ಬೆಂಗಳೂರಿನಲ್ಲಿ ವಾರ್ಡ್ ಸಮಿತಿಗಳು: ಈ ಕುರಿತು ನಿಮಗೆಷ್ಟು ಗೊತ್ತು? ಇವುಗಳಿಂದ ನಿಮಗೇನು ಲಾಭ? ಅಂಕಿಅಂಶ, ಮಾಹಿತಿ ತಿಳಿಯಿರಿ
ವಾರ್ಡ್ ಸಮಿತಿಗಳು ಸಮಗ್ರ ಅಭಿವೃದ್ಧಿ ಯೋಜನೆಗಾಗಿ ನಗರ ಮಟ್ಟದಲ್ಲಿ ಸಮುದಾಯವನ್ನು ಪ್ರತಿನಿಧಿಸಲು ರಚಿಸಲ್ಪಟ್ಟ ಸಮಿತಿಗಳಾಗಿವೆ. ಇವುಗಳ ಬಗ್ಗೆ ನಿಮಗೆಷ್ಟು ಗೊತ್ತಿದೆ? ಇದರಿಂದ ನಿಮಗೇನು ಲಾಭ? ತಿಳಿಯಿರಿ
ಬೆಂಗಳೂರು, ಫೆಬ್ರವರಿ 09: ವಾರ್ಡ್ ಸಮಿತಿಗಳು ಸಮಗ್ರ ಅಭಿವೃದ್ಧಿ ಯೋಜನೆಗಾಗಿ ನಗರ ಮಟ್ಟದಲ್ಲಿ ಸಮುದಾಯವನ್ನು ಪ್ರತಿನಿಧಿಸಲು ರಚಿಸಲ್ಪಟ್ಟ ಸಮಿತಿಗಳಾಗಿವೆ. ನಗರಾಡಳಿತವನ್ನು ವಿಕೇಂದ್ರೀಕರಿಸಿ ನಾಗರಿಕರ ಸಹಭಾಗಿತ್ವವನ್ನು ಉತ್ತೇಜಿಸಲು ಉದ್ದೇಶವನ್ನು ಈ ಸಮಿತಿಗಳು ಹೊಂದಿವೆ. ಆ ಮೂಲಕ ನಾಗರಿಕರು ತಮ್ಮ ಸ್ಥಳೀಯ ಸಮಸ್ಯೆಗಳಿಗೆ ಪರಿಹಾರವನ್ನು ಕಂಡುಕೊಳ್ಳಬಹುದು. ಸಾಂವಿಧಾನಿಕವಾಗಿ ಸಂಘಟಿಸಲಾದ ವಾರ್ಡ್ ಮಟ್ಟದ ಸಮಿತಿಗಳೇ 'ವಾರ್ಡ್ ಸಮಿತಿಗಳು'

ಜನರ ಹಿತಾಸಕ್ತಿಗಳನ್ನು ಪ್ರತಿನಿಧಿಸುವ ಸಮಿತಿ
ಇದು ವಿವಿಧ ಸಮುದಾಯದ ಜನರ ಹಿತಾಸಕ್ತಿಗಳನ್ನು ಪ್ರತಿನಿಧಿಸುವ ಮೂಲಕ ನಗರ ಪಾಲಿಕೆ ಮತ್ತು ನಾಗರಿಕರನ್ನು ಬೆಸೆಯುವ ಕೊಂಡಿಯಾಗಿದೆ. ವಾರ್ಡ್ನ ಚುನಾಯಿತ ಕೌನ್ಸಿಲರ್ ಅವರ ಅಧ್ಯಕ್ಷತೆಯಲ್ಲಿ ತಿಂಗಳಿಗೆ ಒಂದು ಬಾರಿ ನಿಯಮಿತವಾಗಿ ಭೇಟಿಯಾಗುವ ಈ ಸಮಿತಿಯು 10 ಸದಸ್ಯರನ್ನು ಹೊಂದಿರುತ್ತದೆ. ನಗರಾಡಳಿತದ ಆಯುಕ್ತರಿಂದ ಈ ಸಮಿತಿಯ ಕಾರ್ಯದರ್ಶಿಗಳು ನೇಮಕಗೊಂಡಿರುತ್ತಾರೆ. ಸಾಮಾನ್ಯ ಜನರು ಆಡಳಿತವನ್ನು ಆಚರಣೆಗೆ ತರುವಲ್ಲಿ ವಾರ್ಡ್ ಸಮಿತಿಯ ವ್ಯವಸ್ಥೆಯು ಮುಖ್ಯವಾಗಿದೆ. ನಾಗರಿಕರು ಸ್ಥಳೀಯ ನಿರ್ಧಾರಗಳ ಬಗ್ಗೆ ತಮ್ಮ ಸಹಮತಿ ಹಾಗೂ ಅವಶ್ಯಕತೆಗಳನ್ನು ಸರ್ಕಾರಕ್ಕೆ ತಿಳಿಸುವ ಉತ್ತಮ ಮಾರ್ಗವಾಗಿವೆ.

ಜನಾಗ್ರಹ ಸೆಂಟರ್ ಫಾರ್ ಸಿಟಿಜನ್ ಶಿಪ್ ಆಂಡ್ ಡೆಮಾಕ್ರಸಿ
ಜನಾಗ್ರಹ ಸೆಂಟರ್ ಫಾರ್ ಸಿಟಿಜನ್ ಶಿಪ್ ಆಂಡ್ ಡೆಮಾಕ್ರಸಿ ಸಂಸ್ಥೆಯು ಡಿಸೆಂಬರ್ 16, 2021 ರಿಂದ ಜನವರಿ 2, 2022ರ ಅವಧಿಯಲ್ಲಿ ಬಿಬಿಎಂಪಿಯ 27 ವಾರ್ಡ್ಗಳಲ್ಲಿ ಸ್ಥಳೀಯ ನಗರಾಡಳಿತ, ವಾರ್ಡ್ ಸಮಿತಿ ಹಾಗೂ ಅದರಲ್ಲಿ ನಾಗರಿಕರ ಭಾಗವಹಿಸುವಿಕೆಯ ಬಗ್ಗೆ ತಿಳಿಯಲು 'ರಾಜಕೀಯ ಸಮೀಕ್ಷೆ' ಯನ್ನು ನಡೆಸಿತು. ಈ ಸಮೀಕ್ಷೆಯಲ್ಲಿ ಶೇ.13 ರಷ್ಟು ನಾಗರಿಕರಿಗೆ ವಾರ್ಡ್ ಸಮಿತಿ ಬಗ್ಗೆ ಅರಿವಿದ್ದು, ಅದರಲ್ಲಿ ಶೇ 38 ರಷ್ಟು ನಾಗರಿಕರು ಇಂತಹ ಸಮಿತಿಗಳಲ್ಲಿ ಭಾಗವಹಿಸುತ್ತಿದ್ದಾರೆಂದು ವರದಿಯಾಗಿದೆ.

ಸಿಟಿಜನ್ಶಿಪ್ ಇಂಡೆಕ್ಸ್ ಪ್ರಾಜೆಕ್ಟ್
2011ರಲ್ಲಿ, ಬೆಂಗಳೂರಿನಲ್ಲಿ ನಡೆದ ಜನ-ಬ್ರೌನ್ ಸಿಟಿಜನ್ಶಿಪ್ ಇಂಡೆಕ್ಸ್ ಪ್ರಾಜೆಕ್ಟ್ ಸಂಶೋಧನೆಯಲ್ಲಿ ಶೇ 7 ರಷ್ಟು ಇದ್ದ ಈ ನಾಗರಿಕರ ಅರಿವಿನ ಪ್ರಮಾಣ ಪ್ರಸ್ತುತ ಶೇ 13 ಕ್ಕೆ ಹೆಚ್ಚಾಗಿರುವುದು ನಾಗರಿಕರ ಧನಾತ್ಮಕವಾದ ಭಾಗವಹಿಸುವಿಕೆಯನ್ನು ತಿಳಿಸುತ್ತಿದೆ. ಇದಕ್ಕೆ ಪುಷ್ಟಿಕೊಡುವಂತೆ, ಜನಾಗ್ರಹ ಸಂಸ್ಥೆಯು ಆಗಸ್ಟ್ 2020 ರಿಂದ ಏಪ್ರಿಲ್ 2022ರ ಅವಧಿಯಲ್ಲಿ ಬೆಂಗಳೂರಿನಲ್ಲಿ ವಾರ್ಡ್ ಸಮಿತಿಗಳು ಹೇಗೆ ನಡೆಯುತ್ತಿವೆ? ಎಂದು ತಿಳಿಯಲು ವಾರ್ಡ್ ಸಮಿತಿಯ ತುಲನಾತ್ಮಕ ಅಧ್ಯಯನವನ್ನು ಆಗಸ್ಟ್ 2020 -ಸೆಪ್ಟೆಂಬರ್ 2021 ಹಾಗು ಸೆಪ್ಟೆಂಬರ್ 2021- ಏಪ್ರಿಲ್ 2022 ರವರೆಗೆ 2 ಹಂತದಲ್ಲಿ ನಡೆಸಿತು.

ವಾರ್ಡ್ಗಳ ಪ್ರಮಾಣ ಶೇ 38 ಕ್ಕೆ ಏರಿಕೆ
ಮೊದಲನೆಯ ಹಂತದಲ್ಲಿ ಶೇ 27 ವಾರ್ಡ್ಗಳು ವಾರ್ಡ್ ಸಮಿತಿಗಳನ್ನು ಶೇ 75 ಕ್ಕೂ ಹೆಚ್ಚು ನಿಯಮಿತವಾಗಿ ನಡೆಸಿದ್ದು, ಎರಡನೆಯ ಹಂತದಲ್ಲಿ ಈ ವಾರ್ಡ್ಗಳು ಪ್ರಮಾಣ ಶೇ 38 ಕ್ಕೆ ಏರಿಕೆಯಾಗಿದೆ. ಅಂತೆಯೇ ಮೊದಲನೆಯ ಹಂತದಲ್ಲಿ ವಾರ್ಡ್ ಸಮಿತಿಗಳನ್ನು ನಡೆಸುವುದರಲ್ಲಿ ಅನಿಯಮಿತವಾಗಿದ್ದ ಶೇ 33 ರಷ್ಟು ವಾರ್ಡ್ ಗಳು ಎರಡನೆಯ ಹಂತದಲ್ಲಿ ಶೇ 15% ಇಳಿದಿರುವುದು ಗಮನಾರ್ಹ ಬೆಳವಣಿಗೆಯಾಗಿದೆ.

ಜನರ ಭಾಗವಹಿಸುವಿಕೆಯೇ ಮುಖ್ಯ
2011 ರಿಂದ 2022 ರ ವರೆಗಿನ ಈ ಎಲ್ಲಾ ದತ್ತಾಂಶಗಳು ವಾರ್ಡ್ ಸಮಿತಿಗಳು ತಮ್ಮದೇ ಆದ ಮಹತ್ವವನ್ನು ಪಡೆದುಕೊಂಡು ಬಲಿಷ್ಠಗೊಳ್ಳುತ್ತಿರುವುದನ್ನು ತಿಳಿಸುತ್ತಿದೆ. ವಾರ್ಡ್ ಸಮಿತಿಗಳು ಬಲಗೊಳ್ಳಲು ವ್ಯವಸ್ಥೆಯಲ್ಲಾದ ಬದಲಾವಣೆಯೊಂದಿಗೆ ಇತರೆ ಸಂಸ್ಥೆಗಳ ಪರಿಶ್ರಮವು ಪ್ರಭಾವ ಬೀರಿದೆ. ಜನರ ಭಾಗವಹಿಸುವಿಕೆಗೆ ವಾರ್ಡ್ ಸಮಿತಿಗಳು ಔಪಚಾರಿಕ ಕಾರ್ಯವಿಧಾನವಾಗಿದ್ದು, ಬೆಂಗಳೂರಿನಲ್ಲಿ 2019 ರಿಂದೀಚೆಗೆ ಕೌನ್ಸಿಲ್ನಲ್ಲಿ ವಾರ್ಡ್ ಸಮಿತಿಗಳ ಬಗ್ಗೆ ಪಾಲಿಕೆ ಮತ್ತು ಪಾಲಿಕೆ ಸದಸ್ಯರು ವಹಿಸಿದ ಕಾಳಜಿಗಳಿಂದ ವಾರ್ಡ್ ಸಮಿತಿಗಳು ತಮ್ಮ ಪ್ರಾಮುಖ್ಯತೆಯನ್ನು ಪಡೆದುಕೊಂಡವು.

ನೋಡಲ್ ಅಧಿಕಾರಿಗಳ ನೇಮಕ
ಕೊರೋನಾ ನಂತರದಲ್ಲಿ, ಕೌನ್ಸಿಲ್ ಅವಧಿ ಮುಗಿದ ನಂತರ ವಾರ್ಡ್ ಸಮಿತಿಯ ನಿಯಮಿತವಾಗಿ ಅನುಷ್ಠಾನಗೊಳಿಸಲು ಪಾಲಿಕೆ ಆಯುಕ್ತರು ನೋಡಲ್ ಅಧಿಕಾರಿಗಳ ನೇಮಕ ಮಾಡಿದ್ದಾರೆ. 2020ರ ನಂತರದಲ್ಲಿ ಬಿಬಿಎಂಪಿ ಆಯುಕ್ತರು ತಿಂಗಳಿಗೆ ಎರಡು ಬಾರಿ ವಾರ್ಡ್ ಸಮಿತಿಗಳನ್ನು ನಡೆಸಲು ಆದೇಶಿಸಿದರು. ಇದರ ಬೆನ್ನಲೇ ಪಾಲಿಕೆಯ ಆಯುಕ್ತರು ವಾರ್ಡ್ ಸಮಿತಿಗಳ ಉಸ್ತುವಾರಿಯನ್ನು ವಲಯವಾರು ಆಯುಕ್ತರಿಗೆ ವಹಿಸಿದರು. ವ್ಯವಸ್ಥೆಯಲ್ಲಾದ ಈ ಬದಲಾವಣೆಯೊಂದಿಗೆ ಬೆಂಗಳೂರಿನ ವಾರ್ಡ್ ಸಮಿತಿಗಳ ಬಗ್ಗೆ ಕಾರ್ಯನಿರ್ವಹಿಸುವ ಸಕ್ರಿಯ ಸಂಘ ಸಂಸ್ಥೆಗಳ ಒಕ್ಕೊರಲಿನ ಪ್ರತೀಕವಾಗಿ, ಜನರ ಸಕ್ರಿಯ ಭಾಗವಹಿಸುವಿಕೆಯೊಂದಿಗೆ ವಾರ್ಡ್ ಸಮಿತಿಗಳು ಕಾರ್ಯರೂಪಕ್ಕೆ ಬಂದವು.

ಸಹಭಾಗಿತ್ವದ ಪ್ರಜಾಪ್ರಭುತ್ವಕ್ಕಾಗಿ
2021-22ರಲ್ಲಿ ವಿಕೇಂದ್ರೀಕೃತ ಕಾರ್ಯನಿರ್ವಹಣೆ ಮತ್ತು ಸಹಭಾಗಿತ್ವದ ಪ್ರಜಾಪ್ರಭುತ್ವಕ್ಕಾಗಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯು ಬಜೆಟ್ ಪ್ರಕ್ರಿಯೆಯನ್ನು ಪ್ರೋತ್ಸಾಹಿಸಲು ನಾಗರಿಕರಿಂದ ಸಲಹೆ ಮತ್ತು ಅಭಿಪ್ರಾಯಗಳನ್ನು ಸಂಗ್ರಹಿಸುವುದರ ಮೂಲಕ ನಾಗರಿಕರ ಭಾಗವಹಿಸುವಿಕೆಯನ್ನು ಪ್ರೇರೇಪಿಸಲು 'ನನ್ನ ನಗರ ನನ್ನ ಬಜೆಟ್' ಅನ್ನು ವಾರ್ಡ್ ಸಮಿತಿ ಬಳಗದ ಸಹಯೋಗದೊಂದಿಗೆ ಹಮ್ಮಿಕೊಂಡಿತು.

ನನ್ನ ನಗರ ನನ್ನ ಬಜೆಟ್ ಅಭಿಯಾನ
ಇದರ ಪರಿಣಾಮವಾಗಿ ಪ್ರತಿ ವಾರ್ಡಿಗೆ ರಸ್ತೆಗಳು, ಪಾದಚಾರಿ ಮಾರ್ಗಗಳು ಮತ್ತು ಬೋರ್ವೆಲ್ಗಳ ದುರಸ್ತಿ ಮತ್ತು ಅಭಿವೃದ್ಧಿಗೆ ರೂ.60 ಲಕ್ಷಗಳನ್ನೂ ಮೀಸಲಿಡಿಸಲಾಯಿತು. ಇದನ್ನು ವಾರ್ಡ್ ಸಮಿತಿಗಳ ಮೂಲಕ ಕಾರ್ಯಗತಗೊಳಿಸಲಾಯಿತು. ನನ್ನ ನಗರ ನನ್ನ ಬಜೆಟ್ ಅಭಿಯಾನವು ವಾರ್ಡ್ ಸಮಿತಿಗಳನ್ನು ಬಲಗೊಳಿಸುವ ಪ್ರಕ್ರಿಯೆಗೆ ಪೂರಕವಾಯಿತು. ನಾಗರಿಕರ ಸಕ್ರಿಯ ಭಾಗವಹಿಸುವಿಕೆಯು ನಾಗರಿಕರ ಜೀವನದ ಗುಣಮಟ್ಟವನ್ನು ಸುಧಾರಿಸಲು ಸಹಕಾರಿಯಾಗುವುದು. ವಾರ್ಡ್ ಸಮಿತಿಗಳ ಬಗ್ಗೆ ತಿಳಿಯಲು ಜನರು ಹೊಂದಿರುವ ಆಸಕ್ತಿಯನ್ನು ಇಲ್ಲಿ ಅವಲೋಕಿಸಬಹುದಾಗಿದೆ.

ಬೆಂಗಳೂರಿನ ವಾರ್ಡ್ ಸಮಿತಿಗಳ ಬಗ್ಗೆ
ಪ್ರಸ್ತುತವಾಗಿ ಬೆಂಗಳೂರಿನ ವಾರ್ಡ್ ಸಮಿತಿಗಳ ಬಗ್ಗೆ ಕಾರ್ಯನಿರ್ವಹಿಸುವ ಸಕ್ರಿಯ ಸಂಘ ಸಂಸ್ಥೆಗಳಾದ ಸಿವಿಕ್, ಸಿಟಿಜನ್ಸ್ ಫಾರ್ ಬೆಂಗಳೂರು, ಜನಾಗ್ರಹ ಇನ್ನೂ ಹತ್ತು ಹಲವು ಸಂಸ್ಥೆಗಳು ಜನರ ಭಾಗವಹಿಸುವಿಕೆಯನ್ನು ಉತ್ತೇಜಿಸುವುದರೊಂದಿಗೆ ಪರಿಣಾಕಾರಿಯಾಗಿ ಕಾರ್ಯನಿರ್ವಹಿಸಿರುವುದು ವಾರ್ಡ್ ಸಮಿತಿಗಳಲ್ಲಿ ಜನರ ಧನಾತ್ಮಕವಾದ ಭಾಗವಹಿಸುವಿಕೆಗೆ ಕಾರಣವಾಗಿದೆ ಎಂದರೆ ತಪ್ಪಾಗಲಾರದು.

ವಾರ್ಡ್ ಸಮಿತಿ ಬಳಗ
ಇಂತಹ ಸಕ್ರಿಯ ಸಂಘ ಸಂಸ್ಥೆಗಳು ಒಗ್ಗಟ್ಟಾಗಿ ವಾರ್ಡ್ ಸಮಿತಿ ಬಳಗವನ್ನು ರೂಪಿಸಿದವು. ಬಿಬಿಎಂಪಿ ಮತ್ತು ಇತರ ನಾಗರಿಕ ಸಂಸ್ಥೆಗಳೊಂದಿಗೆ ಒಟ್ಟಾಗಿ ಕೆಲಸ ಮಾಡುವ ಮೂಲಕ ಮತ್ತು ಸಹಯೋಗದೊಂದಿಗೆ ಬೆಂಗಳೂರಿನ ವಾರ್ಡ್ ಸಮಿತಿಗಳನ್ನು ಬಲಪಡಿಸುವುದು ಬಳಗದ ಮುಖ್ಯ ಉದ್ದೇಶವಾಗಿದೆ. ಅರಿವಿನ ಕೊರತೆಯಿಂದ ಅನೇಕ ವಾರ್ಡ್ ಸಮಿತಿ ಸಭೆಗಳಲ್ಲಿ ಹೆಚ್ಚಿನ ನಾಗರಿಕರು ಭಾಗವಹಿಸುತ್ತಿಲ್ಲ. ಇಂತಹ ಕೊರತೆಯನ್ನು ಹೋಗಲಾಡಿಸಿ ನಾಗರಿಕರಲ್ಲಿ ಸಕ್ರಿಯ ಭಾಗವಹಿಸುವಿಕೆಯನ್ನು ಪ್ರೇರೇಪಿಸಲು ಅರಿವು ಮೂಡಿಸುವ ಪ್ರಯತ್ನವನ್ನು ಬಳಗವು ಮಾಡುತ್ತಿದೆ.

ನಗರ-ಮಟ್ಟದಲ್ಲಿ ವಾರ್ಡ್ ಸಮಿತಿ ಸಮಾವೇಶ
3 ತಿಂಗಳಿಗೊಮ್ಮೆ ನಗರ-ಮಟ್ಟದಲ್ಲಿ ವಾರ್ಡ್ ಸಮಿತಿ ಸಮಾವೇಶವನ್ನು ಹಮ್ಮಿಕೊಳ್ಳುವುದರ ಮೂಲಕ ವಾರ್ಡ್ ಸಮಿತಿಗಳನ್ನು ಪರಿಣಾಮಾಕಾರಿಯಾಗಿ ನಿಯಮಿತವಾಗಿ ಅನುಷ್ಠಾನಗೊಳಿಸುವುದಕ್ಕೆ ಬೆಂಬಲಿಸುವ ಮೂಲಕ ವಾರ್ಡ್ ಸಮಿತಿಗಳನ್ನು ಬಲಗೊಳಿಸುತ್ತಿದೆ. ಒಟ್ಟಾರೆಯಾಗಿ ಹೇಳುವುದಾದರೆ, 'ವಾರ್ಡ್ ಸಮಿತಿಗಳು ಅಂತಿಮವಾಗಿ ಬಲಿಷ್ಠವಾಗುತ್ತಿವೆಯೇ? ಎಂಬ ಪ್ರಶ್ನೆಗೆ ಹೌದೆಂಬ ಅಭಿಪ್ರಾಯವನ್ನು ವ್ಯಕ್ತಪಡಿಸುವುದರಲ್ಲಿ ಸಂಶಯವಿಲ್ಲ' ಎನ್ನಬಹುದು.

ವಾರ್ಡ್ ಸಮಿತಿಗಳಲ್ಲಿ ಜನರ ಭಾಗವಹಿಸುವಿಕೆ
2011 ರಿಂದ 2022 ರವರೆಗೆ ವ್ಯವಸ್ಥೆಯಲ್ಲಾದ ಪರಿಣಾಮಕಾರಿಯಾದ ಬದಲಾವಣೆಗಳೊಂದಿಗೆ ಸರ್ಕಾರೇತರ ಸಂಘ ಸಂಸ್ಥೆಗಳು ಮತ್ತು ಸಕ್ರಿಯ ನಾಗರಿಕರ ಪರಿಶ್ರಮದ ಕಾರಣ ವಾರ್ಡ್ ಸಮಿತಿಗಳಲ್ಲಿ ಜನರ ಭಾಗವಹಿಸುವಿಕೆಯ ದರವು ಧನಾತ್ಮಕವಾಗಿ ಏರಿಕೆಯಾಗಿದೆ. ವ್ಯವಸ್ಥೆಯಲ್ಲಾಗುತ್ತಿರುವ ಬದಲಾವಣೆಗಳು ಜನರ ಸಮಸ್ಯೆಗಳಿಗೆ ವಾರ್ಡ್ ಸಮಿತಿಗಳ ಮೂಲಕ ತ್ವರಿತವಾಗಿ ಪರಿಹಾರ ಕಂಡುಕೊಳ್ಳುವಂತಾಗಿದೆ.

ತರಬೇತಿ ಕಾರ್ಯಾಗಾರ, ಶಿಬಿರ
ಈ ನಿಟ್ಟಿನಲ್ಲಿ, ಸ್ಥಳೀಯ ಸರ್ಕಾರವು ವಾರ್ಡ್ ಸಮಿತಿಗಳನ್ನು ಬಲಗೊಳಿಸುವುದರೊಂದಿಗೆ ಜನಾದಿತ್ಯವನ್ನು ಹೆಚ್ಚಿಸಿ, ಪಾಲ್ಗೊಳ್ಳಲು ಮುಕ್ತ ಅವಕಾಶವನ್ನು ಒದಗಿಸಬೇಕು. ವಾರ್ಡ್ ಸಮಿತಿ ಸಭೆಗಳನ್ನು ನಿಯಮಿತವಾಗಿ ಸಂಘಟಿಸುತ್ತಿದ್ದು ಪರಿಣಾಮಕಾರಿಯಾಗಿ ನಿರ್ವಹಿಸುವ ಅವಶ್ಯಕತೆಯಿದೆ. ತರಬೇತಿ ಕಾರ್ಯಾಗಾರಗಳನ್ನು, ಶಿಬಿರಗಳನ್ನು ಹಮ್ಮಿಕೊಳ್ಳಬೇಕಾಗಿದೆ. ಜನರ ಭಾಗವಹಿಸುವಿಕೆಯನ್ನು ಧನಾತ್ಮಕವಾಗಿ ಹೆಚ್ಚಿಸಲು ಸ್ಥಳೀಯ ಸರ್ಕಾರಗಳು ವಾರ್ಡ್ ಸಮಿತಿಗಳನ್ನು ಮತ್ತಷ್ಟು ಸಬಲೀಕರಣಗೊಳಿಸಬೇಕಾಗಿದೆ.

ಅಧಿಕಾರ ವಿಕೇಂದ್ರೀಕರಣ
ಅಧಿಕಾರ ವಿಕೇಂದ್ರೀಕರಣದೊಂದಿದೆ ಇತರೆ ಸ್ಥಳೀಯ ಸರ್ಕಾರಿ ಸಂಸ್ಥೆಗಳು ಪರಸ್ಪರ ಉತ್ತಮ ಸಮನ್ವಯತೆಯೊಂದಿಗೆ ಒಟ್ಟಾಗಿ ಪರಿಣಾಮಕಾರಿಯಾಗಿ ಕಾರ್ಯ ನಿರ್ವಹಿಸಬೇಕು. ವಾರ್ಡ್ ಸಮಿತಿಗಳ ಬಗ್ಗೆ ಜನಸಾಮಾನ್ಯರ ಅಭಿಪ್ರಾಯಗಳನ್ನು ವಾರ್ಡ್ ಸಮಿತಿ ಸಭೆಗಳಲ್ಲಿ ಭಾಗವಹಿಸಿದ ನಂತರ ನಾಗರಿಕ ಸಮಸ್ಯೆಗಳನ್ನು ಪರಿಹರಿಸುವುದು ಸುಲಭವಾಗಿದೆ.

ನಿವಾಸಿಗಳ ಅಭಿಪ್ರಾಯ
ಈ ಹಿಂದೆ ನಾವು ಶಾಸಕರ ಅಥವಾ ಶಾಸಕರ ಕಚೇರಿಗೆ ಹೋಗುತ್ತಿದ್ದೆವು. ಪ್ರತಿಕ್ರಿಯೆ ತ್ವರಿತವಾಗಿರಲಿಲ್ಲ. ವಾರ್ಡ್ ಸಮಿತಿ ಸಭೆಗಳಲ್ಲಿ ಭಾಗವಹಿಸಿದ ನಂತರ, ನಾನು ಅನೇಕ ವಾರ್ಡ್ ಅಧಿಕಾರಿಗಳ ಸಂಪರ್ಕಕ್ಕೆ ಬಂದೆ. ಅವರು ಸಮಸ್ಯೆಗಳನ್ನು ತ್ವರಿತವಾಗಿ ಪರಿಹರಿಸಿದ್ದಾರೆ ಎಂದು ಶೆಟ್ಟಿಹಳ್ಳಿ ನಿವಾಸಿ ವೆಂಕಟರಮಣ ಹೊಳ್ಳ ಹೇಳಿದ್ದಾರೆ.
ವಾರ್ಡ್ ಸಮಿತಿ ಸಭೆಯಲ್ಲಿ, ನಮ್ಮ ವಾರ್ಡ್ನ ಎಲ್ಲಾ ನಾಗರಿಕ ಸಮಸ್ಯೆಗಳನ್ನು ಪ್ರಸ್ತಾಪಿಸಬಹುದು ಮತ್ತು ಅದನ್ನು ಸರಿಯಾಗಿ ಪರಿಹರಿಸಿಕೊಳ್ಳಬಹುದು. ಇದು ವಾರ್ಡ್ ಬಜೆಟ್ ಮಾಹಿತಿಯನ್ನು ತಿಳಿದುಕೊಳ್ಳುವ ಮತ್ತು ವಾರ್ಡ್ ಬಜೆಟ್ಗೆ ನಮ್ಮ ಸಲಹೆಗಳನ್ನು ಹಂಚಿಕೊಳ್ಳಲು ನಮಗೆ ಅವಕಾಶ ನೀಡುತ್ತದೆ. ವಾರ್ಡ್ ಸಮಿತಿ ಸಭೆಯ ಮೂಲಕ ನಾವು ರಸ್ತೆ ಡಾಂಬರೀಕರಣ, ಚರಂಡಿ ನಿರ್ವಣ, ಮೋರಿ, ಹೆಚ್ಚುವರಿ ಬೀದಿ ದೀಪಗಳು, ಕುಡಿಯುವ ನೀರಿನ ಸಮಸ್ಯೆಗಳನ್ನು ಪರಿಹರಿಸಲಾಗಿದೆ ಎಂದು ವಾರ್ಡ್ 194ರ ಗೊಟ್ಟಿಗೆರೆ ನಿವಾಸಿ ಪೂಂಗೊಧೈ ತಿಳಿಸಿದ್ದಾರೆ.
-
Karnataka Weather: ಇಂದು ಕರಾವಳಿ, ಉತ್ತರ ಹಾಗೂ ದಕ್ಷಿಣ ಒಳನಾಡಿನ ಹಲವೆಡೆ ಗುಡುಗು ಸಹಿತ ಮಳೆ ಸಾಧ್ಯತೆ -
Gold Rate: ದಿಢೀರ್ ಏರಿಕೆ ಕಂಡ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಚಿನ್ನದ ದರ ಹೀಗಿದೆ.. -
Expressway: ಏಪ್ರಿಲ್ 1ರಿಂದ ರಾಜ್ಯಾದ್ಯಂತ ಟೋಲ್ ದರ ಏರಿಕೆ; ಬೆಂಗಳೂರು-ಮೈಸೂರು ಸೇರಿ ಈ ಪ್ರಮುಖ ಹೆದ್ದಾರಿಗಳಲ್ಲಿ ಸಂಚಾರ ದುಬಾರಿ -
Ananya Birla: ಆರ್ಸಿಬಿ ಅಭಿಮಾನಿಗಳು ಹಾಗೂ ಸಹೋದರನಿಗೆ ಅನನ್ಯಾ ಬಿರ್ಲಾ ವಿಶೇಷ ಸಂದೇಶ -
Bengaluru: ಶ್ರೀರಾಮ ನವಮಿ ಹಬ್ಬದ ಪ್ರಯುಕ್ತ ಮಾ.27ರಂದು ನಗರದಲ್ಲಿ ಮಾಂಸ ಮಾರಾಟ ಬಂದ್ಗೆ GBA ಆದೇಶ -
ಐಪಿಎಲ್ ಇತಿಹಾಸದಲ್ಲೇ ಆರ್ಸಿಬಿಯ ಹೊಸ ಅಧ್ಯಾಯ: 16,000 ಕೋಟಿಗೆ ಫ್ರಾಂಚೈಸಿ ಖರೀದಿಸಿದ ಆರ್ಯಮನ್ ಬಿರ್ಲಾ ಯಾರು? -
ತಿಂಗಳಿಗೆ 10 ಸಾವಿರ ರೂ. ಥೆರಪಿಗೆ, 3 ಸಾವಿರ ನೇಲ್ ಆರ್ಟ್ಗೆ! ಬೆಂಗಳೂರು ಯುವತಿಯ 'Gen Z’' ಖರ್ಚಿನ ಪಟ್ಟಿ Viral -
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ -
ಐಪಿಎಲ್ಗೂ ಮುನ್ನ ಆರ್ಸಿಬಿ ಹೊಸ ದಾಖಲೆ: 16,000 ಕೋಟಿಗೆ ಆದಿತ್ಯ ಬಿರ್ಲಾ ಗ್ರೂಪ್ ಪಾಲಾದ ರಾಯಲ್ ಚಾಲೆಂಜರ್ಸ್ ಬೆಂಗಳೂರು -
ಬೆಂಗಳೂರು ಇ-ಖಾತಾ ದಂಧೆ ಬಯಲು: ಬ್ರ್ಯಾಂಡ್ ಬೆಂಗಳೂರಿಗೆ ಆರ್ ಅಶೋಕ್ ತೀವ್ರ ಟೀಕೆ -
Karnataka Rains: ಧಾರಾಕಾರ ಮಳೆ! 7 ಜಿಲ್ಲೆಗಳಿಗೆ 'ಆರೆಂಜ್', 15ಕ್ಕೂ ಹೆಚ್ಚು ಜಿಲ್ಲೆಗಳಿಗೆ 'ಯೆಲ್ಲೋ' ಅಲರ್ಟ್ -
Tamarind Sale: ತುಮಕೂರು ಮಾರುಕಟ್ಟೆಯಲ್ಲಿ ದಾಖಲೆ ಬೆಲೆಗೆ ಮಾರಾಟವಾದ ಹುಣಸೆ ಹಣ್ಣು












Click it and Unblock the Notifications