ಈ ಬಾರಿಯೂ ನಡೆಯೋದಿಲ್ವಾ ಬೆಂಗಳೂರು ಕರಗ? ಬಿಬಿಎಂಪಿ ಹೇಳುವುದೇನು?
ಬೆಂಗಳೂರು, ಏಪ್ರಿಲ್ 8: ಎರಡು ವಾರಗಳಿಂದ ಬೆಂಗಳೂರು ನಗರದಲ್ಲಿ ಕೊರೊನಾ ಪ್ರಕರಣಗಳು ಭಾರೀ ಏರಿಕೆ ಕಂಡಿವೆ. ಹೀಗಾಗಿ ಕೊರೊನಾ ನಿಯಂತ್ರಣ ಸಂಬಂಧ ಬೆಂಗಳೂರು ನಗರದಲ್ಲಿ ಏಪ್ರಿಲ್ 20ರವರೆಗೆ ನಿಷೇಧಾಜ್ಞೆ ಹೊರಡಿಸಿ ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಬುಧವಾರ ಆದೇಶ ಹೊರಡಿಸಿದ್ದಾರೆ. ಈ ಎಲ್ಲಾ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಈ ಬಾರಿ ಬೆಂಗಳೂರು ಕರಗ ನಡೆಯುವುದು ಅನುಮಾನವೇ ಆಗಿದೆ.
ರಾಜ್ಯದಲ್ಲಿ ವರ್ಷದ ನಂತರ ಫೆಬ್ರವರಿಯಲ್ಲಿ ಕೊರೊನಾ ಪ್ರಕರಣಗಳಲ್ಲಿ ಭಾರೀ ಇಳಿಕೆ ಕಂಡುಬಂದಿತ್ತು. ಬೆಂಗಳೂರು ಕರಗವನ್ನು ಏಪ್ರಿಲ್ 19ರಿಂದ 27ರವರೆಗೆ ನಡೆಸಲು ಸಿದ್ಧತೆ ಮಾಡಿಕೊಳ್ಳಲಾಗಿತ್ತು. ಆದರೆ ಧರ್ಮರಾಯಸ್ವಾಮಿ ದೇವಸ್ಥಾನ ವಾರ್ಡ್ನಲ್ಲಿ ಕೊರೊನಾ ಪ್ರಕರಣಗಳು ಹೆಚ್ಚಾಗಿ ದಾಖಲಾಗುತ್ತಿದ್ದು, ಕರಗ ನಡೆಯುವುದು ಅನುಮಾನ ಎನ್ನಲಾಗಿದೆ. ಕಳೆದ ವರ್ಷವೂ ಕರಗ ಆಚರಣೆಗೆ ಬ್ರೇಕ್ ಬಿದ್ದಿತ್ತು. ಮುಂದೆ ಓದಿ...
ಕೊರೊನಾ ಕ್ಲಸ್ಟರ್ ಎಂದು ಗುರುತಿಸಿರುವ ಬಿಬಿಎಂಪಿ
ಧರ್ಮರಾಯಸ್ವಾಮಿ ದೇವಸ್ಥಾನ ವಾರ್ಡ್ಪ್ರದೇಶವನ್ನು ಕೊರೊನಾ ಕ್ಲಸ್ಟರ್ ಎಂದು ಗುರುತಿಸಲಾಗಿದೆ. ಈ ಪ್ರದೇಶದಿಂದ 39 ಕೊರೊನಾ ಪ್ರಕರಣಗಳು ದಾಖಲಾಗಿವೆ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತಾ ತಿಳಿಸಿದ್ದಾರೆ. ಈ ಮುನ್ನ ಇಲ್ಲಿನ ಕಟ್ಟಡದಲ್ಲಿ ಒಬ್ಬರಿಗೆ ಕೊರೊನಾ ಸೋಂಕು ತಗುಲಿತ್ತು. ಅವರಿಂದ ಸುಮಾರು 39 ಮಂದಿಗೆ ಸೋಂಕು ತಗುಲಿದ ವರದಿಯಾಗಿತ್ತು.
ಐತಿಹಾಸಿಕ ಬೆಂಗಳೂರು ಕರಗಕ್ಕೆ ತಡೆ ನೀಡಿದ ಹೈಕೋರ್ಟ್
ಇಲ್ಲಿನ 600 ಮಂದಿಗೆ ಕೊರೊನಾ ಪರೀಕ್ಷೆ
ಹೆಚ್ಚೆಚ್ಚು ಪ್ರಕರಣಗಳು ದಾಖಲಾಗಿದ್ದರಿಂದ ಈ ಪ್ರದೇಶದ ಸುತ್ತ ಎಂಟು ಕೊರೊನಾ ಪರೀಕ್ಷಾ ಕೇಂದ್ರಗಳನ್ನು ತೆರೆಯಲಾಗಿದೆ. ಮಂಗಳವಾರ ಇಲ್ಲಿನ 600 ಮಂದಿಗೆ ಪರೀಕ್ಷೆ ನಡೆಸಲಾಗಿದೆ. ಇಬ್ಬರನ್ನು ಸಿವಿ ರಾಮನ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಅವರ ಮೇಲೆ ನಿಗಾ ಇಡಲಾಗಿದ್ದು, ಕೆಲವರನ್ನು ಮನೆಯಲ್ಲೇ ಐಸೊಲೇಷನ್ನಲ್ಲಿಡಲಾಗಿದೆ" ಎಂದು ಗೌರವ್ ಗುಪ್ತಾ ಅವರು ಮಾಹಿತಿ ನೀಡಿದ್ದಾರೆ.
ಎರಡು ದಿನಗಳ ಹಿಂದೆ ಕರಗ ಸಂಬಂಧ ಸಭೆ
ಎರಡು ದಿನಗಳ ಹಿಂದೆ ಬಿಬಿಎಂಪಿ ಕರಗ ಉತ್ಸವದ ಸಂಬಂಧ ಸಭೆ ನಡೆಸಿತ್ತು. ಸೋಂಕು ಹೆಚ್ಚಾಗಿರುವ ಪ್ರದೇಶವು ಕರಗ ನಡೆಯುವ ಸ್ಥಳಕ್ಕೆ ಹತ್ತಿರದಲ್ಲಿದೆ. ಆದರೆ ಈಗಲೇ ಯಾವುದೇ ನಿರ್ಧಾರ ತೆಗೆದುಕೊಳ್ಳುವುದು ಕಷ್ಟ ಎಂದು ಆಯುಕ್ತರು ಹೇಳಿದ್ದಾರೆ. ಕಳೆದ ವರ್ಷವೂ ಕೊರೊನಾ ಕಾರಣವಾಗಿ ಬೆಂಗಳೂರಿನಲ್ಲಿ ಕರಗ ಉತ್ಸವಕ್ಕೆ ಬ್ರೇಕ್ ಹಾಕಲಾಗಿತ್ತು.
Recommended Video
ಕರಗ ಉತ್ಸವಕ್ಕೆ ಸಮಿತಿ ರಚನೆ
ಈಗ ಪತ್ತೆಯಾಗಿರುವ 39 ಮಂದಿಯ ಪ್ರಾಥಮಿಕ ಹಾಗೂ ದ್ವಿತೀಯ ಸಂಪರ್ಕಿತರನ್ನು ಪತ್ತೆ ಹಚ್ಚುವುದು ಸದ್ಯ ನಮ್ಮ ಪ್ರಮುಖ ಆದ್ಯತೆಯಾಗಿದೆ. ಜೊತೆಗೆ ನಗರದ ಅತಿ ಮುಖ್ಯ ಹಾಗೂ ಪುರಾತನ ಉತ್ಸವ ಎನಿಸಿಕೊಂಡಿರುವ ಕರಗವನ್ನು ಕಡಿಮೆ ಜನರೊಂದಿಗೆ ನಡೆಸಲು ಆಲೋಚಿಸುತ್ತಿದೆ. ಕರಗ ಉತ್ಸವಕ್ಕೆ ಸಮಿತಿ ರಚಿಸಲು ಬೆಂಗಳೂರು ಜಿಲ್ಲಾಡಳಿತಕ್ಕೆ ಸೂಚಿಸಿ ಮುಂದಿನ ಕ್ರಮದ ಬಗ್ಗೆ ತೀರ್ಮಾನಿಸಲಾಗುವುದು ಎಂದು ತಿಳಿಸಿದ್ದಾರೆ.