ಉಪ ಚುನಾವಣೆಯಲ್ಲಿ ಡಿ. ಕೆ. ರವಿ ಹೆಸರು ಬಳಕೆ; ಕುಸುಮಾ ಸ್ಪಷ್ಟನೆ
ಬೆಂಗಳೂರು, ಅಕ್ಟೋಬರ್ 08: "ಆರ್. ಆರ್. ನಗರ ಉಪ ಚುನಾವಣೆಯಲ್ಲಿ ಡಿ. ಕೆ. ಅವರ ಹೆಸರು ಬಳಸುವುದಿಲ್ಲ. ಹಿಂದೆಯೂ ನಾನು ಅವರ ಹೆಸರನ್ನು ಪ್ರಸ್ತಾಪಿಸಿಲ್ಲ" ಎಂದು ಕಾಂಗ್ರೆಸ್ ಅಭ್ಯರ್ಥಿ ಕುಸುಮಾ ಹನುಮಂತರಾಯಪ್ಪ ಸ್ಪಷ್ಟಪಡಿಸಿದರು.
ಗುರುವಾರ ಹೆಚ್. ಕುಸುಮಾ ತಂದೆ ಹನುಮಂತರಾಯಪ್ಪ ಜೊತೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಭೇಟಿ ಮಾಡಲು ಬಂದಿದ್ದರು. ಆದರೆ, ಅವರು ವಿಶ್ರಾಂತಿಯಲ್ಲಿದ್ದ ಕಾರಣ ಸಂಜೆ ಬರುವಂತೆ ಸಿಬ್ಬಂದಿಗಳು ವಾಪಸ್ ಕಳಿಸಿದರು.
ಸಿದ್ದರಾಮಯ್ಯ ನಿವಾಸದ ಬಳಿ ಕುಸುಮಾ ಮಾಧ್ಯಮಗಳ ಜೊತೆ ಮಾತನಾಡಿದರು. "ಕ್ಷೇತ್ರದಲ್ಲಿ ಬಿಜೆಪಿ, ಜೆಡಿಎಸ್ ಅಭ್ಯರ್ಥಿಗಳು ಯಾರೂ ಎಂಬುದು ಬೇಕಿಲ್ಲ. ನಾನು ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ಚುನಾವಣೆ ಎದುರಿಸುತ್ತೇನೆ" ಎಂದು ಹೇಳಿದರು.
ನವೆಂಬರ್ 3ರಂದು ರಾಜರಾಜೇಶ್ವರಿ ನಗರ ಕ್ಷೇತ್ರದ ಉಪ ಚುನಾವಣೆ ನಡೆಯಲಿದೆ. ಬಿಜೆಪಿ ಮತ್ತು ಜೆಡಿಎಸ್ ಇನ್ನೂ ಅಭ್ಯರ್ಥಿಗಳನ್ನು ಘೋಷಣೆ ಮಾಡಬೇಕಿದೆ. ಶುಕ್ರವಾರ ಚುನಾವಣಾ ಅಧಿಸೂಚನೆ ಪ್ರಕಟವಾಗಲಿದ್ದು, ಅಕ್ಟೋಬರ್ 16ರ ತನಕ ನಾಮಪತ್ರಗಳನ್ನು ಸಲ್ಲಿಸಬಹುದಾಗಿದೆ.

ಅವರ ಆಶೀರ್ವಾದವಿದೆ
ಡಿ. ಕೆ. ರವಿ ಅವರ ತಾಯಿ ಗೌರಮ್ಮ ಹೇಳಿಕೆ ಕುರಿತು ಪ್ರತಿಕ್ರಿಯೆ ನೀಡಿದ ಹೆಚ್. ಕುಸುಮಾ, "ನಮ್ಮ ಅತ್ತೆಯವರ ಹೇಳಿಕೆ ಆಶೀರ್ವಾದ ಇದ್ದಂತೆ. ಅವರು ದೊಡ್ಡವರು ಅವರ ಆಶೀರ್ವಾದ ನಮ್ಮ ಮೇಲಿದೆ" ಎಂದರು.

ಗೌರಮ್ಮ ವಿರೋಧ ವ್ಯಕ್ತಪಡಿಸಿದ್ದರು
ಮಾಧ್ಯಮಗಳ ಜೊತೆ ಮಾತನಾಡಿದ್ದ ಗೌರಮ್ಮ ಸೊಸೆ ಕುಸುಮಾ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದರು. "ಅವಳು ಚುನಾವಣೆಗೆ ಆದರೂ ನಿಲ್ಲಲಿ, ಏನಾದರೂ ಮಾಡಲಿ ನನ್ನ ಮಗನ ಹೆಸರು, ಫೋಟೋ ಹಾಕ ಕೂಡದು. ಚುನಾವಣಾ ಪ್ರಚಾರದಲ್ಲಿ ಮಗನ ಫೋಟೋ ಬಳಸಿದರೆ ಬ್ಯಾನರ್ಗಳಿಗೆ ಬೆಂಕಿ ಹಚ್ಚುತ್ತೇನೆ" ಎಂದು ಆಕ್ರೋಶ ವ್ಯಕ್ತಪಡಿಸಿದ್ದರು.

ನಮಗೆ ರಾಜಕೀಯ ಹೊಸದಲ್ಲ
"ರಾಜರಾಜೇಶ್ವರಿ ನಗರ ಕ್ಷೇತ್ರ ದೊಡ್ಡದು ಇರಬಹುದು. ಆದರೆ, ರಾಜಕೀಯ ನಮಗೆ ಹೊಸದಲ್ಲ. ಪ್ರತಿಸ್ಪರ್ಧಿಗಳು ಯಾರೂ ಅನ್ನೋದು ನಮಗೆ ಮುಖ್ಯವಲ್ಲ. ಕ್ಷೇತ್ರದಲ್ಲಿ ಜನರಿಂದ ಒಳ್ಳೆಯ ಪ್ರತಿಕ್ರಿಯೆ ಸಿಗುತ್ತಿದೆ" ಎಂದು ಹೆಚ್. ಕುಸುಮಾ ಹೇಳಿದರು.
Recommended Video

ಸಮಸ್ಯೆಗಳ ಅರಿವು ಇದೆ
"ಕ್ಷೇತ್ರದ ಅಭಿವೃದ್ಧಿ ಬಗ್ಗೆ ನನ್ನದೇ ಆದ ಕನಸು ಕಟ್ಟಿಕೊಂಡಿದ್ದೇನೆ. ಕ್ಷೇತ್ರದ ಸಮಸ್ಯೆಗಳ ಅರಿವು ನನಗೆ ಇದೆ. ಜನರು ನನ್ನನ್ನು ಒಪ್ಪಿಕೊಳ್ಳುತ್ತಾರೆ ಎಂಬ ಭರವಸೆ ಇದೆ" ಎಂದು ಹೆಚ್. ಕುಸುಮಾ ಹೇಳಿದರು.












Click it and Unblock the Notifications