ಬೆಂಗಳೂರು: ಬಸವೇಶ್ವರ ಜಂಕ್ಷನ್ ಮೇಲ್ಸೇತುವೆ ನವೆಂಬರ್ಗೆ ಪೂರ್ಣಗೊಳಿಸಲು ವಿ.ಸೋಮಣ್ಣ ಸೂಚನೆ
ಬೆಂಗಳೂರು, ಅಕ್ಟೋಬರ್ 20: ಅನೇಕ ಗೊಂದಲ ಹಾಗೂ ವಿಳಂಬಗಳ ನಂತರ ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ವೆಸ್ಟ್ ಆಫ್ ಕಾರ್ಡ್ ರಸ್ತೆಯ ಮೇಲ್ಸೇತುವೆ ಒಂದರ ಕಾಮಗಾರಿಗೆ ಪೂರ್ಣಗೊಳಿಸಲು ಅಂತಿಮ ದಿನಾಂಕ ನಿಗದಿಯಾಗಿದೆ.
ಬಸವೇಶ್ವರ ಜಂಕ್ಷನ್ ಬಳಿ ಓಡಾಡುವ ನಿತ್ಯ ಸಾವಿರಾರು ವಾಹನ ಸವಾರರಿಗೆ ಅನುಕೂಲವಾಗಲೆಂದು ಕೈಗೆತ್ತಿಕೊಂಡ ಮೇಲ್ಸೇತುವೆ ಯೋಜನೆಯ ಕಾಮಗಾರಿಯನ್ನು ಮುಂದಿನ ನವೆಂಬರ್ ಅಂತ್ಯದೊಳಗೆ ತ್ವರಿತಗತಿಯಲ್ಲಿ ಮುಗಿಸುವಂತೆ ವಸತಿ ಸಚಿವ ವಿ.ಸೋಮಣ್ಣ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಶುಕ್ರವಾರ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಗೋವಿಂದರಾಜ ನಗರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿನ ವೆಸ್ಟ್ ಆಫ್ ಕಾರ್ಡ್ ರಸ್ತೆ ಮೇಲ್ಸೇತುವೆ ಕಾಮಗಾರಿಯ ಸ್ಥಳಕ್ಕೆ ಭೇಟಿ ನೀಡಿ ಅವರು ಪರಿಶೀಲಿಸಿದರು. ಈ ವೇಳೆ ಜತೆಗಿದ್ದ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ಗಿರಿನಾಥ್, ಗುತ್ತಿಗೆದಾರರು ಹಾಗೂ ಇನ್ನಿತರರಿಗೆ ಕಾಮಗಾರಿ ಪೂರ್ಣಕ್ಕೆ ನವೆಂಬ್ ಅಂತ್ಯದ ಗಡುವು ನೀಡಿದರು.

ಸಾಕಷ್ಟು ವಿಳಂಬದ ನಂತರ ಮೇಲ್ಸೇತುವೆ ಅಂತಿಮ ಹಂತಕ್ಕೆ
ಬಸವೇಶ್ವರ ನಗರ ಜಂಕ್ಷನ್ ಮತ್ತು 72ನೇ ಅಡ್ಡ ರಸ್ತೆಯ ಜಂಕ್ಷನ್ ಬಳಿ ಮೇಲುಸೇತುವೆ ನಿರ್ಮಾಣದ ಕಾಮಗಾರಿಯು ಪ್ರಗತಿಯಲ್ಲಿದೆ. ಬಸವೇಶ್ವರ ಜಂಕ್ಷನ್ ಬಳಿ ಹೆಚ್ಚುವರಿ ದ್ವಿಮುಖ (ಮೊದಲ ಏಕಮುಖ ಸಂಚಾರಕ್ಕೆ ಒಪ್ಪಿಗೆ) ಸಂಚಾರದ 735 ಮೀಟರ್ ಉದ್ದದ ಮೇಲ್ಸೇತುವೆಯನ್ನು 54.63 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗುತ್ತಿದೆ. ಸದ್ಯಕ್ಕೆ ಇದು ಅಂತಿಮ ಹಂತಕ್ಕೆ ಬಂದಿದೆ. ಇದಕ್ಕು ಮೊದಲು ಈ ಮೇಲ್ಸೇತುವೆ ಹಲವು ಗೊಂದಲಗಳಿಗೆ, ಕಾಮಗಾರಿ ವಿಳಂಬಕ್ಕೆ ಕಾರಣವಾಗಿತ್ತು. ಇದರಿಂದ ನಗರ ಸಾರ್ವಜನಿಕರು ವರ್ಷಗಟ್ಟಲೇ ಸಂಚಾರ ತೊಂದರೆ ಅನುಭವಿಸುತ್ತಿದ್ದಾರೆ.
ಮೂಲಗಳ ಪ್ರಕಾರ, ಈ ಬಸವೇಶ್ವರ ಜಂಕ್ಷನ್ ಬಳಿ ಮೇಲ್ಸೇತುವೆ ಕಾಮಗಾರಿಯು ಟೆಂಡರ್ಗೂ ಮುನ್ನವೇ ಅರ್ಧಕ್ಕೂ ಹೆಚ್ಚು ಮೇಲ್ಸೇತುವೆ ಕೆಲಸ ಪೂರ್ಣಗೊಂಡಿತ್ತು. ಆದರೆ ಟೆಂಡರ್ ಪ್ರಕ್ರಿಯೆ ಬಳಿಕ ಆ ಕಾಮಗಾರಿ ಬೇರೆ ಗುತ್ತಿಗೆದಾರನ ಪಾಲಾಯಿತು. ಇದರಿಂದ ವಿನ್ಯಾಸವು ಬದಲಿಸಬೇಕಾಯಿತು. ವೆಸ್ಟ್ ಆಫ್ಕಾರ್ಡ್ ರಸ್ತೆಯಲ್ಲಿನ ಎರಡು ಮೇಲ್ಸೇತುವೆ ಪೂರ್ಣಗೊಂಡರು ಬಸವೇಶ್ವರ ಜಂಕ್ಷನ್ ಬಳಿ ಮೇಲ್ಸೇತುವೆ ಮುಗಿಯಲಿಲ್ಲ.

ಏಕಮುಖ ಸಂಚಾರ ಬದಲಿಗೆ ದ್ವಿಮುಖ ಸಂಚಾರಕ್ಕೆ ಒಪ್ಪಿಗೆ
ಅಲ್ಲದೇ 2021ರಲ್ಲಿ ವಿ.ಸೋಮಣ್ಣ, ಶಾಸಕ ಎಸ್.ಸುರೇಶ್ ಕುಮಾರ್ ಹಾಗೂ ಬಿಬಿಎಂಪಿ ಅಧಿಕಾರಿಗಳ ಮನವಿ ಮೇರೆಗೆ ರಾಜ್ಯ ಸರ್ಕಾರ ಏಕಮುಖ ಸಂಚಾರದ ಬಸವೇಶ್ವರ ಜಂಕ್ಷನ್ ಮೇಲ್ಸೇತುವೆಯನ್ನು ದ್ವಿಮುಖ ಸಂಚಾರ ರೀತಿಯಲ್ಲಿ ನಿರ್ಮಿಸಲು ಅನುಮೋದನೆ ನೀಡಿತು. ಈ ವೇಳೆ ಟೆಂಡರ್ ಪ್ರಕ್ರಿಯೆ ಒಂದು ಕಡೆ ನಡೆಯುತ್ತಿದ್ದರೆ, ಮತ್ತೊಂದು ಕಡೆ ವೆಂಕಟರಾವ್ ಇನ್ಫ್ರಾಸ್ಟಕ್ಚರ್ ಕಂಪನಿಯು ಕೆಲಸ ಮುಂದುವರಿಸಿತ್ತು. ಕೊನೆಗೆ ಕಡಿಮೆ ಹಣಕ್ಕೆ ಕಾಮಗಾರಿಯನ್ನು ಆರ್ಪಿಪಿ ಎಂಬ ಕಂಪನಿಗೆ ವಹಿಸಲಾಯಿತು. ಹೀಗಾಗಿ ವಿನ್ಯಾಸ ಬದಲಿಸಬೇಕಾದ ಅನಿವಾರ್ಯ ಎದುರಾಯಿತು.
ಈ ಕಾರಣದಿಂದ ವೆಸ್ಟ್ ಆಫ್ ಕಾರ್ಡ್ ರಸ್ತೆಯಲ್ಲಿನ ಕೈಗೆತ್ತಿಕೊಂಡಿದ್ದ ಮೇಲ್ಸೇತುವೆ ಯೋಜನೆಗಳ ಪೈಕಿ ಈ ಬಸವೇಶ್ವರ ಜಂಕ್ಷನ್ ಮೇಲ್ಸೇತುವೆಗೆ ಪೂರ್ಣಗೊಳ್ಳುವುದು ವಿಳಂಬವಾಗಿತ್ತು. ಸದ್ಯ ಅದಕ್ಕೂ ಅಂತಿಮ ದಿನಾಂಕ ಕೂಡಿ ಬಂದಿದೆ.

ಸಿಗ್ನಲ್ ಮುಕ್ತ ಮಾಡುವ ಮೇಲ್ಸೇತುವೆಗಳು
ಕೆಳಸೇತುವೆ ಆರಂಭದಲ್ಲಿ ವೆಸ್ಟ್ ಆಫ್ ಕಾರ್ಡ್ ರಸ್ತೆಯಲ್ಲಿ ಸಿಗ್ನಲ್ ಮುಕ್ತ ಕಾರಿಡಾರ್ ನಿರ್ಮಿಸುವ ಸಲುವಾಗಿ ಮಂಜುನಾಥ ನಗರದ ಬಳಿ ಮೇಲುಸೇತುವೆ, ಶಿವನಗರ 1 ಮತ್ತು 8ನೇ ಮುಖ್ಯ ರಸ್ತೆಯ ಕೂಡುವ ಸ್ಥಳದಲ್ಲಿ ಕೆಳಸೇತುವೆ ಹಾಗೂ ಬಸವೇಶ್ವರ ನಗರ ವೃತ್ತದ ಏಕಮುಖ ಸಂಚಾರದ ಬಳಿ ಮೇಲುಸೇತುವೆಯ ಗ್ರೇಡ್ ಸೆಪರೇಟರ್ ಯೋಜನೆಯನ್ನು ಕೈಗೆತ್ತಿಕೊಳ್ಳಲಾಗಿತ್ತು. ಕೆಳಸೇತುವೆಗೆ ವಿರೋಧ ವ್ಯಕ್ತವಾಯಿತು. ಏಕಮುಖ ಸಂಚಾರ ಬದಲಿಗೆ ದ್ವಿಮುಖ ಸಂಚಾರ ಮೇಲ್ಸೇತುವೆ ನಿರ್ಮಾಣಕ್ಕೆ ಸಚಿವರ ಮನವಿ ಮೇರೆಗೆ ಅನುಮೋದನೆ ದೊರೆಯಿತು.

ನವೆಂಬರ್ಗೆ ಕಾಮಗಾರಿ ಪೂರ್ಣದ ಭರವಸೆ
ನಂತರ ಮಂಜುನಾಥನಗರ ಬಳಿ 18.18 ಕೋಟಿ ರೂ. ವೆಚ್ಚದಲ್ಲಿ 270.62 ಮೀ ಉದ್ದದ ಮೇಲುಸೇತುವೆಯು 2018ರ ಆಗಸ್ಟ 27ರಂದು ಉದ್ಘಾಟನೆಯಾಯಿತು. ಶಿವನಗರ 1 ಮತ್ತು 8ನೇ ಮುಖ್ಯ ರಸ್ತೆಯ ಕೂಡು ಸ್ಥಳದಲ್ಲಿ ಕೆಳಸೇತುವೆಯ ಬದಲಾಗಿ ನಿರ್ಮಿಸಲಾದ 71.98 ಕೋಟಿ ರೂ. ವೆಚ್ಚದಲ್ಲಿ 655 ಮೀಟರ್ ಉದ್ದದ ಮೇಲುಸೇತುವೆ 2021ರ ಅಕ್ಟೋಬರ್ 4ರಂದು ಬಳಕೆಗೆ ಮುಕ್ತವಾಯಿತು. ಇನ್ನು ಬಸವೇಶ್ವರ ಜಂಕ್ಷನ್ ಮೇಲ್ಸೇತುವೆ ಮುಂದಿನ ಅಂತ್ಯಕ್ಕೆ ಪೂರ್ಣಗೊಳ್ಳುವ ಭರವಸೆ ಸಿಕ್ಕಿದ್ದು, ಅದು ಈಡೇರುವವರೆಗೂ ಕಾದು ನೋಡಬೇಕಿದೆ.
ಸಚಿವರ ಪರಿಶೀಲನೆಯ ವೇಳೆ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್, ವಲಯ ಆಯುಕ್ತ ಡಾ. ದೀಪಕ್, ಜಂಟಿ ಆಯುಕ್ತ ಯೋಗೇಶ್, ಮುಖ್ಯ ಎಂಜಿನಿಯರ್ ದೊಡ್ಡಯ್ಯ, ಲೋಕೇಶ್, ಮತ್ತಿತರ ಅಧಿಕಾರಿಗಳು ಉಪಸ್ಥಿತರಿದ್ದರು.












Click it and Unblock the Notifications