹರಿಹಾಯ್ದರು. ಈ ಮೂಲಕ ಕಾಂಗ್ರೆಸ್ಗೆ ವಾರಂಟಿ ಮುಗಿದಿದೆ ಎನ್ನುವ ಪ್ರಧಾನಿ ಮೋದಿಯವರ ಮಾತು ಸರಿಯಾಗಿದೆ ಅಂದ್ರು ಯತ್ನಾಳ್.
ಒಟ್ನಲ್ಲಿ ಪ್ರಧಾನಿ ನರೇಂದ್ರ ಮೋದಿ ಕರ್ನಾಟಕದಲ್ಲಿ ಮತಬೇಟೆ ಆರಂಭಿಸಿದ್ದಾರೆ. ಬಿಜೆಪಿ ನಾಯಕರು ಪಿಎಂ ಮೋದಿ ಆಗಮನದ ಬಳಿಕ ಮತ್ತಷ್ಟು ಎನರ್ಜಿಟಿಕ್ ಆಗಿದ್ದಾರೆ. ಉತ್ತರ ಕರ್ನಾಟಕದಿಂದ ಆರಂಭವಾಗಿರುವ ಪ್ರಧಾನಿ ಮೋದಿ ಅವರ ಪ್ರಚಾರ ಕಾರ್ಯ, ಇನ್ನೇನು ಹಳೇ ಮೈಸೂರು ಭಾಗಕ್ಕೂ ಎಂಟ್ರಿ ಕೊಡಲಿದೆ. ಮೇ 10ರಂದು ವಿಧಾನಸಭಾ ಚುನಾವಣೆಗೆ ಮತದಾನ ನಡೆಯಲಿದ್ದು, ಮೇ 13ರಂದು ಫಲಿತಾಂಶ ಕೂಡ ಪ್ರಕಟವಾಗಲಿದೆ.












Click it and Unblock the Notifications