ಬೆಂಗಳೂರು ರೈಲ್ವೆ ನಿಲ್ದಾಣದಲ್ಲಿ ಹೃದಯಾಘಾತ: ಪಟ್ಟಾಧಿಕಾರ ಮಹೋತ್ಸವಕ್ಕೆ ಮುಖಂಡರನ್ನು ಆಹ್ವಾನಿಸಲು ಬಂದಿದ್ದ ಸ್ವಾಮೀಜಿ ಲಿಂಗೈಕ್ಯ
ಬೆಂಗಳೂರು, ಜನವರಿ 12: ಬೆಂಗಳೂರಿನ ಕಂಟೋನ್ಮೆಂಟ್ ರೈಲ್ವೆ ನಿಲ್ದಾಣದಲ್ಲಿ ಅವಘಡವೊಂದು ಸಂಭವಿಸಿದೆ.
ಯಾದಗಿರಿ ಜಿಲ್ಲೆಯ ಶಹಾಪುರ ತಾಲ್ಲೂಕಿನ ದೋರನಹಳ್ಳಿ ಹಿರೇಮಠದ ವೀರ ಮಹಾಂತ ಶಿವಾಚಾರ್ಯ ಸ್ವಾಮೀಜಿ ಅವರಿಗೆ ಕಂಟೋನ್ಮೆಂಟ್ ರೈಲ್ವೆ ನಿಲ್ದಾಣದಲ್ಲಿ ಹೃದಯಾಘಾತವಾಗಿದೆ. 48 ವರ್ಷ ವಯಸ್ಸಿನ ಅವರು ಲಿಂಗೈಕ್ಯರಾಗಿದ್ದಾರೆ.
ಬೆಂಗಳೂರಿನ ಕಂಟೋನ್ಮೆಂಟ್ ರೈಲ್ವೆ ನಿಲ್ದಾಣದಲ್ಲಿ ಸ್ವಾಮೀಜಿ ಅವರಿಗೆ ಹೃದಯಘಾತ ಸಂಭವಿಸಿತು. ಅವರ ಜೊತೆಗಿದ್ದ ಭಕ್ತರು ಅವರನ್ನು ಬದುಕಿಸಲು ಹರಸಾಹಸ ಪಟ್ಟರು. ಕೂಡಲೇ ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗುವ ಪ್ರಯತ್ನ ಮಾಡಿದರು. ಆದರೆ, ಆಸ್ಪತ್ರೆಗೆ ಕೊಂಡೊಯ್ಯುವ ಮಾರ್ಗದ ನಡುವೆಯೇ ಸ್ವಾಮೀಜಿ ಲಿಂಗೈಕ್ಯರಾದರು ಎಂಬ ತಿಳಿದುಬಂದಿದೆ.

ಸ್ವಾಮೀಜಿ ತಮ್ಮ 25 ನೇ ಪಟ್ಟಾಧಿಕಾರ ಮಹೋತ್ಸವವನ್ನು ಆಚರಿಸಿಕೊಳ್ಳುವವರಿದ್ದರು. ಈ ಕಾರಣ, ರಾಜಕೀಯ ಮುಖಂಡರನ್ನು ಆಹ್ವಾನಿಸಲು ಬೆಂಗಳೂರಿಗೆ ಬಂದಿದ್ದರು. ಮಾಜಿ ಸಿಎಂ ಯಡಿಯೂರಪ್ಪ ಅವರ ಪುತ್ರ ಬಿ.ವೈ.ವಿಜಯೇಂದ್ರ ಸೇರಿದಂತೆ ಹಲವು ಮುಖಂಡರ ಮನೆಗಳಿಗೆ ತೆರಳಿ ಆಹ್ವಾನ ನೀಡಿದ್ದರು.
ಮುಂದಿನ ತಿಂಗಳು ನಡೆಯಲಿದ್ದ ಪಟ್ಟಾಧಿಕಾರ ಮಹೋತ್ಸವಕ್ಕೆ ಗಣ್ಣರನ್ನು ಆಹ್ವಾನಿಸಿ ವಾಪಸ್ಸು ಯಾದಗಿರಿಗೆ ತೆರಳುವವರಿದ್ದರು. ಈ ಕಾರಣ, ಬೆಂಗಳೂರಿನ ಕಂಟೋನ್ಮೆಂಟ್ ರೈಲು ನಿಲ್ದಾಣಕ್ಕೆ ಆಗಮಿಸಿದ್ದರು. ಅಲ್ಲಿ ರೈಲಿಗಾಗಿ ಕಾಯುತ್ತ ಕುಳಿತಿದ್ದಾಗ, ಸ್ವಾಮೀಜಿಗೆ ಹೃದಯಘಾತವಾಗಿದೆ. ಅವರು ಬದುಕಿ ಉಳಿಯದೇ ಸಾವನ್ನು ಅಪ್ಪಿದ್ದಾರೆ.

ಸಾವಿರಾರು ಭಕ್ತರನ್ನು ಹೊಂದಿದ್ದ ಸ್ವಾಮೀಜಿ ನಿಧನದ ಸುದ್ದಿ ಭಕ್ತರಿಗೆ ಅಪಾರ ನೋವನ್ನು ಉಂಟು ಮಾಡಿದೆ. ಸ್ವಾಮೀಜಿ ಮೃತದೇಹವನ್ನು ಯಾದಗಿರಿ ಜಿಲ್ಲೆಯ ಶಹಾಪುರ ತಾಲ್ಲೂಕಿನ ದೋರನಹಳ್ಳಿ ಹಿರೇಮಠದಲ್ಲಿ ಅವರ ಅಂತ್ಯಸಂಸ್ಕಾರ ನಡೆಯಲಿದೆ.
ಇತ್ತೀಚಿನ ದಿನಗಳಲ್ಲಿ ಯುವಕರಿಗೆ ಹೃದಯ ಸಂಬಂಧಿ ಕಾಯಿಲೆಗಳು ಹೆಚ್ಚುತ್ತಿವೆ. ಅತಿಯಾದ ರಕ್ತದೊತ್ತಡ, ಅನಾರೋಗ್ಯಕರ ಜೀವನ ವಿಧಾನಗಳಿಂದ ಹೃದಯಘಾತ ಸಂಭವಿಸುತ್ತದೆ ಎಂದು ವೈದ್ಯರು ಹೇಳುತ್ತಾರೆ.
ಹೃದಯಾಘಾತಕ್ಕೆ ನಿಖರವಾದ ಕಾರಣ ತಿಳಿಯದೇ ಹೋದರು, ಜೀವನ ಶೈಲಿ, ಆಹಾರ ಕ್ರಮ ಹಾಗೂ ಅತಿಯಾದ ಜೀವನದ ಒತ್ತಡಗಳು ಹೆಚ್ಚು ಪರಿಣಾಮ ಬೀರುತ್ತವೆ ಎನ್ನಲಾಗುತ್ತಿದೆ.

ಹೃದಯ ಸಂಬಂಧಿ ಕಾಯಿಲೆಗಳಿಂದ ಬಳಲುತ್ತಿರುವವರಲ್ಲಿ ಶೇಕಡಾ 25 ರಷ್ಟು ಜನರು 45 ವರ್ಷಕ್ಕಿಂತ ಕಡಿಮೆ ವಯಸ್ಸಿನವರಾಗಿದ್ದಾರೆ ಎಂದು ಅಂಕಿ ಅಂಶಗಳು ಹೇಳುತ್ತಿವೆ. ಈ ಶೇಕಡಾ 25 ರಷ್ಟು ಜನರಲ್ಲಿ, ಶೇ 30 ರಷ್ಟು ಜನರು ಮಧ್ಯವಯಸ್ಕರು ಎಂಬುದು ಆಘಾತಕಾರಿ ಸಂಗತಿಯಾಗಿದೆ. ಕುಡಿತ, ಧೂಮಪಾನ, ಉತ್ತಮವಲ್ಲದ ಆಹಾರ ಸೇವನೆಯಿಂದಲೂ ಈ ಕಾಯಿಲೆ ಕಾಣಿಸಿಕೊಳ್ಳಬಹುದೆಂದು ವೈದ್ಯರು ಅಭಿಪ್ರಾಯ ಪಟ್ಟಿದ್ದಾರೆ.












Click it and Unblock the Notifications