ಬೆಂಗಳೂರಿನ ಕಸದ ಸಮಸ್ಯೆಗೆ ಯುಎಸ್ ಕಂಪನಿಯಿಂದ ಪರಿಹಾರ
ಬೆಂಗಳೂರು, ಸೆ.22: ಆಧುನಿಕ ತಂತ್ರಜ್ಞಾನದೊಂದಿಗೆ ಕಸ ವಿಲೇವಾರಿ ಮಾಡಿ ವಿದ್ಯುತ್ ಉತ್ಪಾದನೆ ಮಾಡುವ ಪ್ರಸ್ತಾವನೆಯನ್ನು ಅಮೆರಿಕದ ಖಾಸಗಿ ಕಂಪನಿಯೊಂದು ಕರ್ನಾಟಕ ಸರ್ಕಾರದ ಮುಂದಿಟ್ಟಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗೆ ಕಂಪನಿ ಮುಖ್ಯಸ್ಥರು ಗೃಹ ಕಚೇರಿ ಕೃಷ್ಣಾದಲ್ಲಿ ಸೋಮವಾರ ಮಾತುಕತೆ ನಡೆಸಿ ಪ್ರಾತ್ಯಕ್ಷಿಕೆಯ ಮೂಲಕ ಯೋಜನೆ ರೂಪುರೇಷೆಯನ್ನು ವಿವರಿಸಿದರು.[ಕರ್ನಾಟಕದಲ್ಲಿ ವಿದ್ಯುತ್ ಕೊರತೆ : ಶಾಶ್ವತ ಪರಿಹಾರಗಳು]
ನಗರದಲ್ಲಿ ಸಂಗ್ರಹವಾಗುವ ಕಸವನ್ನು ಆಧುನಿಕ ಮತ್ತು ವೈಜ್ಞಾನಿಕ ತಂತ್ರಜ್ಞಾನದಲ್ಲಿ ವಿಲೇವಾರಿ ಮಾಡುವುದರ ಜೊತೆಗೆ ಅದರಿಂದ ವಿದ್ಯುತ್ ಸಹ ವಿದ್ಯುತ್ ಉತ್ಪಾದನೆ ಮಾಡಿ ಸರ್ಕಾರಕ್ಕೆ ಒದಗಿಸುವುದಾಗಿ ಅಮೆರಿಕ ಮೂಲದ Rushe infratek-orion Enterprises ಕಂಪನಿ ಹೇಳಿದೆ. ಈ ಕಂಪನಿಯು ಪ್ರಸ್ತುತ ವಿಯೆಟ್ನಾಂನಲ್ಲಿ ಕಸ ವಿಲೇವಾರಿ ಮಾಡುವ ಕಾರ್ಯದಲ್ಲಿ ತೊಡಗಿದೆ.
ಕಸ ವಿಲೇವಾರಿಗೆ 25 ಎಕರೆ ಜಾಗ ಕೊಡಿ. ಜೊತೆಗೆ ಉತ್ಪಾದನೆಯಾಗುವ ವಿದ್ಯುತ್ ವಿತರಣೆಗೆ ಮಾರ್ಗ ಒದಗಿಸಿ ಎಂಬ ಮನವಿಯನ್ನು ಕಂಪನಿ ಸರ್ಕಾರದ ಮುಂದಿಟ್ಟಿದೆ. ಇದರಿಂದ ಸರ್ಕಾರದ ಭೊಕ್ಕಸಕ್ಕೆ ಯಾವುದೇ ಹೊರೆ ಆಗುವುದಿಲ್ಲ. ಜೊತೆಗೆ ಮಾಲಿನ್ಯ ಮತ್ತು ದುರ್ನಾತಕ್ಕೆ ಅವಕಾಶ ಇಲ್ಲದಂತೆ ಕಸ ವಿಲೇವಾರಿ ಮಾಡಲಾಗುವುದು ಎಂದೂ ಕಂಪನಿಯು ಸ್ಪಷ್ಟಪಡಿಸಿದೆ.
ಬೆಂಗಳೂರು ಮಹಾನಗರದಲ್ಲಿ ಪ್ರತಿದಿನವೂ ಸುಮಾರು ನಾಲ್ಕು ಸಾವಿರ ಟನ್ ಕಸ ಉತ್ಪಾದನೆಯಾಗುತ್ತಿದೆ. ಆ ಪ್ರಮಾಣದ ಕಸಕ್ಕೆ 800 ಮೆಗಾ ವ್ಯಾಟ್ ವರೆಗೆ ವಿದ್ಯುತ್ ಉತ್ಪಾದನೆ ಮಾಡಿ ಕೊಡುವುದಾಗಿ ಹೇಳಿದೆ.
ಬೆಂಗಳೂರು ನಗರದಲ್ಲಿ ಕಸ ವಿಲೇವಾರಿ ಭಾರೀ ಸಮಸ್ಯೆಯಾಗಿದೆ. ಅದರ ನಿವಾರಣೆಗೆ ಸಾಧ್ಯವಿರುವ ಎಲ್ಲಾ ಕ್ರಮಗಳನ್ನು ಸರ್ಕಾರ ಕೈಗೊಳ್ಳಲಿದೆ ಎಂದು ಮುಖ್ಯಮಂತ್ರಿ ಭರವಸೆ ನೀಡಿದ್ದಾರೆ.

ಸಕಾರಾತ್ಮಕವಾಗಿ ಪ್ರತಿಕ್ರಿಯಿಸಿದ ಮುಖ್ಯಮಂತ್ರಿ
ಮಂಡೂರು, ಬಿಂಗೀಪುರ ಮತ್ತು ಮಾವಳ್ಳಿಯಲ್ಲಿ ಈಗಾಗಲೇ ಭಾರಿ ಪ್ರಮಾಣದಲ್ಲಿ ಕಸ ಸಂಗ್ರಹವಾಗಿದೆ. ಈ ಪೈಕಿ ಮಂಡೂರಿನಲ್ಲಿ ಪ್ರಾಯೋಗಿಕವಾಗಿ ಯೋಜನೆಯನ್ನು ಆರಂಭಿಸಿ. ಅದರ ಸಾಧಕ-ಬಾಧಕಗಳನ್ನು ಪರಿಶೀಲಿಸಿದ ಬಳಿಕ ಒಪ್ಪಂದ ಮಾಡಿಕೊಳ್ಳುವ ಬಗ್ಗೆ ತೀರ್ಮಾನ ಕೈಗೊಳ್ಳಲಾಗುವುದು ಎಂದು ಕಂಪನಿಗೆ ತಿಳಿಸಿದ್ದಾರೆ.

ವಿದ್ಯುತ್ ಖರೀದಿಗೆ ಕೆ ಇಆರ್ ಸಿ ಸಿದ್ಧ
ಮಂಡೂರಿನಲ್ಲಿ ಮೊದಲಿಗೆ ಪ್ರಾಯೋಗಿಕವಾಗಿ ಈ ಯೋಜನೆ ಜಾರಿಗೊಳ್ಳಲಿದ್ದು, ಕಸದಿಂದ ಉತ್ಪಾದನೆಯಾಗುವ ವಿದ್ಯುತ್ತನ್ನು ಕರ್ನಾಟಕ ವಿದ್ಯುತ್ ನಿಯಂತ್ರಣಾ ಆಯೋಗವು ( ಕೆ ಇ ಆರ್ ಸಿ ) ನಿಗದಿಪಡಿಸಿದ ದರದಲ್ಲಿ ಖರೀದಿಸಲಾಗುವುದು

ಸಭೆಯಲ್ಲಿ ಪಾಲ್ಗೊಂಡಿದ ಗಣ್ಯರು
ಬೆಂಗಳೂರು ನಗರ ಜಿಲ್ಲಾ ಉಸ್ತುವಾರಿ ಸಚಿವರೂ ಆದ ಸಾರಿಗೆ ಸಚಿವ ಶ್ರೀ ರಾಮಲಿಂಗಾರೆಡ್ಡಿ, ಗೃಹ ಸಚಿವ ಕೆ. ಜೆ. ಜಾರ್ಜ್, ಇಂಧನ ಸಚಿವ ಡಿ. ಕೆ. ಶಿವಕುಮಾರ್, ಸರ್ಕಾರದ ಮುಖ್ಯ ಕಾರ್ಯದರ್ಶಿ ಕೌಶಿಕ್ ಮುಖರ್ಜಿ, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯು ಆಯುಕ್ತ ಜಿ. ಕುಮಾರ ನಾಯಕ್, ರಾಜ್ಯ ಸರ್ಕಾರದ ನಿವೃತ್ತ ಮುಖ್ಯ ಕಾರ್ಯದರ್ಶಿ ಬಿ. ಎಸ್. ಪಾಟೀಲ್ ಅವರೂ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಸಭೆಯಲ್ಲಿ ಹಾಜರಿದ್ದರು.

ಇಂಧನ ಇಲಾಖೆಯಿಂದ 900 ಮೆಗಾ ವ್ಯಾಟ್ ಖರೀದಿ
ಯುಪಿಸಿಎಲ್, ಬಿಟಿಪಿಎಸ್, ಆರ್ಟಿಪಿಎಸ್ ವಿದ್ಯುತ್ ಉತ್ಪಾದನಾ ಕೇಂದ್ರಗಳನ್ನು ಸೇರಿಸಿ ಸುಮಾರು 2000 ಮೆಗಾವಾಟ್ ವಿದ್ಯುತ್ ಸಿಗಲಿದೆ. ಸರ್ಕಾರ ಈ ಘಟಕಗಳ ತುರ್ತು ದುರಸ್ತಿಗಳನ್ನು ಪೂರ್ಣಗೊಳಿಸಿ, ವಿದ್ಯುತ್ ಉತ್ಪಾದನೆ ಮಾಡಬಹುದು. ಇಂಧನ ಇಲಾಖೆ ಸದ್ಯ 900 ಮೆ.ವ್ಯಾಟ್ ಖರೀದಿ ಮಾಡುತ್ತಿದೆ.

ಜಲ ವಿದ್ಯುತ್, ಥರ್ಮಲ್ ಶಾಖೋತ್ಪನ ಕೇಂದ್ರ
ಕರ್ನಾಟಕ 3600 ಮೆಗಾವಾಟ್ ಜಲ ವಿದ್ಯುತ್ ಉತ್ಪಾದನೆ ಮಾಡುವ ಶಕ್ತಿ ಹೊಂದಿದೆ. ಅದರೆ, ಮಳೆ ಕೊರತೆ, ಜಲಾಶಯಗಳ ನೀರಿನ ಮಟ್ಟ ಕುಸಿತದಿಂದ ಜಲ ವಿದ್ಯುತ್ ಉತ್ಪಾದನೆ ಕೈಕೊಟ್ಟಿದೆ.ಕಲ್ಲಿದ್ದಲು ಉತ್ಪಾದನೆಗೆ ಕಲ್ಲಿದ್ದಲು ಪೂರೈಕೆ ಸಮರ್ಪಕವಾಗಿ ಸಿಗುತ್ತಿಲ್ಲ.ಸೌರಶಕ್ತಿ ಬಳಕೆ ಹೆಚ್ಚಳಕ್ಕೆ ಸೌರ ವಿದ್ಯುತ್ ಪಾರ್ಕ್, ಸೌರಶಕ್ತಿ ನಗರಗಳನ್ನು ಸರ್ಕಾರ ಪ್ರೋತ್ಸಾಹಿಸುತ್ತಿದೆ.












Click it and Unblock the Notifications