ನಾವಿಂದು ರಾಜರಂತೆ ಇದ್ದೇವೆ: ಅನರ್ಹ ಶಾಸಕ ಡಾ. ಸುಧಾಕರ್
Recommended Video
ಬೆಂಗಳೂರು, ಸೆಪ್ಟೆಂಬರ್ 18: ಅನರ್ಹ ಶಾಸಕರು ಬಿಜೆಪಿಯವರ ಮುಂದೆ ಭಿಕ್ಷೆ ಬೇಡುತ್ತಿದ್ದಾರೆ ಎಂಬ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಅವರ ಹೇಳಿಕೆಯಿಂದ ಗರಂ ಆಗಿರುವ ಅನರ್ಹ ಶಾಸಕ ಕೆ. ಸುಧಾಕರ್ ಅವರು ಪ್ರತಿ ವಾಗ್ದಾಳಿ ನಡೆಸಿದ್ದಾರೆ.
ಸರಣಿ ಟ್ವೀಟ್ಗಳನ್ನು ಮಾಡಿರುವ ಸುಧಾಕರ್, ಕಾಂಗ್ರೆಸ್ನಿಂದ ಹೊರಬಂದ ಬಳಿಕ ತಾವೀಗ ರಾಜರಂತೆ ಇದ್ದೇವೆ ಎಂದು ಹೇಳಿಕೊಂಡಿದ್ದಾರೆ. ಜತೆಗೆ ದಿನೇಶ್ ಗುಂಡೂರಾವ್ ಅವರಿಂದಾಗಿಯೇ ಕಾಂಗ್ರೆಸ್ ಪಕ್ಷಕ್ಕೆ ಈ ಸ್ಥಿತಿ ಬಂದಿದೆ ಎಂದು ಆರೋಪಿಸಿದ್ದಾರೆ.
ನಿಮ್ಮ ವೈಯಕ್ತಿಕ ಲಾಲಸೆ, ಕೆಟ್ಟ ನಿರ್ಧಾರಗಳಿಂದಾಗಿ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಕೇವಲ ಒಂದು ಸ್ಥಾನ ಗಳಿಸುವಂತೆ ಆಯಿತು. ಅಲ್ಲದೆ ಒಂದು ಸಣ್ಣ ಪಕ್ಷದ ಎದುರು ಭಿಕ್ಷೆ ಬೇಡುವಂತೆ ಆಯಿತು. ಇತಿಹಾಸದಲ್ಲಿ ಎಂದಿಗೂ ಕಾಂಗ್ರೆಸ್ ಪಕ್ಷಕ್ಕೆ ಈ ರೀತಿ ಮುಖಭಂಗ ಆಗಿರಲಿಲ್ಲ ಎಂದಿರುವ ಸುಧಾಕರ್, ಕಾಂಗ್ರೆಸ್ನ ಈ ಎಲ್ಲ ಹಿನ್ನಡೆಗಳಿಗೆ ದಿನೇಶ್ ಗುಂಡೂರಾವ್ ಅವರೇ ಕಾರಣ ಎಂದು ದೂರಿದ್ದಾರೆ. ತಮ್ಮ ಹೇಳಿಕೆಗಳಲ್ಲಿ ಸುಧಾಕರ್ ಅವರು ದಿನೇಶ್ ಗುಂಡೂರಾವ್ ಅವರ ವಿರುದ್ಧ ವೈಯಕ್ತಿಕವಾಗಿ ಕಿಡಿಕಾರಿದ್ದಾರೆ.

ನಿಮ್ಮಿಂದಾಗಿ ಭಿಕ್ಷೆ ಬೇಡುವ ಪರಿಸ್ಥಿತಿ
ಮಾನ್ಯ ದಿನೇಶ್ ಗುಂಡೂರಾವ್ ಅವರೇ ನಿಮ್ಮ ಮಾತಿನ ಮೇಲೆ ಹಿಡಿತವಿರಲಿ. ನಾವು ಭಿಕ್ಷುಕರಲ್ಲ. ನಿಮ್ಮ ವೈಯಕ್ತಿಕ ಆಸೆ, ಲಾಲಸೆ ಮತ್ತು ಕೆಟ್ಟ ನಿರ್ಧಾರಗಳಿಂದ ಒಂದು ಸಣ್ಣ ಪಕ್ಷದ ಎದುರು ಭಿಕ್ಷೆ ಬೇಡುವ ಪರಿಸ್ಥಿತಿ ಕಾಂಗ್ರೆಸ್ ಪಕ್ಷಕ್ಕೆ ಬಂದಿತು. ನಾವು ವಿಧಾನಸಭೆ ಚುನಾವಣೆಯಲ್ಲಿ 80 ಸ್ಥಾನಗಳನ್ನು ಗೆದ್ದಿದ್ದೆವು ಎಂದು ಸುಧಾಕರ್ ವಾಗ್ದಾಳಿ ನಡೆಸಿದ್ದಾರೆ.

ನಿಮ್ಮ ಬಲಹೀನತೆ ಪರಾಮರ್ಶಿಸಿಕೊಳ್ಳಿ
ಆದರೆ ಲೋಕಸಭೆ ಚನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಒಂದೇ ಒಂದು ಸ್ಥಾನಗೆದ್ದಿತು. ಇತಿಹಾಸದಲ್ಲೇ ಇಂತಹ ಮುಖಭಂಗ ಕಾಂಗ್ರೆಸ್ ಪಕ್ಷಕ್ಕೆ ಎಂದೂ ಆಗಿರಲಿಲ್ಲ. ನಿಮ್ಮ ಕೆಟ್ಟ ನಿರ್ಧಾರ ಹಾಗೂ ಬಲಹೀನತೆ ಬಗ್ಗೆ ಪರಾಮರ್ಶಿಸಿಕೊಳ್ಳಿ. ನಿಮ್ಮ ಈ ವರ್ತನೆಯಿಂದ ಕಾಂಗ್ರೆಸ್ ಪಕ್ಷ ಭಿಕ್ಷಾಪಾತ್ರೆ ಹಿಡಿದು ಹೋಗುವಂತಾಯಿತು.

ಇಂದು ರಾಜರಂತೆ ಇದ್ದೇವೆ
ನಿಮ್ಮ ಈ ಭಿಕ್ಷಾ ವರ್ತನೆಯಿಂದ ನಾವು ಹೊರಬಂದು ಇವತ್ತು ರಾಜರಂತಿದ್ದೇವೆ. 'ಮೂರು' ಇದ್ದವರು ಆ ಸ್ಥಾನದಲ್ಲಿ ಒಂದೇ ಒಂದು ಕ್ಷಣವೂ ಕೂರಬಾರದು ಎಂದು ದಿನೇಶ್ ಗುಂಡೂರಾವ್ ಅವರು ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಅನರ್ಹರಾಗಿದ್ದಾರೆ ಎಂದು ಹರಿಹಾಯ್ದಿದ್ದಾರೆ.

ಬಿಜೆಪಿ ಮುಂದೆ ಭಿಕ್ಷೆ ಬೇಡುತ್ತಿದ್ದಾರೆ
ಅನರ್ಹ ಶಾಸಕರು ನಮ್ಮ ಪಕ್ಷದಲ್ಲಿ ಇದ್ದಾಗ ರಾಜರಂತೆ ಮೆರೆಯುತ್ತಿದ್ದರು. ಈಗ ಬಿಜೆಪಿಯವರ ಮುಂದೆ ಭಿಕ್ಷೆ ಬೇಡುತ್ತಿದ್ದಾರೆ. ಈ ಹಿಂದೆಯೇ ನಾನು ಇದರ ಬಗ್ಗೆ ಹೇಳಿದ್ದೆ. ಬಿಜೆಪಿ ನಂಬಿ ಹೋಗಬೇಡಿ ಎಂದು ಕಿವಿಮಾತು ಹೇಳಿದ್ದೆ. ನಮ್ಮ ಪಕ್ಷದಲ್ಲಿದ್ದಾಗ ಅವರ ಬೇಡಿಕೆಗಳನ್ನು ಈಡೇರಿಸುತ್ತಿದ್ದೆವು. ಎಲ್ಲ ಸಮಸ್ಯೆಗಳನ್ನು ಆಲಿಸುತ್ತಿದ್ದೆವು. ಪಕ್ಷದಲ್ಲಿ ಅವರಿಗೆ ಅಭಿಪ್ರಾಯ ಹಂಚಿಕೊಳ್ಳಲು ಮುಕ್ತ ಅವಕಾಶವಿತ್ತು. ಹೀಗಿದ್ದರೂ ಪಕ್ಷ ಬಿಟ್ಟು ಹೋಗಿದ್ದಾರೆ. ಕಾಂಗ್ರೆಸ್ ಅವರಿಗೆ ಏನು ಮಾಡಿತ್ತು? ಎಂದು ದಿನೇಶ್ ಗುಂಡೂರಾವ್ ಟೀಕಿಸಿದ್ದರು.












Click it and Unblock the Notifications