ಕೆರೆ ಅಭಿವೃದ್ಧಿ ಪ್ರಾಧಿಕಾರವನ್ನೇ ಆಹುತಿ ಪಡೆಯುತ್ತಾ ರಾಜ್ಯ ಸರ್ಕಾರ?
ಬೆಂಗಳೂರು, ಜು.30: ಕೆರೆ ಅಭಿವೃದ್ಧಿ ಪ್ರಾಧಿಕಾರವನ್ನು ಜು.31ರಿಂದ ಶಾಶ್ವತವಾಗಿ ಮುಚ್ಚಲಾಗುತ್ತಿದೆ. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅಧಿಕಾರ ಅವಧಿಯ ಅಂತಿಮ ಹಂತದಲ್ಲಿ ಈ ನಿರ್ಣಯ ತೆಗೆದುಕೊಳ್ಳಲಾಗಿತ್ತು.
ಕೆರೆ ಅಭಿವೃದ್ಧಿ ಪ್ರಾಧಿಕಾರವು ಕಳೆದ 17 ವರ್ಷಗಳಿಂದ ನಗರ ಕೆರೆಗಳ ರಕ್ಷಣೆ ಹಾಗೂ ನಿರ್ವಹಣೆ ಮಾಡುತ್ತಾ ಬಂದಿದೆ, ಇದೀಗ ಜು.31ರಂದು ಶಾಶ್ವತವಾಗಿ ಬೀಗ ಮುದ್ರೆ ಬೀಳಲಿದೆ.ಈ ಮೂಲಕ ಬೆಂಗಳೂರಿನ ಕೆರೆಗಳ ಅಭಿವೃದ್ಧಿಗಾಗಿ ಇದ್ದ ಪ್ರಾಧಿಕಾರವನ್ನು ಮುಚ್ಚುವ ಮೂಲಕ ರಿಯಲ್ ಎಸ್ಟೇಟ್ ಉದ್ಯಮಕ್ಕೆ ಅನುಕೂಲ ಮಾಡಿಕೊಡಲು ಸರ್ಕಾರ ಹೊರಟಿದೆ ಎಂಬ ಆರೋಪ ಕೇಳಿ ಬರುತ್ತಿದೆ.
ಬೆಂಗಳೂರು ಕೆರೆಗಳನ್ನು ಅರಣ್ಯ ಇಲಾಖೆ ವ್ಯಾಪ್ತಿಗೆ ಪಡೆಯಲು ಚಿಂತನೆ
ಬೆಂಗಳೂರಿನ ಕೆರೆಗಳನ್ನು ಅಭಿವೃದ್ಧಿ ಪಡಿಸಬೇಕು ಎಂದು ರಾಷ್ಟ್ರೀಯ ಹಸಿರು ನ್ಯಾಯಾಧಿಕರಣ ಈಗಾಗಲೇ ಆದೇಶಿಸಿದೆ. ಆದರೆ ನ್ಯಾಯಾಧಿಕರಣದ ಆದೇಶವನ್ನು ಪಾಲನೆ ಮಾಡಬೇಕಾದ ಪ್ರಾಧಿಕಾರವೇ ಈಗ ಮುಚ್ಚುತ್ತಿರುವುದರಿಂದ ಮುಂದಿನ ದಿನಗಳಲ್ಲಿ ನಗರದ ಕೆರೆಗಳ ಸಂರಕ್ಷಣೆ ಮಾಡುವವರು ಯಾರು ಎಂದು ಜನರು ಪ್ರಶ್ನಿಸುತ್ತಿದ್ದಾರೆ.
ಕೆರೆ ಅಭಿವೃದ್ಧಿ ಪ್ರಾಧಿಕಾರದಲ್ಲಿ ಪ್ರಸ್ತುತ 10 ಸಾವಿರಕ್ಕೂ ಹೆಚ್ಚು ಫೈಲುಗಳಿವೆ. ಈಗ ಪ್ರಾಧಿಕಾರಕ್ಕೆ ಬೀಗಮುದ್ರೆ ಬೀಳುತ್ತಿರುವ ಹಿನ್ನೆಲೆಯಲ್ಲಿ ಅಷ್ಟೂ ಫೈಲುಗಳು ಸಣ್ಣ ನೀರಾವರಿ ಇಲಾಖೆಯ ಕರ್ನಾಟಕ ಸರೋವರ ಸಂರಕ್ಷಣೆ ಮತ್ತು ಅಭಿವೃದ್ಧಿ ಪ್ರಾಧಿಕಾರಕ್ಕೆ ಹಸ್ತಾಂತರವಾಗಲಿದೆ. ಈ ಮೂಲಕ ಎಲ್ಲಾ ಕೆರೆಗಳ ಒತ್ತುವರಿ ಮತ್ತು ಅದರ ಅಭಿವೃದ್ಧಿ ಸಂಬಂಧಿತ ದಾಖಲೆಗಳನ್ನು ವ್ಯವಸ್ಥಿತವಾಗಿ ಮುಚ್ಚಿಹಾಕುವ ಹುನ್ನಾರ ನಡೆದಿದೆ ಎನ್ನಲಾಗುತ್ತಿದೆ.
ಬೆಂಗಳೂರಿನಲ್ಲಿರುವ ಬಹುಪಾಲು ಕೆರೆಗಳು ಕಲುಷಿತವಾಗಿವೆ, ಈ ಕೆರೆಗಳಿಗೆ ಸಂಬಂಧಿಸಿದಂತೆ ಸಮಸ್ಯೆಗಳಿದ್ದಲ್ಲಿ ಕೆರೆ ಅಭಿವೃದ್ಧಿ ಪ್ರಾಧಿಕಾರದ ಮೊರೆ ಹೋಗಬಹುದಿತ್ತು, ಆದರೆ ಕೆರೆಯನ್ನು ನಿರ್ವಹಣೆ ಮಾಡುವಂತಹ ಪ್ರಾಧಿಕಾರವನ್ನೇ ಮುಚ್ಚಿದರೆ ಇನ್ನುಮುಂದೆ ಯಾರನ್ನು ಕೇಳಬೇಕು ಎಂದು ಸಾರ್ವಜನಿಕರು ಪ್ರಶ್ನೆ ಮಾಡುತ್ತಿದ್ದಾರೆ.