ಅನಂತ್ ಕುಮಾರ್ ವಿಧಿವಶ: ಬೆಂಗಳೂರು ಬಿಜೆಪಿಗಾದ ಎರಡನೇ ದೊಡ್ಡ ಆಘಾತ
Recommended Video

ಕೇಂದ್ರ ಸಚಿವ ಎಚ್ ಎನ್ ಅನಂತ್ ಕುಮಾರ್ ಅವರ ಅಕಾಲಿಕ ನಿಧನದಿಂದ ದೇಶ ಮತ್ತು ರಾಜ್ಯ ಪ್ರಮಖ ನಾಯಕರೊಬ್ಬರನ್ನು ಕಳೆದುಕೊಂಡಿದೆ. ಪಕ್ಷಾತೀತವಾಗಿ ಎಲ್ಲರೂ ಹೇಳುವಂತೆ, ರಾಜಕೀಯಕ್ಕೆ ಎಲ್ಲರೂ ಬರುತ್ತಾರೆ, ಹೋಗುತ್ತಾರೆ.. ಆದರೆ ಅನಂತ್ ಕುಮಾರ್ ಅವರಂತಹ ರಾಜಕಾರಣಿ ಸಿಗುವುದು ಅಪರೂಪ.
ಬಹುದಿನಗಳಿಂದ ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಕೇಂದ್ರ ಸಂಸದೀಯ ವ್ಯವಹಾರಗಳ ಖಾತೆಯ ಸಚಿವ ಮತ್ತು ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಸಂಸದ ಅನಂತ್ ಕುಮಾರ್ (59) ಅವರ ನಿಧನ, ಪ್ರಮುಖವಾಗಿ ಬೆಂಗಳೂರು ಬಿಜೆಪಿ ಘಟಕಕ್ಕಾದ ಎರಡನೇ ಬಹುದೊಡ್ಡ ನಷ್ಟ.
ಕೇವಲ ಆರು ತಿಂಗಳ ಅವಧಿಯಲ್ಲಿ ಬಿಜೆಪಿ ತನ್ನ ಎರಡು ಪ್ರಮುಖ ನಾಯಕರನ್ನು ಕಳೆದುಕೊಂಡಿದೆ. ಇದೇ ವರ್ಷ ಮೇ ನಾಲ್ಕರಂದು ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ವ್ಯಾಪ್ತಿಗೆ ಬರುವ ಜಯನಗರ ಕ್ಷೇತ್ರದ ಶಾಸಕರಾಗಿದ್ದ ಬಿ ಎನ್ ವಿಜಯ್ ಕುಮಾರ್ ವಿಧಿವಶರಾಗಿದ್ದರು.
1996ರಿಂದ ಲೋಕಸಭೆಗೆ ಸತತವಾಗಿ ಆಯ್ಕೆಯಾಗುತ್ತಿದ್ದ ಅನಂತ್ ಕುಮಾರ್ ಸೋಲಿಲ್ಲದ ಸರದಾರನಾಗಲು ವಿಜಯ್ ಕುಮಾರ್ ಅವರ ಕೊಡುಗೆಯೂ ಅಪಾರವಾಗಿತ್ತು. ಬೆಂಗಳೂರಿನಲ್ಲಿ ಬಿಜೆಪಿ ತನ್ನ ಪ್ರಾಭಲ್ಯವನ್ನು ಹೆಚ್ಚಿಸಿಕೊಳ್ಳಲು ಈ ಇಬ್ಬರು ನಾಯಕರ ಪರಿಶ್ರಮ ತುಂಬಾನೇ ಇತ್ತು.
ರಾಜಕಾರಣವನ್ನು ಮೀರಿದ ಸ್ನೇಹವನ್ನು ವಿರೋಧ ಪಕ್ಷಗಳ ನಾಯಕರುಗಳ ಜೊತೆಯೂ ಹೊಂದಿದ್ದ ಅನಂತ್ ಕುಮಾರ್, ಹಲವಾರು ವಿಚಾರಗಳಲ್ಲಿ ಕೇಂದ್ರ ಮತ್ತು ರಾಜ್ಯ ಸರಕಾರಕ್ಕೆ ಕೊಂಡಿಯಂತೆ ಕೆಲಸ ಮಾಡಿದ್ದರು. ಇದನ್ನು ಬಹಳಷ್ಟು ಬಾರಿ ಮಾಜಿ ಸಿಎಂ ಸಿದ್ದರಾಮಯ್ಯನವರೂ ಹೇಳಿದ್ದುಂಟು.

ಅನಂತ್ ಕುಮಾರ್ ಬ್ರಾಹ್ಮಣ ಸಮುದಾಯದವರು
ಜಾತಿ ಲೆಕ್ಕಾಚಾರವೇ ಪ್ರಮುಖವಾಗಿರುವ ಇಂದಿನ ರಾಜಕಾರಣದಲ್ಲಿ, ಅನಂತ್ ಕುಮಾರ್ ಬ್ರಾಹ್ಮಣ ಸಮುದಾಯದವರಾಗಿದ್ದರೂ, ಬರೀ ಒಂದು ಜಾತಿಯ ಪ್ರಮುಖ ನಾಯಕರಾಗದೇ ಎಲ್ಲರ ಜೊತೆ ಉತ್ತಮ ಒಡನಾಟವನ್ನು ಹೊಂದಿದ್ದರು. ಅಪ್ರತಿಮ ವಾಕ್ಚತುರ ಅನಂತ್ ಕುಮಾರ್, ತೀವ್ರ ಹಿಂದುತ್ವದ ಅಜೆಂಡಾದ ಮೊರೆಹೋಗದೆ ಅಭಿವೃದ್ದಿ ವಿಚಾರದಲ್ಲೇ ಪಕ್ಷವನ್ನು ಸಂಘಟಿಸಿದ್ದವರು.

ಯಡಿಯೂರಪ್ಪ ಮತ್ತು ಅನಂತ್ ಕುಮಾರ್
ರಾಜ್ಯ ಬಿಜೆಪಿಯ ವಿಚಾರಕ್ಕೆ ಬರುವುದಾದರೆ ಪ್ರಮುಖವಾಗಿ ಕೇಳಿಬರುವ ಹೆಸರು ಯಡಿಯೂರಪ್ಪ ಮತ್ತು ಅನಂತ್ ಕುಮಾರ್. ಯಡಿಯೂರಪ್ಪ ರೈತನಾಯಕನಾಗಿ ಹೊರಹೊಮ್ಮಿದರೆ, ಅನಂತ್ ಕುಮಾರ್ ಕೇಂದ್ರದಲ್ಲಿ ತನ್ನ ಪ್ರಭಾವವನ್ನು ಹೆಚ್ಚಿಸಿಕೊಂಡು ಬಂದವರು. ಆದರೆ, ಪಕ್ಷ ಸಂಘಟನೆಯ ವಿಚಾರಕ್ಕೆ ಬಂದಾಗ, ಇಬ್ಬರೂ ನಾಯಕರು ಕೈಜೋಡಿಸಿ, ಕರ್ನಾಟಕದಲ್ಲಿ ಪಕ್ಷವನ್ನು ಈ ಮಟ್ಟಕ್ಕೆ ಬೆಳೆಸಿದವರು ಎಂದರೆ ತಪ್ಪಾಗಲಾರದು.

ದೆಹಲಿ ಮಟ್ಟದಲ್ಲಿ ಕೊಂಡಿಯಂತೆ ಕೆಲಸ ಮಾಡಿದವರು ಅನಂತ್ ಕುಮಾರ್
ಬಿಜೆಪಿ ಕಾರ್ಯಕರ್ತರ ಪ್ರಕಾರ, ರಾಜ್ಯ ಬಿಜೆಪಿಯ ಸಮಸ್ಯೆಗಳಿಗೆ ದೆಹಲಿ ಮಟ್ಟದಲ್ಲಿ ಪರಿಹಾರ ಸಿಗಬೇಕಾದರೆ, ಅದಕ್ಕೆ ಕೊಂಡಿಯಂತೆ ಕೆಲಸ ಮಾಡಿದವರು ಅನಂತ್ ಕುಮಾರ್. ಕಾರ್ಯದ ನಿಮಿತ್ತ, ದೆಹಲಿಗೆ ಹೋಗುವ ಪಕ್ಷದ ಮುಖಂಡರನ್ನು, ಕಾರ್ಯಕರ್ತರನ್ನು ವಿಶೇಷ ಕಾಳಜಿಯಿಂದ ನೋಡಿಕೊಳ್ಳುತ್ತಿದ್ದ ಅನಂತ್ ಕುಮಾರ್, ಈಗಿನ ಬಿಜೆಪಿ ಯುವ ಮುಖಂಡರಂತೆ ಬರೀ ಹಿಂದುತ್ವದ ಹಿಂದೆ ಹೋದವರಲ್ಲ ಎನ್ನುವುದು ಕಾರ್ಯಕರ್ತರ ವಲಯದಲ್ಲಿ ಕೇಳಿ ಬರುತ್ತಿರುವ ಮಾತು.

ಅನಂತ್ ಕುಮಾರ್ ಮತ್ತು ವಿಜಯ್ ಕುಮಾರ್
ಅನಂತ್ ಕುಮಾರ್ ಮತ್ತು ವಿಜಯ್ ಕುಮಾರ್ ಅವರ ನಿಧನ ಬೆಂಗಳೂರು ಬಿಜೆಪಿಗಾದ ತುಂಬಲಾಗದ ನಷ್ಟ. ವಿಜಯ್ ಕುಮಾರ್ ನಿಧನದ ನಂತರ ನಡೆದ ಜಯನಗರ ವಿಧಾನಸಭಾ ಕ್ಷೇತ್ರದ ಚುನಾವಣೆಯಲ್ಲಿ ಕ್ಷೇತ್ರವನ್ನು ಉಳಿಸಿಕೊಳ್ಳಲಾಗದಿದ್ದಾಗ, ಅನಂತ್ ಕುಮಾರ್ ಮತ್ತು ಅಶೋಕ್ ಮೇಲೆ ಪಕ್ಷದ ಕಾರ್ಯಕರ್ತರು ಬೇಸರಿಸಿಕೊಂಡಿದ್ದುಂಟು. ಆದರೆ, ಪಕ್ಷದ ಈ ಎಲ್ಲಾ ಸಣ್ಣಪುಟ್ಟ ಮನಸ್ತಾಪಗಳನ್ನು ಮೀರಿ, ರಾಜ್ಯ ರಾಜಕಾರಣದಲ್ಲಿ ಅನಂತ್ ಕುಮಾರ್ ಬೆಳೆದುಬಂದ ರೀತಿಯನ್ನು ಪಕ್ಷದ ಮುಖಂಡರು, ಕಾರ್ಯಕರ್ತರು ನೆನೆಪಿಸಿಕೊಳ್ಳುತ್ತಾರೆ.

ಪಕ್ಷಕ್ಕಾದ ಬಹುದೊಡ್ಡ ನಷ್ಟವಿದು
ಒಟ್ಟಿನಲ್ಲಿ ಆರು ತಿಂಗಳ ಅವಧಿಯಲ್ಲಿ ಕರ್ನಾಟಕ ಬಿಜೆಪಿ, ತನ್ನ ಎರಡು ಪ್ರಭಾವಿ, ಜನಾನುರಾಗಿ ನಾಯಕರನ್ನು ಕಳೆದುಕೊಂಡಿದೆ. ಬೆಂಗಳೂರು ನಗರದ ಬಿಜೆಪಿಯ ವಿಚಾರಕ್ಕೆ ಬಂದಾಗ, ಪಕ್ಷಕ್ಕಾದ ಬಹುದೊಡ್ಡ ನಷ್ಟವಿದು. ರಾಜಧಾನಿಯಲ್ಲಿ ಬಿಜೆಪಿ ತನ್ನ ಪ್ರಾಭಲ್ಯವನ್ನು ಬೆಳೆಸಿಕೊಂಡಿದೆ ಎಂದಾಗ ಅನಂತ್ ಕುಮಾರ್ ಮತ್ತು ವಿಜಯ್ ಕುಮಾರ್ ಹೆಸರು ಮಂಚೂಣಿಯಲ್ಲಿ ಕೇಳಿಬರುತ್ತಿದೆ. ವೈಯಕ್ತಿಕ ಜೀವನದಲ್ಲೂ ಆಪ್ತರಾಗಿದ್ದ ಅನಂತ್ ಕುಮಾರ್ ಈಗ ತನ್ನ ಸ್ನೇಹಿತ ವಿಜಯ್ ಕುಮಾರ್ ಅವರನ್ನು ಸೇರಿಕೊಂಡಿದ್ದಾರೆ.












Click it and Unblock the Notifications