ಬಿಎಂಟಿಸಿ ಸಿಗದೆ ಹೆಸರಘಟ್ಟ ವಿದ್ಯಾರ್ಥಿಗಳಿಗೆ ನಡಿಗೆಯೇ ಗತಿ
ಬೆಂಗಳೂರು, ಮಾರ್ಚ್ 16: ನಗರದ ಜನಸಂಖ್ಯೆ ಸಾವಿರ ಪಟ್ಟು ಹೆಚ್ಚಾಗಿದೆ ಆದರೂ ಸಹ ಆರುವರೆ ಸಾವಿರದಷ್ಟು ಬಸ್ಗಳನ್ನು ಬಿಎಂಟಿಸಿ ಹೊಂದಿದೆ. ಆಧುನಿಕ ಯುಗದಲ್ಲೂ ಮಕ್ಕಳು ಶಾಲೆಗೆ ಹೋಗಲು ನಡೆಯಬೇಕು ಎನ್ನುವುದನ್ನು ಕೇಳಿದರೆ ವ್ಯವಸ್ಥೆ ಎಷ್ಟು ಜಡವಾಗಿದೆ ಎನ್ನುವುದು ವಿಷಾದನೀಯ. ಬಿಎಂಟಿಸಿ ಹಾಗೂ ಕೆಎಸ್ಆರ್ಟಿಸಿ ಅಧಿಕಾರಿಗಳ ಉದಾಸೀನ ಧೋರಣೆಯಿಂದ, ನಿರ್ಲಕ್ಷ್ಯದಿಂದ ಬಡ ಮಕ್ಕಳು ವಿದ್ಯೆಯಿಂದ ವಂಚಿತರಾಗಬೇಕಾಗಿ ಬಂದಿರುವುದು ನಿಜಕ್ಕೂ ದುರದೃಷ್ಟಕರ ಸಂಗತಿ ಎಂದು ಆಮ್ ಆದ್ಮಿ ಪಕ್ಷ ಖಂಡಿಸಿದೆ.
ಸಕಾಲದಲ್ಲಿ ಬಸ್ ಸೌಲಭ್ಯ ಇಲ್ಲದ ಕಾರಣಕ್ಕೆ ಬೆಂಗಳೂರು ನಗರದ ಅಂಚಿಗೆ ಇರುವ ಹೆಸರಘಟ್ಟ ಗ್ರಾಮದಿಂದ ವಿದ್ಯಾರ್ಥಿಗಳು ಪ್ರೌಢಶಾಲೆಗೆ ಹೋಗಿಬರಲು ನಿತ್ಯ 4 ಕಿ.ಮೀ ನಡೆಯಬೇಕಾದ ಅನಿವಾರ್ಯತೆಯನ್ನು ವ್ಯವಸ್ಥೆ ಸೃಷ್ಟಿಸಿರುವುದು ಖಂಡನೀಯ.
ಬಿಎಂಟಿಸಿಯ ಮಾಸಿಕ ಪಾಸ್ ವಿವರ, ಪಡೆಯುವುದು ಹೇಗೆ?
ಬೆಂಗಳೂರು ನಗರ ಬೆಳೆಯುತ್ತಲೇ ಇದೆ. ಕೆಲವು ವರ್ಷಗಳ ಹಿಂದೆ ಸುಮಾರು 110 ಹಳ್ಳಿಗಳು ಬಿಬಿಎಂಪಿ ವ್ಯಾಪ್ತಿಗೆ ಸೇರಿಸಲಾಗಿದೆ ಆದರೆ ಅಲ್ಲಿನ ಮೂಲ ಸೌಕರ್ಯಗಳ ಅಭಿವೃದ್ಧಿಯತ್ತ ಗಮನ ಹರಿಸಿದೆಯೆ ಎಂದು ನೋಡಿದರೆ ಸಾಧನೆ ಶೂನ್ಯ.
21 ವರ್ಷಗಳ ಹಿಂದೆ ಬಿಟಿಎಸ್ ಹೆಸರಿನ ಮೂಲಕ ಬಸ್ ಸೇವೆ ನೀಡಲಾಗುತ್ತಿತ್ತು, ಆಗ ಸುಮಾರು 2 ಸಾವಿರದಷ್ಟು ಬಸ್ಗಳು ಇದ್ದವು. ಇಂದು ನಗರದ ಜನಸಂಖ್ಯೆ ಸಾವಿರ ಪಟ್ಟು ಹೆಚ್ಚಾಗಿದೆ ಆದರೂ ಸಹ ಆರುವರೆ ಸಾವಿರದಷ್ಟು ಬಸ್ಗಳನ್ನು ಬಿಎಂಟಿಸಿ ಹೊಂದಿದೆ. ಇದು ಬೆಂಗಳೂರಿನ ಜನ ಸಾಗರಕ್ಕೆ ಏನೇನೂ ಅಲ್ಲದ ಸೌಲಭ್ಯ ಇದಾಗಿದೆ. ಅಧ್ಯಯನದ ಪ್ರಕಾರ ನಗರದ ಇಂದಿನ ಜನಸಂಖ್ಯೆಗೆ ಅನುಗುಣವಾಗಿ ಸುಮಾರು 10 ಸಾವಿರ ಬಸ್ಗಳ ಅವಶ್ಯಕತೆ ಇದೆ. ಆದರೆ ಈ ಅವ್ಯವಸ್ಥೆಯನ್ನು ಸರಿ ಪಡಿಸಬೇಕಾದ ಅಧಿಕಾರಿಗಳು, ಜನಪ್ರತಿನಿಧಿಗಳು ''ಬಿಎಂಟಿಸಿ'' ಎನ್ನುವ ಬಿಳಿಯಾನೆಯಿಂದ ತಮ್ಮ ಜೇಬುಗಳನ್ನು ತುಂಬಿಸಿಕೊಳ್ಳುತ್ತಿದ್ದಾರೆ.
70- 80 ರ ದಶಕದಲ್ಲಿ ಹಳ್ಳಿಯ ಮಕ್ಕಳು ಶಾಲೆಗೆ ನಡೆದುಕೊಂಡು ಹೋಗುತ್ತಿದ್ದರು ಎನ್ನುವ ಕಥೆ ಕೇಳಲು ಖುಷಿಯಾಗುತ್ತದೆ. ಈ ಹಳೆಯ ಪರಂಪರೆಯನ್ನು ಬಿಡಬಾರದು, ಬಡವರ, ಕೂಲಿಕಾರರ ಮಕ್ಕಳು ಇನ್ನೂ ಕಷ್ಟದಲ್ಲೆ ವಿದ್ಯೆ ಪಡೆಯಬೇಕು ಎನ್ನುವುದು ಅಧಿಕಾರಶಾಯಿಯ, ಸರ್ಕಾರದ ನೂತನ ಯೋಜನೆ ಎಂದು ಇದನ್ನು ಕರೆಯಬಹುದೇ!!...
ಕೊರೊನಾ ಭಯ; ರಾಜ್ಯದ ಎಲ್ಲ ಶಾಲೆ, ಕಾಲೇಜುಗಳಿಗೆ ರಜೆ
ಐವರಕಂಡಪುರದ ಪ್ರೌಢಶಾಲೆಗೆ ಸುತ್ತಮುತ್ತಲ ಹಳ್ಳಿಗಳಿಂದ ಹೋಗುವ ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ಸೂಕ್ತ ಬಸ್ ವ್ಯವಸ್ಥೆಯನ್ನು ಕೂಡಲೇ ಮಾಡಬೇಕು ಹಾಗೂ ಮುಂದಿನ ಶೈಕ್ಷಣಿಕ ವರ್ಷದಿಂದ ವಿದ್ಯಾರ್ಥಿಗಳ ಸಂಖ್ಯೆಗೆ ಅನುಗುಣವಾಗಿ ಹೆಸರಘಟ್ಟದಲ್ಲಿ ಮತ್ತೊಂದು ಪ್ರೌಢಶಾಲೆಯನ್ನು ತೆರೆಯಬೇಕು ಎಂದು ಆಮ್ ಆದ್ಮಿ ಪಕ್ಷ ಈ ಮೂಲಕ ಆಗ್ರಹಿಸುತ್ತದೆ.