ಎಂಟು ದಿನವಾದರೂ ಚೇತರಿಕೆ ಕಾಣದ ವಿದ್ವತ್
ಬೆಂಗಳೂರು, ಫೆಬ್ರವರಿ 24: ಮೊಹಮ್ಮದ್ ನಲಪಾಡ್ನಿಂದ ಹಲ್ಲೆಗೆ ಒಳಗಾಗಿ ವಿಠಲ್ ಮಲ್ಯ ಆಸ್ಪತ್ರೆ ಸೇರಿ 8 ದಿನಗಳಾದರೂ ಸಹಿತ ವಿದ್ವತ್ ಇನ್ನೂ ಚೇತರಿಸಿಕೊಂಡಿಲ್ಲ, ಹಾಗಾಗಿ ಆತನನ್ನು ಹೆಚ್ಚಿನ ಚಿಕಿತ್ಸೆಗೆ ಸಿಂಗಾಪುರ ಅಥವಾ ಮುಂಬೈ ಆಸ್ಪತ್ರೆಗೆ ರವಾನಿಸುವ ಬಗ್ಗೆ ವಿದ್ವತ್ ಪೋಷಕರು ಚಿಂತಿಸುತ್ತಿದ್ದಾರೆ.
ಮೊಹಮ್ಮದ್ ನಲಪಾಡ್ ಬಿಯರ್ ಬಾಟಲಿಯಿಂದ ಮುಖಕ್ಕೆ ಹೊಡೆದ ಕಾರಣ ವಿದ್ವತ್ನ ಮೂಗು, ಹಲ್ಲುಗಳು ಮತ್ತು ದವಡೆ ಮುರಿದಿದ್ದು, ಆತನ ದೇಹದೊಳಕ್ಕೆ ಬಾಟಲಿ ಚೂರು ಹೊಕ್ಕಿದ್ದವು, ಅಷ್ಟೆ ಅಲ್ಲದೆ ನಲಪಾಡ್ ಗ್ಯಾಂಗ್ ಹೊಡೆದ ರಭಸಕ್ಕೆ ಕಣ್ಣು ಗುಡ್ಡೆಯೊಳಗೆ ರಕ್ತ ಹೆಪ್ಪುಗಟ್ಟಿ ಬಾವು ಬಂದಿತ್ತು. ಆ ನಂತರ ಶ್ವಾಸಕೋಶದ ಒಂಬತ್ತು ಮೂಳೆಗಳು ಮುರಿದು ಹೋಗಿದ್ದವು. ಅತ್ಯಂತ ಚಿಂತಾಜನಕ ಪರಿಸ್ಥಿತಿಯಲ್ಲಿ ಮಲ್ಯ ಆಸ್ಪತ್ರೆಗೆ ದಾಖಲಿಸಲಾಗಿದ್ದ ವಿದ್ವತ್ ಈಗಲೂ ಅದೇ ಸ್ಥಿತಿಯಲ್ಲಿ ಮುಂದುವರೆಯುತ್ತಿರುವುದು ಆತಂಕಕಾರಿ.
ವಿದ್ವತ್ಗೆ ಎರಡು ದಿನದಿಂದಲೂ ಜ್ವರ ಕಾಣಿಸಿಕೊಂಡಿದ್ದು, ಅದು ಕಡಿಮೆ ಆಗುತ್ತಿಲ್ಲ ಅಲ್ಲದೆ, ಆತನ ಕಣ್ಣಿಗೆ ಸೋಂಕಾಗಿದ್ದು, ಯಾರನ್ನೂ ಹತ್ತಿರ ಕೂಡಾ ಬಿಡದೆ ಮಲ್ಯ ಆಸ್ಪತ್ರೆಯ ಐಸಿಯುನಲ್ಲಿಟ್ಟು ಚಿಕಿತ್ಸೆ ನೀಡಲಾಗುತ್ತಿದೆ. ಆತ ದ್ರವಾಹಾರವಷ್ಟನ್ನೇ ಸೇವಿಸಲು ಸಾಧ್ಯವಾಗುತ್ತಿದೆ ಎಂಬ ವರದಿಗಳು ವಿದ್ವತ್ ಆರೋಗ್ಯದ ಬಗ್ಗೆ ಚಿಂತೆಯ ಗೆರೆಗಳನ್ನು ಮೂಡಿಸಿವೆ.

ಮಲ್ಯ ಆಸ್ಪತ್ರೆಯ ಹಿರಿಯ ವೈದ್ಯ ಆನಂದ್ ಅವರ ನೇತೃತ್ವದ ವೈದ್ಯರ ತಂಡ ವಿದ್ವತ್ಗೆ ಚಿಕಿತ್ಸೆ ನೀಡಲಾಗುತ್ತಿದ್ದು, ಆನಂದ್ ಅವರು ವಿದ್ವತ್ ಚೇತರಿಕೆ ಕಾಣಲು ಇನ್ನೂ ಮೂರು ವಾರಗಳ ಕಾಲಾವಧಿ ಬೇಕು ಎನ್ನುತ್ತಿದ್ದಾರೆ.
ಆದರೆ ಸೆಷನ್ಸ್ ಕೋರ್ಟ್ನಲ್ಲಿ ವಿದ್ವತ್ ಪರ ವಕಾಲತ್ತು ವಹಿಸಿರುವ ಶಾಮ್ಸುಂದರ್ ಅವರು ವಿದ್ವತ್ ದೇಹದಿಂದ ಹೊರತೆಗೆದಿದ್ದ ಬಾಟಲಿ ಚೂರುಗಳನ್ನು ಪ್ರದರ್ಶಿಸಿ 'ವಿದ್ವತ್ ದಿನೇ ದಿನೇ ಕ್ಷೀಣಿಸುತ್ತಿದ್ದಾನೆ, ನಿರ್ಭಯ ಪ್ರಕರಣದಂತೆ ಇದೂ ಕೂಡ ಆಗುವ ಭಯವಿದೆ' ಎಂದು ಆತಂಕ ವ್ಯಕ್ತಪಡಿಸಿದ್ದರು.

ಅತ್ಯಾಚಾರದಿಂದಾಗಿ ದೈಹಿಕ ಹಾಗೂ ಮಾನಸಿಕವಾಗಿ ಘಾಸಿಗೊಳಗಾಗಿದ್ದ ನಿರ್ಭಯ ಕೂಡಾ ಆಸ್ಪತ್ರೆ ಸೇರಿ ಬಹಳ ದಿನಗಳ ಚಿಕಿತ್ಸೆಯ ನಂತರ ಅಸುನೀಗಿದ್ದಳು, ಆದರೆ ಆ ರೀತಿ ವಿದ್ವತ್ಗೆ ಆಗದಿರಲಿ ಎಂಬುದೇ ಎಲ್ಲರ ಆಶಯ.












Click it and Unblock the Notifications