ಸುವರ್ಣಸೌಧದ ಮುಂದೆ ವಾಟಾಳ್ ಏಕಾಂಗಿ ಹೋರಾಟ
ಬೆಂಗಳೂರು, ಡಿ.3 : ಬೆಳಗಾವಿಯಲ್ಲಿ ನಡೆಯಲಿರುವ ಚಳಿಗಾಲದ ಅಧಿವೇಶನದ ಸಂದರ್ಭದಲ್ಲಿ ಉತ್ತರ ಕರ್ನಾಟಕ ಮತ್ತು ಹೈದರಾಬಾದ್ ಕರ್ನಾಟಕದ ಸಮಗ್ರ ಅಭಿವೃದ್ಧಿಗೆ ಚರ್ಚೆ ನಡೆಸಿ, ಕಾರ್ಯಕ್ರಮ ರೂಪಿಸುವಂತೆ ಒತ್ತಾಯಿಸಿ ವಾಟಾಳ್ ನಾಗರಾಜ್ ಸುವರ್ಣ ವಿಧಾನಸೌಧದ ಬಳಿ ಧರಣಿ ಹಮ್ಮಿಕೊಂಡಿದ್ದಾರೆ.
ಬುಧವಾರ ಬೆಂಗಳೂರಿನಲ್ಲಿ ಪತ್ರಿಕಾಗೋಷ್ಠಿ ನಡೆಸಿದ ವಾಟಾಳ್ ನಾಗರಾಜ್, ಏಕಾಂಗಿಯಾಗಿ ಡಿ.6ರಂದು ಬೆಳಗಾವಿಯ ಸುವರ್ಣ ವಿಧಾನಸೌಧದದ ಮುಂಭಾಗದಲ್ಲಿ ಧರಣಿ ನಡೆಸುತ್ತೇನೆ ಎಂದು ಘೋಷಿಸಿದರು. ನೂರಾರು ಜನರೊಂದಿಗೆ ಹೋರಾಟ ಮಾಡುವುದಿಲ್ಲ, ಏಕಾಂಗಿಯಾಗಿ ಹೋರಾಟ ಮಾಡಿ ಸರ್ಕಾರವನ್ನು ಒತ್ತಾಯಿಸುತ್ತೇನೆ ಎಂದು ಹೇಳಿದರು.

ಬೆಳಗಾವಿಯಲ್ಲಿ ನಡೆಯಲಿರುವ ಚಳಿಗಾಲದ ಅಧಿವೇಶನ ಉತ್ತರ ಕರ್ನಾಟಕ ಹಾಗೂ ಹೈದರಾಬಾದ್ ಕರ್ನಾಟಕಗಳಿಗೆ ಐತಿಹಾಸಿಕ ಅಧಿವೇಶನವಾಗಬೇಕು. ಈ ಹಿನ್ನೆಲೆಯಲ್ಲಿ ಸರ್ಕಾರ ಈ ಭಾಗದ ಜನರಿಗೆ ಸಮಗ್ರ ಸೌಲಭ್ಯ ಕಲ್ಪಿಸಲು ಅನುವಾಗುವಂತಹ ಯೋಜನೆಗಳನ್ನು ಘೋಷಿಸಬೇಕೆಂದು ಧರಣಿ ಹಮ್ಮಿಕೊಳ್ಳಲಾಗಿದೆ ಎಂದರು. [ಸಂಗೊಳ್ಳಿ ರಾಯಣ್ಣ ಪ್ರಶಸ್ತಿ ವಾಟಾಳ್ ಅವರಿಗೆ]
ಕರ್ನಾಟಕದಲ್ಲಿ ನೆಲೆ ನಿಂತು ರಾಜ್ಯದ ವಿರುದ್ಧ ಕೆಲಸ ಮಾಡುತ್ತಿರುವ ಎಂಇಎಸ್ ಸಂಘಟನೆಯನ್ನು ನಿಷೇಧಿಸಬೇಕೆಂದು ಒತ್ತಾಯಿಸಿದ ಅವರು, ಜನವರಿ 1ರಿಂದ ಈ ಉತ್ತರ ಕರ್ನಾಟಕ, ಹೈ-ಕರ್ನಾಟಕದ ಅಭಿವೃದ್ದಿಗೆ ಆಗ್ರಹಿಸಿ ಬೀದರ್ನಿಂದ ಚಳುವಳಿ ಆರಂಭಿಸುವುದಾಗಿ ವಾಟಾಳ್ ತಿಳಿಸಿದರು.
ಅಂದಹಾಗೆ ಕೆಲವು ದಿನಗಳ ಹಿಂದೆ ವಾಟಾಳ್ ನಾಗರಾಜ್ ಸುಮಾರು 300 ಕೋಟಿ ವೆಚ್ಚದಲ್ಲಿ ಕಟ್ಟಿದ ಸುವರ್ಣ ವಿಧಾನಸೌಧ ಸದ್ಭಳಕೆ ಆಗುತ್ತಿಲ್ಲ. ಅಲ್ಲಿ ಎಮ್ಮೆಗಳಿಗೆ ಮೇಯಲು ಅವಕಾಶ ಕೊಡಬೇಕು ಎಂದು ಎಮ್ಮೆಗಳೊಂದಿಗೆ ಪ್ರತಿಭಟನೆ ನಡೆಸಿದ್ದರು. [ಬೆಳಗಾವಿಯಲ್ಲಿ ಎಮ್ಮೆಗಳೊಂದಿಗೆ ವಾಟಾಳ್ ಪ್ರತಿಭಟನೆ]












Click it and Unblock the Notifications