ನಂದಿ ಬೆಟ್ಟದಿಂದ ಕಾಲು ಜಾರಿ ಕಂದಕಕ್ಕೆ ಬಿದ್ದು ಮಹಿಳೆ ಸಾವು
ಬೆಂಗಳೂರು, ಮೇ 3: ನಂದಿ ಬೆಟ್ಟದಿಂದ ಕಾಲುಜಾರಿ ಬಿದ್ದು ಮಹಿಳೆಯೊಬ್ಬರು ಮೃತಪಟ್ಟಿರುವ ಘಟನೆ ನಡೆದಿದೆ. ಇದು ಒಂದು ದಿನ ತಡವಾಗಿ ಬೆಳಕಿಗೆ ಬಂದಿದೆ. ಹಾಸನದ ಜೆ.ಸುನೀತಾ(50)ದುರ್ದೈವಿ ಮಹಿಳೆಯಾಗಿದ್ದು, ಅವರ ಪತಿ, ಹೋಟೆಲ್ ಉದ್ಯೋಗಿ ಎಂ.ಕುಮಾರ್(53) ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಹಾಸನದಿಂದ ಬೆಂಗಳೂರಿನ ತಮ್ಮ ಸಂಬಂಧಿಕರ ಮನೆಗೆ ಬಂದಿದ್ದ ಈ ದಂಪತಿ ಮಂಗಳವಾರ (ಮೇ 1) ನಂದಿ ಬೆಟ್ಟಕ್ಕೆ ತೆರಳಿದ್ದಾರೆ. ಬೆಟ್ಟದ ಹೋಟೆಲ್ ಮಯೂರ ಹಿಂಬಾಗದಲ್ಲಿ ಬಂಡೆಯೊಂದರ ಮೇಲೆ ಕುಳಿತಿದ್ದ ದಂಪತಿ ಸಂಜೆ 6.30ರ ಸುಮಾರು ಹಿಂತಿರುಗಲಿಕ್ಕಾಗಿ ಏಳುವಾಗ ಸುನೀತಾ ಚಪ್ಪಲಿಯೊಂದು ಕೆಳಗೆ ಬಿದ್ದಿದೆ.ಅದನ್ನು ತೆಗೆದುಕೊಳ್ಳಲೆನ್ನುವಂತೆ ಆಕೆ ಬಾಗಿದ್ದಾಗ ಆಧಾರ ತಪ್ಪಿದಂತಾಗಿ ಇಳಿಜಾರಿದ್ದ ಬಂಡೆಯಿಂದ ಉರುಳಿ ಕಂದಕಕ್ಕೆ ಬಿದ್ದಿದ್ದಾರೆ.
ಆಕೆಯ ರಕ್ಷಣೆಗೆ ಮುಂದಾದ ಪತಿ ಕುಮಾರ್ ಸಹ ಕಂದಕಕ್ಕೆ ಜಾರಿದ್ದಾರೆ. ಕುಮಾರ್ ಹತ್ತಿರದ ಬಂಡೆಯೊಂದನ್ನು ಆಧಾರವಾಗಿಟ್ಟುಕೊಂಡು ಬದುಕುಳಿದರೆ ಸುನೀತಾ ಕೆಳಗೆ ಬಿದ್ದು ಕಾಣೆಯಾಗಿದ್ದರು. ರಾತ್ರಿ 10ರ ವೇಳೆಗೆ ಚೇತರಿಸಿಕೊಂಡು ಕುಮಾರ್ ಮಯೂರ ಹೋಟೆಲ್ ಗೆ ತೆರಳಿ ಘಟನೆ ಕುರಿತು ವಿವರಿಸಿದ್ದಾರೆ.

ಆ ಬಳಿಕ ಸ್ಥಳಕ್ಕೆ ಆಗಮಿಸಿದ್ದ ಪೋಲೀಸರು ಕಾರ್ಯಾಚರಣೆ ನಡೆಸಿ ಸುಮಾರು 350 ಅಡಿ ಆಳದಲ್ಲಿ ಮುನೇಶ್ವರ ದೇವಾಲಯ ಸಮೀಪ ಸುನೀತಾ ಅವರ ಶವವನ್ನು ಪತ್ತೆ ಮಾಡಿದ್ದಾರೆ. ಕುಮಾರ್ ಅವರ ತಲೆ ಹಾಗೂ ಮೂಗಿಗೆ ಗಂಭೀರ ಸ್ವರೂಪದ ಗಾಯಗಳಾಗಿದೆ. ಪ್ರಕರಣ ದಾಖಲಿಸಿಕೊಂಡಿರುವ ಪೋಲೀಸರು ತನಿಖೆ ಕೈಗೊಂಡಿದ್ದಾರೆ.












Click it and Unblock the Notifications