ಕರ್ನಾಟಕ ಬಜೆಟ್ 2023: 'ಜಾಗತಿಕ ನಾಯಕ'ರಾದ ಆಶಾ ಕಾರ್ಯಕರ್ತೆಯರ ಬೇಡಿಕೆ ಈಡೇರಿಕೆ: ಡಾ.ಕೆ.ಸುಧಾಕರ್
ರಾಜ್ಯ ಸರ್ಕಾರ ಕಳೆದ ವರ್ಷ ಬಜೆಟ್ನಲ್ಲಿ ಆಶಾ ಕಾರ್ಯಕರ್ತೆಯರಿಗೆ ಗೌರವಧನ 1,000 ರೂ. ಹೆಚ್ಚಿಸಿದೆ. ಈ ಸಲವು ಗೌರವಧನ ಹೆಚ್ಚಿಸಲಾಗುವುದು ಎಂದ ಆರೋಗ್ಯ ಸಚಿವ ಸುಧಾಕರ್ ಆಶಾ ಕಾರ್ಯಕರ್ತೆಯರಿಗೆ ನೀಡಿದ ಭರವಸೆಗಳು ಏನೇನು?
ಬೆಂಗಳೂರು, ಫೆಬ್ರವರಿ 14: ಪ್ರತಿ ವರ್ಷದಂತೆ ಎರಡು ಬಾರಿ ಆಶಾ ಕಾರ್ಯಕರ್ತೆಯರ ಗೌರವಧನ ಹೆಚ್ಚಿಸಲು ಶ್ರಮಿಸಿದ್ದೇನೆ. ಮುಖ್ಯಮಂತ್ರಿಗಳು ತಮ್ಮ ಮೊದಲ ಬಜೆಟ್ನಲ್ಲಿ ಗೌರವಧನ 1,000 ರೂ. ಹೆಚ್ಚಿಸಿದ್ದಾರೆ. ಈ ಬಾರಿ ಕೂಡ ಆಶಾ ಕಾರ್ಯಕರ್ತೆಯರ ಬೇಡಿಕೆಗಳನ್ನು ಈಡೇರಿಸಲು ಪ್ರಾಮಾಣಿಕವಾಗಿ ಪ್ರಯತ್ನಿಸುತ್ತೇನೆ ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ತಿಳಿಸಿದರು.
ಬೆಂಗಳೂರಿನಲ್ಲಿ ಶಿಕ್ಷಕರ ಸದನದಲ್ಲಿ ಮಂಗಳವಾರ ನಡೆದ ಆಶಾ ಕಾರ್ಯಕರ್ತೆಯರ ರಾಜ್ಯಮಟ್ಟದ ಸಮಾವೇಶದಲ್ಲಿ ಮಾತನಾಡಿದ ಸಚಿವರು, ಆಶಾ ಕಾರ್ಯಕರ್ತೆಯರ ಪ್ರತಿನಿಧಿಯಾಗಿ ನಾನು ಕೆಲಸ ಮಾಡಿದ್ದು, ಕಳೆದ ಭಾರಿ 1000ರೂಪಾಯಿ ಗೌರವಧನ ಹೆಚ್ಚಿಸಲು ನಾನು ಶ್ರಮಿಸಿದ್ದೇನೆ.
ಫೆಬ್ರವರಿ 17 ರಂದು ನಡೆಯಲಿರುವ ಕರ್ನಾಟಕ ರಾಜ್ಯ ಬಜೆಟ್ 2023 ಕುರಿತು ಈಗಾಗಲೇ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರ ಜೊತೆಗೆ ಚರ್ಚಿಸಲಾಗಿದೆ. ಚರ್ಚೆಯಲ್ಲಿ ಆಶಾ ಕಾರ್ಯಕರ್ತೆಯರ ಗೌರವಧನ 2,000 ರೂಪಾಯಿಗೆ ಹೆಚ್ಚಿಸಲು ಮನವಿ ಮಾಡಲಾಗಿದೆ ಎಂದು ತಿಳಿಸಿದರು.

ಆಶಾ ಕಾರ್ಯಕರ್ತೆಯರಿಗೆ ಕ್ಷೇಮಾಭಿವೃದ್ಧಿ ನಿಧಿ
ಆಶಾ ಕಾರ್ಯಕರ್ತೆಯರಿಗಾಗಿ ಐದು ಕೋಟಿ ರೂಪಾಯಿಯ ಕ್ಷೇಮಾಭಿವೃದ್ಧಿ ನಿಧಿ ಇಟ್ಟು, ಕಾರ್ಯಕರ್ತೆಯರ ಆರೋಗ್ಯ ರಕ್ಷಣೆಗೆ ನೀಡಬೇಕು ಎಂಬ ಬೇಡಿಕೆ ಇದೆ. ಈ ವಿಚಾರವನ್ನು ಸರ್ಕಾರಕ್ಕೆ ತಿಳಿಸುವ ಪ್ರಯತ್ನ ನನ್ನದು. ತಾಂತ್ರಿಕ ನ್ಯೂನತೆ ನಿವಾರಿಸಿ, ಸರಿಯಾದ ಸಮಯಕ್ಕೆ ಗೌರವಧನ ನೀಡಲು ಅಧಿಕಾರಿಗಳ ಜೊತೆ ಚರ್ಚಿಸಿ ಕ್ರಮವಹಿಸಲಾಗುವುದು.

ಕೋವಿಡ್ ವೇಳೆ ವರ್ಕ್ ಫ್ರಂ ಸ್ಟ್ರೀಟ್: ಮೆಚ್ಚುಗೆ
ಕೋವಿಡ್ ಸಾಂಕ್ರಾಮಿಕ ಕಾಲದಲ್ಲಿ ಸಮಯದಲ್ಲಿ ಅನೇಕರು ಮನೆಯಿಂದ ಕೆಲಸ (WFH) ಮಾಡಿದ್ದಾರೆ. ಆಶಾ ಕಾರ್ಯಕರ್ತೆಯರು ಸ್ಥಿತಿ ಹಾಗಿರಲಿಲ್ಲ. ಅವರೆ ಕೋವಿಡ್ ಕಾಲದಲ್ಲು ಸಹ ವರ್ಕ್ ಫ್ರಂ ಸ್ಟ್ರೀಟ್ ಮಾಡಿದ್ದಾರೆ. 10 ವರ್ಷಗಳ ಕಾಲ ಸೇವೆ ಸಲ್ಲಿಸಿದವರು ಅಥವಾ 60 ವಯಸ್ಸಿನ ಬಳಿಕ ನಿವೃತ್ತರಾಗಲು ಬಯಸಿದರೆ, ಅವರಿಗೆ ಇಡಿಗಂಟು ನೀಡಲು ಕ್ರಮ ವಹಿಸಬೇಕು. ಹೀಗೆಂದು ಬೇಡಿಕೆ ಸಲ್ಲಿಕೆಯಾಗಿದ್ದು, ಅದರ ಚರ್ಚಿಸಲಿದ್ದೇವೆ ಎಂದು ಭರವಸೆ ನೀಡಿದರು.

ಆರೋಗ್ಯ: ಆಶಾ ಕಾರ್ಯಕರ್ತೆಯರದ್ದು ಮುಖ್ಯ ಪಾತ್ರ
ಕೇಂದ್ರ ಮತ್ತು ಕರ್ನಾಟಕ ಸರ್ಕಾರದ ಆರೋಗ್ಯ ಯೋಜನೆಗಳನ್ನು ಕಟ್ಟಕಡೆಯ ವ್ಯಕ್ತಿಯ ತಲುಪಿಸುವಲ್ಲಿ ಆಶಾ ಕಾರ್ಯಕರ್ತೆಯರ ಮಹತ್ವದ ಪಾತ್ರ ನಿರ್ವಹಿಸುತ್ತಿದ್ದಾರೆ. ಅಪೌಷ್ಟಿಕತೆ ನಿವಾರಣೆಗೆ ಪೋಷಣ್ ಅಭಿಯಾನ, ಇಂದ್ರಧನುಷ್ ಲಸಿಕಾಕರಣದಂತಹ ಅನೇಕ ಕಾರ್ಯಕ್ರಮ ಕಾರ್ಯಕರ್ತೆಯರಿಂದಲೇ ಯಶಸ್ಸು ಕಾಣುತ್ತಿದೆ. ಕೋವಿಡ್ ಲಸಿಕಾಕರಣದಲ್ಲಿ, 42 ಸಾವಿರಕ್ಕೂ ಅಧಿಕ ಆಶಾ ಕಾರ್ಯಕರ್ತೆಯರು ಲಸಿಕೆ ನೀಡಲು ಶ್ರಮಿಸಿದ್ದರು. ಈ ಕೋವಿಡ್ ಲಸಿಕೆ ಅಭಿಯಾನದಲ್ಲೂ ಅವರ ಪಾತ್ರ ಗಮನಾರ್ಹವಾದದ್ದು ಎಂದು ಸಚಿವರು ಶ್ಲಾಘಿಸಿದರು.

ಆಶಾ ಕಾರ್ಯಕರ್ತೆಯರು 'ಜಾಗತಿಕ ನಾಯಕರು'
ವಿಶ್ವ ಆರೋಗ್ಯ ಸಂಸ್ಥೆ (WHO) ಆಶಾ ಕಾರ್ಯಕರ್ತೆಯರ ಸೇವೆಗೆ ಮೆಚ್ಚುಗೆ ವ್ಯಕ್ತಪಡಿಸಿ ಅವರನ್ನು 'ಜಾಗತಿಕ ನಾಯಕರು' ಎಂದು ಕರೆದಿದೆ. ಆಶಾ ಎಂದರೆ ಭರವಸೆ ಎಂದರ್ಥ. ಇಡೀ ವಿಶ್ವವೇ ನಂಬಿಕೆ, ಭರವಸೆಯ ಮೇಲೆ ನಿಂತಿದೆ. ಸರ್ಕಾರಕ್ಕೆ ಆಶಾ ಕಾರ್ಯಕರ್ತೆಯರ ಮೇಲೆ ಸಂಪೂರ್ಣ ಭರವಸೆ ಇದ್ದು, ಯಾವುದೇ ಆಶಾ ಕಾರ್ಯಕರ್ತೆಯರು ಅದನ್ನು ಹುಸಿ ಮಾಡಲಿಲ್ಲ. ದೇಶದಲ್ಲಿ 10 ಲಕ್ಷಕ್ಕೂ ಹೆಚ್ಚು ಆಶಾ ಕಾರ್ಯಕರ್ತೆಯರಿದ್ದಾರೆ.
ಅವರಿಂದ ರಾಜ್ಯಕ್ಕೆ ಹೆಲ್ತ್ಗಿರಿ ಪ್ರಶಸ್ತಿ ದೊರೆತಿದೆ. ರಾಜ್ಯದಲ್ಲಿ ಸಾಂಸ್ಥಿಕ ಹೆರಿಗೆ ಪ್ರಮಾಣ ಶೇ.90ಕ್ಕೂ ಹೆಚ್ಚಿದೆ. ಆದರೆ ಇದು ಶೇ.100 ಕ್ಕೆ ತಲುಪಬೇಕು. ತಾಯಂದಿರು ಹಾಗೂ ಶಿಶುಗಳ ಮರಣ ಪ್ರಮಾಣ ಇನ್ನೂ ಕಡಿಮೆಯಾಗಬೇಕಿದ್ದ ಅದರಲ್ಲಿ ನಾವು ಇನ್ನಷ್ಟು ಗುರಿ ತಲುಪಬೇಕಿದೆ. ನಾಗರಿಕ ಸಮಾಜದ ಅತಿ ದೊಡ್ಡ ಶತ್ರುವೇ ಅಪೌಷ್ಟಿಕತೆ. ಇದಕ್ಕೆ ಕೇವಲ ಬಡತನವೊಂದೇ ಕಾರಣವಲ್ಲ ಎಂದು ಅವರು ವಿವರಿಸಿದರು.












Click it and Unblock the Notifications