ಕಳೆದ ವರ್ಷ ಇದೇ ದಿನ ಬೆಂಗಳೂರಿನಲ್ಲಿ ಭರ್ಜರಿ ಮಳೆಯಾಗಿತ್ತು!
ಈ ಬೇಸಿಗೆಯಲ್ಲಿ ಕಲಬುರಗಿಯನ್ನು ಹಿಂದಕ್ಕೆ ಹಾಕುವುದಕ್ಕೆ ಯಾವ ನಗರ, ಹಳ್ಳಿಗೂ ಸಾಧ್ಯವಿಲ್ಲ ಅಂತ ಕಾಣತ್ತೆ. ಪ್ರತಿದಿನ ತನ್ನ ಅಧಿಪತ್ಯವನ್ನು ಮುಂದುವರಿಸಿದೆ. ಮೇ 5ರಂದು ಅಲ್ಲಿ 41.4 ಡಿಗ್ರಿ ಸೆಂಟಿಗ್ರೇಡ್ ತಾಪಮಾನ ದಾಖಲಾಗಿದೆ.
ಬೆಂಗಳೂರು, ಮೇ 06 : ಸರಿಯಾಗಿ 1 ವರ್ಷದ ಹಿಂದೆ ಇದೇ ದಿನ, ಮೇ 6ರಂದು ಬೆಂಗಳೂರಿನಲ್ಲಿ ಧೋಧೋ ಎಂದು ಮಳೆ ಸುರಿದಿತ್ತು. ಬುಕ್ಕನ್ನು ಎದೆಗೆ ಅವಚಿಕೊಳ್ಳುವ ಕಾಲೇಜು ಹುಡುಗಿಯರು ತೊಯ್ದು ತೊಪ್ಪೆಯಾಗಿದ್ದರು. ಇವತ್ತೂ ಮಳೆ ಬರುತ್ತದೆಂದು ಹವಾಮಾನ ಇಲಾಖೆ ಭವಿಷ್ಯ ನುಡಿದಿದೆ. ಮಳೆ ಬರುತ್ತಾ?
ಏನ್ ಕಥೇನೋ ಗೊತ್ತಿಲ್ಲ. ಆದರೆ, ಮಧ್ಯಾಹ್ನ 12 ಗಂಟೆಯ ಹೊತ್ತಿಗೆ ಸೂರ್ಯ ನೆತ್ತಿಯನ್ನು ಸುಡುತ್ತಿದ್ದಾನೆ. ಟೆಂಪರೇಚರ್ 34 ಡಿಗ್ರಿ ಸೆಂಟಿಗ್ರೇಡ್. ರಸ್ತೆಯಲ್ಲಿ ಅಡ್ಡಾಡುವ ಜನರು ಅಲ್ಲಲ್ಲಿ ಸಿಗುವ ಗಿಡಮರಗಳ ನೆರಳುಗಳನ್ನು ಹುಡುಕಿಕೊಂಡು ನಿಂತು ದಣಿವಾರಿಸಿಕೊಳ್ಳುತ್ತಿದ್ದಾರೆ. ಜ್ಯೂಸ್, ಎಳನೀರು ವ್ಯಾಪಾರಿಗಳು ಭರ್ಜರಿ ವ್ಯಾಪಾರ ನಡೆಸಿದ್ದಾರೆ. [ಇನ್ನೊಂದು ದಿನದಲ್ಲೇ ಮುಂಗಾರು; ನಲಿದಾಡಲಿ ಬೆಂಗಳೂರು]
ಈ ನಡುವೆ ಕೇಂದ್ರ ಹವಾಮಾನ ಇಲಾಖೆ ನೆತ್ತಿಯ ಮೇಲೆ ಐಸ್ ಇಟ್ಟುಕೊಂಡ ಹಾಗೆ ಸಂತಸದ ಸುದ್ದಿಯೊಂದನ್ನು ಕೊಟ್ಟಿದೆ. ಭಾರತಕ್ಕೆ ಜೂನ್ ಮೊದಲ ವಾರದಲ್ಲೇ ಮುಂಗಾರು ಕಾಲಿಡಲಿದ್ದು, ದಕ್ಷಿಣ ಭಾರತದಲ್ಲಿ ವಾಡಿಕೆಯಂತೆ ಮಳೆಯಾಗಲಿದೆಯಂತೆ. ಈ ಭವಿಷ್ಯ ಹೇಳಿದವರ ಹೊಟ್ಟೆಯೂ ತಣ್ಣಗಿರಲಿ.

ಈ ಬೇಸಿಗೆಯಲ್ಲಿ ಕಲಬುರಗಿಯನ್ನು ಹಿಂದಕ್ಕೆ ಹಾಕುವುದಕ್ಕೆ ಯಾವ ನಗರ, ಹಳ್ಳಿಗೂ ಸಾಧ್ಯವಿಲ್ಲ ಅಂತ ಕಾಣತ್ತೆ. ಪ್ರತಿದಿನ ತನ್ನ ಅಧಿಪತ್ಯವನ್ನು ಮುಂದುವರಿಸಿದೆ. ಮೇ 5ರಂದು ಅಲ್ಲಿ 41.4 ಡಿಗ್ರಿ ಸೆಂಟಿಗ್ರೇಡ್ ತಾಪಮಾನ ದಾಖಲಾಗಿದೆ. ಅಲ್ಲಿಯೂ ಮಳೆಯಾಗಲಿದೆ ಎಂದು ಶುಕ್ರವಾರವೇ ಸ್ಕೈಮೆಟ್ ವೆದರ್ ಶುಭನುಡಿದಿದೆ. [ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ಮುಂಗಾರು ಪೂರ್ವ ಮಳೆ]
ಕಲಬುರಗಿಯಲ್ಲಿ ಮಾತ್ರವಲ್ಲ, ದಾವಣಗೆರೆ, ಹಾಸನ, ಉಡುಪಿ, ಕೊಡಗು, ಕೊಪ್ಪಳ, ಮಂಡ್ಯ, ಮೈಸೂರು, ರಾಯಚೂರು, ಶಿವಮೊಗ್ಗ, ಬೆಳಗಾವಿ, ಬಳ್ಳಾರಿ, ಚಿಕ್ಕಮಗಳೂರು, ಬೀದರ್, ಚಾಮರಾಜನಗರ, ಬಿಜಾಪುರ, ಬಾಗಲಕೋಟೆ, ಚಿತ್ರದುರ್ಗ ಸೇರಿದಂತೆ ರಾಜ್ಯಾದ್ಯಂತ ಮುಂಗಾರುಪೂರ್ವ ಮಳೆಯಾಗಲಿದೆ ಎಂದು ಹವಾಮಾನ ತಜ್ಞರು ನುಡಿದಿದ್ದಾರೆ.
ಶುಕ್ರವಾರ ಉತ್ತರ ಕನ್ನಡ ಜಿಲ್ಲೆಯ ಹಳಿಯಾಳದಲ್ಲಿ 2 ಸೆಂ.ಮೀ, ಕಲಬುರಗಿಯ ಚಿತ್ತಾಪುರದಲ್ಲಿ ಮತ್ತು ಚಿಕ್ಕಮಗಳೂರು ಜಿಲ್ಲೆಯ ಜಯಾಪುರದಲ್ಲಿ ತಲಾ 1 ಸೆಂ.ಮೀ. ಮಳೆಯಾಗಿದೆ ಎಂದು ಬೆಂಗಳೂರು ಹವಾಮಾನ ಇಲಾಖೆ ವರದಿ ಮಾಡಿದೆ. ಉಳಿದಂತೆ ರಾಜ್ಯಾದ್ಯಂತ ಒಣಹವೆ ಮುಂದುವರಿಸಿದೆ. [ಆಲಿಕಲ್ಲು ಮಳೆಯಲ್ಲಿ ಮಿಂದು ತಂಪಾದ ಬೆಂಗಳೂರು]
ಹವಾಮಾನ ತಜ್ಞರ ಮಾತುಗಳು ನಿಜವಾಗಲಿ ಎಂದು ರಾಜ್ಯದ ಜನರು ಆಸೆಯಿಂದ ನೋಡುತ್ತಿದ್ದಾರೆ. ರಾಜ್ಯ ನೀರಾವರಿ ಸಚಿವರಾಗಿರುವ ಎಂಬಿ ಪಾಟೀಲ್ ಅವರು ಕೂಡ, ಕರ್ನಾಟಕಕ್ಕೆ ವರುಣನ ಕೃಪೆಯಾಗಬೇಕು. ಸತತ ಮೂರು ವರ್ಷಗಳಿಂದ ರಾಜ್ಯ ಬರಗಾರ ಎದುರಿಸುತ್ತಿದೆ. ಈ ವರ್ಷವಾದರೂ ಉತ್ತಮ ಮಳೆಯಾಗಲಿ ಎಂದು ಆಶಿಸಿದ್ದಾರೆ.
ಮುಂಗಾರು ಮಾತ್ರವಲ್ಲ, ಮುಂಗಾರುಪೂರ್ವದಲ್ಲೂ ರಾಜ್ಯದಲ್ಲಿ ಉತ್ತಮ ಮಳೆಯಾಗಬೇಕಾಗಿದೆ. ಜಾನುವಾರುಗಳು ಕುಡಿಯಲು ನೀರಿಲ್ಲದೆ, ಮೇವಿಲ್ಲದೆ ಸಾಯುವ ಸ್ಥಿತಿಗೆ ತಲುಪಿವೆ. ಅಣೆಕಟ್ಟೆಗಳು ನೀರಿಲ್ಲದೆ ಭಣಗುಟ್ಟುತ್ತಿವೆ, ಕೆಲವು ಡೆಡ್ ಸ್ಟೋರೇಜ್ ತಲುಪಿವೆ. ಅಂತರ್ಜಲ ಪಾತಾಳಕ್ಕಿಳಿದಿದೆ. ಕಪ್ಪೆಗಳನ್ನು ಹಿಡಿದು ಮದುವೆ ಮಾಡುವುದೊಂದು ಬಾಕಿಯಿದೆ.












Click it and Unblock the Notifications