ನಮ್ಮ ರಾಷ್ಟ್ರಕೂಟರ ಇತಿಹಾಸ ನಿಮಗೆಷ್ಟು ಗೊತ್ತು?
ಬೆಂಗಳೂರು, ನವೆಂಬರ್ 10 : ನಮ್ಮ ರಾಷ್ಟ್ರಕೂಟರ ಇತಿಹಾಸ ನಿಮಗೆಷ್ಟು ಗೊತ್ತು? ಎನ್ನುವ ಸಂವಾದ ಕಾರ್ಯಕ್ರಮವನ್ನು ಮುನ್ನೋಟ ಬುಕ್ ಸ್ಟೋರ್ಸ್ ಬೆಂಗಳೂರಿನ ಬಸವನಗುಡಿಯಲ್ಲಿರುವ ತಮ್ಮ ಶಾಖೆಯಲ್ಲಿ ನವೆಂಬರ್ 12ರಂದು, ಭಾನುವಾರ ಆಯೋಜಿಸಿದೆ.
ಪ್ರತಿ ಭಾನುವಾರ ಬೆಳಿಗ್ಗೆ ವಿಭಿನ್ನ ವಸ್ತುವಿನೊಂದಿಗೆ ಕನ್ನಡಿಗರೆದಿರು ಹಾಜರಾಗುವ ಮುನ್ನೋಟ ಪುಸ್ತಕ ಮಳಿಗೆ, ಆ ವಾರ ಆಯ್ದುಕೊಂಡಿರುವುದು ಇತಿಹಾಸದ ವಿದ್ಯಾರ್ಥಿಗಳಿಗೆ, ಇತಿಹಾಸದ ಬಗ್ಗೆ ಕುತೂಹಲ ಇರುವವರಿಗೆ ಹೇಳಿ ಮಾಡಿಸಿದಂಥ ವಿಷಯ.

ಕನ್ನಡ ನಾಡಿನ ಇತಿಹಾಸದಲ್ಲಿ ರಾಷ್ಟ್ರಕೂಟ ಸಾಮ್ರಾಜ್ಯದ ಗುರುತು ಅಚ್ಚಳಿಯದ್ದು. ಮಹಾರಾಷ್ಟ್ರದಲ್ಲಿರುವ ಅಜಂತಾ, ಎಲ್ಲೋರಾದ ಅದ್ಭುತ ಶಿಲ್ಪಗಳನ್ನು ರೂಪಿಸಿದವರು ರಾಷ್ಟ್ರಕೂಟರು. ಸುಮಾರು 250 ವರ್ಷಗಳ ಕಾಲ ಇಂದಿನ ಮಾಹಾರಾಷ್ಟ್ರದ ಬಹುಭಾಗವನ್ನೂ ಸೇರಿದ ಕನ್ನಡ ನಾಡನ್ನು ಆಳಿದ ರಾಷ್ಟ್ರಕೂಟರು ನಾಡಿನ ಕಲೆ, ಸಾಹಿತ್ಯ, ವಾಸ್ತುಶಿಲ್ಪಕ್ಕೆ ನೀಡಿದ ಕೊಡುಗೆಯನ್ನು ಸ್ಮರಿಸುವ ಕಾರ್ಯಕ್ರಮವೂ ಇದಾಗಿದೆ.
ರಾಷ್ಟ್ರಕೂಟರ ಕಾಲದಲ್ಲಿ ನಮ್ಮ ಸಮಾಜ ಹೇಗಿತ್ತು? ಅವರ ಸಾಧನೆಗಳೇನು? ಆಳ್ವಿಕೆ ಹೇಗಿತ್ತು? ಸಾವಿರ ವರ್ಷಗಳ ಹಿಂದಿನ ಕನ್ನಡ ನಾಡಿನ ಇತಿಹಾಸದ ಪ್ರಮುಖ ಘಟ್ಟವೊಂದನ್ನು ಪರಿಚಯಿಸುವ ಮಾತುಕತೆ ಇದು.
ಕಾರ್ಯಕ್ರಮವನ್ನು ನಾಡಿನ ಇತಿಹಾಸ ಅಧ್ಯಯನಕಾರ, ಯುವ ಕನ್ನಡಿಗ ಆದಿತ್ಯ ಕುಲಕರ್ಣಿಯವರು ನಡೆಸಿಕೊಡಲಿದ್ದಾರೆ. ರಾಷ್ಟ್ರಕೂಟರ ಬಗ್ಗೆ ಪಠ್ಯಗಳಲ್ಲಿ ಓದಿರುವುದನ್ನು ಬಿಟ್ಟು ವಿಶೇಷ ಮಾಹಿತಿಗಳು ಜನತೆಯಲ್ಲಿರುವುದಿಲ್ಲ. ಹಾಗಾಗಿ ಈ ವಿಶಿಷ್ಟ ಸಂವಾದದ ಪ್ರಯೋಜನವನ್ನು ಬಳಸಿಕೊಳ್ಳಬಹುದಾಗಿದೆ.
ವಿಷಯ : ನಮ್ಮ ರಾಷ್ಟ್ರಕೂಟರ ಇತಿಹಾಸ ನಿಮಗೆಷ್ಟು ಗೊತ್ತು?
ನಡೆಸಿಕೊಡುವವರು : ಇತಿಹಾಸಕಾರ ಆದಿತ್ಯ ಕುಲಕರ್ಣಿ
ಎಂದು? : 12 ನವೆಂಬರ್, ಭಾನುವಾರ
ಸಮಯ : ಬೆಳಿಗ್ಗೆ 11.30












Click it and Unblock the Notifications