ಅರಣ್ಯ ನಿವಾಸಿಗಳ ಸಮಸ್ಯೆ ಪರಿಹರಿಸುವಂತೆ ಸಿಎಂಗೆ ರಿಷಬ್ ಶೆಟ್ಟಿ ಮನವಿ: ಭರವಸೆ ನೀಡಿದ ಬಸವರಾಜ ಬೊಮ್ಮಾಯಿ
ಬೆಂಗಳೂರು, ಮಾರ್ಚ್ 08: ಕಾಂತಾರ ಸಿನಿಮಾ ಚಿತ್ರೀಕರಣ ಸೇರಿದಂತೆ ಹಲವು ಕಾಲ ಕಾಡಿನಲ್ಲಿ ಕಾಲ ಕಳೆದಿರುವ ನಟ ರಿಷಬ್ ಶೆಟ್ಟಿ, ಅಲ್ಲಿನ ಜನರ ಸಮಸ್ಯೆಗಳು ಮತ್ತು ಕಾಡಾನೆ ದಾಳಿ, ಕಾಡ್ಗಿಚ್ಚುಗಳ ಕುರಿತು ಸಿಎಂ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿಯಾಗಿದ್ದಾರೆ. ಅರಣ್ಯ ನಿವಾಸಿಗಳ ಸಮಸ್ಯೆಗಳಿಗೆ ಪರಿಹಾರ ಒದಗಿಸುವಂತೆ ಮನವಿ ಸಲ್ಲಿಸಿದ್ದಾರೆ.
ನಟ, ನಿರ್ದೇಶಕ ರಿಷಬ್ ಶೆಟ್ಟಿ ಅರಣ್ಯ ನಿವಾಸಿಗಳು ಮತ್ತು ಅರಣ್ಯ ಸಿಬ್ಬಂದಿ ಜೊತೆಗೆ ಮಾತನಾಡಿ ಸುಮಾರು ಇಪ್ಪತ್ತು ಅಂಶಗಳ ಪಟ್ಟಿಯನ್ನು ತಯಾರು ಮಾಡಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಸಲ್ಲಿಸಿದ್ದಾರೆ. ಮನವಿಗೆ ಸಿಎಂ ಸಕಾರಾತ್ಮಕವಾಗಿ ಸ್ಪಂದಿಸಿದ್ದು, ನಿರ್ದೇಶಕ ರಿಷಬ್ ಶೆಟ್ಟಿ ಅವರ ಕೆಲಸವನ್ನು ಶ್ಲಾಘಿಸಿದ್ದಾರೆ.

"ಕಾಂತಾರ ಚಿತ್ರದ ನಂತರದ ದಿನಗಳಲ್ಲಿ ಕಾಡು ಸುತ್ತಿ, ಅಡವಿ ಅಂಚಿನ ಜನರ ಜತೆ ಮಾತಾಡಿ, ಅರಣ್ಯ ಇಲಾಖೆ ಸಿಬ್ಬಂದಿಗಳ ಜತೆ ಚರ್ಚಿಸಿ ಕಲೆಹಾಕಿದ ಅಂಶಗಳನ್ನು ಮಾನ್ಯ ಮುಖ್ಯಮಂತ್ರಿಗಳ ಮುಂದಿಟ್ಟಾಗ ಅವರು ತಕ್ಷಣವೇ ಪರಿಹರಿಸುವುದಾಗಿ ಹೇಳಿದ್ದಾರೆ. ಸಮಸ್ಯೆಗೆ ಸ್ಪಂದಿಸಿದ ಸಿಎಂ ಬಸವರಾಜ ಬೊಮ್ಮಾಯಿಯವರಿಗೆ ಧನ್ಯವಾದಗಳು" ಎಂದು ರಿಷಬ್ ಶೆಟ್ಟಿ ಟ್ವೀಟ್ ಮಾಡಿದ್ದಾರೆ.
ಇದರ ಜೊತೆಗೆ ವಿಡಿಯೋವೊಂದನ್ನು ಹಂಚಿಕೊಂಡಿರುವ ಅವರು, "ಕಾಂತಾರದ ನಂತರ, ಒಂದಷ್ಟು ಕಾಡಂಚಿನ ಜನರು ಮತ್ತು ಕಾಡಿನಲ್ಲಿ ಸ್ವಲ್ಪ ಸಮಯ ಕಳೆಯುತ್ತಾ, ಅವರ ಜೊತೆಗೆ ಬೆರೆಯುತ್ತಾ ಅವರ ಸಮಸ್ಯೆಗಳನ್ನು ಕೇಳಿದ್ದೇನೆ. ಹೀಗಾಗಿ ಅವರ ಸಮಸ್ಯೆ ಕೂಡ ಅರಿವಿಗೆ ಬಂದಿದೆ. ಹೆಚ್ಚು ಸಮಸ್ಯೆ ಇರುವ ಪ್ರದೇಶಗಳಲ್ಲಿನ ಜನರು ಎದುರಿಸುತ್ತಿರುವ ಸಮಸ್ಯೆಗಳು ಉದಾಹರಣೆಗೆ ಕಾಡಾನೆ ದಾಳಿ, ಕಾಡ್ಗಿಚ್ಚು ಮುಂತಾದ ಸಮಸ್ಯೆಗಳ ಬಗ್ಗೆ ಅರನ್ಯಾಧಿಕಾರಿಗಳ ಜೊತೆಗೂ ಚರ್ಚೆ ಮಾಡಿದ್ದೇನೆ" ಎಂದಿದ್ದಾರೆ.
"ಈ ಸಮಸ್ಯೆಗಳ ಸುತ್ತ ಸುಮಾರು ಇಪ್ಪತ್ತು ಅಂಶಗಳನ್ನು ಪಟ್ಟಿ ಮಾಡಿ ಮಾನ್ಯ ಮುಖ್ಯಮಂತ್ರಿಗಳಿಗೆ ಕೊಟ್ಟಿದ್ದೇವೆ. ಅವರು ಅದ್ಭುತವಾದ ಪಾಸಿಟಿವ್ ರೆಸ್ಪೋನ್ಸ್ ಕೊಟ್ಟಿದ್ದಾರೆ. ಅವರು ಕೂಡ ಇತ್ತೀಚೆಗೆ ಕಾಡಿಗೆ ಹೋಗಿ ಅಲ್ಲಿನ ಜನರ ಸಮಸ್ಯೆಗಳನ್ನು ಆಲಿಸಿದ್ದಾರೆ. ಹೀಗಾಗಿ ಅತೀ ಶೀಘ್ರದಲ್ಲಿ ಇದಕ್ಕೆ ಪರಿಹಾರ ನೀಡುವ ಭರವಸೆ ನೀಡಿದ್ದಾರೆ. ಇಂತಹ ಮುಖ್ಯಮಂತ್ರಿಯನ್ನು ಒಡೆದ ನಾವು ಧನ್ಯ. ಏಕೆಂದೆ ಚಿಕ್ಕ ಚಿಕ್ಕ ಸಮಸ್ಯೆಗಳನ್ನು ಗಮನಿಸಿ ಅದಕ್ಕೆ ಪರಿಹಾರ ಕೊಡುವ ಕೆಲಸ ಮಾಡತ್ತಿದ್ದಾರೆ" ಎಂದು ರಿಷಬ್ ಶೆಟ್ಟಿ ಹೇಳಿದ್ದಾರೆ.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕೂಡ ರಿಷಬ್ ಶೆಟ್ಟಿ ಭೇಟಿಯಾಗಿ ಮನವಿ ಸಲ್ಲಿಸಿರುವುದನ್ನು ಹಂಚಿಕೊಂಡಿದ್ದಾರೆ. "ನಮ್ಮ ನೆಲದ ಮೂಲ ಸಂಸ್ಕೃತಿಯನ್ನು ಜಗತ್ತಿಗೆ ಪರಿಚಯಿಸಿದ ಕನ್ನಡದ ಹೆಮ್ಮೆಯ ಚಲನಚಿತ್ರವೆಂದರೇ ಅದು ಕಾಂತಾರ.ಅರಣ್ಯ ನಿವಾಸಿಗಳ ಬವಣೆಯನ್ನು ಅತ್ಯಂತ ನೈಜವಾಗಿ ತೋರಿಸಿದ್ದು, ಆ ಚಿತ್ರದ ನಿರ್ದೇಶಕ ರಿಷಬ್ ಶೆಟ್ಟಿಯವರು ಅರಣ್ಯ ನಿವಾಸಿಗಳೊಡನೆ ಚರ್ಚಿಸಿ ಅವರ ಸಮಸ್ಯೆಗಳನ್ನು ತಿಳಿಸಿದ್ದು,ಎಲ್ಲಾ ಸಮಸ್ಯೆಗಳನ್ನು ಪರಿಹರಿಸಲು ಸರ್ಕಾರ ಉತ್ಸುಕವಾಗಿದೆ" ಎಂದು ಭರವಸೆ ನೀಡಿದ್ದಾರೆ.












Click it and Unblock the Notifications