ಬದಲಾಗಿದ್ದಾರಪ್ಪೋ ಕಳ್ಳರು, ಸಿಸಿಟಿವಿ ಕ್ಯಾಮೆರಾ ಇದ್ದರೂ ಹಣ ಎಗರಿಸಿದರು
ದೇವನಹಳ್ಳಿ (ಬೆಂಗಳೂರು ಗ್ರಾಮಾಂತರ), ಮಾರ್ಚ್ 10 : ಈಗ ಕಳ್ಳರ ಕಳ್ಳತನದ ವಿಧಾನವೇ ಬದಲಾಗಿದೆ. ಯಾರೂ ಇಲ್ಲದ ಸಮಯ ನೋಡಿ ಕಳ್ಳತನಕ್ಕಿಳಿಯುತ್ತಿದ್ದವರು ಹಾಡಹಗಲೇ, ಜನಸಂದಣಿ ಇರುವ ಪ್ರದೇಶದಲ್ಲೇ ಕಳ್ಳತನ ಆರಂಭಿಸಿದ್ದಾರೆ. ಇನ್ನು ಈ ಖದೀಮರಿಗೆ ಸಿಸಿ ಟಿವಿ ಕ್ಯಾಮೆರಾ ಇದ್ದರೂ ಡೋಂಟ್ ಕೇರ್. ಪೊಲೀಸರೇ ಇದ್ರು ಚಿಂತೆಯಿಲ್ಲ.
ಇಲ್ಲೊಂದು ವರದಿ ಇದೆ. ಕಳ್ಳತನ ನಡೆದ ವರದಿ. ಶೋ ರೂಮ್ ಮುಂದೆ ನಿಲ್ಲಿಸಿದ್ದ ಬೈಕ್ ಅನ್ನು ಸುತ್ತುವರೆದ ನಾಲ್ವರು ಕಣ್ಣು ಮುಚ್ಚಿ ತೆರೆಯುವಷ್ಟರಲ್ಲಿ ದುಡ್ಡು ಕದ್ದು ಪರಾರಿಯಾಗಿದ್ದಾರೆ. ಈ ದೃಶ್ಯಗಳು ಸೆರೆಯಾಗಿರುವುದು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲೂಕಿನ ವಿಜಯಪುರ ಪಟ್ಟಣದಲ್ಲಿ.
ಇಲ್ಲಿನ ಕೋಲಾರ ರಸ್ತೆಯ ಹೋಂಡಾ ಶೋ ರೂಂ ಮುಂದೆ ಈಚೆಗೆ ನಾಲ್ವರು ಕಳ್ಳರು ಬಂದು, ಬೈಕ್ ನಲ್ಲಿದ್ದ ದುಡ್ಡನ್ನು ಎಗರಿಸಿದ್ದಾರೆ. ಶೋ ರೂಮ್ ನಲ್ಲಿ ಕ್ಯಾಷಿಯರ್ ಆಗಿ ಕೆಲಸ ಮಾಡುತ್ತಿದ್ದವರಿಗೆ ಸೇರಿದ ದುಡ್ಡು ಇದಾಗಿದ್ದು, ಬೈಕ್ ನಲ್ಲಿಟ್ಟು ಶೋ ರೂಮ್ ಗೆ ಹೋಗಿ ಹೊರಗಡೆ ಬರುವಷ್ಟರಲ್ಲಿ ದುಡ್ಡು ಎಗರಿಸಿದ್ದಾರೆ.

ಕಳ್ಳರ ಕೈಚಳಕದ ಸಂಪೂರ್ಣ ವಿಡಿಯೋ ಸಿಸಿ ಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಹಾಡಹಗಲೇ ಜನ ಜಂಗುಳಿ ಪ್ರದೇಶದಲ್ಲಿ ಕಳ್ಳತನವಾಗಿರುವುದು ವಿಜಯಪುರ ಜನತೆಯನ್ನು ಬೆಚ್ಚಿ ಬೀಳಿಸುವಂತೆ ಮಾಡಿದೆ. ಹಾಡಹಗಲೇ ಬೈಕ್ ನಲ್ಲಿದ್ದ ಹಣವನ್ನು ಕಳ್ಳರು ಎಗರಿಸಿದ್ದು, ವಿಜಯಪುರ ಜನತೆ ನಿದ್ದೆಗೆಡಿಸಿರುವುದು ಸುಳ್ಳಲ್ಲ. ಇನ್ನಾದರೂ ಪೊಲೀಸರ ಎಚ್ಚೆತ್ತು, ಖದೀಮರ ಹೆಡೆಮುರಿ ಕಟ್ಟಬೇಕಿದೆ.












Click it and Unblock the Notifications