IAS ಅಧಿಕಾರಿ ವಿಜಯ್ ಶಂಕರ್ ಆತ್ಮಹತ್ಯೆ, IMA ಪ್ರಕರಣದ ನಡುವೆ ನಂಟೇಕೆ?
ಬೆಂಗಳೂರು, ಜೂನ್.24: ಐಎಎಸ್ ಅಧಿಕಾರಿ ಬಿ.ಎಂ. ವಿಜಯ್ ಶಂಕರ್ ಆತ್ಮಹತ್ಯೆಯನ್ನು ಅಸಹಜ ಸಾವು ಎಂದು ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಸ್ಪಷ್ಟನೆ ನೀಡಿದ್ದಾರೆ.
Recommended Video
ಐಎಂಎ ಬಹುಕೋಟಿ ವಂಚನೆ ಪ್ರಕರಣ ಮತ್ತು ಐಎಎಸ್ ಅಧಿಕಾರಿ ವಿಜಯ್ ಶಂಕರ್ ಆತ್ಮಹತ್ಯೆಗೆ ನಂಟು ಕಲ್ಪಿಸುವ ಅಗತ್ಯವಿಲ್ಲ ಎಂಬ ಧಾಟಿಯಲ್ಲಿ ಸಚಿವರು ಹೇಳಿಕೆ ನೀಡಿದ್ದಾರೆ. ಐಎಂಐ ವಂಚನೆ ಪ್ರಕರಣವು ಹಳೆಯದ್ದಾಗಿದೆ. ಸದ್ಯದ ಮಟ್ಟಿಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಬಿ. ಎಂ. ವಿಜಯ ಶಂಕರ್ ಕೊರಳಿಗೆ ಐಎಂಎ ಸುತ್ತಿಕೊಂಡಿದ್ದು ಹೇಗೆ?
ಬೆಂಗಳೂರಿನ ತಿಲಕ್ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು, ಸಾವಿನ ಸುತ್ತಲೂ ತನಿಖೆ ನಡೆಸಲಾಗುತ್ತಿದೆ. ಪೊಲೀಸರ ತನಿಖೆಯ ವರದಿ ನಂತರವಷ್ಟೇ ಐಎಎಸ್ ಅಧಿಕಾರಿ ವಿಜಯ್ ಶಂಕರ್ ಆತ್ಮಹತ್ಯೆ ಹಿಂದಿನ ಅಸಲಿ ಕಾರಣ ತಿಳಿದು ಬರಬೇಕಿದೆ ಎಂದು ಸಚಿವ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.
ಮನೆಯಲ್ಲೇ ವಿಜಯ್ ಶಂಕರ್ ನೇಣಿಗೆ ಶರಣು
ಜೂನ್.23ರ ಮಂಗಳವಾರ ತಮ್ಮ ನಿವಾಸದಲ್ಲೇ ನೇಣು ಬಿಗಿದುಕೊಂಡು ಹಿರಿಯ ಐಎಎಸ್ ಅಧಿಕಾರಿ ಬಿ.ಎಂ. ವಿಜಯ್ ಶಂಕರ್ ಆತ್ಮಹತ್ಯೆ ಮಾಡಿಕೊಂಡಿದ್ದರು. ಈ ವಿಷಯ ತಿಳಿಯುತ್ತಿದ್ದಂತೆ ಡಿಸಿಪಿ ಶ್ರೀನಾಥ್ ಸ್ಥಳಕ್ಕೆ ಭೇಟಿ ಪರಿಶೀಲನೆ ನಡೆಸಿದ್ದರು. 3 ಗಂಟೆಗಳ ಕಾಲ ಮಾಹಿತಿಯನ್ನು ಸಂಗ್ರಹಿಸಿದ್ದರು.
ಕೊವಿಡ್-19 ಪರೀಕ್ಷೆ ಬಳಿಕ ಮರಣೋತ್ತರ ಪರೀಕ್ಷೆ
ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ಐಎಎಸ್ ಅಧಿಕಾರಿ ವಿಜಯ್ ಶಂಕರ್ ಅವರ ಮೃತದೇಹವನ್ನು ರವಾನಿಸಲಾಗಿದ್ದು, ಮೊದಲು ಕೊರೊನಾವೈರಸ್ ಸೋಂಕು ತಪಾಸಣೆ ನಡೆಸಲಾಗುತ್ತದೆ. ತದನಂತರ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಒಳಪಡಿಸಲಾಗುತ್ತದೆ ಎಂದು ತಿಳಿದು ಬಂದಿದೆ.
ಗೊಂದಲ ಹುಟ್ಟುಹಾಕಿದ ಹಿರಿಯ ಅಧಿಕಾರಿಗಳ ನಡೆ
ಹಿರಿಯ ಐಎಎಸ್ ಅಧಿಕಾರಿ ವಿಜಯ್ ಶಂಕರ್ ಆತ್ಮಹತ್ಯೆ ಪ್ರಕರಣ ನಡೆದಿದೆ. ಹೀಗಿದ್ದರೂ ಡಿಸಿಪಿ ಶ್ರೀನಾಥ್ ಒಬ್ಬರನ್ನು ಹೊರತುಪಡಿಸಿ ಯಾರೊಬ್ಬ ಹಿರಿಯ ಅಧಿಕಾರಿಗಳು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿರಲಿಲ್ಲ. ಬೆಂಗಳೂರು ನಗರ ಪೊಲೀಸ್ ಆಯುಕ್ತರಾದ ಭಾಸ್ಕರ್ ರಾವ್, ಹೆಚ್ಚುವರಿ ಪೊಲೀಸ್ ಆಯುಕ್ತ ಮುರುಘನ್ ಅವರು ಸ್ಥಳಕ್ಕೆ ಭೇಟಿ ನೀಡಿರಲಿಲ್ಲ. ಇನ್ನು, ಸ್ಥಳ ಪರಿಶೀವನೆ ನಡೆಸಿದ ಡಿಸಿಪಿ ಶ್ರೀನಾಥ್ ಅವರು ಕೂಡಾ ಮಾಧ್ಯಮಗಳಿಗೆ ಪ್ರಕರಣದ ಕುರಿತು ಯಾವುದೇ ಮಾಹಿತಿ ನೀಡಿರಲಿಲ್ಲ. ಹಿರಿಯ ಪೊಲೀಸ್ ಅಧಿಕಾರಿಗಳ ಈ ನಡೆಯು ತೀವ್ರ ಗೊಂದಲ ಸೃಷ್ಟಿಸಿದೆ.
ಐಎಂಎ ವಂಚನೆ ಸುಳಿಯಲ್ಲಿ ವಿಜಯ್ ಶಂಕರ್
ಬಹುಕೋಟಿ ವಂಚನೆ ನಡೆಸಿದ ಐಎಂಎ ಸಂಸ್ಥೆಯ ಪರವಾಗಿ ವರದಿ ನೀಡಲು ಬಿ. ಎಂ. ವಿಜಯ್ ಶಂಕರ್ 1.5 ಕೋಟಿ ಲಂಚ ಪಡೆದಿದ್ದರು ಎಂಬ ಆರೋಪ ಎದುರಾಗಿತ್ತು. ಈ ಹಿನ್ನೆಲೆ ಹಗರಣದ ತನಿಖೆ ನಡೆಸುತ್ತಿದ್ದ ಎಸ್ಐಟಿ ತಂಡವು ವಿಜಯ್ ಶಂಕರ್ ರನ್ನು ಬಂಧಿಸಿತ್ತು. ಅವರಿಗೆ ಸೇರಿದ್ದ 2.5 ಕೋಟಿ ನಗದು ಹಣವನ್ನು ವಶಕ್ಕೆ ಪಡೆದಿದ್ದರು. ಕಿಕ್ ಬ್ಯಾಕ್ ಪಡೆದ ಹಣವನ್ನು ವಿಜಯ್ ಶಂಕರ್ ಬೆಂಗಳೂರು ನಗರದ ಬಿಲ್ಡರ್ ಒಬ್ಬರಿಗೆ ಫ್ಲಾಟ್ ಮತ್ತು ನಿವೇಶನ ಖರೀದಿಸಲು ನೀಡಿದ್ದರು ಎಂಬ ಆರೋಪವಿತ್ತು. ಈ ಪ್ರಕರಣದಲ್ಲಿ ಸೇವೆಯಿಂದ ಅಮಾನತುಗೊಂಡಿದ್ದ ವಿಜಯ್ ಶಂಕರ್ ಪರಪ್ಪನ ಅಗ್ರಹಾರದಲ್ಲಿ ಹಲವು ದಿನ ನ್ಯಾಯಾಂಗ ಬಂಧನದಲ್ಲಿದ್ದರು.