ಹೊಸಕೋಟೆ; ಹುಲಿ, ಸಿಂಹ, ಗುಳ್ಳೇನರಿ ಹೋಲಿಕೆ, ಬೈಗುಳಗಳು!
Recommended Video
ಬೆಂಗಳೂರು, ಸೆಪ್ಟೆಂಬರ್ 29 : ಹೊಸಕೋಟೆ ಕ್ಷೇತ್ರದ ಅನರ್ಹ ಶಾಸಕ ಎಂಟಿಬಿ ನಾಗರಾಜ್ ಮತ್ತು ಶರತ್ ಬಚ್ಚೇಗೌಡ ನಡುವೆ ವಾಕ್ಸಮರ ನಡೆಯುತ್ತಿದೆ. ಇದರಿಂದಾಗಿ ಉಪ ಚುನಾವಣೆಗೂ ಮುನ್ನವೇ ಕ್ಷೇತ್ರದಲ್ಲಿ ಚುನಾವಣಾ ಕಣ ರಂಗೇರಿದೆ.
ಹೊಸಕೋಟೆ ಕ್ಷೇತ್ರದ ಉಪ ಚುನಾವಣೆಯಲ್ಲಿ ಎಂಟಿಬಿ ನಾಗರಾಜ್ಗೆ ಬಿಜೆಪಿ ಟಿಕೆಟ್ ನೀಡಬಾರದು ಎಂಬ ಬಗ್ಗೆ ಭಾರಿ ಚರ್ಚೆ ನಡೆದಿದೆ. ಚಿಕ್ಕಬಳ್ಳಾರಪುರ ಕ್ಷೇತ್ರದ ಸಂಸದ ಬಚ್ಚೇಗೌಡ ಪುತ್ರ ಶರತ್ ಬಚ್ಚೇಗೌಡ ಟಿಕೆಟ್ ಆಕಾಂಕ್ಷಿಯಾಗಿದ್ದಾರೆ.
2018ರ ವಿಧಾನಸಭೆ ಚುನಾವಣೆಯಲ್ಲಿ ಶರತ್ ಬಚ್ಚೇಗೌಡ ಕಾಂಗ್ರೆಸ್ನಿಂದ ಕಣಕ್ಕಿಳಿದಿದ್ದ ಎಂಟಿಬಿ ನಾಗರಾಜ್ ವಿರುದ್ಧ ಸೋತಿದ್ದರು. ಈಗ ಚಿತ್ರಣ ಬದಲಾಗಿದ್ದು, ಎಂಟಿಬಿ ನಾಗರಾಜ್ ಶಾಸಕ ಸ್ಥಾನದಿಂದ ಅನರ್ಹರಾಗಿದ್ದಾರೆ.
ಹೊಸಕೋಟೆ ಉಪ ಚುನಾವಣೆಯಲ್ಲಿ ಯಾರಿಗೆ ಟಿಕೆಟ್ ಸಿಗಲಿದೆ? ಎಂಬುದು ಇನ್ನೂ ಖಚಿತವಾಗಿಲ್ಲ. ಕ್ಷೇತ್ರದ ಮೇಲೆ ಕಾಂಗ್ರೆಸ್ ಕಣ್ಣಿಟ್ಟಿದ್ದು, ಬಿಜೆಪಿ ನಾಯಕರ ಜಗಳ ಪಕ್ಷಕ್ಕೆ ಸಹಕಾರಿಯಾಗಲಿದೆಯೇ? ಕಾದು ನೋಡಬೇಕು.
ಎಂಟಿಬಿ ನಾಗರಾಜ್ ಮತ್ತು ಶರತ್ ಬಚ್ಚೇಗೌಡ ನಡುವೆ ವಾಕ್ಸಮರ ನಡೆಯುತ್ತಿದೆ. ಹುಲಿ, ಸಿಂಹ, ಗುಳ್ಳೇನರಿ ಎಂದೆಲ್ಲಾ ನಾಯಕರು ಬೈದಾಡಿಕೊಳ್ಳುತ್ತಿದ್ದು ಕ್ಷೇತ್ರದ ಜನರು ಮಾತ್ರ ಮನರಂಜನೆ ಪಡೆದುಕೊಳ್ಳುತ್ತಿದ್ದಾರೆ.

ಶರತ್ ಬಚ್ಚೇಗೌಡ ಹೇಳಿದ್ದೇನು?
ಸೂಲಿಬೆಲೆಯಲ್ಲಿ ಆಯೋಜಿಸಿದ್ದ ಸಭೆಯಲ್ಲಿ ಮಾತನಾಡಿದ ಶರತ್ ಬಚ್ಚೇಗೌಡ, "ಮಾಜಿ ಸಚಿವ ಎಂಟಿಬಿ ನಾಗರಾಜ್ ಗುಳ್ಳೇನರಿ. ನಮ್ಮ ಅಪ್ಪ ಬಚ್ಚೇಗೌಡ ಹುಲಿ. ಹುಲಿಯಂತಿದ್ದ ನಮ್ಮಪ್ಪನನ್ನು ಗುಳ್ಳೇನರಿ ಸೋಲಿಸಿತ್ತು" ಎಂದು ಹೇಳಿದ್ದರು.

ಎಂಟಿಬಿ ನಾಗರಾಜ್ ಟಾಂಗ್
ತಮ್ಮ ಫೇಸ್ ಬುಕ್ ಪುಟದಲ್ಲಿ ಶರತ್ ಬಚ್ಚೇಗೌಡಗೆ ಎಂಟಿಬಿ ನಾಗರಾಜ್ ಟಾಂಗ್ ಕೊಟ್ಟಿದ್ದಾರೆ. "ಗುಳ್ಳೇನರಿ ಬಂದಿದ್ದಕ್ಕೆ ಹೊಸಕೋಟೆ ತಾಲೂಕಿನ ಸಮಗ್ರ ಅಭಿವೃದ್ಧಿಯಾಗಿದ್ದು ಬಂಧುಗಳೇ" ಎಂದು ಹೇಳಿದ್ದಾರೆ.

ಹೊಸಕೋಟೆ ರಾಜಕಾರಣ
ಶರತ್ ಬಚ್ಚೇಗೌಡ ಸಭೆಯಲ್ಲಿ ಮಾತನಾಡುತ್ತಾ, "ಹುಲಿ, ಸಿಂಹದಂತಹ ಪರ್ಸನಾಲಿಟಿಯ ಜನ ರಾಜಕಾರಣದಲ್ಲಿ ಇರ್ತಾರೆ. ಅದೇ ರೀತಿ ನರಿಯಂತಹವರು ಇರುತ್ತಾರೆ. ಹೊಸಕೋಟೆಯಲ್ಲಿ ಕಳೆದ ಎರಡು ಮೂರು ದಶಕದಿಂದ ಸಿಂಹ, ಹುಲಿ ರಾಜಕಾರಣ ಮಾಡಿಕೊಂಡು ಬಂದಿತ್ತು" ಎಂದು ಹೇಳಿದ್ದರು.

ಹುಲಿ, ಸಿಂಹಗಳ ನಡುವೆ ಗುಳ್ಳೇನರಿ
ಎಂಟಿಬಿ ನಾಗರಾಜ್ ತಮ್ಮ ಫೇಸ್ ಬುಕ್ ಪುಟದಲ್ಲಿ "ಹುಲಿ ಸಿಂಹಗಳ ಮಧ್ಯೆ ಗುಳ್ಳೇನರಿ ಬಂದಿದ್ದಕ್ಕೆ ಹೊಸಕೋಟೆ ತಾಲೂಕಿನಲ್ಲಿ ಶಾಂತಿ ಸುವ್ಯವಸ್ಥೆ ನೆಮ್ಮದಿಯ ವಾತಾವರಣ ಸೃಷ್ಟಿಯಾಗಿದ್ದು" ಎಂದು ಹೇಳಿದ್ದಾರೆ.












Click it and Unblock the Notifications