Yakshagana Utsava: ರಜತ ಮಹೋತ್ಸವದ ಲೋಗೋ, ಬ್ಯಾನರ್ ಬಿಡುಗಡೆ
ಬೆಂಗಳೂರು, ಆಗಸ್ಟ್, 07: ಕರ್ನಾಟಕ ಮಹಿಳಾ ಯಕ್ಷಗಾನ ತಂಡ 25ರ ವಸಂತಕ್ಕೆ ಕಾಲಿಡುತ್ತಿದ್ದು, ಈ ಹಿನ್ನೆಲೆ ರಜತ ಮಹೋತ್ಸವದ ಲಾಂಛನ ಮತ್ತು ಬ್ಯಾನರ್ ಅನ್ನು ನಗರದ ನಯನ ಸಭಾಂಗಣದಲ್ಲಿ ಭಾನುವಾರ (ಆಗಸ್ಟ್ 06) ಮುಖ್ಯಮಂತ್ರಿಗಳ ವಾರ್ತಾಧಿಕಾರಿ ಸಹನಾ ಎಂ.ಅವರು ಬಿಡುಗಡೆ ಮಾಡಿದರು.
ಈ ಬಗ್ಗೆ ಮುಖ್ಯಮಂತ್ರಿಗಳ ವಾರ್ತಾಧಿಕಾರಿ ಸಹನಾ ಎಂ.ಅವರು ಮಾತನಾಡಿ, ಮಹಿಳಾ ಯಕ್ಷಗಾನ ತಂಡವೊಂದನ್ನು 25 ವರ್ಷಗಳ ಕಾಲ ಮುನ್ನಡೆಸಿ ಇನ್ನು ಮುಂದಕ್ಕೂ ಗಟ್ಟಿ ಹೆಜ್ಜೆ ಹಾಕುತ್ತಿರುವುದು ಅಭಿಮಾನದ ವಿಚಾರವಾಗಿದೆ. ವಿದ್ಯಾರ್ಥಿಗಳು, ಐಟಿ ಉದ್ಯೋಗಿಗಳು, ಮತ್ತಿತರ ಕ್ಷೇತ್ರಗಳ ಮಹಿಳೆಯರನ್ನು ಒಂದೆಡೆ ಸೇರಿಸಿ ಯಕ್ಷಗಾನ ಕಲಿಸಿ ಕಲೆಯನ್ನು ಉಳಿಸುವುದು ಮಾತ್ರವಲ್ಲದೆ, ಕನ್ನಡ ಕಂಪನ್ನು ಪಸರಿಸುತ್ತಿರುವುದು ಶ್ಲಾಘನೀಯ ಕಾರ್ಯವಾಗಿದ ಎಂದರು.

ಅಲ್ಲದೆ ಈ ಬಾರಿಯ ಯಕ್ಷಗಾನ ನೃತ್ಯಕ್ಕೆ ಶಕ್ತಿಯಾದ ಗೌರಿ.ಕೆ ಮತ್ತು ಅವರ ಪತಿ ಯಕ್ಷ ಗುರು ಶ್ರೀನಿವಾಸ ಸಾಸ್ತಾನ ದಂಪತಿಗಳ ಕಾರ್ಯವೂ ಮೆಚ್ಚುವಂಥದ್ದಾಗಿದೆ ಎಂದರು. ನಂತರ ಸಮಾರಂಭದಲ್ಲಿ ಶ್ರೀ ಲಕ್ಷ್ಮಿ ನರಸಿಂಹ ಟ್ರಸ್ಟ್ ಸ್ಥಾಪಕ ಪಿ.ಸಿ.ಮುಕುಂದ ರಾವ್ ಮಾತನಾಡಿ, ಯಕ್ಷಗಾನ ಶ್ರೇಷ್ಠ ಕಲೆಯಾಗಿದೆ. ನಗರೀಕರಣದ ಸಂದರ್ಭದಲ್ಲೂ ಇಂತಹ ಕಲೆಯನ್ನು ಬೆಂಗಳೂರಿನಲ್ಲಿ ಉಳಿಸಲು ಪ್ರಯತ್ನಿಸುತ್ತಿರುವ ಸಾಸ್ತಾನ ದಂಪತಿಗಳಿಗೆ ಶುಭ ಹಾರೈಸುತ್ತಿರುವುದಾಗಿ ಹೇಳಿದರು.
ಈ ವೇಳೆ ರೇವತಿ ಸುರೇಶ್, ಮಟ್ಟಿ ರಾಮಚಂದ್ರ ರಾವ್, ಕರ್ನಾಟಕ ಮಹಿಳಾ ಯಕ್ಷಗಾನ ತಂಡದ ನಿರ್ದೇಶಕಿ ಗೌರಿ ಕೆ ಸೇರಿದಂತೆ ಮತ್ತಿರರು ಉಪಸ್ಥಿತರಿದ್ದರು.
ಇದಕ್ಕೂ ಮುನ್ನ ತಂಡದ ವಿದ್ಯಾರ್ಥಿಗಳು ಯಕ್ಷಗಾನ ಪೂರ್ವ ರಂಗವನ್ನು ನಡೆಸಿಕೊಟ್ಟರು. ತಂಡದ ಕಲಾವಿದೆಯರು ವೀರ ಅಭಿಮನ್ಯು ಮತ್ತು ಭಕ್ತ ಚಂದ್ರಹಾಸ ಎಂಬ ಎರಡು ಯಕ್ಷಗಾನ ಪ್ರಸಂಗಗಳನ್ನು ಪ್ರದರ್ಶಿಸಿದರು. ಕಲಾವಿದರಾಗಿ ಶ್ರೀಮತಿಯರಾದ ಕೆ. ಗೌರಿ, ಆಶಾ ರಾಘವೇಂದ್ರ, ಸುಮಾ ಅನಿಲ್ ಕುಮಾರ್, ಶಶಿಕಲಾ, ಅನ್ನಪೂರ್ಣೇಶ್ವರಿ, ಚೈತ್ರ ಆರ್. ಆಚಾರ್, ಅನುಷಾ ಸುರೇಶ್, ಕುಮಾರಿಯರಾದ ಚೈತ್ರಾ ಭಟ್, ಸೌಜನ್ಯಾ ನಾವುಡ, ದೀಕ್ಷಾ ಭಟ್, ಅಭಿಶ್ರೀ, ಸರಯೂ ವಿಠಲ್, ಕ್ಷಮಾ ಪೈ, ಮಾನ್ಯ, ಪವಿತ್ರ, ಗಗನ, ಸಹನಾ, ಧೃತಿ ಅಮ್ಮೆಂಬಳ ಭಾಗವಹಿಸಿದ್ದರು.
ಇನ್ನು ಹಿಮ್ಮೇಳದಲ್ಲಿ ಸುಬ್ರಹ್ಮಣ್ಯ ನಾವುಡ, ವಿನಯ್ ರಾಜೀವ್ ಶೆಟ್ಟಿ, ಮೃದಂಗದಲ್ಲಿ ಸಂಪತ್ ಆಚಾರ್ಯ, ಚೆಂಡೆಯಲ್ಲಿ ಸುಬ್ರಹ್ಮಣ್ಯ ಎಂ. ಮತ್ತು ನರಸಿಂಹ ಆಚಾರ್ ಇದ್ದರು. ಎರಡೂ ಪ್ರಸಂಗಗಳನ್ನು ಯಕ್ಷ ಗುರುಗಳಾದ ಶ್ರೀನಿವಾಸ ಸಾಸ್ತಾನ ಮತ್ತು ಕೆ. ಗೌರಿ ನಿರ್ದೇಶಿಸಿದ್ದರು.












Click it and Unblock the Notifications