ದೊಂಬಿ ಮಾಡಿದವರನ್ನು ಸುಮ್ಮನೆ ಬಿಡುವುದಿಲ್ಲ: ಸಚಿವ ಸದಾನಂದ ಗೌಡ
ಬೆಂಗಳೂರು, ಆಗಸ್ಟ್ 13: ಕೇಂದ್ರ ರಾಸಾಯನಿಕ ಮತ್ತ ರಸಗೊಬ್ಬರ ಸಚಿವ ಡಿ ವಿ ಸದಾನಂದ ಗೌಡ ಮತ್ತು ರಾಜ್ಯ ಗೃಹ ಸಚಿವ ಬಸವರಾಜ ಬೊಮ್ಮಾಯಿ ಅವರು ಗಲಭೆ ಪೀಡಿತ ಬೆಂಗಳೂರಿನ ಡಿ ಜಿ. ಹಳ್ಳಿ ಮತ್ತು ಕೆ ಜಿ ಹಳ್ಳಿ ಪ್ರದೇಶಗಳಿಗೆ ಬುಧವಾರ ಸಂಜೆ ಭೇಟಿ ನೀಡಿ ಪೊಲೀಸರು ಹಾಗೂ ನಾಗರಿಕರಲ್ಲಿ ಸ್ಥೈರ್ಯ ತುಂಬಿದರು.
Recommended Video
ಗಲಭೆಕೋರರು ಡಿ.ಜಿ ಹಳ್ಳಿ ಪೊಲೀಸ್ ಠಾಣೆ, ಹತ್ತಾರು ಮನೆಗಳು, ಅಂಗಡಿಗಳು, ನೂರಾರು ವಾಹನಗಳಿಗೆ ಬೆಂಕಿಹಚ್ಚಿ ನಡೆಸಿರುವ ವಿಧ್ವಂಸ ಕೃತ್ಯಗಳಿಂದ ಆಸ್ತಿಪಾಸ್ತಿಗೆ ಆಗಿರುವ ಅಪಾರ ಪ್ರಮಾಣದ ಹಾನಿಯನ್ನು ಕಂಡು ಸಚಿವರು ಬೇಸರ ವ್ಯಕ್ತಪಡಿಸಿದರು.
ಗಲಭೆಕೋರರ ಗುಂಪುಗಳು ಮನೆ ಮುಂದೆ ನಿಲ್ಲಿಸಿದ್ದ ನೂರಾರು ಕಾರು-ಬೈಕುಗಳು, ಕೈಗಾಡಿಗಳನ್ನು ಸುಟ್ಟುಹಾಕಿವೆ. ಡಿ ಜಿ ಹಳ್ಳಿ ಪೊಲೀಸ್ ಠಾಣೆ, ಪೊಲೀಸ್ ವಾಹನಗಳಲ್ಲದೆ ಅನೇಕ ಹಿಂದುಗಳ ಮನೆಗಳಿಗೂ ಬೆಂಕಿಹಚ್ಚಿವೆ. ಕೆ. ಜಿ ಹಳ್ಳಿ. ಪೊಲೀಸ್ ಠಾಣೆ ಮೇಲೂ ದಾಳಿ ಮಾಡಿವೆ. ಮುಂದೆ ಓದಿ...

ಜನರಿಗೆ ಸಾಂತ್ವನ
ಕೇಂದ್ರ ಸಚಿವ ಸದಾನಂದಗೌಡ ಎರಡೂ ಪೊಲೀಸ್ ಠಾಣೆಗಳಿಗೂ ಭೇಟಿ ನೀಡಿದರು. ಹಾಗೆಯೇ ಸಂಘರ್ಷದಿಂದ ತೊಂದರೆಗೆ ಒಳಗಾದ ಬಿಜೆಪಿ ಕಾರ್ಯಕರ್ತರಾದ ಮುನೇಗೌಡ, ಅರುಣ ಮುಂತಾದವರ ಮನೆಗಳಿಗೆ ತೆರಳಿ ಸಾಂತ್ವನ ಹೇಳಿದರು.

ಜನರ ರಕ್ಷಣೆಗೆ ಸೂಚನೆ
"ನಾವಿಲ್ಲಿ ಅಲ್ಪಸಂಖ್ಯಾತರಾಗಿದ್ದೇವೆ. ಅಸುರಕ್ಷಿತರಾಗಿದ್ದೇವೆ. ನಮ್ಮ ಜೀವಕ್ಕೆ ರಕ್ಷಣೆ ಬೇಕು. ಗಲಭೆಕೋರರ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು. ಅವರನ್ನೆಲ್ಲ ತಕ್ಷಣ ಬಂಧಿಸಬೇಕು" ಎಂದು ಜನರು ಸಚಿವರಿಗೆ ಮನವಿ ಮಾಡಿದರು. ಸಂತ್ರಸ್ತರಿಗೆ ಸೂಕ್ತ ಭದ್ರತೆಯನ್ನು ಒದಗಿಸುವಂತೆ ಸದಾನಂದಗೌಡ ಸ್ಥಳದಲ್ಲಿದ್ದ ಹಿರಿಯ ಪೊಲೀಸ್ ಅಧಿಕಾರಿಗಳಿಗೆ ಸೂಚಿಸಿದರು.

ಯಾರನ್ನೂ ಬಿಡುವುದಿಲ್ಲ
ಈ ವೇಳೆ ವರದಿಗಾರರೊಂದಿಗೆ ಮಾತನಾಡಿದ ಸದಾನಂದ ಗೌಡ, ಪೊಲೀಸರು ಗಲಭೆಯನ್ನು ನಿಯಂತ್ರಿಸಲು ಸಂಯಮದಿಂದ ವರ್ತಿಸಿದ್ದಾರೆ. ಗಲಭೆಕೋರರು ವಾಹನ, ಮನೆಗಳಿಗೆ ಬೆಂಕಿಹಚ್ಚುವುದನ್ನು ಮುಂದುವರಿಸಿದಾಗ ಅನಿವಾರ್ಯವಾಗಿ ಗೋಲಿಬಾರ್ ಮಾಡಿದ್ದಾರೆ. ಮ್ಯಾಜಿಸ್ಟ್ರೇಟ್ ತನಿಖೆಗೆ ಆದೇಶಿಸಲಾಗಿದೆ. ನಿಷ್ಪಕ್ಷಪಾತ ತನಿಖೆ ನಡೆಯಲಿದೆ. ನಿರಪರಾಧಿಗಳಿಗೆ ತೊಂದರೆಯಾಗುವುದಿಲ್ಲ. ಆದರೆ ದೊಂಬಿಯಲ್ಲಿ ತೊಡಗಿದವರನ್ನು ಯಾರನ್ನೂ ಬಿಡುವುದಿಲ್ಲ. ರಾತ್ರಿಯೇ ಗಲಭೆಯನ್ನು ನಿಯಂತ್ರಿಸಿರುವ ಪೊಲೀಸರು ಈಗಾಗಲೇ ಹಲವರನ್ನು ಬಂಧಿಸಿದ್ದಾರೆ. ಅವರನ್ನು ಅಭಿನಂದಿಸುತ್ತೇನೆ ಎಂದು ಹೇಳಿದರು.

ಡಿವಿಎಸ್ ಲೋಕಸಭೆ ವ್ಯಾಪ್ತಿ
ಗಲಭೆಗೀಡಾದ ಪ್ರದೇಶವು ಸದಾನಂದ ಗೌಡ ಅವರ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿಯೇ ಇದೆ. ಹೀಗಾಗಿ ದೆಹಲಿಯಲ್ಲಿದ್ದ ಅವರು, ಕೂಡಲೇ ಬೆಂಗಳೂರಿಗೆ ಧಾವಿಸಿದ್ದರು. ಮುಖ್ಯಮಂತ್ರಿ ಬಿ ಎಸ್ ಯಡಯೂರಪ್ಪ ಅವರ ಅಧಿಕೃತ ನಿವಾಸ ಕಾವೇರಿಯಲ್ಲಿ ನಡೆದ ಉನ್ನತ ಮಟ್ಟದ ಸಭೆಯಲ್ಲಿ ಪಾಲ್ಗೊಂಡರು.












Click it and Unblock the Notifications