Real Estate: ನಮ್ಮ ಮೆಟ್ರೋಗೆ 45 ಎಕರೆ ಜಾಗ ಸಿಗುತ್ತಾ? ಸರ್ಕಾರದಿಂದ ಈ ವಾರ ನಿರ್ಣಾಯಕ ಸಭೆ
ಬೆಂಗಳೂರು, ಜುಲೈ 14: ವರ್ಷಗಳಿಂದಲೂ ಹೆಬ್ಬಾಳದಲ್ಲಿರುವ ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿಗೆ (KIADB) ಸೇರಿದ ಜಾಗವನ್ನು ನಮ್ಮ ಮೆಟ್ರೋ ಪಡೆದುಕೊಳ್ಳುವಲ್ಲಿ ಈವರೆಗೆ ವಿಫಲವಾಗಿದೆ. ಆದರೆ ಮುಂದಿನ ದಿನಗಳಲ್ಲಿ ಮೆಟ್ರೋ, ಬಿಎಂಟಿಸಿ, ರೈಲ್ವೆ ಸೇರಿದಂತೆ ಬಹುಮಾದರಿ ಸಾರಿಗೆ ಹಬ್ ಮಾಡಲು ಈ ಜಾಗ ವರ್ಗಾವಣೆ ಆಗುತ್ತಾ? ಎಂಬ ಅನುಮಾನ ಮೂಡಿದೆ. ಇದೆಲ್ಲದ್ದಕ್ಕೆ ಇದೇ ವಾರ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಅವರ ನೇತೃತ್ವದಲ್ಲಿ ಸಭೆ ನಡೆಯಲಿದೆ.
ನಮ್ಮ ಮೆಟ್ರೋ ಹೆಬ್ಬಾಳದಿಂದ ಸರ್ಜಾಪುರವರೆಗೆ ಕಂಪು ಮೆಟ್ರೋ ಮಾರ್ಗ ನಿರ್ಮಿಸುತ್ತಿದೆ. ಇಲ್ಲಿ ಬಹುಮಾದರಿ ಸಾರಿಗೆ ಹಬ್ ನಿರ್ಮಿಸುವ ಉದ್ದೇಶ ಇದೆ. ವರ್ಷಗಳಿಂದಲೂ ಸಭೆ ನಡೆಯುತ್ತಿವೆ ಆದರೆ ಹೆಬ್ಬಾಳದ 45 ಎಕರೆ ಬೆಂಗಳೂರು ಮೆಟ್ರೋ ರೈಲು ನಿಗಮಕ್ಕೆ ಸಿಕ್ಕಿಲ್ಲ. ಈ ಮಧ್ಯೆ ರಿಯಲ್ ಎಸ್ಟೇಟ್ ವಲಯದಿಂದ ಸರ್ಕಾರದ ಮೇಲೆ ಒತ್ತಡ ಹೆಚ್ಚಾಗಿದೆ. ರಿಯಲ್ ಎಸ್ಟೇಟ್ ಉದ್ಯಮಿಗಳ ಒತ್ತಡಕ್ಕೆ ಮಣಿಯದಂತೆ ಬಿಜೆಪಿ ನಾಯಕರು ಆಗ್ರಹಿಸಿದ್ದಾರೆ.

ಇದು ಅಂತಿಮ ಸಭೆ ಆಗುತ್ತಾ?
ಇದೆಲ್ಲ ಬೆಳವಣಿಗೆ ಮಧ್ಯೆ ಹೆಬ್ಬಾಳದ ಭೂಮಿ ಸ್ವಾಧೀನ ವಿಚಾರಕ್ಕೆ ಸಂಬಂಧಿಸಿದಂತೆ ಇದೇ ವಾರ ಶಾಲಿನಿ ರಜನೀಶ್ ಅವರ ನೇತೃತ್ವದಲ್ಲಿ ಬಹುಮುಖ್ಯ ಸಭೆ ನಡೆಯಲಿದೆ. ಇಲ್ಲಿ ಬಹು-ಮಾದರಿ ಸಾರಿಗೆ ಕೇಂದ್ರ ಸ್ಥಾಪನೆಯ ನಮ್ಮ ಮೆಟ್ರೋದ ಭೂಮಿ ಸ್ವಾಧೀನ ಪ್ರಸ್ತಾವನೆಯನ್ನು ಅವರು ಪರಿಶೀಲಿಸುವ ನಿರೀಕ್ಷೆ ಇದೆ. ನಮ್ಮ ಮೆಟ್ರೋಗೆ ಜಾಗ ನೀಡಲು ಒಪ್ಪಿಗೆ ಕೊಟ್ಟರೆ ಇದು ಅಂತಿಮ ಸಭೆಯು ಆಗಬಹುದೆಂದು ಹೇಳಲಾಗುತ್ತಿದೆ.
ರಿಯಲ್ ಎಸ್ಟೇಟ್ ಲಾಭಿ, ಒತ್ತಡ
ನಮ್ಮ ಮೆಟ್ರೋ ಬೇಡಿಕೆ ಇಟ್ಟಿರುವ ಈ 45 ಎಕರೆ ಜಾಗವನ್ನು ಕೇವಲ 9 ಎಕರೆಗಳಿಗೆ ಇಳಿಸಲು ರಿಯಲ್ ಎಸ್ಟೇಟ್ ಉದ್ಯಮಿಗಳಿಂದ ಲಾಭಿ ನಡೆದಿದೆ. ಸರ್ಕಾರದ ಮೇಲೆ ಒತ್ತಡ ಹೇರಿದ್ದಾರೆ. ವಾಣಿಜ್ಯ ಬಳಕೆಗಾಗಿ ನೀಡುವಂತೆ ಒಳಗೊಳಗೆ ಕಸರತ್ತು ನಡೆಸಿದ್ದಾರೆ ಎನ್ನಲಾಗಿದೆ.
2024ರ ಜುಲೈನಲ್ಲಿ ನಮ್ಮ ಮೆಟ್ರೋ 45 ಎಕರೆ ಭೂಮಿಯನ್ನು ಅಂದಾಜು 551.15 ಕೋಟಿ ರೂ.ಗೆ ಖರೀದಿಸಲು BMRCL ಮುಂದಾಗಿತ್ತು. ಸರ್ಜಾಪುರ-ಹೆಬ್ಬಾಳ ಕೆಂಪು ಮಾರ್ಗ, ಜೆಪಿ ನಗರ 4 ನೇ ಹಂತ-ಕೆಂಪಾಪುರ ಮಾರ್ಗ ಹಾಗೂ ಸಿಲ್ಕಬೋರ್ಡ್-ಕೆಆರ್.ಪುರ-ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ (KIA)ವರೆಗೆ ಮೆಟ್ರೋ ಮಾರ್ಗಗಳು ನಿರ್ಮಿಸಲಾಗುತ್ತಿದೆ. ಈ ಮಾರ್ಗಗಳಿಗೆ ಹೆಬ್ಬಾಳದ ಈ ಭೂಮಿ ಅತ್ಯವಶ್ಯಕವಾಗಿದೆ ಎಂದು ಪ್ರಸ್ತಾವನೆಯಲ್ಲಿ ನಮ್ಮ ಮೆಟ್ರೋ ಅಧಿಕಾರಿಗಳು ತಿಳಿಸಿದ್ದಾರೆ.
ಸರಣಿ ಸಭೆಗಳಿಂದ ಪ್ರಯೋಜನ ಆಗಿಲ್ಲ..!
ಇತ್ತೀಚಿನ ತಿಂಗಳಲ್ಲಿ ಕೈಗಾರಿಕೆ ಸಚಿವ ಎಂಬಿ ಪಾಟೀಲ್, BMRCL ಹಾಗೂ ಕೆಐಎಡಿಬಿ ಅಧಿಕಾರಿಗಳು ಒಳಗೊಂಡ ಸಭೆಗಳು ನಡೆದಿವೆ. ಆದರೆ ಈ ಬಗ್ಗೆ ಯಾವುದೇ ಅಂತಿಮ ನಿರ್ಣಯ ಕೈಗೊಳ್ಳಲು ಆಗಿಲ್ಲ. ಕಮರ್ಷಿಯಲ್ ಯೋಜನೆಗಾಗಿ 2004 ರಲ್ಲಿನ ಒಪ್ಪಂದಕ್ಕೆ ಜೀವ ತುಂಬಲು ರಿಯಲ್ ಎಸ್ಟೇಟ್ ಡೆವಲಪರ್ಸ್ಗಳು ಮುಂಆಗಿದ್ದಾರೆ. ಭೂಮಿ ಸ್ವಾಧಿನ ವಿಚಾರವಾಗಿ ಇರುವ ಅವಕಾಶದ ಬಗ್ಗೆ ಕೋರ್ಟ್ ನೀಡಿರುವ ಆದೇಶ ಉಲ್ಲೇಖಿಸಿದ್ದಾರೆ. ಸದ್ಯ ಇದೆಲ್ಲ ನೋಡಿದರೆ, ಈ ವಾರದ ನಡೆಯಲಿರುವ ಸಭೆಯಲ್ಲಿ ಸರ್ಕಾರ ಯಾವ ನಿರ್ಧಾರ ಕೈಗೊಳ್ಳಲಿದೆ. ನಮ್ಮ ಮೆಟ್ರೋ ಅಧಿಕಾರಿಗಳಿಗೆ ಸಿಗುತ್ತಾ? ಇಲ್ಲವೇ ರಿಯಲ್ ಎಸ್ಟೇಟ್ ಲಾಭಿ ಗೆಲ್ಲುತ್ತಾ ಕಾದು ನೋಡಬೇಕಿದೆ.












Click it and Unblock the Notifications