ಸಿಟಿಸ್ಕೇಪ್ಸ್ :ಬೆಂಗಳೂರಿಗರ ನಿದ್ದೆ ಕೆಡಿಸಿರುವ ವಾಣಿಜ್ಯ ಚಟುವಟಿಕೆ
ಬೆಂಗಳೂರು, ಅಕ್ಟೋಬರ್ 7: "ರಾಜಕಾರಣಿಗಳಾದರೂ ಐದು ವರ್ಷಕ್ಕೊಮ್ಮೆ ಮತ ಕೇಳಿಕೊಂಡು ಜನರ ಮುಂದೆ ಬರುತ್ತಾರೆ. ಆದರೆ ಅಧಿಕಾರಿಗಳು ಮೂವತ್ತು- ಮೂವತ್ತೈದು ವರ್ಷಗಳ ಕಾಲ ತಮಗೆ ಬೇಕಾದಂತೆ ಅಧಿಕಾರ ನಡೆಸುತ್ತಾರೆ" ಎಂದರು ವಿಜಯ್ ಮೆನನ್.
ಸ್ವರಾಜ್ಯ ನಿಯತಕಾಲಿಕೆ, ನಮ್ಮ ಬೆಂಗಳೂರು ಫೌಂಡೇಷನ್ ನಿಂದ ಐಐಎಂ-ಬಿ ಹಾಗೂ ಪಬ್ಲಿಕ್ ಪಾಲಿಸಿ ಕ್ಲಬ್ ಸಂಯುಕ್ತಾಶ್ರಯದಲ್ಲಿ ಶನಿವಾರ ಆಯೋಜಿಸಿದ್ದ 'ಸಿಟಿಸ್ಕೇಪ್ಸ್ 2017 ಬೆಂಗಳೂರು' ಕಾರ್ಯಕ್ರಮದಲ್ಲಿ ನಡೆದ ಸಂವಾದದ ವೇಳೆ ಬೆಂಗಳೂರು ನಗರದ ವರ್ಗೀಕರಣದ (ಝೋನಿಂಗ್) ಬಗ್ಗೆ ಮಾತನಾಡಿದರು.

ವಾಣಿಜ್ಯ ಚಟುವಟಿಕೆಗಳನ್ನು ಜನ ವಸತಿ ಪ್ರದೇಶದಲ್ಲಿ ನಡೆಸುವಂತಿಲ್ಲ. ಅಲ್ಲಿನ ಒಳಚರಂಡಿ ವ್ಯವಸ್ಥೆ, ನೀರು ಹಾಗೂ ವಿದ್ಯುತ್ ಪೂರೈಕೆ, ರಸ್ತೆಗಳನ್ನು ವಸತಿ ಉದ್ದೇಶವನ್ನಷ್ಟೇ ಗಮನದಲ್ಲಿಟ್ಟು ಮಾಡಲಾಗಿರುತ್ತದೆ. ಅಂಥ ಕಡೆ ಕೈಗಾರಿಕೆ, ವಾಣಿಜ್ಯ ಚಟುವಟಿಕೆ ಮಾಡುವುದು ಅಕ್ರಮ ಆಗುತ್ತದೆ. ಆದರೆ ಈ ಬಗ್ಗೆ ಗಮನ ಹರಿಸುವವರೇ ಇಲ್ಲ ಎಂದರು.
ಇನ್ನೇನು 2030ರ ಮಾಸ್ಟರ್ ಪ್ಲಾನ್ ಜಾರಿಗೆ ಬರುತ್ತದೆ. ಆದರೆ 2015ರ ಮಾಸ್ಟರ್ ಪ್ಲಾನ್ ಪೂರ್ತಿಯಾಗಿ ಜಾರಿಯಾಗಿಲ್ಲ. ಹೊಸದಾಗಿ ಈ ರೀತಿ ಮಾಸ್ಟರ್ ಪ್ಲಾನ್ ಜಾರಿಗೆ ಬರುವ ವೇಳೆಯಲ್ಲಿ ಅದಕ್ಕೂ ಮುಂಚಿನ ಯೋಜನೆಯು ಏನಾಯಿತು, ಆ ಪೈಕಿ ನಿಜಕ್ಕೂ ಅನುಷ್ಠಾನ ಆಗಬೇಕಾದ ಆಲೋಚನೆಗಳ ಜಾರಿಯನ್ನು ಪೂರ್ಣಗೊಳಿಸಲು ಇನ್ನಷ್ಟು ಸಮಯ ಮೀಸಲಿಡಬೇಕು ಎಂಬ ಅಭಿಪ್ರಾಯ ವ್ಯಕ್ತವಾಯಿತು.
ಸರಕಾರಗಳು ಮಾಸ್ಟರ್ ಪ್ಲಾನ್ ಸಿದ್ಧ ಮಾಡಿದ್ದು ಸಾಕು. ಜನರೇ ವಿಷನ್ ಡಾಕ್ಯುಮೆಂಟ್ ಸಿದ್ಧಪಡಿಸಬೇಕು. ಅವುಗಳ ಜಾರಿಗೆ ಗಂಭೀರ ಯತ್ನಗಳು ಆಗಬೇಕು ಎಂದು ಹೇಳಲಾಯಿತು.

ಈ ವೇಳೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಇಸ್ರೋದ ಮಾಜಿ ವಿಜ್ಞಾನಿ ಪ್ರಭಾಕರ ಕುಲಕರ್ಣಿ ಮಾತನಾಡಿ, ನಮ್ಮ ಇಸ್ರೋ ಲೇಔಟ್ ನಲ್ಲಿ ನಿಯಮವನ್ನೇ ಮಾಡಿದ್ದೀವಿ. ಆ ಬಡಾವಣೆಯಲ್ಲಿ ಯಾವುದೇ ಕಾರಣಕ್ಕೂ ವಾಣಿಜ್ಯ ಚಟುವಟಿಕೆಗೆ ಆವಕಾಶ ನೀಡಲ್ಲ. ಮೊದಲಿಗೆ ನಮ್ಮ ಮನೆ, ರಸ್ತೆ, ಬಡಾವಣೆಯನ್ನು ಸರಿ ಮಾಡಿದರೆ ದೇಶದ ಬದಲಾವಣೆಗೆ ಮುನ್ನುಡಿ ಆಗುತ್ತದೆ ಎಂದರು.
ಇನ್ನು ಮುಂದೆ ನಿರ್ಮಾಣ ಆಗುವ ಬಡಾವಣೆಗಳಲ್ಲಿ ಕಡ್ಡಾಯವಾಗಿ ನಲವತ್ತು ಹಾಗೂ ಅರವತ್ತು ಅಡಿ ರಸ್ತೆ ನಿರ್ಮಾಣ ಆಗಬೇಕು ಎಂಬ ನಿಯಮ ಮಾಡಬೇಕು ಎಂದು ಅವರು ಅಭಿಪ್ರಾಯ ಪಟ್ಟರು.
ಇಂದಿರಾ ನಗರದಿಂದ ಬಂದಿದ್ದ ನಿವಾಸಿಯೊಬ್ಬರು, ನಮಗೆ ನಿದ್ದೆಯೇ ಇಲ್ಲದಂತಾಗಿದೆ. ಈ ಕಾರ್ಯಕ್ರಮಕ್ಕೆ ಬೆಂಗಳೂರು ನಗರ ಆಯುಕ್ತರು ಬರುತ್ತಾರೆ. ನಮ್ಮ ಸಮಸ್ಯೆಗಳನ್ನು ಕೇಳುತ್ತಾರೆ ಎಂಬ ನಿರೀಕ್ಷೆಯಲ್ಲಿ ಎಲ್ಲ ಕೆಲಸವನ್ನು ಪಕ್ಕಕ್ಕಿಟ್ಟು ಬಂದೆವು. ಆದರೆ ಅವರೇ ಇಲ್ಲಿಗೆ ಬಂದಿಲ್ಲ ಏಕೆ ಎಂದು ಪ್ರಶ್ನಿಸಿದರು. ರಾತ್ರಿ ನೆಮ್ಮದಿಯಾಗಿ ನಿದ್ದೆ ಮಾಡುವುದು ನಮ್ಮ ಮೂಲಭೂತ ಹಕ್ಕು ಅಂದುಕೊಂಡಿದ್ದೀವಿ. ಅದೇ ಇಲ್ಲದಂತಾಗಿದೆ ಎಂದು ಅಲವತ್ತುಕೊಂಡರು.
ಅವರಿಗೆ ಉತ್ತರಿಸಿದ ಸಂಸದ ರಾಜೀವ್ ಚಂದ್ರಶೇಖರ್, ನಿಮ್ಮ ಸಮಸ್ಯೆಗಳ ಪರವಾಗಿ ಧ್ವನಿ ಎತ್ತುವುದಕ್ಕೆ ನಾನು ಸಿದ್ಧನಿದ್ದೇನೆ. ಅದಕ್ಕೆ ನೀವು ಜತೆಯಾಗಬೇಕು. ಬೋನಿನಿಂದ ಹೊರಗೆ ಬಂದಿರುವ ಪ್ರಾಣಿಯನ್ನು ವಾಪಸ್ ಅಲ್ಲಿಗೆ ಸೇರಿಸುವುದು ಒಬ್ಬನಿಂದ ಆಗಲ್ಲ. ಅದು ಎಲ್ಲರ ಕೆಲಸ. ಇರುವ ನಿಯಮಗಳನ್ನು ಕಡ್ಡಾಯವಾಗಿ ಜಾರಿಗೆ ತರುವಂತೆ ಒತ್ತಡ ಹಾಕೋಣ ಎಂದರು.
ಈ ಸಂವಾದದಲ್ಲಿ ಎನ್.ಎಸ್.ಮುಕುಂದ, ಸ್ನೇಹಾ ನಂದಿಹಾಳ್, ನಿರೂಪಕರಾಗಿ ನಿತಿನ್ ಶೇಷಾದ್ರಿ ಭಾಗವಹಿಸಿದ್ದರು.












Click it and Unblock the Notifications