ಶೋಭಾ ಕರಂದ್ಲಾಜೆ ನೋಡಿದ್ರೆ ಸಿಟಿ ರವಿ ಸಿಟ್ಟಾಗ್ತಾರೆ ಏಕೆ?
ಬೆಂಗಳೂರು, ಜೂನ್ 29: ಕಾಂಗ್ರೆಸ್ ಮುಕ್ತ ಕರ್ನಾಟಕ ಎಂಬ ಘೋಷಣೆಯೊಂದಿಗೆ ರಣರಂಗಕ್ಕಿಳಿದಿರುವ ಬಿಎಸ್ ಯಡಿಯೂರಪ್ಪ ನೇತೃತ್ವದ ಭಾರತೀಯ ಜನತಾ ಪಕ್ಷ ಮತ್ತೊಮ್ಮೆ ಬಿಕ್ಕಟ್ಟಿನಲ್ಲಿ ಸಿಲುಕಿಕೊಂಡು ಒದ್ದಾಡುತ್ತಿದೆ. ಮೂಲ ಬಿಜೆಪಿ vs ವಲಸೆ ಬಿಜೆಪಿ ಕಿತ್ತಾಟದ ಜೊತೆಗೆ ಪಕ್ಷದ ಹಿರಿಯ ನಾಯಕರ ನಡುವಿನ ಆಂತರಿಕ ಪ್ರತಿಷ್ಠೆ ಕದನ ಪಕ್ಷಕ್ಕೆ ಮುಳುವಾಗುವ ಎಲ್ಲಾ ಮುನ್ಸೂಚನೆಯನ್ನು ನೀಡುತ್ತಿದೆ.
'ವೈಯಕ್ತಿಕ ಆಕಾಂಕ್ಷೆಗಳಿಗಾಗಿ ನಾನು ಪಕ್ಷದ ಹಿತ ಬಲಿ ಕೊಡುವುದಿಲ್ಲ' ಎಂದು ಮಾಜಿ ಉನ್ನತ ಶಿಕ್ಷಣ ಸಿಟಿ ರವಿ ಅವರು ಘೋಷಿಸಿದ್ದಾರೆ. ಪಕ್ಷದಿಂದ ನಿಷ್ಠರಿಗೆ ಮಾತ್ರ ಸ್ಥಾನ ಸಿಕ್ಕಿದೆ. ಬಿಎಸ್ ಯಡಿಯೂರಪ್ಪ ಅವರು ತೆಗೆದುಕೊಂಡ ನಿರ್ಧಾರ ಪ್ರಶ್ನಾತೀತ ಎಂದು ಶೋಭಾ ಕರಂದ್ಲಾಜೆ ಅವರು ಗುಡುಗಿದ್ದಾರೆ.

ಪ್ರತಿಷ್ಠೆ ಕದನ: ಚಿಕ್ಕಮಗಳೂರು ಜಿಲ್ಲೆ ಮೇಲೆ ತಮ್ಮ ಹಿಡಿತ ಸಾಧಿಸಲು ಇಬ್ಬರು ಮುಖಂಡರು ಮಾಡಿದ ಜಟಾಪಟಿಯಲ್ಲಿ ಜಿಲ್ಲೆ ಬಡವಾಗಿ ಯಾವುದೋ ಕಾಲವಾಗಿದೆ. 'ದೀಪದ ಕೆಳಗೆ ಕತ್ತಲು' ಎಂಬಂತೆ ಜಿಲ್ಲೆಯಲ್ಲಿ ಐದಾರು ನದಿಗಳು ಹುಟ್ಟಿದರೂ ನಗರ ಪ್ರದೇಶದಲ್ಲಿ ಕುಡಿಯುವ ನೀರಿನ ಸಮಸ್ಯೆ ಇನ್ನು ಬಗೆಹರಿದಿಲ್ಲ.
ಬಿಎಸ್ ಯಡಿಯೂರಪ್ಪ ಅವರು ಸ್ವಜನಪಕ್ಷಪಾತ ಧೋರಣೆ ಮುಂದುವರೆಸಿ, ತಮ್ಮ ಬಂಟ ಡಿಎನ್ ಜೀವರಾಜ ಅವರನ್ನು ಚಿಕ್ಕಮಗಳೂರು ಜಿಲ್ಲಾ ಅಧ್ಯಕ್ಷರನ್ನಾಗಿಸಿದ್ದು ಸಿಟಿ ರವಿಗೆ ಉರಿಯಾಗಿಲಿಕ್ಕೆ ಸಾಕು. ಉಡುಪಿ-ಚಿಕ್ಕಮಗಳೂರು ಸಂಸದೆ ಶೋಭಾ ಕರಂದ್ಲಾಜೆ ಅವರ ಬೆಂಬಲಿಗರ ಸಂಖ್ಯೆ ಕೂಡಾ ಏರಿಕೆಯಾಗುತ್ತಿದೆ.

ಜಿಲ್ಲೆಯಲ್ಲಿ ಏನೇ ನಡೆದರೂ ರವಿ ಅವರಿಗೆ ಗೊತ್ತಿರದ ಸಂಗತಿ ಇಲ್ಲ ಎಂಬ ಮಾತು ಈಗ ಬದಲಾಗಿದೆ. ಪಕ್ಷದ ಪದಾಧಿಕಾರಿಗಳ ನೇಮಕಾತಿ ಮಾತ್ರ ಈಗ ಚರ್ಚೆ ವಿಷಯವಾಗಿಲ್ಲ. ಬಿಎಸ್ ವೈ ಹಾಗೂ ಈಶ್ವರಪ್ಪ, ಸಂಘಟಕರು ಹಾಗೂ ಬೆಂಬಲಿಗರು, ಮೂಲ ಬಿಜೆಪಿ ಹಾಗೂ ಆರೆಸ್ಸೆಸ್ ಬೆಂಬಲಿತರು ಮತ್ತು ಕೆಜೆಪಿ ಅಥವಾ ಬಿಎಸ್ ವೈ ನೆಚ್ಚಿನ ಬಂಟರ ನಡುವೆ ಮುಸುಕಿನ ಗುದ್ದಾಟ ನಡೆದಿದೆ.

ಎಲ್ಲವನ್ನು, ಎಲ್ಲರನ್ನು ಸಂಭಾಳಿಸಿಕೊಂಡು ಹೋಗುವ ಛಾತಿ ಬಿಎಸ್ ಯಡಿಯೂರಪ್ಪ ಅವರಿಗಿದೆ ಎಂಬ ನಂಬಿಕೆ ಸಿಟಿ ರವಿ, ಕೆಎಸ್ ಈಶ್ವರಪ್ಪ ಹಾಗೂ ಅರವಿಂದ ಲಿಂಬಾವಳಿ ಮುಂತಾದವರಿಗೂ ಗೊತ್ತಿದೆ. ಆದರೆ, ಬಿಎಸ್ ವೈ ಅಕ್ಕ ಪಕ್ಕದ ಮುಖಂಡರ ಕಾರ್ಯವೈಖರಿ ಈಗ ಬಿಜೆಪಿಗೆ ಸಮಸ್ಯೆ ತಂದೊಡ್ಡಿದೆ.












Click it and Unblock the Notifications