ಗುರುವಾರದಿಂದ ಮಕ್ಕಳಿಗೆ ಬಿಸಿಯೂಟದ ಭಾಗ್ಯವಿಲ್ಲ?

ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ 6500ಕ್ಕೂ ಹೆಚ್ಚು ಅಕ್ಷರ ದಾಸೋಹ ನೌಕರರು ಅನಿರ್ಧಿಷ್ಟ ಅವಧಿಯ ಪ್ರತಿಭಟನೆ ನಡೆಸುತ್ತಿದ್ದಾರೆ. ಪ್ರತಿಭಟನೆ ಗುರುವಾರ ನಾಲ್ಕನೇ ದಿನಕ್ಕೆ ಕಾಲಿಟ್ಟಿದೆ. ಸರ್ಕಾರ ಮುಷ್ಕರ ನಿರತರ ಬೇಡಿಕೆಗಳನ್ನು ಈಡೇರಿಸದ ಕಾರಣ, ಬಿಸಿಯೂಟ ತಯಾರಿ ಸ್ಥಗಿತಗೊಳಿಸುವಂತೆ ನೌಕರರ ಸಂಘದ ಪ್ರಧಾನ ಕಾರ್ಯದರ್ಶಿ ಮಾಲಿನಿ ಮೇಸ್ತ ಕರೆ ನೀಡಿದ್ದಾರೆ. (ಡಿ.2ರಿಂದ ಬಿಸಿಯೂಟ ನೌಕರರ ಮುಷ್ಕರ)
ನೌಕರರ ಸಂಘ ಕರೆ ನೀಡಿರುವುದರಿಂದ ರಾಜ್ಯದ ಸರ್ಕಾರಿ ಶಾಲೆಗಳಲ್ಲಿ ಗುರುವಾರದಿಂದ ಬಿಸಿಯೂಟ ತಯಾರಿ ಸ್ಥಗಿತಗೊಳ್ಳುವ ಸಾಧ್ಯತೆ ಇದೆ. ಬಿಸಿಯೂಟ ತಯಾರಿ ಸ್ಥಗಿತಗೊಂಡರೆ ಮಕ್ಕಳು ಪರದಾಡುವಂತಾಗುತ್ತದೆ. ಪ್ರತಿಭಟನೆ ನಡೆಸುತ್ತಿರುವ ನೌಕರರಲ್ಲಿ ನಾಲ್ವರು ಅಸ್ವಸ್ಥಗೊಂಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತದೆ.
ಬೇಡಿಕೆಗಳೇನು : ಸದ್ಯ ಬಿಸಿಯೂಟ ತಯಾರಿಸುವ ಮುಖ್ಯ ಅಡುಗೆಯವರಿಗೆ 1,100 ಮತ್ತು ಅವರ ಸಹಾಯಕರಿಗೆ 1000 ರೂ. ವೇತನ ನೀಡಲಾಗುತ್ತಿದೆ. ಇದು 2009ರಲ್ಲಿ ನೀಡುತ್ತಿದ್ದ ವೇತನವಾಗಿದ್ದು, ಅಂದಿನಿಂದಲೂ ವೇತನ ಹೆಚ್ಚಳ ಮಾಡಿಲ್ಲ ಎಂದು ಪ್ರತಿಭಟನಾನಿರತರು ಆರೋಪ ಮಾಡುತ್ತಿದ್ದಾರೆ.
ಮುಖ್ಯ ಅಡುಗೆಯವರ ವೇತನವನ್ನು 3000 ರೂ.ಗಳಿಗೆ ಹೆಚ್ಚಳ ಮಾಡಬೇಕು ಮತ್ತು ಸಹಾಯಕರ ವೇತನವನ್ನು 2000 ರೂ.ಗಳಿಗೆ ಹೆಚ್ಚಳ ಮಾಡಬೇಕು ಎಂದು ನೌಕರರು ಒತ್ತಾಯಿಸುತ್ತಿದ್ದಾರೆ. ಒಟ್ಟು 22 ಜಿಲ್ಲೆಗಳ 6500 ನೌಕರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದಾರೆ.












Click it and Unblock the Notifications