ಜೆಡಿಎಸ್ ಅಭ್ಯರ್ಥಿಗಳ ಪಟ್ಟಿ ಬಿಡುಗಡೆಯನ್ನು ದೇವೇಗೌಡರು ತಡೆದಿದ್ದೇಕೆ?
ಬೆಂಗಳೂರು, ಜುಲೈ 7: ಕರ್ನಾಟಕ ವಿಧಾನಸಭೆ ಚುನಾವಣೆಗೆ ಈಗಾಗಲೇ ಜೆಡಿಎಸ್ ನಿಂದ ಅಭ್ಯರ್ಥಿಗಳ ಪಟ್ಟಿ ಸಿದ್ಧವಾಗಿದೆ. ಆದರೆ ಅದನ್ನು ಬಿಡುಗಡೆ ಮಾಡೋದು ಬೇಡ ಅಂತ ನಾನೇ ಹೇಳಿದ್ದೇನೆ ಎಂದು ಪಕ್ಷದ ರಾಷ್ಟ್ರಾಧ್ಯಕ್ಷ ಹಾಗೂ ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ ಹೇಳಿದ್ದಾರೆ.
ಅಭ್ಯರ್ಥಿಗಳ ಹೆಸರನ್ನು ಈಗಲೇ ಬಹಿರಂಗ ಮಾಡಿದರೆ ಇತರ ಪಕ್ಷದವರು ತಮ್ಮ ಕಡೆಗೆ ಸೆಳೆಯಬಹುದು. ಆದ್ದರಿಂದ ನಮ್ಮ ಪಕ್ಷದ ಸ್ಪರ್ಧಾಳುಗಳಿಗೆ ಸಿದ್ಧತೆ ಮಾಡಿಕೊಳ್ಳಲು ತಿಳಿಸಿದ್ದೇವೆ. ಪಟ್ಟಿ ಬಿಡುಗಡೆಯನ್ನು ತಡೆ ಹಿಡಿದಿದ್ದೇವೆ ಎಂದು ಆವರು ತಿಳಿಸಿದ್ದಾರೆ.

ಈ ಹಿಂದೆ ರಾಜ್ಯದಲ್ಲಿ ನಡೆದಿದ್ದ ಆಪರೇಷನ್ ಕಮಲದ ಬಗ್ಗೆ ಪ್ರಸ್ತಾವ ಮಾಡಿರುವ ಅವರು, ಗೆದ್ದವರನ್ನೇ ಸೆಳೆದವರು ಈಗ ಬಿಡ್ತಾರಾ? ಅದಕ್ಕಂತಲೆ ನಮ್ಮ ಪಕ್ಷದ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಈಗಲೇ ಮಾಡುವುದು ಬೇಡ ಎಂದು ಕುಮಾರಸ್ವಾಮಿಗೆ ತಿಳಿಸಿರುವುದಾಗಿ ಹೇಳಿದ್ದಾರೆ.
ಆದರೆ, ಈ ನಿರ್ಧಾರದ ಹಿಂದೆ ಇನ್ನೂ ಕೆಲ ಕಾರಣಗಳಿವೆ ಎಂಬುದು ಸದ್ಯಕ್ಕೆ ಹರಿದಾಡುತ್ತಿರುವ ಸುದ್ದಿ. ಬಿಜೆಪಿ ಹಾಗೂ ಕಾಂಗ್ರೆಸ್ ನ ಕೆಲ ನಾಯಕರಿಗೆ ಜೆಡಿಎಸ್ ಸೇರ್ಪಡೆ ಆಗುವ ಒಲವಿದೆ. ಆ ಬಗ್ಗೆ ಅಂತಿಮ ತೀರ್ಮಾನವೊಂದು ಆಗುವವರೆಗೆ ಪಟ್ಟಿ ಬಿಡುಗಡೆ ಬೇಡ ಎಂದು ವರಿಷ್ಠರ ಮಟ್ಟದಲ್ಲೇ ನಿರ್ಧಾರ ಕೈಗೊಳ್ಳಲಾಗಿದೆಯಂತೆ.
ಇನ್ನು ಈಚೆಗೆ ಜೆಡಿಎಸ್ ಗೆ ಸೇರ್ಪಡೆ ಆಗಿರುವ ಎಚ್ ವಿಶ್ವನಾಥ್ ಅವರು ಕಾಂಗ್ರೆಸ್ ನ ಕೆಲವು ನಾಯಕರಿಗೆ ಬಲೆ ಬೀಸಿದ್ದು, ಹಾಗೊಂದು ವೇಳೆ ನಾಯಕರು ಬಂದಾಗ ಗೊಂದಲ ಏರ್ಪಡಬಾರದು ಎಂಬ ಲೆಕ್ಕಾಚಾರ ಕೂಡ ಇದೆ.
ಇದರ ಜತೆಗೆ ಪಟ್ಟಿ ಬಿಡುಗಡೆ ನಂತರ ಬುಗಿಲೇಳಬಹುದಾದ ಆಸಮಾಧಾನದಿಂದ ಎದುರಾಳಿ ಪಕ್ಷಗಳು ಲಾಭ ಮಾಡಿಕೊಳ್ಳಬಹುದು ಎಂಬ ಮುಂಜಾಗ್ರತಾ ಕ್ರಮ ಕೂಡ ದೇವೇಗೌಡರ ನಿರ್ಧಾರದ ಹಿಂದೆ ಇರುವಂತಿದೆ.












Click it and Unblock the Notifications