ಯು.ಆರ್.ರಾವ್ ನಿಧನ: ಟ್ವಿಟ್ಟರ್ ನಲ್ಲಿ ಗಣ್ಯರ ಸಂತಾಪ
ಬೆಂಗಳೂರು, ಜುಲೈ 24: ಹೃದಯ ಸಂಬಂಧಿ ಕಾಯಿಲೆಯಿಂದ ಇಂದು(ಜುಲೈ 24) ಬೆಳಗ್ಗಿನ ಜಾವ ಇಹಲೋಕ ತ್ಯಜಿಸಿದ ಇಸ್ರೋ(ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ) ಮಾಜಿ ಅಧ್ಯಕ್ಷ, ಯು.ಆರ್.ರಾವ್(85) ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಹಲವು ಗಣ್ಯರು ಸಂತಾಪ ಸೂಚಿಸಿದ್ದಾರೆ.
ಬಾಹ್ಯಾಕಾಶ ಲೋಕಕ್ಕೆ ಅವಿರತ ಸೇವೆ ನೀಡಿ, ಭಾರತದ ಉನ್ನತ ನಾಗರಿಕ ಗೌರವಗಳಾದ ಪದ್ಮಭೂಷಣ, ಪದ್ಮವಿಭೂಷಣ ಪ್ರಶಸ್ತಿಗಳನ್ನು ಪಡೆದ ಯು.ಆರ್.ರಾವ್ (ಮಾರ್ಚ್ 10, 1932- ಜುಲೈ 24, 2017) ಕರ್ನಾಟಕದ ಉಡುಪಿಯವರು ಎಂಬುದು ನಮ್ಮ ಹಮ್ಮೆ.
ಭಾರತದ ಮೊದಲ ಉಪಗ್ರಹ ಎಂಬ ಖ್ಯಾತಿ ಪಡೆದಿದ್ದ 'ಆರ್ಯಭಟ'ದ ಹಿಂದಿದ್ದ ಶಕ್ತಿ ಇದೇ ಯು.ಆರ್.ರಾವ್! ಅವರ ನಿರ್ಗಮನ ಭಾರತೀಯ ಬಾಹ್ಯಾಕಾಶ ಲೋಕದಲ್ಲಿ ನಿರ್ವಾತವನ್ನು ಸೃಷ್ಟಿಸಿದೆ. ನಿವೃತ್ತರಾದ ಮೇಲೂ ಇಸ್ರೋ ಸಂಸ್ಥೆಗೆ ಮಾರ್ಗದರ್ಶನ ನೀಡುತ್ತಿದ್ದ ಯು.ಆರ್.ರಾವ್ ಅವರ ನಿಧನ. ಇಸ್ರೋದ ಯುವ ವಿಜ್ಞಾನಿಗಳಿಗೆ ಗುರು ವಿಯೋಗದ ನೋವನ್ನು ತಂದಿಟ್ಟಿದೆ.
|
ಬಾಹ್ಯಾಕಾಶ ಲೋಕಕ್ಕೆ ಅವರ ಸೇವೆ ಅಗಣಿತ
ಪ್ರೊ.ಯು.ಆರ್.ರಾವ್ ಅವರು ವಿಧವಶರಾದ ಸುದ್ದಿ ಕೇಳಿ ಬಹಳ ನೋವಾಯಿತು. ಭಾರತೀಯ ಬಾಹ್ಯಾಕಾಶ ಲೋಕಕ್ಕೆ ಅವರು ನೀಡಿದ ಅಗಣಿತ ಸೇವೆಯನ್ನು ಭಾರತ ಎಂದಿಗೂ ಮರೆಯುವುದಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಟ್ವೀಟ್ ಮಾಡಿದ್ದಾರೆ.
|
ಆತ್ಮಕ್ಕೆ ಶಾಂತಿ ಸಿಗಲಿ
ಖ್ಯಾತ ಬಾಹ್ಯಾಕಾಶ ವಿಜ್ಞಾನಿ, ಮಾಜಿ ಇಸ್ರೋ ಮುಖ್ಯಸ್ಥ ಪ್ರೊ.ಯು.ಆರ್.ರಾವ್ ಅವರ ನಿಧನದ ಸುದ್ದಿ ಆಘಾತ ತಂದಿದೆ, ನಾಡು ಶೋಕತಪ್ತವಾಗಿದೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ ಟ್ವೀಟ್ ಮಾಡಿದ್ದಾರೆ.
|
ಒಬ್ಬ ಮಹಾನ್ ವ್ಯಕ್ತಿ ನಮ್ಮನ್ನಗಲಿದ್ದಾರೆ
ಇಸ್ರೋ ಮಾಜಿ ಅಧ್ಯಕ್ಷ ಪ್ರೊ.ಯು.ಆರ್.ರಾವ್ ಅವರ ಅಗಲಿಕೆಯ ಸುದ್ದಿ ಕೇಳಿ ತೀವ್ರ ನೋವಾಯಿತು. ನಾವು ಇಂದು ಒಬ್ಬ ಮಹಾನ್ ವ್ಯಕ್ತಿಯನ್ನು ಕಳೆದುಕೊಂದಿದ್ದೇವೆ ಎಂದು ನಾಳೆ(ಜುಲೈ 25) ಪ್ರಮಾಣವಚನ ಸ್ವೀಕರಿಸಲಿರುವ ಭಾರತದ ನಿಯೋಜಿತ ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್ ಟ್ವೀಟ್ ಮಾಡಿದ್ದಾರೆ.
|
ಹಾಲ್ ಆಫ್ ಫೇಮ್
ಇಸ್ರೋ ಮಾಜಿ ಅಧ್ಯಕ್ಷ, ಅಂತಾರಾಷ್ಟ್ರೀಯ ಬಾಹ್ಯಾಕಾಶ ತಜ್ಞರಿಗಾಗಿ ಕೊಡಮಾಡುವ ಹಾಲ್ ಆಫ್ ಫೇಮ್ ಪ್ರಶಸ್ತಿ ಪಡೆದ ಮೊದಲ ಭಾರತೀಯ ವಿಜ್ಞಾನಿ ಡಾ.ಯು.ಆರ್.ರಾವ್ ಅವರ ನಿಧನಕ್ಕೆ ತೀವ್ರ ಸಂತಾಪ ಸೂಚಿಸುತ್ತೇನೆ ಎಂದು ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಖಾತೆ ಸಚಿವೆ ನಿರ್ಮಲಾ ಸೀತಾರಾಮನ್ ಟ್ವೀಟ್ ಮಾಡಿದ್ದಾರೆ.
|
ಶ್ರದ್ಧಾಂಜಲಿ
ಕರ್ನಾಟಕದ ಪುತ್ರ, ಬಾಹ್ಯಾಕಾಶ ತಂತ್ರಜ್ಞಾನದಲ್ಲಿ ಭಾರತ ವಿಶ್ವ ಭೂಪಟದಲ್ಲಿ ಗುರುತಿಸಿಕೊಳ್ಳುವಂತೆ ಮಾಡಿದ ಪ್ರೊ.ಯು.ಆರ್.ರಾವ್ ಇನ್ನಿಲ್ಲ. ಅವರಿಗೆ ನನ್ನ ಶ್ರದ್ಧಾಂಜಲಿ ಎಂದು ರಾಜ್ಯ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಆರ್.ವಿ.ದೇಶಪಾಂಡೆ ಟ್ವೀಟ್ ಮಾಡಿದ್ದಾರೆ.
|
ರಮ್ಯಾ ಸಂತಾಪ
ಮಹಾನ್ ಸಾಧಕರು ಹಾಗೂ ವಿಶ್ವದ ವೈಜ್ಞಾನಿಕ ಕ್ಷೇತ್ರದ ಶ್ರೇಷ್ಠರಲ್ಲಿ ಪ್ರಮುಖರಾದ ಡಾ.ಯು ಆರ್ ರಾವ್ ಅವರಿಗೆ ನನ್ನ ನಮನಗಳು.ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಕಾಂಗ್ರೆಸ್ ಸಾಮಾಜಿಕ ಮಾಧ್ಯಮ ಜವಾಬ್ದಾರಿ ಹೊತ್ತ, ನಟಿ ರಮ್ಯಾ ಟ್ವೀಟ್ ಮಾಡಿದ್ದಾರೆ.












Click it and Unblock the Notifications