ಸರ್ಕಾರದ ವಿರುದ್ಧ ಸಭೆ ಕರೆದಿಲ್ಲ: ಶಾಸಕ ಸೋಮಶೇಖರ್ ಸ್ಪಷ್ಟನೆ
ಬೆಂಗಳೂರು, ಏಪ್ರಿಲ್ 30: ಸರ್ಕಾರದ ವಿರುದ್ಧ ಅಸಮಾಧಾನಗೊಂಡು ಸಮಾನಮನಸ್ಕರ ಸಭೆ ಕರೆದಿದ್ದ ಶಾಸಕ ಎಸ್.ಟಿ.ಸೋಮಶೇಖರ್ ಅವರು ಸಭೆಯ ಬಗ್ಗೆ ಸ್ಪಷ್ಟೀಕರಣ ನೀಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸರ್ಕಾರದ ವಿರುದ್ಧ ಬಂಡಾಯ ಏಳಲು ಸಮಾನಮನಸ್ಕರ ಸಭೆ ಕರೆದಿರಲಿಲ್ಲ, ನಿಗಮ-ಮಂಡಳಿಗಳಲ್ಲಿರುವ ಸಮಸ್ಯೆಗಳ ಬಗ್ಗೆ ಚರ್ಚಿಸಿ ಸರ್ಕಾರದ ಗಮನಕ್ಕೆ ತರಲೆಂದು ಸಭೆ ಕರೆದಿದ್ದೆ ಎಂದು ಹೇಳಿದ್ದಾರೆ.
ಏಪ್ರಿಲ್ 30 ರಂದು ಸಮಾನಮನಸ್ಕರ ಸಭೆ ಎಂದು ಕೆಲವು ಕಾಂಗ್ರೆಸ್ ಶಾಸಕರ ಸಭೆಯಲ್ಲಿ ಬಿಡಿಎ ನಿಗಮ ಅಧ್ಯಕ್ಷರೂ ಆಗಿರುವ ಎಸ್.ಟಿ.ಸೋಮಶೇಖರ್ ಅವರು ಕರೆದಿದ್ದಾರೆ. ಈ ಸಭೆಯು ಕಾಂಗ್ರೆಸ್ನ ಅತೃಪ್ತ ಶಾಸಕರ ಸಭೆಯೆಂದೇ ಕರೆಯಲಾಗುತ್ತಿದೆ. ಹಾಗಾಗಿ ಈ ಸಭೆಯ ಸುತ್ತಾ ಅನುಮಾನಗಳು ಮೋಡಗಟ್ಟಿವೆ.

ಆದರೆ ಈ ಬಗ್ಗೆ ಸ್ಪಷ್ಟನೆ ನೀಡಿರುವ ಎಸ್.ಟಿ.ಸೋಮಶೇಖರ್, ಸಭೆ ನಡೆಸುತ್ತಿರುವ ಬಗ್ಗೆ ಕೆಪಿಸಿಸಿ ಅಧ್ಯಕ್ಷ ಗುಂಡೂರಾವ್, ಶಾಸಕಾಂಗ ಮುಖ್ಯಸ್ಥ ಸಿದ್ದರಾಮಯ್ಯ ಅವರಿಗೆ ಮಾಹಿತಿ ನೀಡಿದ್ದೇವೆ, ಮತ್ತು ಒಪ್ಪಿಗೆ ಪಡೆದಿದ್ದೇವೆ, ಸಭೆ ನಡೆಸದಂತೆ ಒತ್ತಡವೂ ಬಂದಿಲ್ಲ' ಎಂದು ಹೇಳಿದರು.
ಸಭೆಯನ್ನು ಮುಂದೂಡಿದ ಬಗ್ಗೆ ಕಾರಣ ನೀಡಿದ ಅವರು, ಚಿಂಚೋಳಿ, ಕುಂದಗೋಳದಲ್ಲಿ ನಾಮಪತ್ರ ಸಲ್ಲಿಕೆ ಇತ್ತು, ಎಲ್ಲ ಶಾಸಕರು ಅಲ್ಲಿ ಹಾಜರಿರಬೇಕು ಎಂದು ಸೂಚಿಸಲಾಗಿತ್ತು ಹಾಗಾಗಿ ಸಭೆ ಮುಂದಕ್ಕೆ ಹಾಕಿದ್ದೇವೆ, ರದ್ದು ಮಾಡಿಲ್ಲ ಎಂದರು.
ಸೋಮಶೇಖರ್ ಅವರು ಅತೃಪ್ತ ಶಾಸಕರ ಸಭೆ ಕರೆದಿದ್ದಾರೆ ಎನ್ನಲಾಗಿತ್ತು, ನಂತರ ಸಿದ್ದರಾಮಯ್ಯ ಅವರ ಸೂಚನೆ ಮೇರೆಗೆ ಸಭೆಯನ್ನು ಕೈಬಿಟ್ಟಿದ್ದಾರೆ ಎಂದು ರಾಜಕೀಯ ವಲಯದಲ್ಲಿ ಚರ್ಚೆಗಳು ಏರ್ಪಟ್ಟಿದ್ದವು.












Click it and Unblock the Notifications