Vande Bharat Express: ಮೆಜೆಸ್ಟಿಕ್ನಿಂದ ಯಶವಂತಪುರ, ಧಾರವಾಡದಿಂದ ಹುಬ್ಬಳ್ಳಿಗೆ 410 ರೂಪಾಯಿ- ಸಂಭ್ರಮದ ಬಳಿಕ ಬೆಚ್ಚಿಬಿದ್ದ ಜನ
ಬೆಂಗಳೂರು, ಜೂನ್ 28: ಪ್ರಧಾನಿ ನರೇಂದ್ರ ಮೋದಿಯವರು ( PM Modi ) ಮಂಗಳವಾರ ಧಾರವಾಡ ಮತ್ತು ಬೆಂಗಳೂರು ನಡುವೆ ಸಂಚರಿಸುವ ವಂದೇ ಭಾರತ್ ರೈಲನ್ನು ( Vande Bharat Express ) ಉದ್ಘಾಟಿಸಿದರು. ಇದು ಕರ್ನಾಟಕದಲ್ಲಿ ( Karnataka ) ಸಂಚಾರ ಆರಂಭಿಸಿರುವ ಎರಡನೇ ವಂದೇ ಭಾರತ್ ಎಕ್ಸ್ಪ್ರೆಸ್ ರೈಲಾಗಿದೆ. ಈ ರೈಲಿಗೆ ಚಾಲನೆ ನೀಡುತ್ತಿದ್ದಂತೆ ಹರ್ಷೋದ್ಗಾರ ಮತ್ತು ಸಂಭ್ರಮಾಚರಣೆಗಳು ನಡೆದವು. ಇದಾದ ಬಳಿಕ ಟಿಕೆಟ್ ದರ ನೋಡಿ ಜನರು ಬೆಚ್ಚಿಬಿದ್ದಿದ್ದಾರೆ.
ಎಂಟು ಬೋಗಿಗಳ ಎಕ್ಸ್ಪ್ರೆಸ್ ರೈಲು ಬೆಳಿಗ್ಗೆ 11 ಗಂಟೆಗೆ ಧಾರವಾಡದಿಂದ ಹೊರಟಿತು. ಹುಬ್ಬಳ್ಳಿ, ದಾವಣಗೆರೆ ಮತ್ತು ಅರಸೀಕೆರೆಯಂತಹ ಪ್ರಮುಖ ಜಂಕ್ಷನ್ಗಳನ್ನು ದಾಟಿ ಬೆಂಗಳೂರಿಗೆ ಬರುತ್ತಿದ್ದಂತೆ ಪ್ರಯಾಣಿಕರು ಅದನ್ನು ಸಂಭ್ರಮದಿಂದ ಸ್ವಾಗತಿಸಿದರು.

ಉತ್ತರ ಕರ್ನಾಟಕದ ಜನರಿಗೆ ಉಡುಗೊರೆ ಎಂದು ನಂಬಲಾಗಿರುವ ಈ ರೈಲು ರಾಜಧಾನಿ ಬೆಂಗಳೂರು ಸಂಪರ್ಕ ಕಲ್ಪಿಸುತ್ತದೆ. ಉತ್ತರ ಕರ್ನಾಟಕದ ಅವಳಿ ನಗರಗಳಾದ ಹುಬ್ಬಳ್ಳಿ ಮತ್ತು ಧಾರವಾಡ ವಾಣಿಜ್ಯ, ವ್ಯಾಪಾರ ಮತ್ತು ಶೈಕ್ಷಣಿಕ ಕೇಂದ್ರಗಳಾಗಿವೆ. ಈ ಮಹಾನಗರಗಳ ನಡುವೆ ಸಂಪರ್ಕ ಕಲ್ಪಿಸಲು ಹೊಸ ವಂದೇ ಭಾರತ್ ರೈಲಿಗೆ ಚಾಲನೆ ನೀಡಲಾಗಿದೆ.
ರಾಜ್ಯಪಾಲ ತಾವರಚಂದ್ ಗೆಹ್ಲೋಟ್ ಮತ್ತು ಧಾರವಾಡ ಲೋಕಸಭಾ ಕ್ಷೇತ್ರವನ್ನು ಪ್ರತಿನಿಧಿಸುವ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಸೇರಿದಂತೆ 530 ಪ್ರಯಾಣಿಕರೊಂದಿಗೆ ರೈಲು ಧಾರವಾಡದಿಂದ ಹೊರಟಿತು.
ಜೂನ್ 28 ರಿಂದ ಪ್ರಾರಂಭವಾಗುವ ಈ ರೈಲು ವಾರದಲ್ಲಿ ಆರು ದಿನಗಳು ಸಂಚರಿಸಲಿದೆ. ಕೆಎಸ್ಆರ್ ಬೆಂಗಳೂರಿನಿಂದ ಹುಬ್ಬಳ್ಳಿಗೆ ಎಸಿ ಚೇರ್ ಕಾರ್ಗೆ ಟಿಕೆಟ್ ದರ 1,155 ರೂ ಆಗಿದೆ. ಎಕ್ಸಿಕ್ಯೂಟಿವ್ ವರ್ಗದವರಿಗೆ 2,200 ರೂಪಾಯಿಯನ್ನು ನಿಗದಿಪಡಿಸಲಾಗಿದೆ. ಇದಲ್ಲದೆ, ಕೆಎಸ್ಆರ್ ಬೆಂಗಳೂರಿನಿಂದ ಧಾರವಾಡಕ್ಕೆ ಎಸಿ ಚೇರ್ ಕಾರ್ನಲ್ಲಿ ಸಂಚರಿಸುವವರು 1,185 ರೂ ನೀಡಬೇಕಿದೆ ಮತ್ತು ಎಕ್ಸಿಕ್ಯೂಟಿವ್ ಕ್ಲಾಸ್ನಲ್ಲಿ ಸಂಚರಿಸುವ ಪ್ರಯಾಣಿಕರು 2,265 ರೂ. ವ್ಯಯಿಸಬೇಕಿದೆ.

ಧಾರವಾಡದಿಂದ ಕೆಎಸ್ಆರ್ ಬೆಂಗಳೂರಿಗೆ ಟಿಕೆಟ್ ದರ ಎಸಿ ಚೇರ್ ಕಾರ್ಗೆ 1,350 ರೂ ಮತ್ತು ಎಕ್ಸಿಕ್ಯೂಟಿವ್ ವರ್ಗಕ್ಕೆ 2,460 ರೂ. ಆಗಿದೆ. ಏತನ್ಮಧ್ಯೆ, ಹುಬ್ಬಳ್ಳಿ ಮತ್ತು ಕೆಎಸ್ಆರ್ ಬೆಂಗಳೂರು ನಡುವೆ ಟಿಕೆಟ್ಗಳ ಬೆಲೆ ರೂ 1,320 (ಎಸಿ ಚೇರ್ ಕಾರ್) ಮತ್ತು ರೂ 2,395 (ಎಕ್ಸಿಕ್ಯೂಟಿವ್ ಕ್ಲಾಸ್ನಲ್ಲಿ ) ಆಗಿದೆ.
17 ಕಿಮೀ ಅಂತರದ ಧಾರವಾಡದಿಂದ ಹುಬ್ಬಳ್ಳಿಗೆ 410 ರೂಪಾಯಿಯನ್ನು ಪಾವತಿಸಬೇಕು. ಬೆಂಗಳೂರಿನ ಮೆಜೆಸ್ಟಿಕ್ನಿಂದ ಯಶವಂತಪುರಕ್ಕೆ ( ಈ ಎರಡೂ ಸ್ಟೇಷನ್ಗಳ ನಡುವಿನ ಅಂತರ 10 ) 410 ರೂಪಾಯಿಯನ್ನು ನೀಡಬೇಕು.
ರೈಲು ಬೆಂಗಳೂರಿನಿಂದ ಬೆಳಗ್ಗೆ 5.45ಕ್ಕೆ ಹೊರಟು ಮಧ್ಯಾಹ್ನ 12.10ಕ್ಕೆ ಧಾರವಾಡಕ್ಕೆ ಆಗಮಿಸುತ್ತದೆ. ಹಿಂತಿರುಗುವ ದಿಕ್ಕಿನಲ್ಲಿ, ರೈಲು ಧಾರವಾಡದಿಂದ ಮಧ್ಯಾಹ್ನ 1.15 ಕ್ಕೆ ಹೊರಟು ರಾತ್ರಿ 7.45 ಕ್ಕೆ ಕೆಎಸ್ಆರ್ ಬೆಂಗಳೂರು ತಲುಪುತ್ತದೆ. ಈ ರೈಲಿಗೆ ಹುಬ್ಬಳ್ಳಿ, ಕಾರಜಗಿ, ದಾವಣಗೆರೆ, ಸಂಪಿಗೆ ರಸ್ತೆ ಮತ್ತು ಯಶವಂತಪುರ ಸೇರಿದಂತೆ ಒಟ್ಟು ಐದು ನಿಲುಗಡೆಗಳಿವೆ.

ಪ್ರಯಾಣದ ಸಮಯವು 30-45 ನಿಮಿಷಗಳಷ್ಟು ಕಡಿಮೆಯಾಗುವ ನಿರೀಕ್ಷೆಯಿದೆ. ಬೆಂಗಳೂರಿನಿಂದ ಧಾರವಾಡಕ್ಕೆ ( 490 ಕಿಮೀಗಳನ್ನು ಗಂಟೆಗೆ 110 ಕಿಮೀ ವೇಗದಲ್ಲಿ ಕ್ರಮಿಸಲು ) ಸುಮಾರು 6 ಗಂಟೆ 35 ನಿಮಿಷಗಳನ್ನು ತೆಗೆದುಕೊಳ್ಳುತ್ತದೆ.
ಈ ವಿಶೇಷ ರೈಲು ಜನರಿಗೆ ಇಷ್ಟವಾಗಿದ್ದರೂ, ಪ್ರಯಾಣದ ವೆಚ್ಚ ಮಾತ್ರ ಕೈಗೆಟುಕುವುದಿಲ್ಲ ಎಂಬ ಅಭಿಪ್ರಾಯ ವ್ಯಕ್ತವಾಗಿದೆ. ಈ ರೈಲು ಮಾಧ್ಯಮ ಹಾಗೂ ಕೆಳ ಮಾಧ್ಯಮ ವರ್ಗದ ಜನರಿಗೆ ಹೊರಯಾಗುತ್ತದೆ ಎಂಬ ಮಾತುಗಳು ಸಾರ್ವಜನಿಕ ವಲಯದಲ್ಲಿ ಕೇಳಿಬಂದಿದೆ.
ಉತ್ತರ ಕರ್ನಾಟಕದಿಂದ ಬೆಂಗಳೂರಿಗೆ ರೈಲಿನಲ್ಲಿ ಬರುವ ಬಹುತೇಕರು ಮಾಧ್ಯಮ ಹಾಗೂ ಕೇಳ ಮಾಧ್ಯಮ ವರ್ಗದವರು ಆದ ಕಾರಣ ಸರ್ಕಾರ ಈ ರೈಲಿನ ಟಿಕೆಟ್ ದರವನ್ನು ಕಡಿಮೆ ಮಾಡಬೇಕೆಂದು ಜನರು ಆಗ್ರಹಿಸುತ್ತಿದ್ದಾರೆ.












Click it and Unblock the Notifications