ಪಾಲಿಕೆ ಜಮೀನು ಸೇನೆಗೆ ಕೊಡಲು ಸ್ಥಳೀಯರ ವಿರೋಧ ಏಕೆ?
ಬೆಂಗಳೂರು, ಆಗಸ್ಟ್ 11: ಬಿಬಿಎಂಪಿಯು ನಗರದ ರಸ್ತೆ ವಿಸ್ತರಣೆಗಾಗಿ ಸೇನೆಯ ಜಮೀನನ್ನು ವಶಪಡಿಸಿಕೊಂಡಿತ್ತು. ಅದರ ಬದಲಾಗಿ ತಮ್ಮನಾಯಕನಹಳ್ಳಿಯಲ್ಲಿ ಜಾಗ ನೀಡಲು ಮುಂದಾಗಿದೆ.
ಆದರೆ ಇದಕ್ಕೆ ಸಾರ್ವಜನಿಕರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.ಇದೀಗ ತಮ್ಮನಾಯಕನ ಹಳ್ಳಿಯಲ್ಲಿರುವ 250 ಎಕರೆ ಜಮೀನನ್ನು ಸೇನೆ ಸುಪರ್ದಿಗೆ ನೀಡಬೇಕಾಗಿದೆ. ಈ ಕುರಿತು ನಾಯಕನಹಳ್ಳಿ ಬಳಿ ಪಾಲಿಕೆ ಮೇಯರ್ ಸಂಪತ್ರಾಜ್, ಸರ್ಕಾರದ ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ.
ಬೆಳಗ್ಗೆ 7 ಗಂಟೆ ಸುಮಾರಿಗೆ ಸರ್ಕಾರದ ನಗರಾಭಿವೃದ್ಧಿ ಇಲಾಖೆ ಅಧೀನ ಮುಖ್ಯ ಕಾರ್ಯದರ್ಶಿ ಮಹೇಂದ್ರ ಜೈನ್, ಬಿಬಿಎಂಪಿ ಮೇಯರ್ ಸಂಪತ್ರಾಜ್, ಆಯುಕ್ತ ಮಂಜುನಾಥ್ ಪ್ರಸಾದ್, ಬೆಂಗಳೂರು ನಗರ ಜಿಲ್ಲಾಧಿಕಾರಿ ವಿಜಯ ಶಂಕರ್, ಭೂಮಾಪನ ಮತ್ತು ಕಂದಾಯ ಇಲಾಖೆ ಅಧಿಕಾರಿಗಳು ಪರಿಶೀಲಿಸಿದರು.
ಇತ್ತೀಚೆಗೆ ನಗರಕ್ಕೆ ಆಗಮಿಸಿದ್ದ ಕೇಂದ್ರ ರಕ್ಷಣಾ ಸಚಿವರು ಷರತ್ತು ವಿಧಿಸಿದ್ದರು, ಈ ಸೂತ್ರದಂತೆ ನಂಬರ್ 23ರ 207 ಎಕರೆ ಜಾಗವನ್ನು ಕಂದಾಯ ಇಲಾಖೆಯಿಂದ ಪಾಲಿಕೆ ಪಡೆದಿದ್ದರೂ ಬಳಿಕ ಅರಣ್ಯ ಇಲಾಖೆಯು ವಿರೋಧ ವ್ಯಕ್ತಪಡಿಸಿತ್ತು.

ಭೂಮಿ ನೀಡಲು ರೈತರ ವಿರೋಧ
ಭೂಮಿ ಹಸ್ತಾಂತರ, ವಶ ವಿರೋಧಿಸಿ ಸ್ಥಳೀಯ ರೈತರು, ಮೇಯರ್ ಹಾಗೂ ಅಧಿಕಾರಿಗಳ ತಂಡವಿದ್ದ ಕಾರನ್ನು ಅಡ್ಡಗಟ್ಟಿ ಮುಂದುವರೆಯಲು ಅವಕಾಶ ನೀಡದೆ ಅಡ್ಡಿಪಡಿಸಿದರು. ಪೊಲೀಸರು ಮಧ್ಯೆ ಪ್ರವೇಶಿಸಿ ಅಧಿಕಾರಿಗಳು ತೆರಳಲು ಅನುವು ಮಾಡಿಕೊಟ್ಟರು.

ಜಾಗ ಹುಡುಕಿ ಸುಸ್ತಾದ ಬಿಬಿಎಂಪಿ ಅಧಿಕಾರಿಗಳು
ಬೆಳಗ್ಗೆಯೇ ಮೇಯರ್ ಸೇರಿದಂತೆ ಅಧಿಕಾರಿಗಳು, ಸೇನಾಧಿಕಾರಿಗಳು ಜಾಗ ಹುಡುಕಲು ಕಾಡುಮೇಡು ಅಲೆದು ಸುಸ್ತಾದರು. ತಮ್ಮನಾಯಕನಹಳ್ಳಿಯಿಂದ ಆರಂಭಿಸಿ ತಮಿಳುನಾಡು ಗಡಿ ಪ್ರದೇಶದವರೆಗೂ ತೆರಳಿದರು. ಹಳ್ಳ, ದಿಣ್ಣೆಯ ಕಾಲುದಾರಿಯಲ್ಲಿ ಸಾಗುವ ಜತೆಗೆ ಕಲ್ಲುಬಂಡೆಗಳೆಲ್ಲವನ್ನು ಹತ್ತಿಳಿಯಬೇಕಾಯಿತು.

ತಮ್ಮನಾಯಕನಹಳ್ಳಿಯಲ್ಲಿ ಗಣಿಗಾರಿಗೆ ತಡೆ
ಈ ಜಾಗದಲ್ಲಿ ಗಣಿಗಾರಿಗೆ ನಡೆಯುತ್ತಿದೆ, ಅಲ್ಲಿರುವ ಹಳ್ಳವನ್ನು ಪಾಲಿಕೆ ಮಟ್ಟಮಾಡಿ ಕೊಡಲಿದೆ. ಗಣಿಗಾರಿಕೆ ನಿಲ್ಲಿಸುವ ಜತೆಗೆ ಗಣಿಗಾರಿಕೆ ಲೈಸನ್ಸ್ ನವೀಕರಣ ಮಾಡದಂತೆ ಸೂಚಿಸಿದ್ದಾರೆ.

ಸೇನೆ ಬೇಡವೆಂದರೆ ಬೇರೆಡೆಗೆ ಜಮೀನು ನೀಡುತ್ತೇವೆ
ಮುಖ್ಯಮಮತ್ರಿಗಳ ಸಭೆಯಲ್ಲಿ ಬೆಂಗಳೂರು ರಸ್ತೆ ಅಭಿವೃದ್ಧಿ ಹಾಗೂ ಭೂಮಿ ಹಸ್ತಾಂತರ ಬಗ್ಗೆ ಮಾತುಕತೆಯಾಗಿದೆ. ಈ ಜಾಗ ಸೂಕ್ತವೆಂದು ನಮ್ಮ ಭಾವನೆಯಾಗಿದ್ದು ಸೇನೆಯವರು ಬೇಡವೆಂದರೆ ಮಾತ್ರ ಬೇರೆ ಜಾಗ ನೀಡುತ್ತೇವೆ ಎಂದು ಮೇಯರ್ ತಿಳಿಸಿದ್ದಾರೆ.












Click it and Unblock the Notifications