ಅನಂತ ಕುಮಾರ್ ಹೆಸರನ್ನು ರೈಲ್ವೆ ಸಚಿವರು ಎರಡು ಸಲ ಹೇಳಿದ್ದೇಕೆ?
ಬೆಂಗಳೂರು, ಜನವರಿ 19: ರಾಮನಗರ-ಕುಪ್ಪಂ ಮೆಮು ರೈಲು ಸಂಚಾರದ ಸುದ್ದಿ ನಿಮಗೆ ಗೊತ್ತೇ ಆಗಿರುತ್ತದೆ. ಆದರೆ ಆ ದಿನ ಸಂಚಾರ ಆರಂಭಕ್ಕೆ ಚಾಲನೆ ಕೊಟ್ಟ ಕಾರ್ಯಕ್ರಮದಲ್ಲಿ ರೈಲ್ವೆ ಸಚಿವ ಸುರೇಶ್ ಪ್ರಭು ಅವರು ತಮ್ಮ ಸಂಪುಟದ ಸಹೋದ್ಯೋಗಿ ಅನಂತ ಕುಮಾರ್ ಬಗ್ಗೆ ಒಂದಕ್ಕೂ ಹೆಚ್ಚು ಸಲ ಪ್ರಸ್ತಾವ ಮಾಡಿದ್ದರ ಹಿಂದಿನ ಕಾರಣ ಏನು ಗೊತ್ತೆ?
ಬೆಂಗಳೂರಿನ ಜನಸಂಖ್ಯೆ ಹೆಚ್ಚುತ್ತಿರುವುದು ಹಾಗೂ ಅದಕ್ಕೆ ಅಗತ್ಯ ಇರುವ ರೈಲ್ವೆ ಸೌಕರ್ಯದ ಬಗ್ಗೆ 1996ರಲ್ಲೇ ಮನವಿ ಮಾಡಿದ್ದರು ಅನಂತ ಕುಮಾರ್. ಆ ನಂತರ ಕೂಡ ಯಾವಾಗೆಲ್ಲ ಸಂದರ್ಭ ಬರುತ್ತದೋ ಆಗೆಲ್ಲ ಬೆಂಗಳೂರಿನ ಅಗತ್ಯಗಳ ಬಗ್ಗೆ ಸ್ಪಷ್ಟ ನುಡಿಗಳಲ್ಲಿ ಒತ್ತಾಯ ಮುಂದಿಡುತ್ತಿದ್ದರು.[ಬೆಂಗಳೂರಿನಲ್ಲಿ ಸಬ್ ಅರ್ಬನ್ ರೈಲು ಸಂಚಾರಕ್ಕೆ ಗ್ರೀನ್ ಸಿಗ್ನಲ್]
ಸಂಸತ್ ನಲ್ಲಿ ಮೊದಲ ಬಾರಿಗೆ ಮಾತನಾಡಲು ಅವಕಾಶ ಸಿಕ್ಕಾಗ ಅನಂತ ಕುಮಾರ್, ನಾನೊಬ್ಬ ರೈಲ್ವೆ ಉದ್ಯೋಗಿ ಮಗ. ಬಜೆಟ್ ಗಳಲ್ಲಿ ಹಣ ಮೀಸಲಾಗುತ್ತದೆಯೇ ಹೊರತು ಅದು ಅನುಷ್ಠಾನ ಆಗುತ್ತಿಲ್ಲ. ಈ ಬಗ್ಗೆ ಜನರಿಗೆ ಆಕ್ರೋಶ ಇದೆ ಎಂದು ಹೇಳಿದ್ದರು. ಕರ್ನಾಟಕವು ಈ ದೇಶಕ್ಕೆ ಪ್ರಧಾನಿಯನ್ನು ಕೊಟ್ಟಿದೆ. ಆದರೆ ಕರ್ನಾಟಕಕ್ಕಾಗಿ ರೈಲ್ವೆ ಸಚಿವರು ಏನೂ ಕೊಟ್ಟಿಲ್ಲ ಎಂದು ಹೇಳಿದ್ದರು.
ಬೆಂಗಳೂರಿನ ಜನಸಂಖ್ಯೆ 51 ಲಕ್ಷ ಇದೆ (1996ರಲ್ಲಿ) ಮೆಟ್ರೋಪಾಲಿಟನ್ ಸ್ಥಾನಮಾನ ದೊರೆಯುತ್ತಿದೆ. ಬೆಂಗಳೂರಿಗೆ ರೈಲ್ ಅಥವಾ ಮೆಟ್ರೋ ರೈಲಿಗಾಗಿ ಸರ್ವೇ ಮಾಡಿಸಬೇಕು. ಮುಂಬೈ, ಕಲ್ಕತ್ತಾದಲ್ಲಿರುವಂತೆಯೇ ಬೆಂಗಳೂರಿನಲ್ಲೂ ಸಂಚಾರ ವ್ಯವಸ್ಥೆ ಆಗಬೇಕು ಎಂದು ಮನವಿ ಮಾಡಿದ್ದರು.
ರೈಲು ಯೋಜನೆಗಳಿಗಾಗಿ ಮೀಸಲಿಟ್ಟಿರುವ ಹಣದ ಕೊರತೆ ಬಗ್ಗೆ ಗಮನ ಸೆಳೆದಿದ್ದರು. ಈ ಎಲ್ಲ ಅಂಶಗಳು ಸುರೇಶ್ ಪ್ರಭು ಅವರಿಗೆ ಗೊತ್ತಿದ್ದರಿಂದಲೇ ಅನಂತ ಕುಮಾರ್ ಅವರ ಹೆಸರನ್ನು ಎರಡು ಸಲ ಪ್ರಸ್ತಾವಿಸಿದರು.