ಕಾರು, ಬೈಕ್ನಲ್ಲಿ ಮಾಸ್ಕ್ ಹಾಕಬೇಕೆ; ಸ್ಪಷ್ಟನೆ ಕೇಳಿದ ಆಯುಕ್ತರು
ಬೆಂಗಳೂರು, ಅಕ್ಟೋಬರ್ 30: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಮಾಸ್ಕ್ ಹಾಕದವರಿಗೆ ದಂಡ ವಿಧಿಸುವುದು ವಿವಾದಕ್ಕೆ ಕಾರಣವಾಗಿದೆ. ಆದ್ದರಿಂದ, ಆರೋಗ್ಯ ಇಲಾಖೆಯಿಂದಲೇ ಈ ಕುರಿತು ಸ್ಪಷ್ಟೀಕರಣ ಪಡೆಯಲು ಬಿಬಿಎಂಪಿ ಆಯುಕ್ತರು ಪತ್ರ ಬರೆದಿದ್ದಾರೆ.
ಬಿಬಿಎಂಪಿ ಆಯುಕ್ತ ಮಂಜುನಾಥ ಪ್ರಸಾದ್ ಆರೋಗ್ಯ ಇಲಾಖೆಗೆ ಮಾಸ್ಕ್ ಹಾಕದಿರುವಾಗ ಯಾವಾಗ ದಂಡ ಹಾಕಬೇಕು? ಎಂದು ವಿವರಣೆ ಕೇಳಿ ಪತ್ರವನ್ನು ಬರೆದಿದ್ದಾರೆ. ಇಲಾಖೆ ಇನ್ನೂ ಪತ್ರಕ್ಕೆ ಉತ್ತರ ಕೊಟ್ಟಿಲ್ಲ.
ಕಾರಿನಲ್ಲೇ ಒಬ್ಬರೇ ಸಂಚಾರ ಮಾಡುವಾಗ ಎಲ್ಲಾ ಗ್ಲಾಸ್ ಏರಿಸಿದ್ದರೂ ಮಾಸ್ಕ್ ಹಾಕಬೇಕೆ?, ಬೈಕ್ನಲ್ಲಿ ಒಬ್ಬರೇ ಸಂಚಾರ ಮಾಡುವಾಗ ಕಡ್ಡಾಯವಾಗಿ ಮಾಸ್ಕ್ ಹಾಕಬೇಕೆ? ಎಂದು ಬಿಬಿಎಂಪಿ ಆಯುಕ್ತರು ಸ್ಪಷ್ಟನೆ ಕೇಳಿದ್ದಾರೆ.

ಈಗ ಕಾರಿನಲ್ಲಿ ಒಬ್ಬರೇ ಸಂಚಾರ ನಡೆಸುತ್ತಿರುವಾಗ ಮಾಸ್ಕ್ ಹಾಕದಿದ್ದರೆ 250 ರೂ. ದಂಡವನ್ನು ಮಾರ್ಷಲ್ಗಳು ವಸೂಲಿ ಮಾಡುತ್ತಿದ್ದಾರೆ. ಇದಕ್ಕೆ ಬೆಂಗಳೂರಿನ ಜನರು ವಿರೋಧ ವ್ಯಕ್ತಪಡಿಸುತ್ತಿದ್ದು, ಮಾರ್ಷಲ್ಗಳ ಜೊತೆ ಜಗಳವಾಡುತ್ತಿದ್ದಾರೆ.
ನಗರ ಪ್ರದೇಶದಲ್ಲಿ ಮಾಸ್ಕ್ ಧರಿಸದ, ಸಾಮಾಜಿಕ ಅಂತರ ಕಾಪಾಡದ ಜನರಿಂದ 1000 ರೂ. ದಂಡ ಸಂಗ್ರಹ ಮಾಡಲಾಗುತ್ತಿತ್ತು. ಜನರ ಆಕ್ರೋಶಕ್ಕೆ ಮಣಿದ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಅದನ್ನು 250 ರೂ.ಗಳಿಗೆ ಇಳಿಕೆ ಮಾಡಿದ್ದಾರೆ.
ಆದರೆ, ಬೆಂಗಳೂರು ನಗರದಲ್ಲಿ ಕಾರುಗಳಲ್ಲಿ ಒಬ್ಬರೇ ಗ್ಲಾಸ್ ಏರಿಸಿಕೊಂಡು ಪ್ರಯಾಣ ಮಾಡುವಾಗ, ಬೈಕ್ನಲ್ಲಿ ಒಬ್ಬರೇ ಸಂಚಾರ ನಡೆಸುವಾಗ ಮಾಸ್ಕ್ ಹಾಕಿಲ್ಲ ಎಂದು ದಂಡ ವಸೂಲಿ ಮಾಡಲಾಗುತ್ತಿದೆ. ಇದಕ್ಕೆ ಜನರು ವಿರೋಧ ವ್ಯಕ್ತಪಡಿಸಿದ್ದಾರೆ.
ಕರ್ನಾಟಕದಲ್ಲಿಯೇ ಅತಿ ಹೆಚ್ಚು ಕೋವಿಡ್ ಸೋಂಕಿತರು ಬೆಂಗಳೂರಿನಲ್ಲಿ ಇದ್ದಾರೆ. ಗುರುವಾರ ನಗರದಲ್ಲಿ 2175 ಹೊಸ ಪ್ರಕರಣ ದಾಖಲಾಗಿದ್ದು, ಒಟ್ಟು ಸೋಂಕಿತರ ಸಂಖ್ಯೆ 3,33,037ಕ್ಕೆ ಏರಿಕೆಯಾಗಿದೆ. ಸಕ್ರಿಯ ಪ್ರಕರಣಗಳ ಸಂಖ್ಯೆ 41,538.












Click it and Unblock the Notifications