ಪ್ರಧಾನಿ ಮಾತನಾಡೊಲ್ಲ, ಮುಂದಿನ ಚುನಾವಣೆಯಲ್ಲಿ ಸ್ಪರ್ಧಿಸೊಲ್ಲ: ದೇವೇಗೌಡ
ಬೆಂಗಳೂರು, ಜನವರಿ 5: ಸಂಸತ್ಗೆ ಸುಮ್ಮನೆ ಹೋಗಿ ಬರುವಂತಾಗಿದೆ. ಅಲ್ಲಿ ಜನಗಣಮನ ಬಂದಾಗ ಎದ್ದು ನಿಲ್ಲೋದಷ್ಟೇ ಆಗಿದೆ ಎಂದು ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮುಂದಿನ ಚುನಾವಣೆಯಲ್ಲಿ ತಾವು ಸ್ಪರ್ಧಿಸುವುದಿಲ್ಲ ಎಂದು ಶನಿವಾರ ಅವರು ಸುದ್ದಿಗೋಷ್ಠಿಯಲ್ಲಿ ಸ್ಪಷ್ಟಪಡಿಸಿದರು.
ಪ್ರಧಾನಿಯಾದ ಬಳಿಕ ನರೇಂದ್ರ ಮೋದಿ ನಾಲ್ಕೂ ವರ್ಷ ಪತ್ರಿಕಾಗೋಷ್ಠಿ ಮಾಡಲಿಲ್ಲ. ಆದರೆ ಇತ್ತೀಚೆಗೆ ಖಾಸಗಿ ಸುದ್ದಿಸಂಸ್ಥೆಗೆ ಸಂದರ್ಶನ ಕೊಟ್ಟಿದ್ದಾರೆ. ಲೋಕಸಭೆಯ ಚುನಾವಣಾ ಅಜೆಂಡಾ ಬಗ್ಗೆಯೂ ಹೇಳಿದ್ದಾರೆ. ಇತ್ತೀಚೆಗೆ ಅವರು ಲೋಕಸಭೆಗೂ ಬರುತ್ತಿಲ್ಲ ಎಂದು ದೇವೇಗೌಡ ಅಸಮಾಧಾನ ಹೊರಹಾಕಿದರು.

ಪ್ರಧಾನಿ ನರೇಂದ್ರ ಮೋದಿ ಲೋಕಸಭೆಗೆ ಬಂದು ಮಾತನಾಡುತ್ತಿಲ್ಲ. ಇದೇಕೆ? ಯಾವುದೋ ವಾರ್ತಾ ಸಂಸ್ಥೆಯನ್ನು ಮನೆಗೆ ಕರೆಯಿಸಿಕೊಂಡು ಸುದೀರ್ಘವಾಗಿ ಮಾತನಾಡುತ್ತಾರೆ. ಶುಕ್ರವಾರ ಲೋಕಸಭೆ ಅಧಿವೇಶನದಲ್ಲಿ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಸರ್ಕಾರವನ್ನು ಚೆನ್ನಾಗಿ ಸಮರ್ಥಿಸಿಕೊಂಡರು. ಆದರೆ, ಮೋದಿ ಚರ್ಚೆಗೆ ಬರುತ್ತಿಲ್ಲ ಎಂದು ಹೇಳಿದರು.
ಮೈತ್ರಿ ಸರ್ಕಾರದಲ್ಲಿ ನಮ್ಮನ್ನು ಕೂಡ ನಡೆಸಿಕೊಂಡು ಹೋಗಬೇಕು. ಒಂದೇ ಸೀಟು ಬರಲಿ ಅಥವಾ ಎರಡು ಬರಲಿ, ಆದರೆ, ನಮ್ಮದೂ ಒಂದು ಪಕ್ಷ ಎಂಬುದು ಗಮನದಲ್ಲಿರಬೇಕು ಎಂದು ಕಾಂಗ್ರೆಸ್ ವಿರುದ್ಧ ಹರಿಹಾಯ್ದರು.
ನಮ್ಮ ಪಕ್ಷಕ್ಕೆ ಶಕ್ತಿಯಿದೆ. ಅದನ್ನು ಅರ್ಥಮಾಡಿಕೊಳ್ಳಬೇಕು. ಲೋಕಸಭೆಯಲ್ಲಿ ನಮಗೆಷ್ಟು ಸೀಟು ಎನ್ನುವ ಚರ್ಚೆ ಬೇಡ. ಆದರೆ, ಅಲ್ಲಿ ನಮ್ಮ ಎರಡು ಸೀಟುಗಳು ಇದೆ ತಾನೆ? ನಾನೂ ಚುನಾವಣೆಗಳಲ್ಲಿ ಸೋತಿದ್ದೇನೆ. ನಂತರ ಗೆದ್ದು ಬರಲಿಲ್ಲವೇ? ಎಂದರು.












Click it and Unblock the Notifications