ಮತ್ತೆ ಕಸದ ಸಮಸ್ಯೆ ಉಲ್ಬಣ, ಬಿಬಿಎಂಪಿಗೆ ಎಎಪಿ ಎಚ್ಚರಿಕೆ
ಬೆಂಗಳೂರು, ಆಗಸ್ಟ್ 16: ಉದ್ಯೋಗ ಅರಸಿ ಬರುವವರಿಗೆ ಆಶ್ರಯ ತಾಣ ಎಂದೇ ಖ್ಯಾತಿ ಪಡೆದಿರುವ ಬೆಂಗಳೂರು, ದಿನೇ ದಿನೇ ಸಮಸ್ಯೆಗಳ ಆಗರವಾಗುತ್ತಿದೆ. ರಸ್ತೆ ಗುಂಡಿಗಳು, ಸಂಚಾರ ದಟ್ಟಣೆ, ವಿಷ ಪೂರಿತ ಗಾಳಿ, ನೀರಿನ ಸಮಸ್ಯೆಗಳ ಜೊತೆಗೆ ಕಸ ವಿಲೇವಾರಿಯ ಸಮಸ್ಯೆಯೂ ಬೆಳೆಯುತ್ತಲೇ ಇದೆ. ಈ ಸಮಸ್ಯೆಗಳನ್ನು ಬಗೆಹರಿಸಬೇಕು ಎಂಬ ಮನಸ್ಸು ಬಿಬಿಎಂಪಿಯ ಅಧಿಕಾರಿಗಳಿಗಾಗಲೀ, ಕಾರ್ಪೋರೇಟರ್ಗಳಿಗಾಗಲೀ ಇಲ್ಲ. ಬದಲಾಗಿ ಅವುಗಳಿಂದ ಹೇಗೆ ಕಮಿಷನ್ ಹೊಡೆದು ಹಣ ಗಳಿಸುವುದು ಎಂಬುದರ ಬಗ್ಗೆಯೇ ಹೆಚ್ಚು ಉತ್ಸುಕರಾಗಿದ್ದಾರೆ ಎಂದು ಆಮ್ ಆದ್ಮಿ ಪಕ್ಷ ಆರೋಪಿಸಿದೆ.
ರಾಷ್ಟ್ರೀಯ ಹಸಿರು ನ್ಯಾಯಮಂಡಳಿಯು 'ಕಸ ನಿರ್ವಹಣೆ ನಿಮಯಗಳು-2016'ರ ಪ್ರಕಾರ ಕಸವನ್ನು ಬೇರ್ಪಡಿಸಿ ವಿಲೇವಾರಿ ಮಾಡಬೇಕು, ಕಸವನ್ನು ಲ್ಯಾಂಡ್ ಫಿಲ್ ಮಾಡಬಾರದು, ಈಗಾಗಲೇ ಲ್ಯಾಂಡ್ ಫಿಲ್ ಆಗಿರುವ ಕಸವನ್ನೂ ವೈಜ್ಞಾನಿಕವಾಗಿ ವಿಲೇವಾರಿ ಮಾಡಬೇಕು, ಬೆಂಗಳೂರಿಗೆ ಅಗತ್ಯವಿರುವಷ್ಟು ಕಸ ವಿಲೇವಾರಿ ಘಟಕಗಳನ್ನು ಅನುಷ್ಠಾನ ಮಾಡಿ ಕಸವನ್ನು ವೈಜ್ಞಾನಿಕವಾಗಿ ವಿಲೇವಾರಿ ಮಾಡಬೇಕು ಎಂದು ತಾಕೀತು ಮಾಡಿತ್ತು.
ಆದರೆ ಇದಾವುದಕ್ಕೂ ತಲೆಕಡಿಸಿಕೊಳ್ಳದೆ ಜವಾಬ್ದಾರಿಹೀನವಾಗಿ ಕುಳಿತಿರುವ ಬಿಬಿಎಂಪಿ ಕಸ ವರ್ಗಾವಣೆ ಮಾಫಿಯಾಕ್ಕೆ ಮಣೆ ಹಾಕಿ ಲೂಟಿ ಹೊಡೆಯುವುದರಲ್ಲಿ ನಿರತವಾಗಿದೆ.
ಮಿಟಗಾನಹಳ್ಳಿ ಮತ್ತು ಮಾರೇನಹಳ್ಳಿಯ ಕ್ವಾರಿಗಳಲ್ಲಿ ಕಸ ಭೂಭರ್ತಿಯಾಗಿದ್ದು, ಬೆಲ್ಲಹಳ್ಳಿ ಕ್ವಾರಿಯೊಂದೇ ಉಳಿದಿದೆ. ಆದರೆ ಅದೂ ಕೂಡ ಆಗಸ್ಟ್ 20 ರೊಳಗೆ ಭರ್ತಿಯಾಗುವ ಸಾಧ್ಯತೆಗಳಿವೆ. ಹೀಗಿದ್ದಾಗಲೂ ಇದಕ್ಕೆ ಪರ್ಯಾಯ ವ್ಯವಸ್ಥೆ ಮಾಡುವಲ್ಲಿ ಬಿಬಿಎಂಪಿ ಅಧಿಕಾರಿಗಳು ವಿಫಲವಾಗಿದ್ದಾರೆ.
ಕಸ ವಿಲೇವಾರಿ ಮಾಡಲು ನ್ಯಾಯೋಚಿತವಾಗಿ ಕಾನೂನು ರೀತಿಯಲ್ಲಿ, ಸಮಯಕ್ಕೆ ಸರಿಯಾಗಿ ಟೆಂಡರ್ ಕರೆದು ಕಸ ವಿಲೇವಾರಿ ಮಾಡದೇ, ಸಮಯ ವಿಳಂಬ ಮಾಡಿ ವಾಮಮಾರ್ಗದಲ್ಲಿ ಭ್ರಷ್ಟಾಚಾರದ ಆಗರವಾಗಿರುವ KRIDL (ಗ್ರಾಮೀಣ ಮೂಲಸೌಕರ್ಯ ಅಭಿವೃದ್ಧಿ ಸಂಸ್ಥೆ)ಗೆ ವಹಿಸಿ, ಆ ಮುಖಾಂತರ ದುಡ್ಡಿನ ಲೂಟಿ ಹೊಡೆಯುವ ಹುನ್ನಾರವನ್ನೂ ಬಿಬಿಎಂಪಿ ಮಾಡುತ್ತಿದ್ದು, ತನ್ನ ಅಯೋಗ್ಯತನವನ್ನು ತೋರಿಸುತ್ತಿದೆ.