ಜೈಲಿನಲ್ಲಿರುವ ರೌಡಿ ಶೀಟರ್ 'ಕರ್ಣನ್' ಸಿನಿಮಾ ಹಾಡು ನೂರು ಸಲ ಕೇಳ್ತಾನಂತೆ!
ಬೆಂಗಳೂರು, ಆ.17: ಆತ ಬೆಂಗಳೂರಿನ ಪಾತಕ ಲೋಕದ ಡಾನ್ ಆಗಲು ಹೊರಟಿರುವ ರೌಡಿ ಶೀಟರ್. ಇವತ್ತಿನ ಬೆಂಗಳೂರು ಪಾತಕ ಲೋಕದಲ್ಲಿ ಕೇಳಿ ಬರುತ್ತಿರುವ ಅಗ್ರಗಣ್ಯ ಹೆಸರು ಕೂಡ. ಸದ್ಯ ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ರೌಡಿ ಶೀಟರ್ ತಮಿಳು ಸಿನಿಮಾ ಕರ್ಣನ್ನ ಜನ ಪದ ಹಾಡನ್ನು ಪ್ರತಿ ದಿನ ಆರು ತಾಸು ಕೇಳುತ್ತಾನಂತೆ. ಒಂದು ಸಾಂಗ್ ಎರಡು ಮೂರು ಸಲ ಕೇಳಿದ ಕೂಡಲೇ ಬೋರ್ ಆಗುತ್ತೆ. ಆದರೆ ಆತ ಪ್ರತಿ ದಿನ ಅರು ತಾಸು ಕೇಳುತ್ತಾ ಕಾಲ ಕಳೆಯುತ್ತಾನಂತೆ. ಅಂದ ಹಾಗೆ ಆ ರೌಡಿ ಶೀಟರ್ ಯಾರು? ಯಾಕೆ ಹೀಗೆ ಮಾಡುತ್ತಿದ್ದಾನೆ ಎಂಬುದರ ವಿವರ ಇಲ್ಲಿದೆ ನೋಡಿ.
ಕರ್ಣನ್ ಸಿನಿಮಾ ನಿರ್ದೇಶಕ
ಧನುಷ್ ಅಭಿನಯದ ಕರ್ಣನ್ ತಮಿಳು ಸೂಪರ್ ಹಿಟ್ ಸಿನಿಮಾ. ಸಾಮಾಜಿಕ ಸಮಸ್ಯೆಗಳನ್ನು ಎತ್ತಿ ತೋರಿಸುವ ಮೂಲಕ ರಾಷ್ಟ್ರ ಪ್ರಶಸ್ತಿ ಪಡೆಯುವ ತಮಿಳು ನಿರ್ದೇಶಕ ಮಾರಿ ಸೆಲ್ವರಾಜ್, ಎರಡು ಸಿನಿಮಾ ನಿರ್ದೇಶನ ಮಾಡಿ ಹತ್ತು ಪ್ರಶಸ್ತಿ ಬಾಚಿಕೊಂಡಿರುವ ಸ್ಟಾರ್ ನಿರ್ದೇಶಕ. ಇವರ ಮೊದಲ ಸಿನಿಮಾ ಪರಿಯೇರುಂ ಪೆರುಮಾಳ್ ಸಿನಿಮಾ ಹಿಟ್ ಆದ ಬಳಿಕ ಧನುಷ್ ನಟನೆಯ "ಕರ್ಣನ್ " ಸಿನಿಮಾ ನಿರ್ದೇಶನ ಮಾಡಿ ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದ ಪ್ರಶಸ್ತಿ ಬಾಚಿಕೊಂಡಿದ್ದಾರೆ. 1997 ರ ಸಮಯದಲ್ಲಿ ಚಿಕ್ಕ ಹಳ್ಳಿಯಲ್ಲಿ ಶೋಷಿತ ಸಮುದಾಯದ ಜನ ಹಾಗೂ ಉಳ್ಳವರ ನಡುವಿನ ದಬ್ಬಾಳಿಕೆ, ಬಸ್ ನಿಲ್ದಾಣಕ್ಕಾಗಿ ಶೋಷಿತ ಸಮುದಾಯ ಪರದಾಡುವ ಸಣ್ಣ ಸಾಮಾಜಿಕ ಸಮಸ್ಯೆಯನ್ನೇ ಸಿನಿಮಾ ಹೆಣೆದು ಯಶ ಕಂಡಿರುವ ನಿರ್ದೆಶಕ.
ಹಳ್ಳಿಯ ಬಸ್ ನಿಲ್ದಾಣದ ಮೇಲೆ ಎಣೆದ ಕಥೆ
ಸಿನಿಮಾ ವಿಚಾರಕ್ಕೆ ಬಂದರೆ ತಮಿಳಿನ ಸೂಪರ್ ಹಿಟ್ ಸಿನಿಮಾ ಸಾಲಿಗೆ ಸೇರ್ಪಡೆಯಾಗಿದೆ ಕರ್ಣನ್. ಬಸ್ ನಿಲ್ದಾಣ ವಿಲ್ಲದೇ ತನ್ನ ಸಹೋದರಿ ಸಾಯುವ ದೃಶ್ಯದಿಂದ ಸಿನಿಮಾ ಅರಂಭವಾಗುತ್ತದೆ. ಕರ್ಣನ್ ಶೋಷಿತ ಸಮುದಾಯದ ಧ್ವನಿಯಾಗಿರುತ್ತಾನೆ. ಬಸ್ ನಿಲ್ದಾಣಕ್ಕಾಗಿ ನಡೆಯುವ ಹೋರಾಟದಿಂದ ಉಂಟಾಗುವ ಸಮಸ್ಯೆಗಳನ್ನೇ ಮುಂದಿಟ್ಟುಕೊಂಡು ಒಂದು ಹಳ್ಳಿಯಲ್ಲಿರುವ ಶೋಷಿತ ವರ್ಗ ಹಾಗೂ ದಬ್ಬಾಳಿಕೆ ಮಾಡುವ ಸಮುದಾಯದ ನಡುವಿನ ಬದುಕಿನ ಚಿತ್ರಣವನ್ನು ಕಟ್ಟಿಕೊಡಲಾಗಿದೆ. ಸೈನಿಕನಾಗುವ ಅಸೆ ಹೊತ್ತ ಕರ್ಣನ್ಗೆ ಅವಕಾಶ ಸಿಕ್ಕರೂ ತನ್ನ ಜನರ ರಕ್ಷಣೆಗಾಗಿ ಅದನ್ನು ಬಿಟ್ಟು ವಾಪಸು ಬಂದು ತನ್ನ ಸಮುದಾಯದ ರಕ್ಷಣೆ ನಿಲ್ಲುತ್ತಾನೆ ಎಂಬುದು ಸಿನಿಮಾ ತಿರುಳು. ಇನ್ನು ಈ ಸಿನಿಮಾದ ಸೂಪರ್ ಹಿಟ್ ಹಾಡು " ಸೂಪರ್ ಹಿಟ್ ಹಾಡು ಅಂದ್ರೆ "ಕಂದಾ ವರ ಸೊಲ್ಲೊಂಗ".
ತಮಿಳು ಹಾಡು ನೂರು ಸಲ ಕೇಳ್ತಾನೆ ಈ ರೌಡಿ
ಸೂರ್ಯ ತಂದೆಯಲ್ಲ, ಚಂದ್ರ ಸಾಕ್ಷಿಯಲ್ಲ, ಅವನನ್ನು ಕಂಡ ಕೂಡಲೇ ಹೇಳು.. ಕೈ ಹಿಡಿದು ಕರೆದುಕೊಂಡು ಬಾ ಎನ್ನುವ ಅರ್ಥ ಬರುವ ತಮಿಳಿನ ಜನಪದ ಹಾಡು ಕೇಳೋಕೆ ಎಂಥವರಿಗೂ ಮುದ ನೀಡುತ್ತದೆ. ಸಂತೋಷ್ ನಾರಾಯಣ್ ಮ್ಯೂಸಿಕ್ ನಿರ್ದೇಶಕನಾಗಿರುವ ಈ ಹಾಡನ್ನು ಕಿಡಕುಳಿ ಮಾರಿಯಮ್ಮಾಳ್ ಜನಪದ ಗಾಯಕಿ ಹಾಡಿದ್ದಾರೆ. ಐದು ಕೋಟಿ ಜನರು ಈ ಹಾಡನ್ನು ನೋಡಿದ್ದಾರೆ. ನಾಲ್ಕು ನಿಮಿಷದ ಈ ಹಾಡನ್ನು ಈ ರೌಡಿ ಶೀಟರ್ ದಿನಕ್ಕೆ ಕನಿಷ್ಠ 80 ರಿಂದ 100 ಸಲ ಕೇಳುತ್ತಾನಂತೆ. ಈ ಹಾಡಿನ ಬಗ್ಗೆ ಹುಚ್ಚು ಹಿಡಿಸಿಕೊಂಡಿರುವ ರೌಡಿ ಶೀಟರ್ ಬೇರೆ ಯಾರೂ ಅಲ್ಲ ವಿಲ್ಸನ್ ಗಾರ್ಡನ್ ನಾಗ.
Recommended Video
ನಂಬರ್ ಒನ್ ಪಟ್ಟಕ್ಕಾಗಿ ನಾಗ ದಾದಾಗಿರಿ
ಹಲವು ಕೊಲೆ ಪ್ರಕರಣ ಆರೋಪ ಎದುರಿಸುತ್ತಿರುವ ವಿಲ್ಸನ್ ಗಾರ್ಡನ್ ನಾಗ ಸಾಮಾನ್ಯವಾಗಿ ಓಡಾಡಿಕೊಂಡಿದ್ದ. ಮೊದಲು ಕವಳ ಅಲಿಯಾಸ್ ವಿಜಯ್ ಕುಮಾರ್ ಜತೆ ಗುರುತಿಸಿಕೊಂಡಿದ್ದ. ಕವಳನ ಕೊಲೆ ನಂತರ ಎದುರಾಳಿ ಗ್ಯಾಂಗ್ ನಕರಾ ಬಾಬುನ ಹತ್ಯೆ ಮಾಡಿ ದೊಡ್ಡ ಹೆಸರು ಮಾಡಿದ. ತನ್ನ ಗುರುವನ್ನು ಹತ್ಯೆ ಮಾಡಿದ್ದಕ್ಕೆ ಸೇಡು ತೀರಿಸಿಕೊಳ್ಳಲು ನಕರಾ ಬಾಬುನ ಬರ್ಬರವಾಗಿ ಹತ್ಯೆ ಮಾಡಿಸಿದ್ದ. ರೌಡಿ ಶೀಟರ್ ಸೈಲೆಂಟ್ ಸುನೀಲ ಹಾಗೂ ಒಂಟೆ ರೋಹಿತ್ ನೆರಳಿನಲ್ಲಿ ಶಾಂತಿನಗರ ಹಾಗೂ ವಿಲ್ಸನ್ ಗಾರ್ಡನ್ನಲ್ಲಿ ಹವಾ ನಿರ್ವಹಣೆ ಮಾಡುತ್ತಿದ್ದವ ಡಬರ್ ರೋಡ್ ಲಿಂಗ. ಇತ್ತೀಚೆಗೆ ಹಾಸನದ ತೋಟದ ಮನೆಯಲ್ಲಿ ನಾಗನ ಸಹಚರರೇ ಕೊಲೆ ಮಾಡಿ ಜೈಲು ಸೇರಿದ್ದಾರೆ. ಕವಳನ ಕೊಲೆ ಬಳಿಕ ಎದುರಾಳಿ ಗ್ಯಾಂಗ್ ಗಳಿಂದ ಸಮಸ್ಯೆ ಎದುರಿಸುತ್ತಿದ್ದ
ಇದಾದ ಬಳಿಕವೇ ವಿಲ್ಸನ್ ಗಾರ್ಡನ್ ನಾಗ ವಿಲ್ಸನ್ ಗಾರ್ಡನ್ನಲ್ಲಿ ಚಕ್ರಾಧಿಪತ್ಯ ಸಾಧಿಸುವ ನಿಟ್ಟಿನಲ್ಲಿ ಇದೀಗ ನಾಗ ತನ್ನ ದಾದಾಗಿರಿ ಆರಂಭಿಸಿದ್ದಾನೆ. ಮೊನ್ನೆಯಷ್ಟೇ ನಾಗನ ಮನೆ ಮೇಲೆ ಸಿಸಿಬಿ ಪೊಲೀಸರು ದಾಳಿ ನಡೆಸಿದ್ದರು.
ಕಂದಾ ವರ ಸೊಲ್ಲೊಂಗಾ ತಮಿಳು ಜನಪದ ಹಾಡನ್ನು ಜೈಲಿನಲ್ಲಿ ದಿನಕ್ಕೆ ಆರು ತಾಸು ವಿಲ್ಸನ್ ಗಾರ್ಡನ್ ನಾಗ ಕೇಳುತ್ತಿದ್ದಾನಂತೆ. ಈ ಹಾಡಿನ ಬಗ್ಗೆ ಹುಚ್ಚು ಅಭಿಮಾನ ಬೆಳೆಸಿಕೊಂಡಿದ್ದಾನೆ. ಆ ಸಿನಿಮಾ ನೋಡಿದ ಬಳಿಕ ಹಾಡನ್ನು ದಿನ ಕೇಳುತ್ತಾನೆ. ಈ ಹಾಡು ಕೇಳುವಾಗ ಯಾರೂ ಅಕ್ಕ ಪಕ್ಕ ಇರಬಾರದು. ಏಕಾಂತದಲ್ಲಿ ಕೇಳುತ್ತಿರುತ್ತಾನೆ ಎಂದು ನಾಗನ ಅಭಿಮಾನಿ ಬಳಗ ಒನ್ಇಂಡಿಯಾ ಕನ್ನಡಕ್ಕೆ ತಿಳಿಸಿದೆ. ಅಂದಹಾಗೆ ಜೈಲಿನಲ್ಲಿ ಮೊಬೈಲ್ ಅದೇಗೆ ಸಿಕ್ಕಿತೋ ಗೊತ್ತಿಲ್ಲ. ಯಾವ ಕಾರಣಕ್ಕೆ ಈ ಹಾಡು ಕೇಳ್ತಾನೋ ಗೊತ್ತಿಲ್ಲ. ಬೆಂಗಳೂರು ಪಾತಕ ಲೋಕದಲ್ಲಿ ಕರ್ಣನ್ ಆಗಲು ಹೊರಟಿದ್ದಾನಾ ಗೊತ್ತಿಲ್ಲ!