ತ್ರಿಮೂರ್ತಿಗಳು ಕನ್ನಡದಲ್ಲೇಕೆ ಪ್ರಮಾಣ ಸ್ವೀಕರಿಸಲಿಲ್ಲ?
ಬೆಂಗಳೂರು, ಮೇ 27: ರಾಜ್ಯದಿಂದ ಬಿಜೆಪಿಯ ಮೂವರು ಹಿರಿಯ ಸಂಸದರು ಪ್ರಧಾನಿ ನರೇಂದ್ರ ಮೋದಿ ಅವರ ನೂತನ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ.
ಬೆಂಗಳೂರು ದಕ್ಷಿಣ ಕ್ಷೇತ್ರದ ಅನಂತಕುಮಾರ್ (ರಾಸಾಯನಿಕ ಮತ್ತು ರಸಗೊಬ್ಬರ), ಬೆಂಗಳೂರು ಉತ್ತರ ಕ್ಷೇತ್ರದ ಸಂಸದ ಮಾಜಿ ಮುಖ್ಯಮಂತ್ರಿ ಡಿವಿ ಸದಾನಂದ ಗೌಡ ಅವರು (ರೈಲ್ವೆ ಖಾತೆ) ಕ್ಯಾಬಿನೆಟ್ ಸಚಿವರಾಗಿದ್ದರೆ ದಾವಣಗೆರೆಯ ಹಿರಿಯ ಸಂಸದ ಜಿಎಂ ಸಿದ್ದೇಶ್ವರ್ ಅವರು (ನಾಗರಿಕ ವಿಮಾನಯಾನ ಖಾತೆ) ರಾಜ್ಯ ಸಚಿವರಾಗಿ ಮೋದಿ ಮಂತ್ರಿಮಂಡಲದಲ್ಲಿ ಕೆಲಸ ಮಾಡುವ ಸದವಕಾಶ ಪಡೆದಿದ್ದಾರೆ. (ಮೋದಿ ಸಚಿವರಯಾದಿಗೆ ಇಲ್ಲಿ ಕ್ಲಿಕ್ಕಿಸಿ)

ಆದರೆ ಈ ಅಪರೂಪದ ಕ್ಷಣದಲ್ಲಿ ಈ ತ್ರಿಮೂರ್ತಿಗಳು ಕನ್ನಡದಲ್ಲೇಕೆ ಪ್ರಮಾಣ ಸ್ವೀಕರಿಸಲಿಲ್ಲ? ಎಂಬ ಪ್ರಶ್ನೆ ಈಗ ಚರ್ಚೆಗೆ ಗ್ರಾಸ ಒದಗಿಸಿದೆ. ಹಾಗೆ ನೋಡಿದರೆ ಕನ್ನಡದ ಕಟ್ಟಾಳು ಅನಂತಕುಮಾರ್ ಅವರು ವಿಶ್ವಸಂಸ್ಥೆಯಲ್ಲಿ ಕನ್ನಡದಲ್ಲೇ ಮಿಂಚಿದವರು. ಸದಾನಂದ ಗೌಡರು ಸಹ ಕನ್ನಡದ ಕಟ್ಟಾಳುವೇ. ಸಿದ್ದೇಶ್ವರ್ ಅವರೂ ಅಚ್ಚಕನ್ನಡ ನಾಡಿನವರು. ಹೀಗಿದ್ದೂ ಮೂವರೂ ಏಕೆ ಕನ್ನಡದಲ್ಲಿ ಪ್ರಮಾಣ ವಚನ ಸ್ವೀಕರಿಸಲಿಲ್ಲ ಎಂಬುದು ಕುತೂಹಲಕ್ಕೆ ಕಾರಣವಾಗಿದೆ.
ಆದರೆ ಇದಕ್ಕೆ ಸದಾನಂದ ಗೌಡರು ಉತ್ತರರೂಪವಾಗಿ ಕನ್ನಡಿಗರನ್ನು ಸಮಾಧಾನಪಡಿಸಿದ್ದಾರೆ. ನಿನ್ನೆ ಪಬ್ಲಿಕ್ ಟಿವಿ ಜತೆ ಮಾತನಾಡುತ್ತಾ ಹಾಗೇಕಾಯಿತು ಎಂದು ಪ್ರತಿಕ್ರಿಯಿಸಿದ್ದಾರೆ. ವಾಸ್ತವವಾಗಿ ಈ ಮೂವರೂ ಕನ್ನಡದಲ್ಲಿ ಪ್ರಮಾಣ ವಚನ ಸ್ವೀಕರಿಸಲು ಹಾತೊರೆಯುತ್ತಿದ್ದರು. ಹಾಗೆಂದು ಸದಾನಂದರೂ ರಾಜಾಜಿನಗರದ ಶಾಸಕ ಸುರೇಶ್ ಕುಮಾರ್ ಅವರಿಗೆ ಫೋನ್ ಮಾಡಿ ಕನ್ನಡದಲ್ಲೇ ಪ್ರಮಾಣ ಸ್ವೀಕರಿಸವುದಾಗಿಯೂ ಹೇಳಿದ್ದರಂತೆ.
ಆದರೆ ಅಲ್ಲಿ ಕನ್ನಡದ ಪ್ರತಿಗಳೇ ಇರಲಿಲ್ಲ. ಹೌದು ಪ್ರಮಾಣ ವಚನ ಸ್ವೀಕರಿಸಲು ಅಲ್ಲಿ ಅವಕಾಶ ಇದ್ದಿದ್ದು ಇಂಗ್ಲೀಷ್ ಮತ್ತು ಹಿಂದಿ ಮಾತ್ರ. ರಾಷ್ಟ್ರಪತಿ ಭವನದ ಕಚೇರಿಯಲ್ಲಿ ಇವೆರಡನ್ನು ಬಿಟ್ಟು ಬೇರೆ ಭಾಷಗಳಲ್ಲಿ ಪ್ರಮಾಣ ವಚನ ಸ್ವೀಕಾರ ಪ್ರತಿಗಳು ಇರಲಿಲ್ಲ. ಇದನ್ನು ಖಾತ್ರಿಪಡಿಸಿಕೊಂಡೇ ಮೂವರೂ ಅನಿವಾರ್ಯವಾಗಿ ಹಿಂದಿ, ಇಂಗ್ಲೀಷಿನಲ್ಲಿ ಪ್ರಮಾಣ ಸ್ವೀಕರಿಸಿದ್ದಾರೆ.
ಆದಿದ್ದಾಯ್ತು! ಮುಂದಾದರೂ ಸಂಸತ್ತಿನಲ್ಲಿ ಸದಸ್ಯರಾಗಿ ಪ್ರಮಾಣವಚನ ಸ್ವೀಕರಿಸುವ ಕನ್ನಡದ ಕಲಿಗಳು ಅಚ್ಚ ಕನ್ನಡದಲ್ಲೇ ಪ್ರಮಾಣ ಸ್ವೀಕರಿಸಿ, ಕನ್ನಡದ ಪತಾಕೆಯನ್ನು ಹಾರಿಸಲಿ ಎಂದು ಆಶಿಸೋಣ.












Click it and Unblock the Notifications