ಬೆಂಗಳೂರಲ್ಲಿ ಮೊದಲ ಬಾರಿಗೆ ವಿಶ್ವ ಸ್ಥಾನಿಕ ಬ್ರಾಹ್ಮಣ ಸಮಾವೇಶ
ಬೆಂಗಳೂರು, ಜನವರಿ 09 : ವಿಶ್ವ ಸ್ಥಾನಿಕ ಬ್ರಾಹ್ಮಣ ಸಮಾವೇಶ ಎರಡು ದಿನಗಳ ಕಾಲ ಬೆಂಗಳೂರಿನಲ್ಲಿ ನಡೆಯಲಿದೆ. ಇದೇ ಮೊದಲ ಬಾರಿಗೆ ಬೆಂಗಳೂರಿನಲ್ಲಿ ಸಮಾವೇಶವನ್ನು ಆಯೋಜನೆ ಮಾಡಲಾಗಿದೆ.
ಮಂಗಳೂರಿನ ಸ್ಥಾನಿಕ ಬ್ರಾಹ್ಮಣ ಮಹಾಮಂಡಲ (ರಿ) ಇದೇ ಮೊದಲ ಬಾರಿಗೆ ಬೆಂಗಳೂರಿನಲ್ಲಿ ಜನವರಿ 11 ಮತ್ತು 12ರಂದು ವಿಶ್ವ ಸ್ಥಾನಿಕ ಬ್ರಾಹ್ಮಣ ಸಮಾವೇಶ ಆಯೋಜಿಸಿದೆ. ನಗರದ ಕೊಡಿಗೆಹಳ್ಳಿಯ ಜ್ಞಾನಶಕ್ತಿ ಮಂಟಪದಲ್ಲಿ ಸಮಾವೇಶ ನಡೆಯಲಿದೆ.
ಜನವರಿ 11ರ ಶನಿವಾರ ಬೆಳಗ್ಗೆ 10 ಗಂಟೆಗೆ ಹೆಬ್ಬೂರಿನ ಕೋದಂಡಾಶ್ರಮ ಮಠದ ಪೀಠಾಧಿಪತಿ ಶ್ರೀ ಮಾಧವಾಶ್ರಮ ಸ್ವಾಮೀಜಿ ಸಮಾವೇಶವನ್ನು ಉದ್ಘಾಟಿಸಲಿದ್ದಾರೆ. ಸಮಾವೇಶದ ಅಂಗವಾಗಿ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.

ಸಾಮಾಜಿಕ ಸಂಸ್ಕಾರವನ್ನು ರೂಪಿಸುವ ಸನಾತನ ಹಿಂದೂ ಸಂಸ್ಕೃತಿಯ ಉತ್ಥಾನಕ್ಕಾಗಿ ಧರ್ಮಬೋಧೆ, ಪಾಠ ಪ್ರವಚನ, ಹಿರಿಯರಿಂದ ಧಾರ್ಮಿಕ ಸಂದೇಶ, ವಿಚಾರಗೋಷ್ಠಿಗಳು, ಕಲಾಲೋಕದ ಅನಾವರಣ, ಜನೋಪಯೋಗಿ ಅನೇಕ ಉತ್ಪನ್ನಗಳ ಪ್ರದರ್ಶನ ಹಾಗೂ ಮಾರಾಟ ಮಳಿಗೆಗಳು, ಸಂಪನ್ಮೂಲ ವ್ಯಕ್ತಿಗಳ ಸಮಾಗಮ, ವಿಚಾರ ಧಾರೆಗಳ ಚಿಂತನ-ಮಂಥನ, ಹಿರಿಯ ಸಾಧಕರಿಗೆ ಸನ್ಮಾನ, ಚಿಗುರು ಪ್ರತಿಭೆಗಳಿಗೆ ಪುರಸ್ಕಾರ ಹೀಗೆ ಹತ್ತು ಹಲವು ಕಾರ್ಯಕ್ರಮಗಳಿವೆ.
ಸಮಾವೇಶದ ಉದ್ಘಾಟನಾ ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಬಿಜೆಪಿ ರಾಜ್ಯಾಧ್ಯಕ್ಷ, ದಕ್ಷಿಣ ಕನ್ನಡದ ಸಂಸದ ನಳಿನ್ ಕುಮಾರ್ ಕಟೀಲ್, ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, ಕರ್ನಾಟಕ ಸರ್ಕಾರದ ಬ್ರಾಹ್ಮಣ ಅಭಿವೃದ್ಧಿ ಮಂಡಳಿಯ ವ್ಯವಸ್ಥಾಪಕ ನಿರ್ದೇಶಕಿ ಜಿ.ರಶ್ಮಿ ಪಾಲ್ಗೊಳ್ಳಲಿದ್ದಾರೆ.
ಜನವರಿ 12ರ ಭಾನುವಾರ ಸಂಜೆ 4 ಗಂಟೆಗೆ ಸಮಾರೋಪ ಸಮಾರಂಭ ನಡೆಯಲಿದೆ. ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದಾರೆ. ಮುಖ್ಯ ಅತಿಥಿಗಳಾಗಿ ಬೆಂಗಳೂರು ದಕ್ಷಿಣ ಕ್ಷೇತ್ರದ ಸಂಸದ ತೇಜಸ್ವಿ ಸೂರ್ಯ, ಮಾಜಿ ಸ್ಪೀಕರ್ ರಮೇಶ್ ಕುಮಾರ್, ಹೈಕೋರ್ಟ್ ಹಿರಿಯ ವಕೀಲ ಅಶೋಕ ಹಾರನಹಳ್ಳಿ ಭಾಗವಹಿಸಲಿದ್ದಾರೆ.
ಅಖಿಲ ಭಾರತ ಸ್ಥಾನಿಕ ಬ್ರಾಹ್ಮಣ ಸಭಾ ಬೆಂಗಳೂರಿನ ಅಧ್ಯಕ್ಷ ರವೀಂದ್ರನಾಥ ರಾವ್ ಬೆಳ್ಳೆ ಸಮ್ಮೇಳನಾಧ್ಯಕ್ಷತೆ ವಹಿಸಲಿದ್ದಾರೆ. ಸ್ಥಾನಿಕ ಬ್ರಾಹ್ಮಣ ಮಹಾಮಂಡಲದ ಅಧ್ಯಕ್ಷ ಜಗನ್ನಿವಾಸರಾವ್ ಸಭಾಧ್ಯಕ್ಷತೆಯನ್ನು ವಹಿಸಲಿದ್ದಾರೆ.
ಸಮಾವೇಶದಲ್ಲಿ ಆಚಾರ್ಯ ಶಂಕರರು ಮತ್ತು ಅದ್ವೈತ, ಸಾಮಾಜಿಕ ಸ್ವಾಸ್ಥ್ಯದಲ್ಲಿ ಮಹಿಳೆಯರ ಪಾತ್ರ, ಸ್ಥಾನಿಕರ ಸಾಮಾಜಿಕ ಮತ್ತು ಸಂಸ್ಕ್ರತಿಯ ಸವಾಲುಗಳು, ಸನಾತನ ಸಂಸ್ಕೃತಿಗೆ ಯುವ ಪೀಳಿಗೆಯ ಕೊಡುಗೆ, ಸ್ಥಾನಚಾರ್ಯರ ಅಸ್ಥಿತ್ವ ಮತ್ತು ಅಸ್ಮಿತೆಯ ಬಗ್ಗೆ ವಿಚಾರಗೋಷ್ಠಿ ನಡೆಯಲಿದೆ.












Click it and Unblock the Notifications